"ಅಜಿತ್ ಒಳ್ಳೆ ವ್ಯಕ್ತಿ ಅಲ್ಲ, ದೊಡ್ಡ ಮೋಸಗಾರ": ನಿರ್ಮಾಪಕನ ಗಂಭೀರ ಆರೋಪ
ತಮಿಳು ಚಿತ್ರರಂಗದಲ್ಲಿ ರಜನಿಕಾಂತ್, ದಳಪತಿ ವಿಜಯ್ ಬಳಿಕ ಆ ಮಟ್ಟಿಗೆ ಕ್ರೇಜ್ ಸಂಪಾದಿಸಿರುವ ಮತ್ತೊಬ್ಬ ನಟ ಥಲಾ ಅಜಿತ್. ತಮ್ಮದೇ ವಿಭಿನ್ನ ಸ್ಟೈಲ್, ಮ್ಯಾಜರಿಸಂನಿಂದ ಸಕ್ಸಸ್ ಕಂಡಿದ್ದಾರೆ. ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸಾಕಷ್ಟು ಏಳುಬೀಳು ಕಂಡು ಚಿತ್ರರಂಗದಲ್ಲಿ ನೆಲೆ ನಿಂತಿದ್ದಾರೆ. ಸಿನಿಮಾಗಳ ಜೊತೆ ಜೊತೆಗೆ ತಮ್ಮ ಹವ್ಯಾಸಗಳಿಂದಲೂ ಅಜಿತ್ ಸುದ್ದಿಯಲ್ಲಿ ಇರ್ತಾರೆ.
ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಅಜಿತ್ ನಟನೆಯ 'ಥುನಿವು' ಸಿನಿಮಾ ರಿಲೀಸ್ ಆಗಿ ಸೂಪರ್ ಸಕ್ಸಸ್ ಕಂಡಿತ್ತು. ಸದ್ಯ 'ವಿಡಮುಯರ್ಚಿ' ಎನ್ನುವ ಚಿತ್ರದಲ್ಲಿ ನಟಿಸೋಕೆ ಸಿದ್ಧತೆ ನಡೆಸಿದ್ದಾರೆ. ಇನ್ನು ಇತ್ತೀಚೆಗೆ ಅಜಿತ್ ಬೈಕ್ ರೈಡ್ ಭಾರೀ ಸುದ್ದಿಯಾಗಿತ್ತು. ಬೈಕ್ ಏರಿ ವಿಶ್ವ ಪರ್ಯಟನೆ ಮಾಡಬೇಕು ಎನ್ನುವ ಅವರ ಕನಸು ಅರ್ಧ ಪೂರೈಸಿದೆ. ಕಳೆದ ತಿಂಗಳಷ್ಟೆ ಮೊದಲ ಹಂತವಾಗಿ ಭಾರತ, ನೇಪಾಳ ಹಾಗೂ ಭೂತಾನ್ ದೇಶಗಳನ್ನು ಸುತ್ತಾಡಿ ಬಂದಿದ್ದರು. ಶೀಘ್ರದಲ್ಲೇ ಮತ್ತೊಮ್ಮೆ ಬೈಕ್ನಲ್ಲಿ ವಿಶ್ವ ಪರ್ಯಟನೆಗೆ ಹೊರಡಲಿದ್ದಾರೆ.

ಸದ್ಯ ನಟ ಅಜಿತ್ ವಿರುದ್ಧ ತಮಿಳು ಸಿನಿಮಾ ನಿರ್ಮಾಪಕ ಮಾಣಿಕ್ಯಂ ನಾರಾಯಣನ್ ಗಂಭೀರ ಆರೋಪ ಮಾಡಿದ್ದಾರೆ. "ಅಜಿತ್ ತನ್ನ ಪೋಷಕರನ್ನು ಮಲೇಷಿಯಾ ಪ್ರವಾಸಕ್ಕೆ ಕಳುಹಿಸಲು ನನ್ನಿಂದ ಹಣ ಪಡೆದಿದ್ದರು. ಸುಮಾರು 16 ವರ್ಷದ ಹಿಂದೆ ಅಜಿತ್ ನನ್ನ ಬಳಿ 6 ಲಕ್ಷ ರೂ. ಸಾಲವಾಗಿ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಫಲವಾಗಿ ನನಗಾಗಿ ಒಂದು ಸಿನಿಮಾ ಮಾಡುವುದಾಗಿ ಹೇಳಿದ್ದರು. ಈ ಹಣವನ್ನು ಆ ಸಿನಿಮಾ ಮೂಲಕ ವಜಾ ಮಾಡಿಕೊಳ್ಳಬಹುದು ಎಂದಿದ್ದರು. ಆದರೆ ಈವರೆಗೆ ಹಣ ವಾಪಸ್ ನೀಡಿಲ್ಲ. ನನ್ನೊಟ್ಟಿಗೆ ಸಿನಿಮಾ ಕೂಡ ಮಾಡಲಿಲ್ಲ" ಎಂದಿದ್ದಾರೆ.
