ತಮಿಳುನಾಡು 'ಪೊಲಿಟಿಕಲ್ ಪಿಕ್ಚರ್'ನ ಕ್ಲೈಮ್ಯಾಕ್ಸ್ ಇದೆ ಇನ್ನೂ ಬಾಕಿ ; ಯಾರ ಜೊತೆ ಕೈ ಜೋಡಿಸುತ್ತಾರೆ ದಳಪತಿ ?
ಚುನಾವಣೆಯ ರಣರಂಗದಲ್ಲಿ ದಳಪತಿ ವಿಜಯದ ಪತಾಕೆಯನ್ನೇನೋ ಹಾರಿಸಿದ್ದಾರೆ. ಆದರೆ ಈ ಪೊಲಿಟಿಕಲ್ ಪಿಕ್ಚರ್ ಇನ್ನೂ ಮುಗಿದಿಲ್ಲ. ಕ್ಲೈಮ್ಯಾಕ್ಸ್ ಇನ್ನೂ ಬಾಕಿ ಇದೆ. ಯಾಕೆಂದರೆ ಅಭೂತಪೂರ್ವ ಗೆಲುವು ವಿಜಯ್ಗೆ ಸಿಕ್ಕರೂ ಕೂಡ ಸರ್ಕಾರ ರಚನೆ ಮಾಡಲು ಬೇಕಿರುವ ಜನ ಬೆಂಬಲ ವಿಜಯ್ ಗೆ ಸಿಕ್ಕಿಲ್ಲ. ಸಂಖ್ಯಾಬಲದ ಕೊರತೆ ಎದುರಾಗಿದೆ.
ಮ್ಯಾಜಿಕ್ ನಂಬರ್ ತಲುಪಲು ಇನ್ನೂ ಹತ್ತು ಹೆಜ್ಜೆ ಬಾಕಿ ಇರುವಾಗಲೇ ಕಾಲ ಚಕ್ರ ಅತಂತ್ರ ಸ್ಥಿತಿಗೆ ಬಂದು ನಿಂತಿದೆ. ಇನ್ನು ರಾಜಕೀಯದ ಇತಿಹಾಸದಲ್ಲಿ ಸ್ಪಷ್ಟವಾದ ಬಹುಮತ ಪಡೆದರು ಕೂಡ ಹಿಂದೆ ಸರ್ಕಾರ ರಚನೆಯಾಗದ ಉದಾಹರಣೆಗಳು ಕೂಡ ಇವೆ. 2019ರಲ್ಲಿ ಮಹಾರಾಷ್ಟ್ರದಲ್ಲಿ ಜನಾದೇಶ ಬಿಜೆಪಿ ಮತ್ತು ಶಿವಸೇನೆಯ ಮೈತ್ರಿ ಪರ ಇತ್ತು. ಬಿಜೆಪಿ 105 ಸ್ಥಾನವನ್ನು ಕೂಡ ಗೆದ್ದಿತ್ತು.

ಆದರೆ 50-50 ಫಾರ್ಮುಲಾ ವರ್ಕ್ ಆಗದ ಹಿನ್ನೆಲೆ ಕೇವಲ 56 ಸ್ಥಾನ ಗೆದ್ದಿದ್ದ ಶಿವಸೇನೆ ದೋಸ್ತಿ ಕಡಿದುಕೊಂಡಿತ್ತು. ಅಂತಿಮವಾಗಿ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಶಿವಸೇನೆ ಸರ್ಕಾರ ರಚನೆ ಮಾಡಿತ್ತು. ಈ ಹಿನ್ನೆಲೆ ಟಿವಿಕೆ ಪಕ್ಷದಲ್ಲಿಗ ಒಂದು ಕಡೆ ಸಂಭ್ರಮವೂ ಇದೆ. ಮತ್ತೊಂದು ಕಡೆ ಆತಂಕವೂ ಇದೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪಕ್ಷವಾರು ಸಾಧನೆ ಈ ಕೆಳಗಿನಂತೆ ಇದೆ.
