ಆ ದುಶ್ಚಟ ಮನೋಬಾಲ ಪ್ರಾಣಕ್ಕೆ ಕುತ್ತು ತಂದುಬಿಡ್ತು.. ಅದೇ ಕಾರಣಕ್ಕೆ ಚಿಮಣಿ ಎನ್ನುವ ಅಡ್ಡ ಹೆಸ್ರು ಬಂದಿತ್ತು
ತಮಿಳು ಹಾಸ್ಯನಟ, ನಿರ್ದೇಶಕ, ನಿರ್ಮಾಪಕ ಮನೋಬಲ ಲಿವರ್ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಮೇ3) ನಿಧನರಾಗಿದ್ದಾರೆ. 5 ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಸಿನಿಕರ್ಮಿಗೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ದಳಪತಿ ವಿಜಯ್ ಸೇರಿದಂತೆ ಹಲವರು ಮನೋಬಲ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಇದೆಲ್ಲದರ ನಡುವೆ ಅವರ ನಿಧನಕ್ಕೆ ಕಾರಣ ಏನು ಎನ್ನುವ ಚರ್ಚೆ ನಡೀತಿದೆ.
ಆ ದುಶ್ಚಟದಿಂದಲೇ ಅವರು ಕೊನೆಯ ದಿನಗಳಲ್ಲಿ ನಟ ಮನೋಬಾಲ ಸಾಕಷ್ಟು ಸಂಕಷ್ಟ ಎದುರಿಸಿದರು. ಚಿತ್ರರಂಗದಲ್ಲಿ ದುಡಿದ ಬಹುತೇಕ ಹಣವನ್ನು ಅವರು ತಮ್ಮ ಚಿಕಿತ್ಸೆಗಾಗಿ ವ್ಯಯಿಸುವಂತಾಯಿತು. ರಜನಿಕಾಂತ್, ವಿಜಯ್ಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್ ಸೇರಿದಂತೆ ಹಲವು ಸೂಪರ್ ಸ್ಟಾರ್ಗಳ ಜೊತೆ ಮನೋಬಲ ಕೆಲಸ ಮಾಡಿದ್ದಾರೆ. ನಿರ್ದೇಶಕ ಭಾರತಿರಾಜಾ ಅವರ ಸಹಾಯಕರಾಗಿ ಸ್ವತಂತ್ರ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಲ್ಲಿ ದುಡಿದಿದ್ದಾರೆ. ಇನ್ನು 900ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿ ನಟಿಸಿದ್ದರು.

ಸಿಗರೇಟ್ ಸೇದುವ ಚಟ ಮನೋಬಾಲ ಅವರಿಗಿತ್ತು. ಕೆಲವೊಮ್ಮೆ ದಿನಕ್ಕೆ 200 ಸಿಗರೇಟ್ ಸೇದಿದ ಉದಾಹರಣೆ ಕೂಡ ಇದೆಯಂತೆ. ಈ ವಿಚಾರವನ್ನು ಕಳೆದ ವರ್ಷ ಖುದ್ದು ಮನೋಬಾಲ ಯುಟ್ಯೂಬ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸದಾ ಸಿಗರೇಟ್ ಸೇದುತ್ತಿದ್ದ ಅವರನ್ನು ಚಿತ್ರರಂಗದಲ್ಲಿ ಆಪ್ತರು ಚಿಮಣಿ ಎಂದು ಕರೆಯುತ್ತಿದ್ದರಂತೆ. ಇನ್ನು ಬಾಲಿವುಡ್ ನಟಿ ರೇಖಾ ಮನೋಬಾಲ ಅವರ ಕುತ್ತಿಗೆಗೆ ಪಾನ್ಪರಾಗ್ ಪೊಟ್ಟಣ ಕಟ್ಟಿ ಇದರಲ್ಲಿ ಹ್ಯಾಶ್ ಉದುರಿಸಿಕೊಳ್ಳಿ, ಸೆಟ್ನಲ್ಲಿ ಎಲ್ಲೆಂದರೆ ಅಲ್ಲಿ ಹಾಕಬೇಡಿ ಎಂದು ಹೇಳುತ್ತಿದ್ದರಂತೆ.
