ಬಿಜೆಪಿ ಸೇರ್ಪಡೆ ವದಂತಿ ಬಗ್ಗೆ 'ತಳಪತಿ' ವಿಜಯ್ ತಂದೆ ಚಂದ್ರಶೇಖರ್ ಪ್ರತಿಕ್ರಿಯೆ
ಕಾಲಿವುಡ್ ನ ಖ್ಯಾತ ನಟ ತಳಪತಿ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಬಿಜಿಪಿ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ವಿಜಯ್ ತಂದೆ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ವೆಬ್ ಪೋರ್ಟಲ್ ವೊಂದರ ಜೊತೆ ಮಾತನಾಡಿದ ಚಂದ್ರಶೇಖರ್ ಈ ಸುದ್ದಿಯನ್ನು ತಳ್ಳಿಹಾಕಿದ್ದಾರೆ. 'ಈ ಬಗ್ಗೆ ನಾನು ಅನೇಕ ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ಆದರೆ ಈ ಸುದ್ದಿ ನಿಜವಲ್ಲ' ಎಂದು ಹೇಳುವ ಮೂಲಕ ಬಿಜೆಪಿ ಸೇರುತ್ತಿಲ್ಲ ಎಂದು ಹೇಳಿದ್ದಾರೆ.
ನಟಿ ಮತ್ತು ರಾಜಕಾರಣಿ ಖುಷ್ಬೂ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಬಳಿಕ ಈ ಸುದ್ದಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಲು ಪ್ರಾರಂಭಿಸಿದೆ. ಇನ್ನು ನಟ ವಿಜಯ್ ಇತ್ತೀಚಿಗಿನ ಸಿನಿಮಾಗಳಲ್ಲಿ ಬಿಜೆಪಿ ಸರ್ಕಾರದ ಕೆಲವು ನಿಯಮಗಳನ್ನು ಕಟುವಾಗಿ ವಿರೋಧಿಸಿದ್ದಾರೆ. 2017ರಲ್ಲಿ ರಿಲೀಸ್ ಆದ ಮರ್ಸಲ್ ಸಿನಿಮಾದಲ್ಲಿ ಜಿ ಎಸ್ ಟಿ, ಆರೋಗ್ಯ ವ್ಯವಸ್ಥೆ ಮತ್ತು ಕೆಲವು ವಿಷಯಗಳನ್ನು ವಿರೋಧಿಸಲಾಗಿದೆ. ಈ ಸಿನಿಮಾ ಮತ್ತು ನಟ ವಿಜಯ್ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸಿನಿಮಾ ಮಾತ್ರವಲ್ಲದೆ ಬಿಜೆಪಿ ಕೆಲವು ನಾಯಕರು ವಿಜಯ್ ಧರ್ಮದ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಜೋಸೆಫ್ ವಿಜಯ್ ವಿರುದ್ಧ ಅಭಿಯಾನ ಮಾಡಿದ್ದರು. ಸಿನಿಮಾಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದರು.
ಇನ್ನೂ ಈ ಸಿನಿಮಾ ಬಳಿಕ ಬಂದ ಸರ್ಕಾರ್ ಚಿತ್ರದ ಪ್ರಚಾರವೇಳೆ ನಟ ವಿಜಯ್ ಮಾತು ರಾಜಕೀಯ ಎಂಟ್ರಿ ಬಗ್ಗೆ ಸುಳಿವು ನೀಡಿತ್ತು. 'ನಾನು ಈ ಸಿನಿಮಾದಲ್ಲಿ ಸಿ ಎಂ ಅಲ್ಲ. ನಾನು ಸಿಎಂ ಆಗಿದ್ದರೆ ನಟಿಸುತ್ತಿರಲಿಲ್ಲ. ಸಿಎಂ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ನಾನು ಒಂದು ಪೂರ್ವ ನಿದರ್ಶನವನ್ನು ಹೊಂದಿರುತ್ತೇನೆ. ಮೊದಲು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು' ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ವಿಜಯ್ ರಾಜಕೀಯ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.
ಇದೀಗ ವಿಜಯ್ ತಂದೆ ಬಿಜೆಪಿ ಸೇರುತ್ತಿದ್ದಾರೆ ಎನ್ನುವ ಸುದ್ದಿ ಅನೇಕರಿಗೆ ಅಚ್ಚರಿವುಂಟು ಮಾಡಿದೆ. ಆದರೆ ಸದ್ಯಕ್ಕೆ ಚಂದ್ರಶೇಖರ್ ಬಿಜೆಪಿ ಸೇರ್ಪಡೆ ವಿಚಾರವನ್ನು ತಳ್ಳಿಹಾಕುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.


Click it and Unblock the Notifications











