ಕ್ಯಾಪ್ಟನ್ ವಿಜಯಕಾಂತ್ ಅಂತಿಮ ದರ್ಶನದಲ್ಲಿ ನಟ ವಿಜಯ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ!?
ತಮಿಳು ಚಿತ್ರರಂಗದ ಜನಪ್ರಿಯ ನಟ ಹಾಗೂ ಡಿಎಂಡಿಕೆ ಪಕ್ಷದ ಸಂಸ್ಥಾಪಕ ಕ್ಯಾಪ್ಟನ್ ವಿಜಯಕಾಂತ್ ಚೆನ್ನೈನಲ್ಲಿ ಡಿಸೆಂಬರ್ 28 ರಂದು ಕೊನೆಯುಸಿರೆಳೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟ ವಿಜಯಕಾಂತ್ ಕಳೆದ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಕ್ಯಾಪ್ಟನ್ ವಿಜಯಕಾಂತ್ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಸುರಿಸಿದೆ. ಸೂಪರ್ ಸ್ಟಾರ್ ರಜನಿಕಾಂತ್, ನಟ ದಳಪತಿ ವಿಜಯ್ ಸೇರಿದಂತೆ ಎಲ್ಲರೂ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಚೆನ್ನೈನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ದರ್ಶನಕ್ಕೆ ಬಂದಿದ್ದ ನಟ ವಿಜಯ್ ಮೇಲೆ ಕಿಡಿಗೇಡಿ ಚಪ್ಪಲಿ ಎಸೆದಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ.

ನಟ ವಿಜಯ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ?
ನಟ ವಿಜಯ್ ಡಿಸೆಂಬರ್ 28 ರಂದು ತಮ್ಮ ಆಪ್ತರಾದ ವಿಜಯಕಾಂತ್ ಅವರ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದರು. ಆಗ ಕೆಲವು ಅಭಿಮಾನಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಅವರನ್ನು ಸುತ್ತುವರೆದಿದ್ದಾರೆ. ನೋವಿನಲ್ಲಿದ್ದ ಅವರು ಯಾವುದೇ ಪ್ರತಿರೋಧ ತೋರಿಸದೇ ಸುಮ್ಮನಿದ್ದಾರೆ. ಈ ವೇಳೆ ಕಿಡಿಗೇಡಿಯೊಬ್ಬ ನಟನ ಮೇಲೆ ಚಪ್ಪಲಿ ಎಸೆದಿದ್ದಾರೆ.
ವಿಜಯಕಾಂತ್ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬದವರು, ಸೆಲಬ್ರಿಟಿಗಳು ಸುತ್ತುವರೆದಿದ್ದರು. ಈ ವೇಳೆ ನಟ ವಿಜಯ್ ಅವರನ್ನು ಕ್ಯಾಮರಾಮನ್ಗಳು ಮತ್ತು ವರದಿಗಾರರು ಮುತ್ತಿಕೊಂಡಿದ್ದಾರೆ. ಬಾಡಿದ ಮುಖದಲ್ಲಿ ನಟ ಅಲ್ಲಿಂದ ತೆರಳುತ್ತಿದ್ದಾರೆ. ಈ ಸಮಯದಲ್ಲಿ ಅವರ ಮೇಲೆ ಚಪ್ಪಲಿಯೊಂದು ತೂರಿ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.