| ಪಕ್ಷದ ಹೆಸರು | ಗೆದ್ದ ಸ್ಥಾನಗಳು |
|---|---|
| ತಮಿಳಗ ವೆಟ್ರಿ ಕಳಗಂ (TVK) | 108 |
| ದ್ರಾವಿಡ ಮುನ್ನೇತ್ರ ಕಳಗಂ (DMK) | 59 |
| ಎಐಎಡಿಎಂಕೆ (AIADMK) | 47 |
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) | 5 |
| ಪಟ್ಟಾಲಿ ಮಕ್ಕಳ್ ಕಚ್ಚಿ (PMK) | 4 |
| ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) | 2 |
| ಭಾರತೀಯ ಕಮ್ಯುನಿಸ್ಟ್ ಪಕ್ಷ (CPI) | 2 |
| ವಿದುದಲೈ ಚಿರುತೈಗಲ್ ಕಚ್ಚಿ (VCK) | 2 |
| ಭಾರತೀಯ ಕಮ್ಯುನಿಸ್ಟ್ ಪಕ್ಷ - ಮಾರ್ಕ್ಸ್ವಾದಿ (CPI-M) | 2 |
| ಭಾರತೀಯ ಜನತಾ ಪಕ್ಷ (BJP) | 1 |
| ದೇಶಿಯ ಮುರುಪೊಕ್ಕು ದ್ರಾವಿಡ ಕಳಗಂ (DMDK) | 1 |
| ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (AMMK) | 1 |
| ಒಟ್ಟು ಸ್ಥಾನಗಳು | 234 |

ಹೀಗೆ ಸದ್ಯ 108 ಸ್ಥಾನ ಗೆದ್ದ ವಿಜಯ್ಗೆ ಈಗ ಸರ್ಕಾರ ರಚಿಸಲು ಇನ್ನೂ 10 ಶಾಸಕರ ಬೆಂಬಲದ ಅಗತ್ಯ ಇದೆ. ಕೈಯೊಡ್ಡುವ ಅನಿರ್ವಾಯ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ವಿಜಯ್ ತಮಿಳುನಾಡಿನ ಕಿಂಗ್ ಆಗಿರಬಹುದು. ಆದರೆ ಕಿಂಗಿಗೂ ಈಗ ಕಿಂಗ್ ಮೇಕರ್ ನ ಅವಶ್ಯಕತೆ ಇದೆ. ಈ ಹಿನ್ನೆಲೆ ವಿಜಯ್ ಮಾಡಿಕೊಂಡಿರಬಹುದಾದ ಪ್ಲಾನ್ ಬಿ ಮೇಲೀಗ ಎಲ್ಲರ ಕಣ್ಣಿದೆ. ವಿಜಯ್ ಅವರನ್ನು ಮ್ಯಾಜಿಕ್ ನಂಬರ್ ಬಳಿ ಕರೆದೊಯ್ಯುವ ಆ 10 ಶಾಸಕರು ಯಾರು..? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.
ಸದ್ಯದ ಲೆಕ್ಕಾಚಾರದ ಪ್ರಕಾರ, ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ (5), ಕಮ್ಯುನಿಸ್ಟ್ ಪಕ್ಷಗಳು (4) ಮತ್ತು ವಿಸಿಕೆ (2) ಒಟ್ಟು ಸೇರಿದರೆ 11 ಸ್ಥಾನಗಳಾಗುತ್ತವೆ. ವಿಜಯ್ ಈ ಪಕ್ಷಗಳ ಮನವೊಲಿಸಿ ತಮ್ಮತ್ತ ಸೆಳೆದರೆ, ಮುಖ್ಯಮಂತ್ರಿ ಗದ್ದುಗೆ ಖಚಿತ.
ಆದರೆ, ಈ ಪಕ್ಷಗಳು ವರ್ಷಗಳಿಂದ ಬೆಳೆಸಿಕೊಂಡಿರುವ ದ್ರಾವಿಡ ಸಂಬಂಧವನ್ನು ಕಡಿದುಕೊಂಡು ವಿಜಯ್ ಜೊತೆ ಕೈ ಜೋಡಿಸುತ್ತಾವಾ..? ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಸದ್ಯ ರಾಜಕೀಯದ ಪಂಡಿತರಲ್ಲಿದೆ.