"ಸಿನಿಮಾ ಮಾಡುವಂತೆ ಡೇಟ್ಸ್ ಕೇಳಿದರೆ ಇಲ್ಲ ಎನ್ನುತ್ತಿದ್ದಾರೆ. ಈವರೆಗೆ ಅಸಲು, ಬಡ್ಡಿ ಸೇರಿ ಒಟ್ಟು 1 ಕೋಟಿ ರೂ. ಆಗಿದೆ. ಅಜಿತ್ ಜಂಟಲ್ಮ್ಯಾನ್ ಅಲ್ಲ, ನನಗೆ ಮೋಸ ಮಾಡಿದ್ದಾರೆ. ಆದರೆ ಅಜಿತ್ ಪತ್ನಿ ಶಾಲಿನಿ ಅವರೊಂದಿಗೆ ನನಗೆ ಹಲವು ವರ್ಷಗಳಿಂದ ಉತ್ತಮ ಸ್ನೇಹವಿದೆ. ಆಕೆ ತುಂಬಾ ಒಳ್ಳೆಯವಳು ಎಂದು ನಿರ್ಮಾಪಕ ಮಾಣಿಕ್ಯಂ ಹೇಳಿದ್ದಾರೆ. "ಅಜಿತ್ ಅವರದ್ದು ತುಂಬಾ ಒಳ್ಳೆಯ ಕುಟುಂಬ. ಪ್ರತಿ ಚಿತ್ರಕ್ಕೆ 50 ಕೋಟಿ ರೂ. ಸಂಭಾವನೆ ಪಡೆಯುವ ನಟ ಈ ರೀತಿ ಮೋಸ ಮಾಡುವುದು ಯಾಕೆ? ನಿರ್ಮಾಪಕ ಮಾಣಿಕ್ಯಂ ಪ್ರಶ್ನಿಸಿದ್ದಾರೆ.
ಮಾತು ಮುಂದುವರೆಸಿರುವ ಮಾಣಿಕ್ಯಂ ನಾರಾಯಣನ್ ನಿರ್ಮಾಪಕರಾದ ಎ. ಎಮ್. ರತ್ನಂ ರೀತಿಯ ನಿರ್ಮಾಪಕರು ಅಜಿತ್ ಜೊತೆ ಸಿನಿಮಾ ಮಾಡಿ ನಷ್ಟ ಅನುಭವಿಸಿದ್ದಾರೆ. ಆತನ ಜೊತೆ ಸಿನಿಮಾ ಮಾಡಿ ಬೀದಿಗೆ ಬಂದವರಿಗೆ ಎಂದಿಗೂ ಆತ ಸಹಾಯ ಮಾಡಿಲ್ಲ" ಎಂದಿದ್ದಾರೆ. ಅಂದಹಾಗೆ ಮಾಣಿಕ್ಯಂ ನಾರಾಯಣನ್, 'ವೆಟ್ಟೈಯಾಡು ವೆಲೆಯಾಡು', 'ಇಂದ್ರಲೋಹತಿಲ್ ನಾ ಅಳಗಪ್ಪನ್' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಬಗ್ಗೆ ಅಜಿತ್ ಮ್ಯಾನೇಜರ್ ಪ್ರತಿಕ್ರಿಯಿಸಿದ್ದು ಇದೆಲ್ಲಾ ಸುಳ್ಳು ಆರೋಪ ಎಂದಿದ್ದಾರೆ.
1996ರಲ್ಲಿ ಅಜಿತ್ಗೆ ಮೊದಲು 6 ಲಕ್ಷ ರೂ. ಕೊಟ್ಟಿದ್ದೆ. 1998ರಲ್ಲಿ ಮತ್ತೆ 12 ಲಕ್ಷ ರೂ. ಕೊಟ್ಟಿದ್ದಾಗಿ ಈ ಹಿಂದೆ ಕೂಡ ನಿರ್ಮಾಪಕ ಮಾಣಿಕ್ಯಂ ನಾರಾಯಣನ್ ಆರೋಪ ಮಾಡಿದ್ದರು. ಇದೀಗ ಅದೇ ವಿಚಾರವನ್ನು ಮತ್ತೆ ಹೇಳುತ್ತಿದ್ದಾರೆ. ಬಹಳ ಹಿಂದೆ ಅಜಿತ್ ಹಾಗೂ ಮಾಣಿಕ್ಯಂ ನಡುವೆ ಒಳ್ಳೆ ಒಡನಾಟ ಇತ್ತು. ಆದರೆ ಮಾಣಿಕ್ಯಂ ಮಗಳ ಮದುವೆಗೆ ಕಾರಣಾಂತರಗಳಿಂದ ಅಜಿತ್ ಹಾಜರಾಗಿರಲಿಲ್ಲ. ಅದೇ ಈ ರೀತಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಜಿತ್ ಫ್ಯಾನ್ಸ್ ಹೇಳುತ್ತಿದ್ದಾರೆ.
ಅಜಿತ್ ಸಿನಿಮಾಗಳಲ್ಲಿ ನಟಿಸುತ್ತಾರೆ ಅಷ್ಟೆ. ಯಾವುದೇ ಸಿನಿಮಾ ಪ್ರಚಾರಕ್ಕೂ ಬರುವುದಿಲ್ಲ. ಈ ಬಗ್ಗೆ ಚಿತ್ರತಂಡದ ಜೊತೆ ಮೊದಲೇ ಚರ್ಚಿಸುತ್ತಾರೆ. ಇನ್ನು ಅಜಿತ್ ಪ್ರಚಾರ ಮಾಡದೇ ಇದ್ದರೂ ಅವರ ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತವೆ. ಬಾಕ್ಸಾಫೀಸ್ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಸದ್ಯ 'ವಿಡಮುಯರ್ಚಿ' ಸಿನಿಮಾ ಪ್ರೀ ಪ್ರೊಡಕ್ಷನ್ ವರ್ಕ್ ನಡೀತಿದೆ. ಇದೊಂದು ಆಕ್ಷನ್ ಎಂಟರ್ಟೈನರ್ ಸಿನಿಮಾ ಆಗಿದ್ದು ಮಗಿಲ್ ತಿರುಮೇನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


Click it and Unblock the Notifications











