ಮನೆಗೆ ವಾಪಸ್ಸಾದ ದಳಪತಿ ವಿಜಯ್ ಪುತ್ರ: ಕೆನಡಾದಲ್ಲಿ ಸಿಲುಕಿದ್ದ ಸಂಜಯ್
ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ದಿಢೀರ್ ಲಾಕ್ ಡೌನ್ ನಿಂದ ಜನ ಎಲ್ಲಿದ್ದರೊ ಅಲ್ಲಿಯೆ ಸಿಲುಕುವಂತಾಗಿದೆ. ಮನೆಯಿಂದ ದೂರ ಉಳಿದವರು ಮನೆಗೆ ವಾಪಸ್ ಬರದಂತಹ ಸ್ಥಿತಿ ನಿರ್ಮಾಣವಾಗಿದೆ.
ವಿದೇಶದಲ್ಲಿ ಸಿಲುಕಿದ್ದ ಅನೇಕರು ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಮನೆಗೆ ಮರಳುತ್ತಿದ್ದಾರೆ. ವಿದ್ಯಾಭ್ಯಾಸ, ಪ್ರವಾಸ, ಉದ್ಯೋಗ ಅಂತ ವಿದೇಶದಲ್ಲಿ ನೆಲೆಸಿದ್ದ ಸಾಕಷ್ಟು ಭಾರತೀಯರನ್ನು ಈಗಾಗಲೆ ಮರಳಿ ತವರಿಗೆ ಕರೆದುಕೊಂಡುಬರಲಾಗಿದೆ. ಇನ್ನೂ ಅನೇಕರು ಆಗಮಿಸುತ್ತಿದ್ದಾರೆ. ಇದೀಗ ತಮಿಳು ನಟ ವಿಜಯ್ ಪುತ್ರ ಜಾಸನ್ ಸಂಜಯ್ ಕೂಡ ಮರಳಿ ಮನೆ ಸೇರಿದ್ದಾರೆ. ಮುಂದೆ ಓದಿ..

ಕೆನಡಾದಲ್ಲಿ ಸಿಲುಕಿದ್ದ ವಿಜಯ್ ಪುತ್ರ
ಕಾಲಿವುಡ್ ಸ್ಟಾರ್ ವಿಜಯ್ ಪುತ್ರ ಜಾಸನ್ ಸಂಜಯ್ ಕೆನಡಾದಲ್ಲಿ ನೆಲೆಸಿದ್ದರು. ದಿಢೀರ್ ಲಾಕ್ ಡೌನ್ ನಿಂದ ಸಂಜಯ್ ಭಾರತಕ್ಕೆ ವಾಪಸ್ ಬರಲು ಸಾಧ್ಯವಾಗಿರಲಿಲ್ಲ. ಕೊರೊನಾ ಹಾವಳಿಯ ಸಂದಿಗ್ದ ಸ್ಥಿತಿಯಲ್ಲಿ ಮಗ ವಿದೇಶದಲ್ಲಿಯೇ ಸಿಲುಕಿರುವ ಬಗ್ಗೆ ನಟ ವಿಜಯ್ ಮತ್ತು ಕುಟುಂಬ ಆತಂಕಕ್ಕೆ ಒಳಗಾಗಿತ್ತು.

ಮನೆಗೆ ವಾಪಸ್ ಆದ ನಟ ವಿಜಯ್ ಪುತ್ರ
ಇದೀಗ ಸಂಜಯ್ ಮನೆಗೆಬಂದಿದ್ದು, ಅಪ್ಪ-ಅಮ್ಮನನ್ನು ನೋಡಿ ಸಂತಸಗೊಂಡಿದ್ದಾರೆ. ಸುಮಾರು 15 ದಿನಗಳ ಹಿಂದೆಯೇ ಸಂಜಯ್ ಭಾರತಕ್ಕೆ ಮರಳಿದ್ದಾರೆ. ಆದರೆ ಭಾರತಕ್ಕೆ ಬರುತ್ತಿದ್ದಂತೆ ಸಂಜಯ್ 14 ದಿನಗಳ ಕಾಲ ಸೆಲ್ಫ್ ಕ್ವಾರಂಟೈನ್ ನಲ್ಲಿದ್ದಾರೆ. ಆ ನಂತರ ಮನೆಗೆತೆರಳಿದ್ದಾರೆ. ಮಗನನ್ನು ನೋಡಿ ಇಡೀ ಕುಟುಂಬ ಸಂತಸದಲ್ಲಿದೆ.

ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೆನಡಾಗೆ ತೆರಳಿದ್ದ ಸಂಜಯ್
ವಿಜಯ್ ಪುತ್ರ ಸಂಜಯ್ ಉನ್ನತ ವಿದ್ಯಾಭ್ಯಾಸಕ್ಕಾಗಿ ಕೆನಡಾಗೆ ತೆರಳಿದ್ದರು. ಕೆನಡಾದ ಜನಪ್ರಿಯ ವಿಶ್ವವಿದ್ಯಾಲಯವೊಂದರಲ್ಲಿ ಚಲನಚಿತ್ರ ನಿರ್ದೇಶನದ ಬಗ್ಗೆ ಕಲಿಯುತ್ತಿದ್ದಾರಂತೆ. ಭಾರತಕ್ಕೆ ವಾಪಸ್ ಆಗದೆ ವಿದೇಶದಲ್ಲಿಯೆ ಉಳಿದಿರುವ ಮಗನ ಬಗ್ಗೆ ವಿಜಯ್ ಕಳವಳ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಮತ್ತೊಂದೆಡೆ ಸಂಜಯ್ ಸಿನಿಮಾರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ರಿಮೇಕ್ ಸಿನಿಮಾ ಮೂಲಕ ಎಂಟ್ರಿ ಕೊಡ್ತಾರಾ ಸಂಜಯ್?
ತೆಲುಗಿನ 'ಉಪ್ಪೆನಾ' ಸಿನಿಮಾ ತಮಿಳಿಗೆ ರಿಮೇಕ್ ಆಗುತ್ತಿದೆ. ಈ ಮೂಲಕ ವಿಜಯ್ ಪುತ್ರ ನಾಯಕನಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಉಪ್ಪೇನಾ ಸಿನಿಮಾ ಏಪ್ರಿಲ್ 2 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ವೈರಸ್ ಲೈಕ್ ಡೌನ್ ನಿಂದ 'ಉಪ್ಪೆನಾ' ಇನ್ನೂ ತೆರೆ ಕಾಣಲು ಸಾಧ್ಯವಾಗಿಲ್ಲ. ಬುಚ್ಚಿ ಬಾಬು ಸನಾ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ತಮಿಳಿನಲ್ಲಿಯೂ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.


Click it and Unblock the Notifications











