100 ಎಕರೆ ಜಾಗದಲ್ಲಿ ಟ್ರಸ್ಟ್ ಕನಸು; ಪೊಲಿಟಿಕಲ್ ಎಂಟ್ರಿ ಬಗ್ಗೆ ನಟ ರಾಘವ ಲಾರೆನ್ಸ್ ಪ್ರತಿಕ್ರಿಯೆ
ತಮಿಳು ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಗೆದ್ದು ತಮಿಳುನಾಡು ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಹಣ ಬಲ, ತೋಳ್ಬಲ ಇಲ್ಲದೇ ರಾಜಕೀಯರಂಗದಲ್ಲಿ ವಿಜಯ್ ಗೆಲುವು ಅಪರೂಪದ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಇದರ ಬೆನ್ನಲ್ಲೇ ಮತ್ತಷ್ಟು ಕಲಾವಿದರು ರಾಜಕೀಯರಂಗ ಸೇರುವ ಲೆಕ್ಕಾಚಾರದಲ್ಲಿದ್ದಾರೆ.
ಸಿನಿಮಾ ಜನಪ್ರಿಯತೆ ಬಳಸಿಕೊಂಡು ಕೆಲವರು ರಾಜಕೀಯರಂಗದಲ್ಲಿ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ದಶಕಗಳಿಂದ ಇಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ಕೆಲವರು ಗೆದ್ದಿದ್ದರೆ ಮತ್ತೆ ಕೆಲವರು ಸೋತಿದ್ದಾರೆ. ವಿಜಯ್ ಬಳಿಕ ತಮಿಳು ನಟ, ನಿರ್ದೇಶಕ, ಡ್ಯಾನ್ಸ್ ಮಾಸ್ಟರ್ ರಾಘವ ಲಾರೆನ್ಸ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಸ್ವತಃ ಲಾರೆನ್ಸ್ ಸುದೀರ್ಘ ವಿಡಿಯೋ ಮಾಡಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ರಾಘವ ಲಾರೆನ್ಸ್ ಸ್ವಂತ ಪರಿಶ್ರಮದಿಂದ ಸ್ಟಾರ್ ಡ್ಯಾನ್ಸ್ ಮಾಸ್ಟರ್ ಆಗಿ ಗುರ್ತಿಸಿಕೊಂಡವರು. ಬಳಿಕ ಹೀರೊ ಆಗಿ ನಿರ್ದೇಶಕರಾಗಿಯೂ ಸಕ್ಸಸ್ ಕಂಡರು. ಬಡತನದ ಹಿನ್ನೆಲೆಯಿಂದ ಬಂದ ಅವರು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಕೈಲಾದ ಸೇವೆ ಮಾಡುತ್ತಿದ್ದಾರೆ. ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಲಾರೆನ್ಸ್ ಪದೇ ಪದೆ ಸುದ್ದಿ ಆಗುತ್ತಾರೆ.
ನಟ ವಿಜಯ್ ತಿರುಚ್ಚಿ ಹಾಗೂ ಪೆರಂಬೂರ್ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿ ಎರಡೂ ಕಡೆ ಗೆದ್ದಿದ್ದರು. ಬಳಿಕ ತಿರುಚ್ಚಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲಿ ಉಪ ಚುನಾವಣೆ ನಡೆಯಲಿದೆ. ಇದೇ ತಿರುಚ್ಚಿ ಕ್ಷೇತ್ರದಿಂದ ರಾಘವ ಲಾರೆನ್ಸ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಗುಲ್ಲಾಗಿದೆ. "ನಾನು ತಿರುಚ್ಚಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಅಂದ್ರು, ಅದಕ್ಕೂ ಮುನ್ನ ನಾನು ರಾಜಕೀಯಕ್ಕೆ ಬರಬೇಕು. ನನ್ನ ನಿರ್ಧಾರ ಏನು ಎನ್ನುವುದನ್ನು ಹೇಳ್ತೀನಿ" ಎಂದು ಮಾತು ಆರಂಭಿಸಿದ್ದಾರೆ.
ನಾನು ನನ್ನ ಕೆಲಸ ಮಾಡಿಕೊಂಡು ಟ್ರಸ್ಟ್ ಮೂಲಕ ಜನರಿಗೆ ಕೈಲಾದ ಸಹಾಯ ಮಾಡುತ್ತಿದ್ದೇನೆ. ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದಾಗ ನಾನು ಭೇಟಿ ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿಬಂದೆ. ಒಂದು ವೇಳೆ ಅಧಿಕಾರ ಸಿಕ್ಕರೆ ದೊಡ್ಡಮಟ್ಟದಲ್ಲಿ ಟ್ರಸ್ಟ್ ಮಾಡಬಹುದು, 100 ಎಕರೆಯಲ್ಲಿ ಟ್ರಸ್ಟ್ ಮಾಡಿ ಸಾಕಷ್ಟು ಜನರಿಗೆ ಸಹಾಯ ಮಾಡಬಹುದು ಎಂದುಕೊಂಡೆ. ಬಳಿಕ ಅಮ್ಮನ ಬಳಿ ಈ ವಿಚಾರ ಹೇಳಿದೆ. ಅವರು ಬೇಸರಗೊಂಡರು. ನೀನು ರಾಜಕೀಯಕ್ಕೆ ಬರುವುದು ನನಗೆ ಇಷ್ಟವಿಲ್ಲ ಅಂದ್ರು. ಜಾತಿ, ಮತ, ಹಣ ತುಂಬಿದ ಕೂಪಕ್ಕೆ ಹೋಗಬೇಡ, ರಜನಿಕಾಂತ್ ಅವರಿಗೂ ಹೇಳ್ತೀನಿ. ಅವರ ಬಳಿ ಕರ್ಕೊಂಡು ಹೋಗು ಅಂದ್ರು ಎಂದು ಆ ದಿನವನ್ನು ರಾಘವ ಲಾರೆನ್ಸ್ ನೆನಪಿಸಿಕೊಂಡಿದ್ದಾರೆ.
