Vijay Oath Ceremony; ದೇವರ ಹೆಸರಿನಲ್ಲಿ ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣ ವಚನ ಸ್ವೀಕಾರ
ಅಸಂಖ್ಯಾತ ಅಭಿಮಾನಿಗಳ ಆಸೆ ಈಡೇರಿದೆ. ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ನಟ ವಿಜಯ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ ಭೋದಿಸಿದರು. ದೇವರ ಹೆಸರಿನಲ್ಲಿ ವಿಜಯ್ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೇದಿಕೆಯಲ್ಲಿ ಟಿವಿಕೆ ನಾಯಕ ವಿಜಯ್ಗೆ ಸಾಥ್ ನೀಡಿದರು.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆದ್ದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಮ್ಯಾಜಿಕ್ ನಂಬರ್ 118 ಸಿಗದೇ ಗೊಂದಲ ಏರ್ಪಟ್ಟಿತ್ತು. ವಿಜಯ್ ಸಿಎಂ ಆಗುತ್ತಾರೋ ಇಲ್ಲವೋ ಎನ್ನುವ ಚರ್ಚೆ ಶುರುವಾಗಿತ್ತು. ಅಂತಿಮವಾಗಿ ಎಲ್ಲಾ ವಿಘ್ನಗಳನ್ನು ಮೀರಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನೆರವೇರಿದೆ. ವಿಜಯ್ ಜೊತೆಗೆ ಟಿವಿಕೆ ಪಕ್ಷದ 9 ಶಾಸಕರು ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರು. ವಿಜಯ್ ತಂದೆ ಹಾಗೂ ತಾಯಿ ಸೇರಿದಂತೆ ಇಡೀ ಕುಟುಂಬ ಸದಸ್ಯರು ಈ ವೇಳೆ ಹಾಜರಿದ್ದರು. ನಟಿ ತ್ರಿಷಾ ಕೂಡ ಕಾರ್ಯಕ್ರಮದಲ್ಲಿ ಭಾಗಿ ಆಗಿ ಎಲ್ಲರ ಹುಬ್ಬೇರಿಸಿದ್ದರು. ಬಿಳಿ ಅಂಗಿ ಹಾಗೂ ಕಪ್ಪು ಬಣ್ಣದ ಸೂಟ್ ಧರಿಸಿ ವಿಜಯ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ರಾಜಕೀಯ ನಾಯಕರು ಪ್ರಮಾಣವಚನ ಕಾರ್ಯಕ್ರಮದಲ್ಲಿ ಬಿಳಿ ಬಣ್ಣದ ಉಡುಗೆ ತೊಡುತ್ತಾರೆ. ಅದರಲ್ಲೂ ತಮಿಳುನಾಡಿನಲ್ಲಿ ಇದು ಬಹಳ ರೂಢಿಯಾಗಿದೆ. ವಿಜಯ್ ಮಾತ್ರ ಕಪ್ಪು ಬಣ್ಣದ ಸೂಟ್ ಧರಿಸಿ ಬಂದಿದ್ದು ವಿಶೇಷವಾಗಿತ್ತು. ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಟಿವಿಕೆ ಕಾರ್ಯಕರ್ತರು ವಿಜಯ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕೆಲವರು ಈ ಅವಕಾಶ ಸಿಗದೇ ನಿರಾಸೆ ಅನುಭವಿಸಿದರು. ಆದರೂ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ.
ವಿಜಯ್ ಜೊತೆಗೆ ಎನ್. ಆನಂದ್, ಆಧವ್ ಅರ್ಜುನ, ಕೆ .ಜಿ ಅರುಣ್ರಾಜ್, ಕೆಎ ಸೆಂಗೋಟ್ಟಯ್ಯನ್, ಪಿ ವೆಂಕಟರಮಣನ್, ಆರ್ ನಿರ್ಮಲಕುಮಾರ್, ರಾಜಮೋಹನ್, ಟಿ ಕೆ ಪ್ರಭು ಹಾಗೂ ಎಸ್. ಕೀರ್ತನಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎಲ್ಲರೂ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಜಯ್ ಮಾತನಾಡಿದರು. "ಒಬ್ಬ ಸಾಮಾನ್ಯ ಸಿನಿಮಾ ಸಹ ನಿರ್ದೇಶಕನ ಮಗನಾಗಿ ಹುಟ್ಟಿದ ನನಗೆ ಕಷ್ಟ, ಹಸಿವು ಅಂದ್ರೆ ಏನು ಅಂತ ಗೊತ್ತು.. ಶ್ರೀಮಂತನ ಮನೆಯಿಂದ ಬಂದವನಲ್ಲ.. ನಿಮ್ಮಲ್ಲಿ ಒಬ್ಬ.. ನಿಮ್ಮ ಮಗನಲ್ಲಿ ಒಬ್ಬ, ನಿಮ್ಮ ಅಣ್ಣನಲ್ಲಿ ಒಬ್ಬ.. ಅದೇ ರೀತಿ ನೀವು ನನಗೆ ಸ್ಥಾನ ಕೊಟ್ಟಿದ್ದೀರಾ.. ನಿಮಗೆ ಧನ್ಯವಾದ ತಿಳಿಸಲು ನಾನು ರಾಜಕೀಯಕ್ಕೆ ಬಂದೆ" ಎಂದು ವಿಜಯ್ ಹೇಳಿದ್ದಾರೆ.
