ಎಲ್ಲಾ ಪೆರಿಯಾರ್ ಸಿದ್ದಾಂತಗಳನ್ನು ನಾವು ಒಪ್ಪಲ್ಲ, ನಮಗೆ ದೇವರಲ್ಲಿ ನಂಬಿಕೆಯಿದೆ; ತಮಿಳುನಾಡು ಸಿಎಂ ವಿಜಯ್
ತಮಿಳುನಾಡು ರಾಜಕೀಯದ ಸೈದ್ಧಾಂತಿಕ ಪಿತಾಮಹ ಎಂದೇ ಪೆರಿಯಾರ್ ಪ್ರಸಿದ್ಧರಾಗಿದ್ದಾರೆ. ತಮಿಳುನಾಡು ರಾಜಕೀಯ ಪಕ್ಷಗಳೆಲ್ಲಾ ಪೆರಿಯಾರ್ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದಿವೆ. ಡಿಎಂಕೆ ಪಕ್ಷ ಅಂತೂ ಇವತ್ತಿಗೂ ಬಹಳ ಕಟ್ಟುನಿಟ್ಟಾಗಿ ಅನುಸರಿಸುತ್ತಿದೆ. ಆದರೆ ಟಿವಿಕೆ ಪಕ್ಷ ಸಂಪೂರ್ಣವಾಗಿ ಪೆರಿಯಾರ್ ಅವರನ್ನು ಒಪ್ಪಿಕೊಳ್ಳಲ್ಲ ಎಂದಿದೆ. ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ವಿಜಯ್ ಈ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ಅಚ್ಚರಿ ಎನ್ನುವಂತೆ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಅಧಿಕಾರ ವಹಿಸಿಕೊಂಡಿದೆ. ಪಕ್ಷ ಕಟ್ಟಿದ ಎರಡು ವರ್ಷದಲ್ಲಿ ವಿಜಯ್ ಸಿಎಂ ಪಟ್ಟಕ್ಕೇರಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ಕೆ. ಕಾಮರಾಜ್, ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರನ್ನು ಪಕ್ಷದ ಸೈದ್ಧಾಂತಿಕ ನಾಯಕರನ್ನಾಗಿ ಒಪ್ಪಿಕೊಂಡಿದೆ. ಅಂದಹಾಗೆ ಪೆರಿಯಾರ್ ದೇವರನ್ನು ನಂಬುತ್ತಿರಲಿಲ್ಲ. ಬದಲಿಗೆ, ಅವರು ತೀವ್ರ ನಾಸ್ತಿಕರು, ವೈಚಾರಿಕ ಚಿಂತಕರಾಗಿದ್ದರು. ಜನರು ಮೂಢನಂಬಿಕೆಗಳನ್ನು ಬಿಟ್ಟು ವೈಜ್ಞಾನಿಕ ಮನೋಭಾವ, ಸ್ವಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಜಾತಿ ವ್ಯವಸ್ಥೆ ಉಳಿಸಿಕೊಳ್ಳಲು ಧರ್ಮ ಮತ್ತು ದೇವರ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದರು.

ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಪೆರಿಯಾರ್ ಸಿದ್ಧಾಂತಗಳನ್ನು ಒಪ್ಪಿಕೊಂಡಿದ್ದರು. ಡಿಎಂಕೆ ಪಕ್ಷದ ನಾಯಕರು ಇವತ್ತಿಗೂ ನಮಗೆ ದೇವರಲ್ಲಿ ನಂಬಿಕೆಯಿಲ್ಲ, ನಾವು ನಾಸ್ತಿಕರು ಎಂದು ಹೇಳುತ್ತಾರೆ. ಆದರೆ ಸಿಎಂ ವಿಜಯ್ ನಾವು ದೇವರನ್ನು ನಂಬುತ್ತೇವೆ ಎಂದು ತಿಳಿಸಿದ್ದಾರೆ. ಕ್ರಿಶ್ಚಿಯನ್ ಆಗಿದ್ದರೂ ವಿಜಯ್ ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ವಿಜಯ್ ಪೂಜೆ ಸಲ್ಲಿಸಿದ್ದರು. ಇದೆಲ್ಲದರ ನಡುವೆ ಪೆರಿಯಾರ್ ತತ್ವಗಳನ್ನು ನಾವು ಸಂಪೂರ್ಣವಾಗಿ ಒಪ್ಪುವುದಿಲ್ಲ ಎನ್ನುವ ಹೇಳಿಕೆ ವೈರಲ್ ಆಗ್ತಿದೆ.
