ಧನುಷ್ ಮುಂದಿನ ಸಿನಿಮಾ ಟೈಟಲ್ಗೂ ಚಿರು ಸರ್ಜಾ ಪುತ್ರನಿಗೂ ಇರುವ ನಂಟೇನು?
ತಮಿಳು ನಟ ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ಚಿತ್ರದಲ್ಲಿ ಕನ್ನಡ ನಟ ಶಿವರಾಜ್ಕುಮಾರ್ ಕೂಡ ನಟಿಸಿದ್ದರು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿಲ್ಲ. ಇತ್ತೀಚೆಗೆ ಓಟಿಟಿಗೂ ಬಂದು ಸಿನಿಮಾ ವೀಕ್ಷಕರ ಗಮನ ಸೆಳೆದಿದೆ.
ಇದೀಗ ನಟ ಧನುಷ್ ಹೊಸ ಸಿನಿಮಾ ಆರಂಭಿಸಿದ್ದಾರೆ. ತಮ್ಮ 50ನೇ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಸದ್ಯ ಚಿತ್ರದ ಟೈಟಲ್ ರಿವೀಲ್ ಆಗಿದೆ. 'ಜೈಲರ್' ಬಳಿಕ ಸನ್ ಪಿಕ್ಚರ್ಸ್ ಬ್ಯಾನರ್ನಲ್ಲಿ ಕಲೈನಿಧಿ ಮಾರನ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಿತ್ಯಾ ಮೆನನ್, ಎಸ್. ಜೆ ಸೂರ್ಯ, ಸಂದೀಪ್ ಕೃಷ್ಣನ್ ತಾರಾಗಣದಲ್ಲಿದ್ದಾರೆ.

ಈಗಾಗಲೇ ಚಿತ್ರದ ಸಾಕಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಎ. ಆರ್ ರಹಮಾನ್ ಸಂಗೀತ ಚಿತ್ರಕ್ಕಿದೆ. ಬಹಳ ಅದ್ಧೂರಿಯಾಗಿ ಚಿತ್ರವನ್ನು ಧನುಷ್ ಕಟ್ಟಿಕೊಡುತ್ತಿದ್ದಾರೆ. ಈ ಹಿಂದೆ 'ಪಾ ಪಾಂಡಿ' ಎನ್ನುವ ಚಿತ್ರವನ್ನು ಧನುಷ್ ನಿರ್ದೇಶಿಸಿದ್ದರು. ಧನುಷ್ 10ನೇ ಸಿನಿಮಾ ಎನ್ನುವ ಕಾರಣಕ್ಕೆ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ಇಷ್ಟು ದಿನ D50 ಎನ್ನುವ ಟೆಂಟಿಟಿವ್ ಟೈಟಲ್ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಇದೀಗ ಚಿತ್ರಕ್ಕೆ 'ರಾಯನ್' ಎಂದು ಹೆಸರಿಡಲಾಗಿದೆ. ಇನ್ನು ಈ ಟೈಟಲ್ ಕೇಳಿ ಅರೇ, ಇದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಪುತ್ರನ ಹೆಸರು ಅಲ್ಲವೇ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ರಾಯನ್' ಸಿನಿಮಾ ಬಿಡುಗಡೆ ಮಾಡುವ ಕೆಲಸಗಳು ನಡೀತಿದೆ.

'ರಾಯನ್' ಎಂದರೆ ಸ್ವರ್ಗದ ಬಾಗಿಲು ತೆರೆದ ಯುವರಾಜ ಎನ್ನುವ ಅರ್ಥ ಇದೆ. ಬಹಳ ಹುಡುಕಿ, ಇಷ್ಟಪಟ್ಟು ಮೇಘನಾ ರಾಜ್ ಮಗನಿಗೆ ಈ ಹೆಸರನ್ನು ಇಟ್ಟಿದ್ದರು. 2018ರ ಮೇ ತಿಂಗಳಲ್ಲಿ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಮದುವೆ ಆಗಿದ್ದರು. 2020 ರ ಜೂನ್ 7 ರಂದು ಚಿರು ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದರು. ಆಗ ಪತ್ನಿ ಮೇಘನಾ ಗರ್ಭಿಣಿ ಆಗಿದ್ದರು. ಅಕ್ಟೋಬರ್ 22ಕ್ಕೆ ಮಗನಿಗೆ ಜನ್ಮ ನೀಡಿದ್ದರು.
ಸದ್ಯ ಧನುಷ್ ನಟನೆಯ 'ರಾಯನ್' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಖಡಕ್ ಲುಕ್ನಲ್ಲಿ ಕತ್ತಿ ಹಿಡಿದು ಧನುಷ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ನೋಡಿದರೆ ಇದೊಂದು ಪಕ್ಕಾ ಆಕ್ಷನ್ ಎಂಟರ್ಟೈನರ್ ಸಿನಿಮಾ ಅನ್ನೋದು ಅರ್ಥವಾಗುತ್ತದೆ.
ಧನುಷ್ ಒಂದಕ್ಕಿಂತ ಒಂದು ವಿಭಿನ್ನವಾದ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. 'ತಿರುಚಿತ್ರಂಬಲಂ', 'ನಾನೇ ವರುವೇನ್', 'ವಾಥಿ', ಕ್ಯಾಪ್ಟನ್ 'ಮಿಲ್ಲರ್' ಬಳಿಕ ಈಗ 'ರಾಯನ್' ಆಗಿದ್ದಾರೆ. ಮುಂದೆ ಶೇಖರ್ ಕಮ್ಮುಲ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗಲಿದೆ. ತೆಲುಗು ನಟ ನಾಗಾರ್ಜುನ ಕೂಡ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ. ಈ ಸಿನಿಮಾ ಮೂಲಕ ಮತ್ತೆ ಕೊಡಗಿನ ಕುವರಿ ಕಾಲಿವುಡ್ ಪ್ರವೇಶಿಸುತ್ತಿದ್ದಾರೆ.
ಈಗಾಗಲೇ ಬಾಲಿವುಡ್ ಸಿನಿಮಾಗಳಲ್ಲಿ ಧನುಷ್ ನಟಿಸಿದ್ದಾರೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್' 5 ಭಾಷೆಗಳಲ್ಲಿ ತೆರೆಕಂಡಿತ್ತು. ಆದರೆ ಟಾಲಿವುಡ್ನಲ್ಲಿ ಸಿನಿಮಾ ಗೆಲ್ಲಲಿಲ್ಲ. 'ರಾಯನ್' ಸಿನಿಮಾ ಮೂಲಕ ಮತ್ತೆ ಪ್ಯಾನ್ ಇಂಡಿಯಾ ಸಾಹಸಕ್ಕೆ ಧನುಷ್ ಮುಂದಾಗಿದ್ದಾರೆ. ಸಿನಿಮಾ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.


Click it and Unblock the Notifications











