ತನ್ನದೇ ತಪ್ಪಿನಿಂದ ಜೀವ ಕಳೆದುಕೊಂಡ ನಟ; ತಲೈವಾ ಜೊತೆ ನಟಿಸೋ ಆಸೆ ಈಡೇರಲೇ ಇಲ್ಲ!
ಯಾವ ಜೀವಕ್ಕೆ ಯಾವ ದೇಹದ ಋಣ ಎಷ್ಟು ದಿನ ಗೊತ್ತಿಲ್ಲ. ಕಾಲನ ಕರೆಗೆ ಎಲ್ಲರೂ ಓಗೊಟ್ಟು ಹೋಗಲೇಬೇಕು. ಇವತ್ತು ಇದ್ದವರು ನಾಳೆ ಇರಲ್ಲ. ಇನ್ನು ಕೆಲವರು ತಮ್ಮ ಕೈಯಾರೆ ತಮ್ಮ ಜೀವ, ಜೀವನ ಕಳೆದುಕೊಂಡು ಬಿಡುತ್ತಾರೆ. ಗೊತ್ತಿದ್ದೂ ಗೊತ್ತಿದ್ದು ತಪ್ಪು ಮಾಡಿ ಕೊನೆಗೆ ಪಶ್ಚಾತ್ತಾಪ ಪಡುತ್ತಾರೆ. ಅಷ್ಟರಲ್ಲಿ ಎಲ್ಲಾ ಮಿಂಚಿ ಹೋಗಿರುತ್ತದೆ.
ಕುಡಿತ ಒಳ್ಳೆಯದಲ್ಲ. ಈ ಹಾಳಾದ ಕುಡಿತದ ಚಟದಿಂದ ತಾನು ನೋವುಪಡುವುದು ಮಾತ್ರವಲ್ಲ, ತನ್ನನ್ನು ನಂಬಿಕೊಂಡವರನ್ನು ನಡು ನೀರಿನಲ್ಲಿ ಕೈಬಿಟ್ಟು ಹೋಗಬೇಕಾದ ಸ್ಥಿತಿ ಬಂದುಬಿಡುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಕುಡಿದು ಆರೋಗ್ಯ ಕೆಡಿಸಿಕೊಂಡು ಕೊನೆಗೆ ದುಡಿದ್ದನ್ನೆಲ್ಲಾ ಆಸ್ಪತ್ರೆಗೆ ಸುರಿದು, ಕೊನೆಗೂ ದುಡ್ಡು ಇಲ್ಲ, ಜೀವವೂ ಉಳಿಯಲಿಲ್ಲ ಎನ್ನುವ ಸನ್ನಿವೇಶ ಬಂದುಬಿಡುತ್ತದೆ.

ತಮಿಳು ಹಾಸ್ಯ ನಟ ಬಿಜಿಲಿ ರಮೇಶ್ ಕುಡಿತಕ್ಕೆ ದಾಸನಾಗಿ ಕೊನೆಗೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ತಮ್ಮನ್ನೇ ನಂಬಿಕೊಂಡಿದ್ದ ಪತ್ನಿ, ಮಕ್ಕಳನ್ನು ಅನಾಥರಾಗಿ ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ದಿಢೀರ್ ಸಿಕ್ಕ ಜನಪ್ರಿಯತೆಯನ್ನು ಬಳಸಿಕೊಂಡು ಒಂದಷ್ಟು ಹಣ ಸಂಪಾದಿಸುವುದು ಬಿಟ್ಟು ಕುಡಿತಕ್ಕೆ ದಾಸನಾಗಿ ಹಾಸಿಗೆ ಹಿಡಿದಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಜೀವ ಬಿಟ್ಟಿದ್ದಾರೆ.
ಬಿಜಿಲಿ ರಮೇಶ್ ಯಕೃತ್ತಿಗೆ (ಲಿವರ್) ಸಂಬಂಧಿಸಿದ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದರು. ಕುಡಿತದ ಚಟವೇ ಅವರಿಗೆ ಮಾರಕವಾಗಿಬಿಟ್ಟಿತ್ತು. ಆಗಸ್ಟ್ 26ರ ರಾತ್ರಿ ಚೆನ್ನೈನಲ್ಲಿ ನಿಧನರಾದರು ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು 2 ದಿನಗಳ ಹಿಂದೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಮನೆಗೆ ಮರಳಿದ್ದರು. ನಿದ್ರೆಯಲ್ಲಿ ಇದ್ದಾಗಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಯೂಟ್ಯೂಬ್ ಫ್ರಾಂಕ್ ವೀಡಿಯೋಗಳಿಂದ ಬಿಜಿಲಿ ರಮೇಶ್ ಜನಪ್ರಿಯತೆ ಸಾಧಿಸಿದ್ದರು. ಬಳಿಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಇನ್ನು ಟಿವಿ ಶೋಗಳಲ್ಲಿ ಕೂಡ ಮಿಂಚಿದ್ದರು. ಸೂಪರ್ ಸ್ಟಾರ್ ರಜನಿಕಾಂತ್ ಅವರ ದೊಡ್ಡ ಅಭಿಮಾನಿ ಆಗಿದ್ದರು. 'ಝಾಂಬಿ', 'ಕೋಮಾಲಿ', 'ವಾಚ್ಮ್ಯಾನ್', 'ಆಡೈ', 'ನೆಂಜಾಮುಂಡು ನೆರ್ಮೈಯುಂಡು ಓದು ರಾಜ' ಮತ್ತು 'ಎಲ್ಕೆಜಿ' ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದರು.
ಕುಡಿತದಿಂದ ತಮ್ಮ ಆರೋಗ್ಯ ಕೆಟ್ಟಾಗ ಬಿಜಿಲಿ ರಮೇಶ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. "ನನಗೆ ನನ್ನ ಆರೋಗ್ಯದ ಬಗ್ಗೆ ಚೆನ್ನಾಗಿ ಗೊತ್ತು. ನನಗೆ ಏನು ತಿನ್ನಲು ಆಗುತ್ತಿಲ್ಲ. ಅದು ತುಂಬಾ ಕಷ್ಟ. ಜನರಿಗೆ ಕುಡಿಯಬೇಡಿ ಎಂದು ಹೇಳಲು ನಾನು ಅಷ್ಟು ಒಳ್ಳೆಯವನಲ್ಲ. ನಾನು ಆ ಅರ್ಹತೆಯನ್ನು ಕಳೆದುಕೊಂಡಿದ್ದೇನೆ. ನನ್ನ ಜೀವ ಯಾವಾಗ ಹೋಗುತ್ತದೆ ಗೊತ್ತಿಲ್ಲ. ನನ್ನ ಮಕ್ಕಳ ಬಗ್ಗೆ ಯೋಚಿಸಿದರೆ ನೋವಾಗುತ್ತದೆ, ನಾನು ಹೋದಮೇಲೆ ಅವರನ್ನು ಯಾರು ನೋಡಿಕೊಳ್ಳುತ್ತಾರೆ?" ಎಂದಿದ್ದರು.
ಇನ್ನು ರಜನಿಕಾಂತ್ ಅಭಿಮಾನಿಯಾಗಿದ್ದ ಬಿಜಿಲಿ ರಮೇಶ್ ನೆಚ್ಚಿನ ನಟನ ಜೊತೆ ನಟಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಆ ಆಸೆ ಈಡೇರಲೇ ಇಲ್ಲ. ಬಿಜಿಲಿ ರಮೇಶ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


Click it and Unblock the Notifications