ಮಾತು ಮುಂದುವರೆಸಿರುವ ರಾಘವ "ತಲೈವಾ ರಾಜಕೀಯಕ್ಕೆ ಬರ್ತಿದ್ದಾರೆ, ಸರ್ಕಾರ ಬಂದ್ರೆ ನಾವು ಮಾಡುತ್ತಿರುವ ಸಹಾಯ ದೊಡ್ಡದಾಗಿ ಮಾಡಬಹುದು ಎಂದೆ. ಅದಕ್ಕೆ ಅಮ್ಮ ಒಪ್ಪಲೇ ಇಲ್ಲ. ಬೇಡವೇ ಬೇಡ ಎಂದು ಖಡಕ್ ಆಗಿ ಹೇಳಿಬಿಟ್ರು. ಬಳಿಕ ಕೊರೊನಾ ಬಂದು ರಜನಿಕಾಂತ್ ಕೂಡ ರಾಜಕೀಯರಂಗಕ್ಕೆ ಬರಲ್ಲ ಎಂದು ಘೋಷಿಸಿಬಿಟ್ರು. ಬಳಿಕ ಹೋಗಿ ಮಾತನಾಡಿದೆ. ಅವ್ರು ಬಹಳ ಬೇಸರಗೊಂಡ್ರು. ನಾನು ಹೋಗಲಿ ಬಿಡಿ, ನೀವು ಆರೋಗ್ಯವಾಗಿ ಇರಬೇಕು ಎಂದು ಸುಮ್ಮನಾದೆ. ಬಳಿಕ ವಿಜಯ್ ಅವ್ರು ರಾಜಕೀಯಕ್ಕೆ ಬರ್ತೀನಿ ಎಂದಾಗ ಮತ್ತೆ ಖುಷಿಯಾಯಿತು" ಎಂದಿದ್ದಾರೆ.
ಮತ್ತೆ ಹೋಗಿ ಅಮ್ಮನ ಬಳಿ ಈ ವಿಚಾರ ಹೇಳಿದೆ. ನಮ್ಮಂತಹವರಿಗೆ ಅಲ್ಲ ರಾಜಕೀಯ, ಹಣಬಲ ಇಲ್ಲದೇ ಇಲ್ಲಿ ಸಾಧ್ಯವಿಲ್ಲ ಎಂದು ಮತ್ತೆ ಹೇಳಿದ್ರು. ಮಾತನಾಡಿ ಒಪ್ಪಿಸೋಣ ಎಂದುಕೊಂಡಾಗ ಬೈದು ಕಳಿಸಿದ್ರು. ಆದರೆ ಕೊನೆಗೆ ವಿಜಯ್ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಹೊಸ ಚರಿತ್ರೆ ಸೃಷ್ಟಿಸಿದ್ರು. ಹಣ ಕೊಟ್ರೆ ಮಾತ್ರ ರಾಜಕೀಯರಂಗದಲ್ಲಿ ಗೆಲ್ಲೋಕೆ ಸಾಧ್ಯ ಅಂತ ಹೇಳ್ದೆ ಅಲ್ವಾ? ನೋಡು ಅದು ಯಾವುದು ಇಲ್ಲದೇ ವಿಜಯ್ ಗೆದ್ದಿದ್ದಾರೆ ಅಂದೆ. ಈಗ ಏನು ಹೇಳ್ತೀಯಾ ಕೇಳ್ದೆ. ಹೌದು ಮಗ್ನೆ ಆ ಹುಡುಗ ಎಲ್ಲಾ ಬದಲಿಸಿಬಿಟ್ಟ. ಇಂತಹ ಬದಲಾವಣೆ ಆಗುತ್ತೆ ಎಂದುಕೊಂಡಿರಲಿಲ್ಲ. ಈಗ ನಂಬಿಕೆ ಬಂದಿದೆ. ನಿನಗೆ ಇಷ್ಟ ಇದ್ರೆ ರಾಜಕೀಯಕ್ಕೆ ಹೋಗು ಅಂದ್ರು. ಬಹಳ ಖುಷಿಯಾಯ್ತು. ಈಗ ಅಭಿಮಾನಿಗಳನ್ನು, ಜನರನ್ನು ಕೇಳ್ತೀನಿ. ನಾನು ರಾಜಕೀಯರಂಗಕ್ಕೆ ಬರಬಹುದಾ? ನಿಮ್ಮ ಅಭಿಪ್ರಾಯ ತಿಳಿಸಿ ಎಂದು ರಾಘವ ಲಾರೆನ್ಸ್ ಕೇಳಿದ್ದಾರೆ.


Click it and Unblock the Notifications