ಇನ್ನೊಂದೆಡೆ, ಎಐಎಡಿಎಂಕೆ ಮೈತ್ರಿಕೂಟದಲ್ಲಿರುವ ಅಲ್ಪಸಂಖ್ಯಾತ ಪಕ್ಷಗಳು ಮತ್ತು ''ಪಟ್ಟಾಲಿ ಮಕ್ಕಳ್ ಕಚ್ಚಿ'' ಪಿಎಂಕೆ (4 ಸ್ಥಾನ) ಕೂಡ ಟಿವಿಕೆಗೆ ಆಸರೆಯಾಗಬಲ್ಲವು. ಆದರೆ ಇಲ್ಲಿ 'ಸೈದ್ಧಾಂತಿಕ ಸಂಘರ್ಷ'ದ ತಲೆನೋವಿದೆ. ಯಾಕೆಂದರೆ ಪಿಎಂಕೆ ಸದ್ಯ ಬಿಜೆಪಿಯ ನೇತೃತ್ವದ ಎನ್ಡಿಎ ಮೈತ್ರಿಕೂಟದ ಪ್ರಬಲ ಮಿತ್ರಪಕ್ಷ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಈ ಹಿಂದೆ ತಮ್ಮ ಭಾಷಣದೂದ್ದಕ್ಕೂ ಬಿಜೆಪಿ ಮತ್ತು ಕೇಸರಿ ರಾಜಕಾರಣವನ್ನು ವಿರೋಧಿಸುತ್ತಾ ಬಂದಿದ್ದವರು ವಿಜಯ್. ಮತ್ತೊಂದು ಕಡೆ ಎಐಎಡಿಎಂಕೆ ಜೊತೆ ಕೂಡ ಬಿಜೆಪಿಯ ಅಲಿಖಿತ ಸಂಬಂಧ ಇದೆ. ಒಪ್ಪಂದದ ಪ್ರಕಾರ ಈ ಚುನಾವಣೆಯಲ್ಲಿ ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಫರ್ಧೆ ಮಾಡಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ 2023ರಲ್ಲಿ ಬಿಜೆಪಿ ಜೊತೆ ಸಂಬಂಧ ಮುರಿದುಕೊಂಡಿದ್ದ ಎಐಡಿಎಂಕೆ ಈ ಬಾರಿ ವಿಜಯ್ಗೆ ಸೆಡ್ಡು ಹೊಡೆಯಲೆಂದೇ ಮತ್ತೆ ಕೈ ಜೋಡಿಸಿತ್ತು. ಹೀಗಾಗಿ ಈ ಮೈತ್ರಿಯತ್ತ ಕೈ ಚಾಚುವುದು ವಿಜಯ್ ಪಾಲಿಗೆ ರಾಜಕೀಯ ಆತ್ಮಹತ್ಯೆಯಂತಾಗಬಹುದು. ಈ ಹಿನ್ನೆಲೆ ವಿಜಯ್ ಅತ್ಯಂತ ಜಾಗರೂಕತೆಯಿಂದ ಈಗ ಹೆಜ್ಜೆ ಇಡುವುದು ಈಗ ಅನಿವಾರ್ಯ.
ಈ ಎಲ್ಲಾ ಲೆಕ್ಕಾಚಾರದ ನಡುವೆ ಸದ್ಯ ವಿಜಯ್ ತಮಿಳುನಾಡಿನ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಆರ್ಲೇಕರ್ಗೆ ಪತ್ರ ಬರೆದು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ ''ನ್ಯೂಸ್9'' ವರದಿ ಪ್ರಕಾರ, ಬಹುಮತ ಸಾಬೀತುಪಡಿಸಲು ಎರಡು ವಾರಗಳ ಕಾಲಾವಕಾಶವನ್ನು ಕೇಳಿದ್ದಾರೆ. ಈ ಪೊಲಿಟಿಕಲ್ ಪಿಕ್ಚರ್ ನಲ್ಲಿ ಮುಂದೆ ಯಾವ ಟ್ವಿಸ್ಟ್ ಎದುರಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications