ತಮಿಳು ಹಾಸ್ಯ ನಟ ಮನೋಬಾಲ ನಿಧನ: ದಾದಾ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದ ಸಿನಿಕರ್ಮಿ
ಕಾಲಿವುಡ್ಗೆ ಮತ್ತೊಂದು ಆಘಾತ ಎದುರಾಗಿದೆ. ಖ್ಯಾತ ಹಾಸ್ಯನಟ, ನಿರ್ದೇಶಕ, ನಿರ್ಮಾಪಕ ಮನೋಬಾಲ(69) ಕೊನೆಯುಸಿರೆಳೆದಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಕೆಲ ದಿನಗಳಿಂದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇದೀಗ ನಿಧನರಾಗಿದ್ದಾರೆ. ರಜನಿಕಾಂತ್ ಸೇರಿದಂತೆ ಕಾಲಿವುಡ್ ಗಣ್ಯರು ಮನೋಬಾಲ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ. ಮನೋಬಲ ನಿಧನದ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ಮನೋಬಾಲ ಕಾಮಿಡಿ ಟೈಮಿಂಗ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ಬಹಳ ತೆಳ್ಳಗಿದ್ದ ಮನೋಬಲ ಅದನ್ನೇ ಪ್ಲಸ್ ಮಾಡಿಕೊಂಡು ಕಾಮಿಡಿ ರೋಲ್ಗಳಲ್ಲಿ ನಟಿಸುತ್ತಿದ್ದರು. ರಜನಿಕಾಂತ್, ವಿಜಯ್, ಸೂರ್ಯ ಸೇರಿದಂತೆ ತಮಿಳಿನ ಸ್ಟಾರ್ ನಟರ ಸಿನಿಮಾಗಳಲೆಲ್ಲಾ ಅವರು ಬಣ್ಣ ಹಚ್ಚಿದ್ದರು. 900ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 20ಕ್ಕೂ ಅಧಿಕ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಕನ್ನಡದಲ್ಲಿ ವಿಷ್ಣುವರ್ಧನ್ ನಟನೆಯ 'ಡಿಸೆಂಬರ್ 31' ಚಿತ್ರವನ್ನು ಕೂಡ ನಿರ್ದೇಶನ ಮಾಡಿದ್ದರು.

3 ಸಿನಿಮಾಗಳನ್ನು ಮನೋಬಾಲ ನಿರ್ಮಾಣ ಮಾಡಿದ್ದರು. ಕಿರುತೆರೆ ಧಾರಾವಾಹಿಗಳಲ್ಲೂ ಬಣ್ಣ ಹಚ್ಚಿದ್ದರು. ಇತ್ತೀಚೆಗೆ ನಟ ಮನೋಬಾಲ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್ಗೆ ಗುರಿಯಾಗಿದ್ದರು. ದಳಪತಿ ವಿಜಯ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಸಿನಿಮಾ ಸೆಟ್ಗೆ ಕಾಲಿಡಲ್ಲ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ವಿಜಯ್ ಅಭಿಮಾನಿಗಳು ಗರಂ ಆಗಿದ್ದರು. ಸಾಕಷ್ಟು ಟ್ರೋಲ್ ಮಾಡಿದ್ದರು. ನಂತರ ತಮ್ಮ ಟ್ವೀಟ್ ಅನ್ನು ಮನೋಬಾಲ ಡಿಲೀಟ್ ಮಾಡಿದ್ದರು.
1953, ಡಿಸೆಂಬರ್ 8ರಂದು ತಮಿಳುನಾಡಿನ ನಗರಕೋವಿಲ್ ಸಮೀಪ ಮರುಂಗೂರ್ನಲ್ಲಿ ಮನೋಬಾಲ ಜನಿಸಿದರು. ಅವರ ಮೂಲ ಹೆಸರು ಬಾಲಚಂದರ್. ಆ ನಂತರ ಮನೋಬಾಲ ಎಂದು ಹೆಸರು ಬದಲಾಯಿಸಿಕೊಂಡರು. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಭಾರತೀರಾಜಾ ಜೊತೆ ಹೆಚ್ಚಾಗಿ ಕೆಲಸ ಮಾಡಿದರು. ಕಮಲ್ ಹಾಸನ್ ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದರು. ಹಾಗೆಯೇ ಭಾರತೀರಾಜಾ, ಕಮಲ್ ಇಬ್ಬರು ಜೊತೆಗೂ ಆತ್ಮೀಯ ಅನುಬಂಧ ಇತ್ತು. 1979 ರಲ್ಲಿ ಭಾರತೀರಾಜಾ ನಿರ್ದೇಶದ 'ಪುತಿಯ ವಾರಪ್ಪುಗಲ್' ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು.