ವಿಜಯಕಾಂತ್ ಪಾರ್ಥಿವ ಶರೀರದ ಮುಂದೆ ಭಾವುಕರಾದ ವಿಜಯ್
ವಿಜಯಕಾಂತ್ ಅವರ ಕುಟುಂಬದೊಂದಿಗೆ ಮಾತನಾಡುವಾಗ ಮತ್ತು ಗಾಜಿನ ಶವಪೆಟ್ಟಿಗೆಯನ್ನು ಸ್ಪರ್ಶಿಸುವಾಗ ನಟ ಭಾವೋದ್ರಿಕ್ತರಾಗಿದ್ದಾರೆ. ವಿಜಯಕಾಂತ್ ಅವರನ್ನು ನಟ ವಿಜತ್ ನೋಡುತ್ತಿದ್ದ ನೋಟ ಅಭಿಮಾನಿಗಳನ್ನು ಹೆಚ್ಚು ಕಾಡಿದೆ. ಅಲ್ಲಿಂದ ವಾಪಸ್ ತೆರಳುವಾಗ ಪೊಲೀಸರು ಮತ್ತು ಅವರ ಭದ್ರತಾ ಸಿಬ್ಬಂದಿ ವಿಜಯ್ ಅವರನ್ನು ಸುರಕ್ಷಿತವಾಗಿಡಲು ಪ್ರಯತ್ನ ಮಾಡಿದ್ದಾರೆ. ಆದರೆ ಗುಂಪಿನಲ್ಲಿದ್ದ ಕೆಲವರು ಪೊಲೀಸರನ್ನು ದಾಟಿ ವಿಜಯ್ ಅವರನ್ನು ಮುಟ್ಟಿದ್ದಾರೆ. ತಮ್ಮ ಕಾರಿನ ಬಳಿಗೆ ತೆರಳುವಾಗ ಅವರ ಮೇಲೆ ಚಪ್ಪಲಿ ಎಸೆಯಲಾಯಿತು. ತಕ್ಷಣ ಅವರ ಸೆಕ್ಯುರಿಟಿ ಅದನ್ನು ಹಿಡಿದಿದ್ದಾರೆ.
ಇನ್ನು, ಈ ವಿಡಿಯೋಗೆ ನಟರ ಅಭಿಮಾನಿಗಳು ಮತ್ತು ಸಾರ್ವಜನಿಕರು ಕಿಡಿಕಾರಿದ್ದಾರೆ. "ಅವರಿಗೆ ಸರಿಯಾಗಿ ಗೌರವ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಭಿಮಾನಿಗಳ ಪ್ರೀತಿಯನ್ನು ಅರ್ಥಮಾಡಿಕೊಳ್ಳಬಹುದು ಆದರೆ ಇದು ಸರಿಯಾದ ಸಮಯವಲ್ಲ.. ಸೆಲೆಬ್ರಿಟಿಗಳು ತೆರಬೇಕಾದ ಬೆಲೆ ಇದು" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಆದರೆ, ಈ ವಿಡಿಯೋ ಫೇಕ್ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ.
ವಿಜಯಕಾಂತ್ ಮತ್ತು ವಿಜಯ್
ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಮಿಯಾಟ್ ಆಸ್ಪತ್ರೆಗೆ ದಾಖಲಾಗಿದ್ದ ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಗುರುವಾರ ಬೆಳಗ್ಗೆ 6.10ಕ್ಕೆ ಕೊನೆಯುಸಿರೆಳೆದಿದ್ದಾರೆ. ಅಂತಿಮ ನಮನ ಸಲ್ಲಿಸಲು ನಟ ವಿಜಯ್ ರಾತ್ರಿ 10.30ರ ಸುಮಾರಿಗೆ ಕೊಯಂಬೆಡುವಿನ ಡಿಎಂಡಿಕೆ ಪಕ್ಷದ ಕಚೇರಿಗೆ ಆಗಮಿಸಿದ್ದರು. ವಿಜಯಕಾಂತ್ ಈ ಹಿಂದೆ ಸೆಂಟೂರಪಾಂಡಿ ಚಿತ್ರದಲ್ಲಿ ನಟ ವಿಜಯ್ ಅವರ ಸಹೋದರನ ಪಾತ್ರದಲ್ಲಿ ನಟಿಸಿದ್ದರು. ವಿಜಯಕಾಂತ್ ಅವರು ವಿಜಯ್ ಅವರ ತಂದೆ ಎಸ್ಎ ಚಂದ್ರಶೇಖರ್ ಅವರ 17 ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದರು.


Click it and Unblock the Notifications











