ಚಿತ್ರೀಕರಣ ವೇಳೆ ಗಾಯಗೊಂಡ ನಟ ಅಜಿತ್; ಹೈದರಾಬಾದ್ ನಲ್ಲಿ ಚಿಕಿತ್ಸೆ
ತಮಿಳಿನ ಖ್ಯಾತ ನಟ ಅಜಿತ್ ವಾಲಿಮೈ ಸಿನಿಮಾದ ಚಿತ್ರೀಕರಣ ವೇಳೆ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದ್ದ ಸಿನಿಮಾತಂಡ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿತ್ತು. ಆದರೀಗ ನಟ ಅಜಿತ್ ಕುಮಾರ್ ಗಾಯಗೊಂಡಿದ್ದು ಚಿತ್ರೀಕರಣ ಸೆಟ್ ನಿಂದ ವಾಪಸ್ ಆಗಿದ್ದಾರೆ ಎನ್ನಲಾಗುತ್ತಿದೆ.
ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡುವಾಗ ನಟ ಅಜಿತ್ ಗೆ ಗಾಯವಾಗಿದ್ದು, ಹೈದರಾಬಾದ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೊದಲು ಸಹ ಆಕ್ಷನ್ ದೃಶ್ಯ ಚಿತ್ರೀಕರಣ ವೇಳೆ ಬೈಕ್ ಸ್ಟಂಟ್ ಮಾಡುವಾಗ ಕೈ ಮತ್ತು ಕಾಲುಗಳಿಗೆ ಗಾಯಮಾಡಿಕೊಂಡು ಕೆಲವು ದಿನಗಳಕಾಲ ರೆಸ್ಟ್ ನಲ್ಲಿದ್ದರು.
ಇದೀಗ ಮತ್ತೆ ಚಿತ್ರೀಕರಣದಿಂದ ಬ್ರೇಕ್ ಪಡೆದಿರುವ ಅಜಿತ್ ಎರಡು ವಾರಗಳು ಅಥವಾ ಒಂದು ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ಚಿತ್ರೀಕರಣ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿತ್ತು ಸಿನಿಮಾತಂಡ. ಆದರೀಗ ಮತ್ತೆ ತಡವಾಗುತ್ತಿದೆ.

ವಾಲಿಮೈ ವಿನೋದ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರಕ್ಕೆ ಶ್ರೀದೇವಿ ಪತಿ ಬೋನಿ ಕಪೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಜಿತ್ ಕುಮಾರ್ ಜೊತೆ ನಾಯಕಿಯಾಗಿ ಹುಮಾ ಖುರೇಷಿ ನಟಿಸುತ್ತಿದ್ದಾರೆ. ಯೋಗಿ ಬಾಬು ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಅಜಿತ್ ಶೀಘ್ರವೇ ಗುಣಮುಖರಾಗಿ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿ ಎನ್ನುವುದು ಅಭಿಮಾನಿಗಳ ಆಶಯ.


Click it and Unblock the Notifications