ನಟ ರಜನಿಕಾಂತ್ ತಮಿಳಿನಲ್ಲಿ ಟ್ವೀಟ್ ಮಾಡಿ ಮನೋಬಾಲ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. "ಖ್ಯಾತ ನಿರ್ದೇಶಕರು, ನಟ, ನನ್ನ ಆತ್ಮೀಯ ಗೆಳೆಯ ಮನೋಬಾಲ ಅಗಲಿಕೆ ನನಗೆ ಬಹಳ ನೋವು ತಂದಿದೆ. ಅವರ ಕುಟುಂಬಕ್ಕೆ ನನ್ನ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಬರೆದುಕೊಂಡಿದ್ದಾರೆ. ರಜನಿಕಾಂತ್ ಜೊತೆ ಮನೋಬಲ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಮನೋಬಾಲ ಅವರ ಗುರುಗಳಾದ ನಿರ್ದೇಶಕ ಭಾರತೀರಾಜ ವಿಡಿಯೋ ಮಾಡಿ ಸಂತಾಪ ಸೂಚಿಸಿದ್ದಾರೆ. "ನನ್ನ ಮನೋಬಾಲನಿಗೆ ಕಣ್ಣೀರಿನ ನಮನ" ಎಂದು ಬರೆದು ವಿಡಿಯೋ ಹಂಚಿಕೊಂಡಿದ್ದಾರೆ. "ಮನೋಬಾಲ ಅಗಲಿಕೆ ಆಘಾತ ತಂದಿದೆ. ಅವರು ನನಗೆ ಬಹಳ ಆತ್ಮೀಯರಾಗಿದ್ದರು. ಆಲೋಚನೆಗಳು ಚೆನ್ನಾಗಿತ್ತು. ರೊಮ್ಯಾಂಟಿಕ್, ಫ್ಯಾಮಿಲಿ ಸಬ್ಜೆಕ್ಟ್ ಸಿನಿಮಾಗಳನ್ನು ಹೆಚ್ಚು ಮಾಡುತ್ತಿದ್ದರು. ಮನೋಬಾಲ ಇಷ್ಟು ಬೇಗ ಹೊರಟು ಬಿಡುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ. ನಾನು ಬೇರೆ ಊರಿನಲ್ಲಿ ಇದ್ದೀನಿ. ಆತನ ಅಂತ್ಯಕ್ರಿಯೆಗಾಗಿ ನಾನು ಚೆನ್ನೈಗೆ ಬರ್ತಿದ್ದೀನಿ" ಎಂದು ಹೇಳಿದ್ದಾರೆ.
ಹಿರಿಯ ನಟಿ ರಾಧಿಕಾ ಶರತ್ಕುಮಾರ್ ಟ್ವೀಟ್ ಮಾಡಿ "ನಾನು ತುಂಬಾ ದುಃಖಿತಳಾಗಿದ್ದೇನೆ, ಇಂದು ಬೆಳಿಗ್ಗೆ ನಾನು ಕರೆ ಮಾಡಿ ಅವರು ಎಲ್ಲಿದ್ದಾರೆ. ನಾನು ಹೋಗಿ ಭೇಟಿ ಮಾಡಬೇಕು ಎಂದು ವಿಚಾರಿಸಿದೆ. ಆದರೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಅವರೊಂದಿಗೆ ಸಾಕಷ್ಟು ವಿಚಾರ ಹಂಚಿಕೊಂಡಿದ್ದೆವು, ನಾವಿಬ್ಬರೂ ಕಲಿತಿದ್ದೇವೆ, ನಕ್ಕಿದ್ದೇವೆ, ಜಗಳ ಮಾಡಿದ್ದೇವೆ, ಒಟ್ಟಿಗೆ ಊಟ ಮಾಡಿದ್ದೇವೆ ಮತ್ತು ಸಾಕಷ್ಟು ವಿಷಯಗಳ ಬಗ್ಗೆ ಸುದೀರ್ಘ ಸಂಭಾಷಣೆ ನಡೆಸಿದ್ದೇವೆ, ಅವರು ಪ್ರತಿಭಾವಂತ ವ್ಯಕ್ತಿಯಾಗಿದ್ದರು, ಎಲ್ಲಾ ಸಂದರ್ಭಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











