ನಿರ್ದೇಶಕ ಸಿದ್ಧಲಿಂಗಯ್ಯ ಸಂಬಂಧಿ ಡೇನಿಯಲ್ ಬಾಲಾಜಿ; ಸ್ಯಾಂಡಲ್ವುಡ್ನಲ್ಲಿ ಅವರ ಆ ಆಸೆ ಈಡೇರಲೇ ಇಲ್ಲ!
ತೆರೆಮೇಲೆ ಅಬ್ಬರಿಸಿ ಪ್ರೇಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ನಟ ಡೇನಿಯಲ್ ಬಾಲಾಜಿ ನಿಧನರಾಗಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿರುವ ಸುದ್ದಿ ಚಿತ್ರರಂಗಕ್ಕೆ ದಿಗ್ಬ್ರಮೆ ಮೂಡಿಸಿದೆ. 4 ಕನ್ನಡ ಸಿನಿಮಾಗಳಲ್ಲಿ ಕೂಡ ಡೇನಿಯಲ್ ಬಣ್ಣ ಹಚ್ಚಿ ನಟಿಸಿದ್ದರು.
ಎರಡು ದಿನಗಳ ಹಿಂದೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡೇನಿಯಲ್ ಬಾಲಾಜಿ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಾರ್ಚ್ 30ರಂದು ಡೇನಿಯಲ್ ಬಾಲಾಜಿ ಕೊನೆಯುಸಿರೆಳೆದಿದ್ದಾರೆ. ಕನ್ನಡ ನಟ ಕಿಶೋರ್ ಸೇರಿದಂತೆ ಸಾಕಷ್ಟು ಜನ ಕಲಾವಿದರು ಅವರ ಅಗಲಿಕೆ ಕಂಬನಿ ಮಿಡಿದಿದ್ದಾರೆ.

ಯಶ್, ದುನಿಯಾ ವಿಜಯ್ ಸೇರಿದಂತೆ ಕನ್ನಡ ಚಿತ್ರರಂಗದ ಜೊತೆಗೂ ಡೇನಿಯಲ್ ಬಾಲಾಜಿಗೆ ಒಡನಾಟವಿತ್ತು. ಸಿನಿಮಾ ಯೂನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಡೇನಿಯಲ್ 'ಚಿಟ್ಟಿ' ಎನ್ನುವ ತಮಿಳು ಧಾರಾವಾಹಿಯಲ್ಲಿ ಮೊದಲು ನಟಿಸಿದರು. 'ಏಪ್ರಿಲ್ ಮಡದಿಲ್' ಚಿತ್ರದ ಮೂಲಕ ಕಾಲಿವುಡ್ ಪ್ರವೇಶಿಸಿದರು. ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಪೋಷಕ ಕಲಾವಿದನಾಗಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ಸಿನಿಮಾದಲ್ಲಿ ಮಿಂಚಿದ್ದರು.
ಕಮಲ್ ಹಾಸನ್ ಜೊತೆ 'ವೇಟೆಯಾಡು ವೆಲಿಯಾಡು' ಚಿತ್ರದಲ್ಲಿ ಡೇನಿಯಲ್ ಅಭಿನಯ ಪ್ರೇಕ್ಷಕರಿಗೆ ಬಹಳ ಇಷ್ಟವಾಗಿತ್ತು. ಕಳೆದ ವರ್ಷ ಬಂದ 'ಅರಿಯಾವನ್' ಅವರು ನಟಿಸಿದ ಕೊನೆಯ ಸಿನಿಮಾ. 'ಕಾಕ್ಕಾ ಕಾಕ್ಕಾ', 'ಘರ್ಷಣ', 'ಪೊಲ್ಲಾದವನ್', 'ಚಿರುತ', 'ವಡ ಚನ್ನೈ', 'ಬಿಗಿಲ್' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಖಳನಟನಾಗಿ ಅಬ್ಬರಿಸಿದ್ದಾರೆ. 'ಕಿರಾತಕ' ಸಿನಿಮಾ ಮೂಲಕ ಅವರು ಸ್ಯಾಂಡಲ್ವುಡ್ ಪ್ರವೇಶಿಸಿದ್ದರು. ಬಳಿಕ ಕನ್ನಡದಲ್ಲಿ 'ಶಿವಾಜಿನಗರ', 'ಡವ್' ಹಾಗೂ 'ಬೆಂಗಳೂರು ಅಂಡರ್ವರ್ಲ್ಡ್' ಸಿನಿಮಾಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದರು.
ಕೆಲ ವರ್ಷಗಳ ಹಿಂದೆ ಡೇನಿಯಲ್ ಬಾಲಾಜಿ ದೇವಸ್ಥಾನ ನಿರ್ಮಿಸಲು ನಟ ಯಶ್ ಸಹಾಯ ಮಾಡಿದ್ದರು. ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದರು. ಇನ್ನು ಖಳನಟನಾಗಿ ಹೆಚ್ಚು ಗುರ್ತಿಸಿಕೊಂಡಿದ್ದ ಡೇನಿಯಲ್ ಬಾಲಾಜಿಗೆ ಒಂದು ಆಸೆ ಇತ್ತು. ಅದು ಈಡೇರುವ ಮುನ್ನವೇ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟಿದ್ದಾರೆ.

ಕನ್ನಡದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಹಾಗೂ ಡೇನಿಯಲ್ ಬಾಲಾಜಿ ಸಂಬಂಧಿಗಳಾಗಬೇಕು. ವರಸೆಯಲ್ಲಿ ಸಿದ್ದಲಿಂಗಯ್ಯ ಪುತ್ರ ನಟ ಮುರಳಿ ಸಹೋದರನಾಗಬೇಕು. ಇನ್ನು ಸಂದರ್ಶನವೊಂದರಲ್ಲಿ ಮಾತನಾಡುತ್ತ ಡೇನಿಯಲ್ ಬಾಲಾಜಿ ಸಿನಿಮಾ ನಿರ್ದೇಶನದ ಆಸೆಯನ್ನು ವ್ಯಕ್ತಪಡಿಸಿದ್ದರು. "ಒಂದು ಕಥೆ ಸಿದ್ಧವಾಗಿದೆ. ನಾನು ಸಿನಿಮಾ ನಿರ್ದೇಶಿಸಿ ನಟಿಸಬೇಕು ಎನ್ನುವ ಆಸೆಯಿದೆ. ಸಾಧ್ಯವಾದರೆ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಿಸಬೇಕು ಎಂದುಕೊಂಡಿದ್ದೇನೆ. ಈ ಚಿತ್ರಕ್ಕೆ ನನ್ನೆ ಸ್ನೇಹಿತ ಎಂಆರ್ ರಮೇಶ್ ಬಂಡವಾಳ ಹಾಕುತ್ತಾರೆ" ಎಂದು ಡೇನಿಯಲ್ ಹೇಳಿಕೊಂಡಿದ್ದರು.
ಸಿನಿಮಾ ನಿರ್ದೇಶಿಸಿ ನಟಿಸುವ ಆಸೆ ಈಡೇರುವ ಮುನ್ನ ನಟ ಡೇನಿಯಲ್ ಬಾಲಾಜಿ ಕೊನೆಯುಸಿರೆಳೆದಿದ್ದಾರೆ. ಅವರ ಆಸೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದೆ.


Click it and Unblock the Notifications











