ಕಾಲಿವುಡ್ ದಳಪತಿ ಜೊತೆ ಕೈ ಜೋಡಿಸಿದ ಕೆವಿಎನ್; ವಿಜಯ್ ಕೊನೆ ಚಿತ್ರಕ್ಕೆ ಮುಹೂರ್ತ ಫಿಕ್ಸ್
ತಮಿಳು ದಳಪತಿ ವಿಜಯ್ ನಟನೆಯ 'ಗೋಟ್'(GOAT) ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡ್ತಿದೆ. ಗಣೇಶ ಹಬ್ಬದ ಸಂಭ್ರಮದಲ್ಲಿ ತೆರೆಕಂಡ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಆದರೂ ವಿಶ್ವದಾದ್ಯಂತ ಸಿನಿಮಾ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಇದೀಗ ವಿಜಯ್ ಹೊಸ ಸಿನಿಮಾ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ.
ವಿಜಯ್ ಈಗಾಗಲೇ ಸ್ವಂತ ಪಕ್ಷ ಕಟ್ಟಿ ರಾಜಕೀಯರಂಗಕ್ಕೆ ಧುಮುಕುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನಲಾಗ್ತಿದೆ. 'ಗೋಟ್' ಬಳಿಕ ಒಂದೇ ಒಂದು ಚಿತ್ರದಲ್ಲಿ ನಟಿಸಲು ದಳಪತಿ ಮುಂದಾಗಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡುವುದು ಪಕ್ಕಾ ಆಗಿದೆ. ಕೆಲವೇ ನಿಮಿಷಗಳಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಲಿದೆ.

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್. ಒಂದೇ ಭಾಷೆಯಲ್ಲಿ ವಿಜಯ್ ಸಿನಿಮಾಗಳು 200 ರಿಂದ 300 ಕೋಟಿ ಕಲೆಕ್ಷನ್ ಮಾಡುತ್ತವೆ. ರಜನಿಕಾಂತ್ ಬಳಿಕ ತಮಿಳು ಚಿತ್ರರಂಗದಲ್ಲಿ ಬಹಳ ಜನಪ್ರಿಯತೆ ಇರುವ ನಟ ವಿಜಯ್. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಿಂದ ದಳಪತಿ ಸಂಚಲನ ಸೃಷ್ಟಿಸಿದ್ದಾರೆ. ವಿಜಯ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ನಿರ್ಮಾಪಕರಿಗೆ ನಷ್ಟವಾಗಲ್ಲ ಎನ್ನುವ ಮಾತಿದೆ.
ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳದೇ ವಿಜಯ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಕೊನೆ ಚಿತ್ರಕ್ಕೆ ಭರ್ಜರಿ ಪ್ಲ್ಯಾನ್ ಮಾಡುತ್ತಿದ್ದಾರೆ. ಯಶ್ ನಟನೆಯ 'ಟಾಕ್ಸಿಕ್' ಸೇರಿದಂತೆ ಬೇರೆ ಬೇರೆ ಸಿನಿಮಾಗಳನ್ನು ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇದೀಗ 500 ಕೋಟಿ ರೂ. ಬಜೆಟ್ನಲ್ಲಿ ವಿಜಯ್ ಚಿತ್ರಕ್ಕೆ ಕೈ ಹಾಕುತ್ತಿದೆ. ಹೆಚ್. ವಿನೋದ್ ದಳಪತಿ 69 ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರೋ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ.
