ಬಸ್ ಹತ್ತುವಾಗ ಕುಸಿದು ಬಿದ್ದು ಸಾವನ್ನಪ್ಪಿದ ಖ್ಯಾತ ನಿರ್ದೇಶಕ
ಮನುಷ್ಯನ ಬದುಕು ನೀರಿನ ಮೇಲಿನ ಗುಳ್ಳೆಯಂತೆ .. ಹಗ್ಗದ ಮೇಲಿನ ನಡಿಗೆಯಂತೆ .. ಯಾವಾಗ ಇಲ್ಲಿ ಏನಾಗುತ್ತೆ ಎಂದು ಹೇಳುವುದು ಕಷ್ಟ. ಇವತ್ತು ಇದ್ದಂಗೆ ನಾಳೆ ಇರಲ್ಲ. ಈಗಿದ್ದಂಗೆ.. ಇನ್ನೆರಡು ಸೆಕೆಂಡ್ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು. ಸಾವು ಇದಕ್ಕೆ ತಮಿಳಿನ ಖ್ಯಾತ ನಿರ್ದೇಶಕ ವಿಕ್ರಮ್ ಸುಗುಮಾರನ್ ನಿಧನ ಸಾಕ್ಷಿ. ಹೌದು, ವಿಕ್ರಮ್ ಸುಗುಮಾರನ್..
ಕಾಲಿವುಡ್ನ ನಿರ್ದೇಶಕ. ಚಿತ್ರರಂಗದಲ್ಲಿ ನಾಯಕನಾಗಿ ಮಿಂಚುವ ಆಸೆಯನ್ನೊತ್ತು ಬಂದ ವಿಕ್ರಮ್ ಸುಗುಮಾರನ್ ಆ ನಂತರ ತಮಿಳಿನ ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿಯಲು ಶುರು ಮಾಡಿದರು.

ಕೆಲ ಕಾಲ ತಮಿಳಿನ ಮತ್ತೊಬ್ಬ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಅವರ ಗರಡಿಯಲ್ಲಿ ಕೂಡ ಸಹ ನಿರ್ದೇಶಕರಾಗಿ ಪಳಗಿದರು. 2011ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಆಡುಕಲಂ ಚಿತ್ರಕ್ಕೆ ಸಂಭಾಷಣೆಯನ್ನು ಕೂಡ ವಿಕ್ರಮ್ ಸುಗುಮಾರನ್ ಬರೆದಿದ್ದರು.
ಆ ನಂತರ 2013ರಲ್ಲಿ 'ಮದ ಯಾನೈ ಕೂಟಂ' ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿಯೇ ಗೆಲುವನ್ನು ಕಂಡರು. ಪ್ರಸಿದ್ಧ ನಟ ಭಾಗ್ಯರಾಜ್ ಅವರ ಮಗ ಶಾಂತನುಗೆ 'ರಾವಣ ಕೊಟ್ಟಂ' ಚಿತ್ರವನ್ನು ವಿಕ್ರಮ್ ಸುಗುಮಾರನ್ ನಿರ್ದೇಶಿಸಿದರು. ಈ ಚಿತ್ರ ಕೂಡ ಪ್ರಚಂಡ ಯಶಸ್ಸನ್ನು ಕಂಡಿತ್ತು. ಇದರ ನಡುವೆ ಧನುಷ್ ಅಭಿನಯದ ಪೊಲ್ಲಾಧವನ್ ಮತ್ತು ಕೋಡಿ ವೀರನ್ನಂತಹ ಚಿತ್ರಗಳಲ್ಲಿ ಕೂಡ ವಿಕ್ರಮ್ ಸುಗುಮಾರನ್ ಅಭಿನಯಿಸಿದ್ದರು.
ಇಂತಹ ವಿಕ್ರಮ್ ಸುಗುಮಾರನ್ ಮತ್ತೊಂದು ಚಿತ್ರವನ್ನು ನಿರ್ದೇಶಿಸುವ ಕನಸನ್ನು ಕಂಡಿದ್ದರು. ಕಥೆಯನ್ನೆಲ್ಲ ಸಿದ್ದ ಮಾಡಿಕೊಂಡು ತಮ್ಮ ಕಥೆಯನ್ನು ನಿರ್ಮಾಪಕರಿಗೆ ಹೇಳಲು ಮಧುರೈಗೆ ಹೋಗಿದ್ದರು.