ಟಿವಿಕೆ ಪಕ್ಷ ನುಡಿದಂತೆ ನಡೆಯುತ್ತಿದೆ ಎಂದು ತಮಿಳುನಾಡು ವಿಧಾನಸಭೆ ಅಧಿವೇಶದಲ್ಲಿ ಸಿಎಂ ವಿಜಯ್ ಹೇಳಿದ್ದಾರೆ. ಈ ವೇಳೆ ಪಕ್ಷದ ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾ ಪೆರಿಯಾರ್ ಬಗ್ಗೆ ಪ್ರಸ್ತಾಪಿಸಿದ್ದಾರೆ. "2024ರಲ್ಲಿ ತಮಿಳಗ ವೆಟ್ರಿ ಕಳಗಂ ಆರಂಭಿಸಿದೆವು. ಮೊದಲ ಸಮಾವೇಶದಲ್ಲೇ ನಮ್ಮ ಪಕ್ಷದ ಸಿದ್ಧಾಂತಗಳ ಬಗ್ಗೆ ಹೇಳಿದ್ದೆವು. 5 ಜನ ಅದರಲ್ಲೂ ಇಬ್ಬರು ಮಹಿಳಾ ಸಾಧಕಿಯರನ್ನು ನಾವು ಪಕ್ಷದ ಸೈದ್ಧಾಂತಿಕ ಗುರುವಾಗಿ ಒಪ್ಪಿಕೊಂಡಿದ್ದೆವು" ಎಂದು ವಿಜಯ್ ತಿಳಿಸಿದ್ದಾರೆ.
ಪೆರಿಯಾರ್ ಹೇಳಿದ್ದರಲ್ಲಿ ನಮಗೆ ಸೂಕ್ತ ಎನ್ನಿಸಿದ ಸಿದ್ಧಾಂತಗಳನ್ನು ಮಾತ್ರ ಒಪ್ಪಿಕೊಂಡೆವು ಎಂದು ವಿಜಯ್ ಹೇಳಿದ್ದಾರೆ. "ಧಾರ್ಮಿಕ ನಂಬಿಕೆಯನ್ನು ತಿರಸ್ಕರಿಸುವ ಪೆರಿಯಾರ್ ಅವರ ನಿಲುವನ್ನು ನಾವು ಒಪ್ಪಿಕೊಂಡಿಲ್ಲ. ನಮಗೆ ದೇವರಲ್ಲಿ ನಂಬಿಕೆಯಿದೆ ಎಂದು ಹೇಳಿದ್ವಿ. ಯಾರ ನಂಬಿಕೆಯನ್ನು ನಾವು ವಿರೋಧಿಸುವುದಿಲ್ಲ, ಮಹಿಳಾ ಸ್ವಾತಂತ್ರ್ಯ, ಮಹಿಳಾ ಸಬಲೀಕರಣ, ಸಮಾನತೆ ಹೀಗೆ ಪೆರಿಯಾರ್ ಅವರ ಸಾಕಷ್ಟು ಭೋದನೆಯನ್ನು ಸ್ವೀಕರಿಸಿದ್ದೇವೆ" ಎಂದು ವಿಜಯ್ ಹೇಳಿದ್ದಾರೆ.
ಅಂಬೇಡ್ಕರ್ ಅವರ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ನಾವು ಒಪ್ಪಿಕೊಂಡಿದ್ದೇವೆ. ಕಾಮರಾಜರ್ ಅವರ ಪ್ರಾಮಾಣಿಕ ಆಡಳಿತದ ಮಾದರಿಯನ್ನು ಅಳವಡಿಸಿಕೊಂಡಿದ್ದೇವೆ. ಅದೇ ರೀತಿ ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರ ನಿಲುವುಗಳನ್ನು ನಾವು ಅಂಗೀಕರಿಸಿದ್ದೇವೆ ಎಂದು ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭದಲ್ಲಿ ಸಿಎಂ ವಿಜಯ್ ವಿವರಿಸಿದ್ದಾರೆ.
ನಾವು ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿದ್ದೇವೆ. ಸಾಮಾನ್ಯವಾಗಿ ಎಲ್ಲರೂ ಪಕ್ಷ ಸ್ಥಾಪಿಸಿ ಬಳಿಕ ಜನರ ಬಳಿಗೆ ಹೋಗುತ್ತಾರೆ. ಆದರೆ ನಾವು ಮೊದಲು ಜನರ ಬಳಿ ಹೋಗಿದ್ದೆವು. ಆ ನಂತರ ಪಕ್ಷ ಸ್ಥಾಪಿಸಿದೆವು. ಇದು ಅರ್ಥವಾಗದೇ ಕೆಲವರು ನಮ್ಮದು ನಟನ ಪಕ್ಷ ಎಂದು ಕಾಮೆಂಟ್ ಮಾಡುತ್ತಾರೆ ಎಂದು ವಿರೋಧಿಗಳಿಗೆ ವಿಜಯ್ ಟಾಂಗ್ ಕೊಟ್ಟಿದ್ದಾರೆ.


Click it and Unblock the Notifications