ಲೋಕಸಭೆ ಚುನಾವಣೆ ಮೇಲೆ ಕಣ್ಣು, 15 ದಿನಗಳಲ್ಲಿ ದಳಪತಿ ವಿಜಯ್ ಹೊಸ ಪಕ್ಷ ಘೋಷಣೆ, ಹೆಸರೇನು?
ತಮಿಳು ನಟ ದಳಪತಿ ವಿಜಯ್ ರಾಜಕೀಯರಂಗ ಪ್ರವೇಶ ಮಾಡುತ್ತಾರೆ ಎನ್ನುವ ಗುಸುಗುಸು ಸಾಕಷ್ಟು ದಿನಗಳಿಂದ ಕೇಳಿಬರ್ತಿದೆ. ಈ ಬಗ್ಗೆ ಇದೀಗ ಕಾಲಿವುಡ್ ಅಂಗಳದಲ್ಲಿ ಚರ್ಚೆ ಜೋರಾಗಿದೆ. ಇನ್ನು ಹೆಸರಿಡದ ಪಕ್ಷ ಅಧ್ಯಕ್ಷರಾಗಿ ವಿಜಯ್ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ. ಸದ್ಯ ದೆಹಲಿಯಲ್ಲಿ ಪಕ್ಷವನ್ನು ನೋಂದಣಿ ಮಾಡಿಸುವ ಕೆಲಸಗಳು ಭರದಿಂದ ಸಾಗಿದೆ ಎನ್ನಲಾಗ್ತಿದೆ.
ಮಾಜಿ ಸಿಎಂಗಳಾದ ಜಯಲಲಿತಾ ಹಾಗೂ ಕರುಣಾನಿಧಿ ನಿಧನದ ಬಳಿಕ ತಮಿಳುನಾಡಿನಲ್ಲಿ ಪ್ರಬಲ ರಾಜಕೀಯ ನಾಯಕರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಲ್ಲಿ ಆಂತರಿಕ ತಿಕ್ಕಾಟ ಹೆಚ್ಚಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪ್ರಾದೇಶಿಕ ಪಕ್ಷ ಕಟ್ಟಿ ರಾಜಕೀಯ ಪ್ರವೇಶ ಮಾಡುವ ಮನಸ್ಸು ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದರು. ಆರೋಗ್ಯ ಸಮಸ್ಯೆ ನೆಪವೊಡ್ಡಿ ರಾಜಕೀಯರಂಗ ಪ್ರವೇಶಿಸದಿರಲು ತೀರ್ಮಾನಿಸಿದರು.

ತಮಿಳುನಾಡಿನಲ್ಲಿ ರಜನಿಕಾಂತ್ ಬಳಿಕ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತೊಬ್ಬ ನಟ ದಳಪತಿ ವಿಜಯ್. ಅಭಿಮಾನಿಗಳು ನೆಚ್ಚಿನ ನಟ ರಾಜಕೀಯರಂಗ ಪ್ರವೇಶಿಸಬೇಕು. ಜನ ಸೇವೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ತಮ್ಮ ಅಭಿಮಾನಿ ಸಂಘದ ಮೂಲಕ ವಿಜಯ್ ಈಗಾಗಲೇ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ' ಎನ್ನುವ ತಮ್ಮ ಅಭಿಮಾನಿ ಸಂಘವನ್ನೇ ರಾಜಕೀಯ ಪಕ್ಷವಾಗಿ ಬದಲಿಸಲು ವಿಜಯ್ ತೀರ್ಮಾನಿಸಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಘೋಷಣೆ ಆಗದ ಪಕ್ಷಕ್ಕೆ ತಾವೇ ಅಧ್ಯಕ್ಷರಾಗಿಯೂ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
60ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಳಪತಿ ವಿಜಯ್ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ವಿಜಯ್ GOAT (The Greatest of All Time) ಎನ್ನುವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ದೆಹಲಿಯಲ್ಲಿ ಹೊಸ ಪಕ್ಷವನ್ನು ನೋಂದಣಿ ಮಾಡಿಸುವ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾರ್ತಿಕ್ ಸುಬ್ಬರಾಜ್ ಜೊತೆ ಮತ್ತೊಂದು ಸಿನಿಮಾ ಮಾಡಲು ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಪೊಲಿಟಿಕಲ್ ಎಂಟ್ರಿ ಬಗ್ಗೆ ಚರ್ಚೆ ನಡೀತಿದೆ.

ಇತ್ತೀಚೆಗೆ ಅಭಿಮಾನಿ ಸಂಘದ ಮುಖಂಡರು ನಟ ವಿಜಯ್ ಅವರನ್ನು ಭೇಟಿ ಮಾಡಿ ಮುಂದಿನ ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಒಂದಷ್ಟು ಬೈಲಾ ಜೊತೆಗೆ ಪಕ್ಷವನ್ನು ನೋಂದಣಿ ಮಾಡಿಸಲು ತೀರ್ಮಾನಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು ದಳಪತಿ ಹೊಸ ಪಕ್ಷದ ಹೆಸರೇನು? ಎನ್ನುವ ಬಗ್ಗೆಯೂ ಭಾರೀ ಚರ್ಚೆ ನಡೀಯಿದೆ. 'ಕಳಗಂ' ಎನ್ನುವ ಪದ ಸೇರಿ ಇರುವಂತೆ ಪಕ್ಷದ ಹೆಸರನ್ನು ಆಯ್ಕೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಎಂಜಿಆರ್ 'ಆಲ್ ಇಂಡಿಯಾ ಅಣ್ಣ ದ್ರಾವಿಣ ಮುನ್ನೇಟ್ರ ಕಳಗಂ(AIADMK) ಪಕ್ಷ ಸ್ಥಾಪಿಸಿ ತಮಿಳುನಾಡು ಸಿಎಂ ಆಗಿದ್ದರು. ಬಳಿಕ ಜಯಲಲಿತಾ ಆ ಪಕ್ಷವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು. ಇನ್ನು ಅಣ್ಣಾ ದೊರೆ ಸ್ಥಾಪಿಸಿದ 'ದ್ರಾವಿಡ ಮುನ್ನೇಟ್ರ ಕಳಗಂ' ಪಕ್ಷವನ್ನು ಅವರ ಬಳಿಕ ಕರುಣಾನಿಧಿ ಮುನ್ನಡೆಸಿದರು. ಅದೇ ರೀತಿ ಕಳಗಂ ಎನ್ನುವ ಪದ ಇರುವಂತೆ ದಳಪತಿ ವಿಜಯ್ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.
ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಿ ರಾಜಕೀಯ ರಂಗಕ್ಕೆ ಬರಲು ದಳಪತಿ ವಿಜಯ್ ಬಹಳ ದಿನಗಳಿಂದ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಕಳೆದ ವರ್ಷ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಲ್ಲಿ 10 ನೇ ತರಗತಿ ಮತ್ತು ಸೆಕೆಂಡ್ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ವಿಜಯ್ ಸನ್ಮಾನಿಸಿದ್ದರು. ವಿಜಯ್ ಪೀಪಲ್ಸ್ ಮೂವ್ಮೆಂಟ್ ಸಂಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ಬಹುಮಾನದ ಜೊತೆಗೆ ನಗದು ಪ್ರೋತ್ಸಾಹ ಧನ ನೀಡಲಾಗಿತ್ತು. ಸ್ವತಃ ವಿಜಯ್ ಬಹುಮಾನ ವಿತರಿಸಿದ್ದರು. ಆ ಮೂಲಕ ರಾಜಕೀತರಂಗ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿತ್ತು.


Click it and Unblock the Notifications