'ತಮಿಳಗ ವೆಟ್ರಿ ಕಳಗಂ' ಎನ್ನುವ ಪಕ್ಷವನ್ನು ನಟ ವಿಜಯ್ ಸ್ಥಾಪಿಸಿದ್ದಾರೆ. ತನಗೆ ಹೆಸರು, ಹಣ ಕೊಟ್ಟ ಜನತೆಗೆ ಕೈಲಾದ ಸಹಾಯ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಅದಕ್ಕೆ ಪಾಲಿಟಿಕ್ಸ್ ಉತ್ತಮ ಆಯ್ಕೆ ಎಂದುಕೊಂಡಿದ್ದಾರೆ. ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಚಿತ್ರ ಭವ್ಯ ಮೆಟ್ಟಿಲಾಗುತ್ತದೆ ಎನ್ನಲಾಗ್ತಿದೆ. ಇಂದು ಸಂಜೆ(ಸೆಪ್ಟೆಂಬರ್ 13) 5 ಗಂಟೆಗೆ ಟೈಟಲ್ ಸಮೇತ ಸಿನಿಮಾ ಘೋಷಣೆ ಆಗಲಿದೆ. ಈ ಬಗ್ಗೆ ಈಗಾಗಲೇ ಕೆವಿಎನ್ ಸಂಸ್ಥೆ ಸುಳಿವು ನೀಡಿದೆ.
2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದೆ. ಸದ್ಯ ನಟ ವಿಜಯ್ ಪಕ್ಷದ ಟೈಟಲ್, ಧ್ವಜ ಹಾಗೂ ಚಿಹ್ನೆಗೆ ಚುನಾವಣಾ ಆಯೋಗದಿಂದ ಅನುಮತಿ ಸಿಕ್ಕಿದೆ. ಇತ್ತೀಚೆಗೆ ವಿಜಯ್ ಪಕ್ಷದ ಧ್ವಜ ಅನಾವರಣ ಮಾಡಿದ್ದರು. ತನ್ನ ಅಭಿಮಾನಿ ಸಂಘದ ಮೂಲಕ ದಳಪತಿ ಬಹಳ ದಿನಗಳಿಂದ ರಾಜಕೀಯ ಲೆಕ್ಕಾಚಾರ ಶುರು ಮಾಡಿದ್ದರು. ಇದೀಗ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ಧಾರೆ.
ತಮ್ಮ 69ನೇ ಸಿನಿಮಾ ಚಿತ್ರೀಕರಣದ ಮುಗಿಸಿ ತಮಿಳುನಾಡಿನಾದ್ಯಂತ ಪಾದಯಾತ್ರೆಗೆ ತಯಾರಿ ನಡೆಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆ ಸುತ್ತಿ ಪಕ್ಷ ಸಂಘಟಿಸುವ ಪ್ರಯತ್ನದಲ್ಲಿದ್ದಾರೆ. ಕರುನಾನಿಧಿ, ಜಯಲಲಿತಾ ನಿಧನದ ನಂತ್ರ ತಮಿಳುನಾಡು ರಾಜಕೀಯರಂಗದಲ್ಲಿ ಮಾಸ್ ನಾಯಕನ ಕೊರತೆಯಿದೆ. ಅದಕ್ಕೆ ವಿಜಯ್ ಎನ್ಕ್ಯಾಶ್ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ವೆಂಕಟ್ ಪ್ರಭು ನಿರ್ದೇಶನದ 'ಗೋಟ್'(GOAT) ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲಿಲ್ಲ. ಆದರೂ ಆ ಸಿನಿಮಾ ಬಂದು ವಾರ ಕಳೆಯುವ ಮುನ್ನ ಹೊಸ ಸಿನಿಮಾ ಘೋಷಣೆ ಆಗುತ್ತಿದೆ. ಬಹಳ ದಿನಗಳ ಹಿಂದೆ ಕೆವಿಎನ್, ವಿನೋದ್ ಕಾಂಬಿನೇಷನ್ನಲ್ಲಿ ವಿಜಯ್ ಸಿನಿಮಾ ಮಾಡುವ ಬಗ್ಗೆ ಗುಸುಗುಸು ಶುರುವಾಗಿತ್ತು. ಇದೀಗ ಅದು ಖಚಿತವಾಗುತ್ತಿದೆ.


Click it and Unblock the Notifications