ವಿಕ್ರಮ್ ಸುಗುಮಾರನ್ ಅವರ ಈ ಕನಸು ಇನ್ನೇನು ನನಸಾಗಬೇಕಿತ್ತು. ಆದರೆ, ಮಧುರೈದಿಂದ ಚೆನ್ನೈಗೆ ಹೊರಡಲು ಬಸ್ ಹತ್ತುವಾಗ ಹೃದಯಾಘಾತದಿಂದ ಸ್ಥಳದಲ್ಲಿಯೇ ಕುಸಿದು ಬಿದ್ದು 48ರ ಪ್ರಾಯದ ವಿಕ್ರಮ್ ಸುಗುಮಾರನ್ ಸಾವನ್ನಪ್ಪಿದ್ದಾರೆ.
ವಿಕ್ರಮ್ ಸುಗುಮಾರನ್ ಅವರ ಅಕಾಲಿಕ ನಿಧನದಿಂದ ತಮಿಳು ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದ್ದು ಶಾಂತನು ತಮ್ಮ ನೆಚ್ಚಿನ ನಿರ್ದೇಶಕನ ಸಾವಿಗೆ ಕಣ್ಣೀರು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ನಿಮ್ಮಿಂದ ನಾನು ತುಂಬಾ ಕಲಿತಿದ್ದೇನೆ, ನಿಮ್ಮ ಜೊತೆ ಕಳೆದ ಪ್ರತಿ ಕ್ಷಣವನ್ನು ಸದಾ ನೆನಪು ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು 'ಮಧಯಾನೆ ಕೂಟಂ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ನಟಿ ವಿಜಿ ಚಂದ್ರಶೇಖರ್ ಕೂಡ ವಿಕ್ರಮ್ ಸುಗುಮಾರನ್ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದು ವಿಡಿಯೋ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ವಿಕ್ರಮ್ ತುಂಬಾನೇ ಪ್ರತಿಭಾವಂತರು, ಅವರಲ್ಲಿ ತುಂಬಾ ಉತ್ಸಾಹ ಇತ್ತು ಎಂದಿರುವ ವಿಜಿ ಎರಡು ತಿಂಗಳ ಹಿಂದೆಯಷ್ಟೇ ತಮ್ಮ ಹೊಸ ಚಿತ್ರದ ಕುರಿತು ನನ್ನ ಜೊತೆ ಅವರು ಚರ್ಚೆಯನ್ನು ಮಾಡಿದ್ದರು ಎಂದು ಹೇಳಿದ್ದಾರೆ.
ತುಂಬಾನೇ ಕೆಲಸದಿಂದ ತೀವೃ ಒತ್ತಡಕ್ಕೆ ಒಳಗಾಗಬೇಡಿ ಬೇರೆಯವರ ಮೇಲೆ ಒತ್ತಡವನ್ನು ಕೂಡ ಹೇರಬೇಡಿ ಎಂದು ಮನವಿಯನ್ನು ಮಾಡಿರುವ ವಿಜಿ ಚಂದ್ರಶೇಖರ್ ಆರೋಗ್ಯದ ಕಡೆ ಗಮನ ವಹಿಸುವಂತೆ ಜನಸಾಮಾನ್ಯರಿಗೆ ಹೇಳಿದ್ದಾರೆ. ಹೃದಯಾಘಾತಕ್ಕೆ ಚಿಕ್ಕ ವಯಸ್ಸಿನವರು ಬಲಿಯಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ವಿಕ್ರಮ್ ಸುಗುಮಾರನ್ ಅವರಿಗೆ ತುಂಬಾ ಕನಸುಗಳಿದ್ದವು ಎಂದು ಹೇಳಿರುವ ವಿಜಿ ಚಂದ್ರಶೇಖರ್, ಅವರ ಸಾವು ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ. ವಿಕ್ರಮ್ ಸುಗುಮಾರನ್ ಅವರ ನಿಧನಕ್ಕೆ ತಮಿಳು ಚಿತ್ರರಂಗದ ಹಲವು ತಾರೆಯರು ನಿರ್ದೇಶಕರು ಸಂತಾಪವನ್ನು ಸೂಚಿಸಿದ್ದಾರೆ.


Click it and Unblock the Notifications











