ಕಪ್ಪು ಬಣ್ಣದ ಸೂಟ್ ಬಿಟ್ಟು ಶರ್ಟು, ಪಂಚೆಯಲ್ಲಿ ತಮಿಳುನಾಡು ನೂತನ ಸಿಎಂ ವಿಜಯ್ ದರ್ಶನ
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ವಿಜಯ್ ಆಯ್ಕೆ ಆಗಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಸೂಟ್ ಧರಿಸಿ ವಿಜಯ್ ದರ್ಶನ ಕೊಟ್ಟಿದ್ದರು. ತಮಿಳುನಾಡು ರಾಜಕೀಯ ನಾಯಕರು ಅಂದ್ರೆ ಬಿಳಿ ಬಣ್ಣದ ಶರ್ಟು, ಬಿಳಿ ಬಣ್ಣದ ಪಂಚೆ ಎನ್ನುವಂತಿತ್ತು. ಆದರೆ ವಿಜಯ್ ಆ ಸಂಪ್ರದಾಯ ಬದಲಿಸಿದ್ದಾರೆ.
ಪ್ರಮಾಣ ವಚನ ಮಾತ್ರವಲ್ಲ ಆ ಬಳಿಕ ಕೂಡ ವಿಜಯ್ ಕಪ್ಪು ಬಣ್ಣದ ಬ್ಲೇಸರ್ ಹಾಗೂ ಪ್ಯಾಂಟ್, ಬಿಳಿ ಬಣ್ಣದ ಶರ್ಟ್ ಧರಿಸಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಕಛೇರಿ ಪ್ರವೇಶಿಸಿದಾಗ, ಬಳಿಕ ಸದನದಲ್ಲಿ ಕೂಡ ಅದೇ ಯೂನಿಫಾರ್ಮ್ ಆಗಿಬಿಟ್ಟಿದೆ. ಆದರೆ ಇದೇ ಮೊದಲ ಬಾರಿಗೆ ಗೃಹ ಪ್ರವೇಶ ಕಾರ್ಯಕ್ರಮವೊಂದಕ್ಕೆ ಸಾಂಪ್ರದಾಯಿಕ ಉಡುಪಿನಲ್ಲಿ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. ಚಿನ್ನದ ಬಣ್ಣದ ರೇಷ್ಮೆ ಶರ್ಟ್ ಹಾಗೂ ಪಂಚೆ ಧರಿಸಿ ಆಪ್ತನ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭಾಗವಹಿಸಿದ್ದಾರೆ.

ಬಹಳ ವರ್ಷಗಳಿಂದ ತಮ್ಮ ಬಳಿ ಮ್ಯಾನೇಜರ್ ಹಾಗೂ ವಿಶ್ವಾಸಾರ್ಹ ಸಹಾಯಕನಾಗಿರುವ ಜಗದೀಶ್ ಪಳನಿಸಾಮಿ ಅವರ ಹೊಸ ನಿವಾಸದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ವಿಜಯ್ ಭಾಗಿ ಆಗಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ. ತಮ್ಮ ಮನೆಯ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಬಂದಿದ್ದು ನೋಡಿ ನೆರೆದವರು ಓಹ್.. ಎಂದು ಹರ್ಷೋದ್ಘಾರ ಮಾಡಿದ್ದಾರೆ.
ಬೆಳಗ್ಗೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ವಿಜಯ್ ತೊಡಗಿಸಿಕೊಂಡರು. ಇಡೀ ದಿನ ಅದೇ ಉಡುಪಿನಲ್ಲಿ ಕಾಣಿಸಿಕೊಂಡರು. ಕಳೆದ 10 ವರ್ಷಗಳಿಂದ ವಿಜಯ್ ಆಪ್ತ ಬಳಗದಲ್ಲಿ ಜಗದೀಶ್ ಗುರ್ತಿಸಿಕೊಂಡಿದ್ದಾರೆ. ವಿಜಯ್ ಸಿನಿಮಾ ಶೆಡ್ಯೂಲ್ ಎಲ್ಲವನ್ನು ನೋಡಿಕೊಳ್ಳುತ್ತಿದ್ದರು. ಬಳಿಕ ಜಗದೀಶ್ ಸಿನಿಮಾ ನಿರ್ಮಾಪಕರು ಆಗಿ 'ಮಾಸ್ಟರ್' ಹಾಗೂ 'ಲಿಯೋ' ಚಿತ್ರಗಳಿಗೆ ಕೈ ಜೋಡಿಸಿದ್ದರು.