ಜನಸೇವೆಗೆ ಬಂದ ನನಗೆ ನಿಮ್ಮಿಂದ ಬಹಳ ಆತ್ಮೀಯ ಸ್ವಾಗತ ಸಿಕ್ತು.. ಈ ಹಾದಿಯಲ್ಲಿ ನನಗೆ ಸಾಕಷ್ಟು ಕಷ್ಟ, ಅವಮಾನ ಎದುರಾಗಿತ್ತು. ನನ್ನ ಜೊತೆ ನಿಂತ ನಿಮಗೆ ಕಷ್ಟ, ಅವಮಾನ ಬಂದ್ರು ಎಲ್ಲವನ್ನು ಸಹಿಸಿಕೊಂಡು ನನ್ನ ಜೊತೆ ನಿಂತಿದ್ದೀರಾ.. ಇವತ್ತು ಸಿ. ಜೋಸೆಫ್ ವಿಜಯ್ ಎಂಬ ನಾನು.. ಎಂದು ಪ್ರಮಾಣವಚನ ಸ್ವೀಕರಿಸುವುದನ್ನು ನಿಜವಾಗಿಸಿದ್ದೀರಾ.. ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೊ ಗೊತ್ತಿಲ್ಲ.. ನಾನು ದೇವದೂತನಲ್ಲ.. ನಾನು ಸಾಧಾರಣ ಮನುಷ್ಯ.. ಅದು ಮಾಡ್ತೀನಿ, ಇದು ಮಾಡ್ತೀನಿ ಎಂದು ಮಾತು ಕೊಟ್ಟು ನಿಮಗೆ ಮೋಸ ಮಾಡಲ್ಲ. ಯಾವುದು ಸಾಧ್ಯವೊ ಅದನ್ನು ಮಾಡ್ತೀನಿ, ನಿಮ್ಮ ಬೆಂಬಲ ಇದ್ದರೆ ಸಾಧ್ಯವಾಗದೇ ಇರುವುದನ್ನು ಸಾಧಿಸುತ್ತೇನೆ ಎಂದು ವಿಜಯ್ ಹೇಳಿದ್ದಾರೆ.
ಹಿಂದಿನ ಸರ್ಕಾರಗಳು 10 ಲಕ್ಷ ಕೋಟಿ ರೂ. ಸಾಲ ಮಾಡಿಟ್ಟು ಹೋಗಿದ್ದಾರೆ. ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದ್ದಾರೆ. ನಿಭಾಯಿಸಲಾಗದ ಜವಾಬ್ದಾರಿಯನ್ನು ಬಿಟ್ಟು ಹೋಗಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಸರ್ಕಾರ ಬಂದಿದೆ. ಕೈಲಾಗದೇ ಏನೋ ಮಾತಾಡ್ತಿದ್ದೀನಿ ಎಂದುಕೊಳ್ಳಬೇಡಿ. ಎಲ್ಲವನ್ನು ಸರಿಯಾಗಿ ನೋಡಿ ಒಂದು ಪ್ರಾಮಾಣಿಕ ಸರ್ಕಾರ ನಡೆಸುತ್ತೇನೆ. ಈಗ ಪರಿಸ್ಥಿತಿ ಹೀಗಿದೆ ಎಂದು ಹೇಳಿ ಮುಂದೆ ನಾನು ಸರ್ಕಾರ ನಡೆಸ್ತೀನಿ ಎಂದು ವಿಜಯ್ ವಿವರಿಸಿದ್ದಾರೆ. ಕದ್ದು ಮುಚ್ಚಿ ಏನು ಮಾಡಲ್ಲ. ನಾನು ಹೇಳಿರುವುದನ್ನು ಮಾಡಿ ತೋರಿಸುತ್ತೇನೆ. ಅದಕ್ಕೆ ಕೊಂಚ ಸಮಯ ಬೇಕು ಎಂದು ವಿಜಯ್ ಮನವಿ ಮಾಡಿದ್ದಾರೆ.


Click it and Unblock the Notifications