ಸಿಗರೇಟ್ ಚಟದಿಂದಲೇ ಲಿವರ್ಗೆ ಸಮಸ್ಯೆ ಆಗಿದೆ ಎಂದಿದ್ದರು. ಕೆಲ ದಿನಗಳ ಹಿಂದೆ ವೈದ್ಯರು ಸಿಗರೇಟ್ ಸೇದಲೇಬೇಡಿ. ಇನ್ನೊಂದು ಸಿಗರೇಟ್ ಸೇದಿದ್ರು ನಿಮ್ಮ ಪ್ರಾಣಕ್ಕೆ ಅಪಾಯ ಎಂದು ಹೇಳಿದ್ದರಂತೆ. ಅಷ್ಟರಮಟ್ಟಿಗೆ ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡಿದ್ದರು. ದುಡಿದ ಬಹುತೇಕ ಹಣವನ್ನು ಚಿಕಿತ್ಸೆಗೆ ವ್ಯಯಿಸಿದೆ. ಇತ್ತೀಚೆಗೆ 10 ಲಕ್ಷ ರೂ. ಆಸ್ಪತ್ರೆಗೆ ಖರ್ಚಾಯಿತು. ಸಹ ನಿರ್ದೇಶಕರಾಗಿ ಇದ್ದಾಗ ಬಹಳ ಒತ್ತಡ ಇರುತ್ತಿತ್ತು. ಹಾಗಾಗಿ ಸಿಗರೇಟ್ ಚಟ ಹೆಚ್ಚಾಗಿತ್ತು. ನಾನು ಈ ರೀತಿ ಬಹಳ ತೆಳ್ಳಗೆ ಇರುವುದಕ್ಕೆ ಅದು ಒಂದು ಕಾರಣ ಎಂದು ಮನೋಬಾಲ ಹೇಳಿದ್ದರು.
20ಕ್ಕೂ ಹೆಚ್ಚು ಚಿತ್ರಗಳಿಗೆ ಮನೋಬಾಲ ಆಕ್ಷನ್ ಕಟ್ ಹೇಳಿದ್ದರು. ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ 'ಡಿಸೆಂಬರ್ 31' ಚಿತ್ರವನ್ನು ನಿರ್ದೇಶನ ಮಾಡಿದ್ದರು. 1986ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ದಾದಾ ಜೊತೆಗೆ ಊವರ್ಶಿ, ಜೈ ಜಗದೀಶ್, ಸುಲಕ್ಷಣ ಚಿತ್ರದ ತಾರಾಗಣದಲ್ಲಿ ನಟಿಸಿದ್ದರು. ಇನ್ನು ಒಂದಷ್ಟು ತೆಲುಗು ಸಿನಿಮಾಗಳಲ್ಲೂ ಮನೋಬಲ ನಟಿಸಿದ್ದರು. ಬಾಲಿವುಡ್ನಲ್ಲಿ ಜಿತೇಂದ್ರ, ರೇಖಾ ನಟನೆಯ 'ಮೇರಾ ಪತಿ ಸಿರ್ಫ್ ಮೇರಾ ಹೈ' ಚಿತ್ರಕ್ಕೆ ಅವರು ಆಕ್ಷನ್ ಕಟ್ ಹೇಳಿದ್ದು ವಿಶೇಷ.
ಚೆನ್ನೈನಲ್ಲಿ ನಟ ಮನೋಬಾಲ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿದೆ. ವಲಸರವಕ್ಕಂ ವಿದ್ಯುತ್ ಚಿತಾಗಾರದಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು. ಕೋವೈ ಸರಳಾ, ಸುಂದರರಾಜಾ, ರವಿ ಮರಿಯಾ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಿದ್ದರು. ಇದಕ್ಕೂ ಮುನ್ನ ನಿರ್ದೇಶಕರಾದ ಮಣಿರತ್ನಂ, ಲೋಕೇಶ್ ಕನಗರಾಜ್, ಶಂಕರ್, ವಿಜಯ್ ಸೇತುಪತಿ, ಕೆ. ಭಾಗ್ಯರಾಜ್, ಮನ್ಸೂರ್ ಅಲಿಖಾನ್ ಸೇರಿದಂತೆ ಹಲವರು ಮನೋಬಾಲ ನಿವಾಸಕ್ಕೆ ಭೇಟಿ ನೀಡಿ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ್ದರು.


Click it and Unblock the Notifications