ಡಿಜಿಟಲ್ ಬ್ರ್ಯಾಂಡಿಂಗ್ ಮತ್ತು ಟ್ಯಾಲೆಂಟ್ ನಿರ್ವಹಣಾ ಕಂಪನಿ ರೂಟ್ ಅನ್ನು ಜಗದೀಶ್ ಪಳನಿಸಾಮಿ ನಿರ್ವಹಿಸುತ್ತಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ವಿಜಯ್ ತೆರಳಿದ್ದರು. ಈ ವೇಳೆ ಜಗದೀಶ್ ಕೂಡ ಅವರೊಟ್ಟಿಗೆ ಇದ್ದರು. ಅಷ್ಟರಮಟ್ಟಿಗೆ ವಿಜಯ್ ಅವರಿಗೆ ಜಗದೀಶ್ ಆಪ್ತರಾಗಿದ್ದಾರೆ. ಅದೇ ಕಾರಣಕ್ಕೆ ಅವರ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಕೂಡ ಭಾಗಿ ಆಗಿದ್ದಾರೆ.
ದಶಕಗಳಿಂದ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ದರ್ಬಾರ್ ಜೋರಾಗಿತ್ತು. ಡಿಎಂಕೆ, ಎಡಿಎಂಕೆ ನಾಯಕರು ಬಿಳಿ ಪಂಚೆ, ಶರ್ಟ್ನಲ್ಲೇ ಕಾಣಿಸಿಕೊಳ್ಳುತ್ತಿದ್ದರು. ಕೆಲವರು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ರು, ಬಿಳಿ ಶರ್ಟ್ ಹೈಲೆಟ್ ಆಗ್ತಿತ್ತು. ಆದರೆ ದ್ರಾವಿಡ ಪಕ್ಷಗಳ ಪ್ರಾಬಲ್ಯಕ್ಕೆ ಪೆಟ್ಟು ಕೊಟ್ಟು ವಿಜಯ್ ಟಿವಿಕೆ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಆದರೆ ದ್ರಾವಿಡ ಐತಿಹಾಸಿಕ ಸಂಕೇತವಾದ ಕಪ್ಪು ಬಣ್ಣವನ್ನು ತಮ್ಮ ಉಡುಪಿನಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಚರ್ಚೆ ನಡೀತಿದೆ.
ಚುನಾವಣೆಗೂ ಮುನ್ನ ವಿಜಯ್ ಹಾಗೂ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿರುವ ಸುದ್ದಿ ಹೊರಬಿದ್ದಿತ್ತು. ಡಿವೋರ್ಸ್ ಕೇಳಿ ಸಂಗೀತಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆಲ್ಲಾ ನಟಿಯೊಬ್ಬಳು ಕಾರಣ ಎಂದು ಆರೋಪಿಸಿದ್ದಾರೆ. ವಿಜಯ್ ಹಾಗೂ ನಟಿ ತ್ರಿಷಾ ಆತ್ಮೀಯ ಒಡನಾಟದ ಬಗ್ಗೆ ಪದೇ ಪದೆ ವದಂತಿ ಕೇಳಿಬರ್ತಿತ್ತು. ಸಂಗೀತಾ ಡಿವೋರ್ಸ್ ಕೇಳುತ್ತಿದ್ದಂತೆ ಈ ವದಂತಿ ಮತ್ತಷ್ಟು ಚರ್ಚೆ ಹುಟ್ಟಾಕ್ಕಿತ್ತು. ಆಡಿಕೊಳ್ಳುವವರ ಬಾಯಿ ಮುಚ್ಚಿಸಲು ವಿಜಯ್, ತ್ರಿಷಾ ಜೊತೆ ಮದುವೆ ಸಮಾರಂಭವೊಂದರಲ್ಲಿ ಭಾಗಿ ಆಗಿದ್ದರು. ನಿರ್ಮಾಪಕ ಕಲ್ಪತಿ ಸುರೇಶ್ ಮಗನ ಮದುವೆ ಸಮಾರಂಭಕ್ಕೆ ವಿಜಯ್-ತ್ರಿಷಾ ಒಟ್ಟಿಗೆ ಹಾಜರಾಗಿದ್ದರು. ಮ್ಯಾಚಿಂಗ್ ಡ್ರೆಸ್ನಲ್ಲಿ ಮಿಂಚಿದ್ದರು. ಅವತ್ತು ಕೂಡ ಇದೇ ರೀತಿ ಚಿನ್ನದ ಬಣ್ಣದ ರೇಷ್ಮೆ ಶರ್ಟ್ ಹಾಗೂ ಪಂಚೆಯಲ್ಲಿ ವಿಜಯ್ ಗಮನ ಸೆಳೆದಿದ್ದರು.


Click it and Unblock the Notifications