ಶಂಕರ್ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ಹೊತ್ತುಕೊಂಡ ಸೂರ್ಯ ದಂಪತಿ
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಇತ್ತೀಚಿಗಷ್ಟೆ ಮೊದಲ ಮಗಳ ಮದುವೆ ಮಾಡಿ ಮುಗಿಸಿದ್ದರು. ಇದೀಗ ಎರಡನೇ ಮಗಳನ್ನು ಬಣ್ಣದ ಲೋಕಕ್ಕೆ ಪರಿಚಯಿಸುವ ಉತ್ಸಾಹದಲ್ಲಿದ್ದಾರೆ. ಕಮಲ್ ಹಾಸನ್, ರಜನಿಕಾಂತ್ ಅಂತಹ ಸ್ಟಾರ್ ಕಲಾವಿದರ ಜೊತೆ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಶಂಕರ್ ಇದೀಗ ಮಗಳನ್ನು ಹಿರೋಯಿನ್ ಮಾಡುತ್ತಿದ್ದಾರೆ. ಇಂಡಿಯನ್, ಅನ್ನಿಯನ್, ಜಂಟಲ್ಮ್ಯಾನ್, ಕಾದಲನ್ ಮುಂತಾದ ಸೂಪರ್ ಹಿಟ್ ಸಿನಿಮಾಗಳ ಮೂಲಕ ಶಂಕರ್ ಪ್ರೇಕ್ಷಕರ ಮನ ಗೆದ್ದರು.
1993ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಇಂದಿಗೂ ಅದೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಇದೀಗ ಶಂಕರ್ ಮಗಳು ಅದಿತಿ ಶಂಕರ್ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಶಂಕರ್ ಮಗಳನ್ನು ಲಾಂಚ್ ಮಾಡುವ ಹೊಣೆಯನ್ನು ಕಾಲಿವುಡ್ ಸ್ಟಾರ್ ದಂಪತಿಗಳಾದ ಸೂರ್ಯ ಮತ್ತು ಜ್ಯೋತಿಕಾ ಹೊತ್ತಿಕೊಂಡಿದ್ದಾರೆ.
ಸೂರ್ಯ ಮತ್ತು ಜ್ಯೋತಿಕಾ ದಂಪತಿ ಒಡೆತನದ 2ಡಿ ಎಂಟರ್ ಟೇನ್ಮೆಂಟ್ ಬ್ಯಾನರ್ನಲ್ಲಿ ಮೂಡಿ ಬರುತ್ತಿರುವ ಸಿನಿಮಾದಲ್ಲಿ ಅದಿತಿ ಶಂಕರ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ಅದಿತಿ ಶಂಕರ್ ಹೊಸ ಸಿನಿಮಾದೆ 'ವಿರುಮಾನ್' ಎಂದು ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ಸೂರ್ಯ ಸಹೋದರ ಕಾರ್ತಿ ಹೀರೋ ಆಗಿ ನಟಿಸುತ್ತಿದ್ದಾರೆ. ಕಾರ್ತಿಗೆ ಜೋಡಿಯಾಗಿ ಶಂಕರ್ ಪುತ್ರಿ ಅದಿತಿ ಕಾಣಿಸಿಕೊಳ್ಳುತ್ತಿದ್ದಾರೆ. ಚೊಚ್ಚಲ ಸಿನಿಮಾದಲ್ಲಿಯೇ ಇಂಥ ದೊಡ್ಡ ಬ್ಯಾನರ್ನ ಜೊತೆ ಕೆಲಸ ಮಾಡುವ ಅವಕಾಶ ಅದಿತಿಗೆ ಸಿಕ್ಕಂತಾಗಿದೆ. ಒಳ್ಳೆಯ ಟೀಮ್ಗೆ ಮಗಳನ್ನು ಸೇರಿಸಿದ ಸಂತಸದಲ್ಲಿದ್ದಾರೆ ನಿರ್ದೇಶಕ ಶಂಕರ್.

ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಗ್ಗೆ ನಿರ್ದೇಶಕ ಶಂಕರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ನನ್ನ ಮಗಳನ್ನು ಲಾಂಚ್ ಮಾಡುತ್ತಿರುವುದಕ್ಕೆ ಸೂರ್ಯ ಮತ್ತು ಜ್ಯೋತಿಕಾಗೆ ಧನ್ಯವಾದಗಳು. ನಿಮ್ಮ ಸಂಸ್ಥೆಯಿಂದ ಯಾವಾಗಲೂ ಗುಣಮಟ್ಟದ ಸಿನಿಮಾಗಳೇ ಮೂಡಿ ಬಂದಿವೆ. ಸಂಪೂರ್ಣ ತಯಾರಿ ಮಾಡಿಕೊಂಡು ಚಿತ್ರರಂಗಕ್ಕೆ ಕಾಲಿಡುತ್ತಿರುವ ನನ್ನ ಮಗಳಿಗೆ ಸಿನಿಪ್ರಿಯರು ಪ್ರೀತಿ ತೋರಿಸುತ್ತಾರೆ ಅಂತ ನಂಬಿದ್ದೇನೆ" ಎಂದು ಶಂಕರ್ ಟ್ವೀಟ್ ಮಾಡಿದ್ದಾರೆ.
ನಟ ಸೂರ್ಯ ತಮ್ಮ ತಂಡಕ್ಕೆ ಅದಿತಿಯನ್ನು ಸ್ವಾಗತಿಸಿದ್ದಾರೆ. "ನಿಮಗೆ ಸುಸ್ವಾಗತ. ನೀವು ಎಲ್ಲರ ಹೃದಯ ಗೆಲ್ಲುತ್ತೀರಿ. ದೇವರು ಒಳ್ಳೆಯದು ಮಾಡಲಿ" ಎಂದು ಸೂರ್ಯ ಹಾರೈಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅದಿತಿ ಶಂಕರ್ "ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ನಿಮಗೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇನೆ. ಶೇ.100ರಷ್ಟು ಶ್ರಮಪಡುತ್ತೇನೆ" ಎಂದು ಅದಿತಿ ಶಂಕರ್ ಹೇಳಿದ್ದಾರೆ.
ಇನ್ನು ನಿರ್ದೇಶಕ್ ಶಂಕರ್ ಸದ್ಯ ರಾಮ್ ಚರಣ್ ಜೊತೆ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾ ಅನೌನ್ಸ್ ಆಗಿದ್ದು, ಚಿತ್ರೀಕರಣ ಪ್ರಾರಂಭ ಮಾಡುವ ಉತ್ಸುಕದಲ್ಲಿದ್ದಾರೆ. ಆದರೆ ಇದಕ್ಕೂ ಮೊದಲು ನಟ ಕಮಲ್ ಹಾಸನ್ ಜೊತೆ ಇಂಡಿಯನ್-2 ಸಿನಿಮಾ ಮುಗಿಸಬೇಕಿದೆ. ಇಂಡಿಯನ್-2 ಸಿನಿಮಾ ಅರ್ಧಕ್ಕೆ ನಿಂತಿದ್ದು, ಶೀಘ್ರದಲ್ಲೇ ಮತ್ತೆ ಚಿತ್ರೀಕರಣ ಪ್ರಾರಂಭ ಮಾಡುವುದಾಗಿ ಶಂಕರ್ ಹೇಳಿದ್ದಾರೆ. ಈ ಸಿನಿಮಾ ಬಳಿಕ ರಾಮ್ ಚರಣ್ ಜೊತೆ ಹೊಸ ಸಿನಿಮಾ ಪ್ರಾರಂಭ ಮಾಡುವ ಸಾಧ್ಯತೆ ಇದೆ.
ಪ್ಯಾನ್ ಇಂಡಿಯಾ 3ಡಿ ಸಿನಿಮಾ ಇದಾಗಿದ್ದು, ಮೊದಲ ಬಾರಿಗೆ ರಾಮ್ ಚರಣ್ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಮ್ ಚರಣ್ಗೆ ನಾಯಕಿಯಾಗಿ ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಶಂಕರ್ ಅನ್ನಿಯನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ನಟ ರಣ್ವೀರ್ ಸಿಂಗ್ಗೆ ಶಂಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಜೊತೆಗೆ ಶಂಕರ್ ಮಗಳ ಮೊದಲ ಸಿನಿಮಾವನ್ನು ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳುವ ಸಂತಸದಲ್ಲಿದ್ದಾರೆ.


Click it and Unblock the Notifications











