₹300 ಕೋಟಿ ಸಂಭಾವನೆ ಪಡೆಯುವ ವಿಜಯ್ ಶಾಸಕರಾದರೆ ಸಿಗೋದು ₹2 ಲಕ್ಷ ಸಂಬಳ; ಆಧವ್
ತಮಿಳು ನಟ ವಿಜಯ್ ರಾಜಕೀಯರಂಗ ಪ್ರವೇಶ ವಿಚಾರ ಗೊತ್ತೇಯಿದೆ. ಈಗಾಗಲೇ 'ತಮಿಳಗ ವೆಟ್ರಿ ಕಳಗಂ' ಎಂಬ ಪ್ರಾದೇಶಿಕ ಪಕ್ಷವನ್ನು ವಿಜಯ್ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ದಳಪತಿ ಕಣ್ಣಿಟ್ಟಿದ್ದಾರೆ. ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ.
ಜನರಿಗೆ ಏನಾದರೂ ಸೇವೆ ಮಾಡಬೇಕು ಎಂದು ನಾನು ಸಿನಿಮಾ ಬಿಟ್ಟು ರಾಜಕೀಯರಂಗಕ್ಕೆ ಬರ್ತಿದ್ದೀನಿ ಎಂದು ಸ್ವತಃ ವಿಜಯ್ ಹೇಳಿದ್ದರು. 'ಜನ ನಾಯಗನ್' ವಿಜಯ್ ನಟಿಸುವ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ವಿಜಯ್ ಗೆದ್ದರೆ ಮುಂಧೆ ಸಿನಿಮಾಗಳಲ್ಲಿ ನಟಿಸುವುದು ಅನುಮಾನ ಎನ್ನಲಾಗುತ್ತಿದೆ. ಚಿತ್ರವೊಂದಕ್ಕೆ ವಿಜಯ್ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತಿದೆ.

ಅಷ್ಟು ಭಾರೀ ಮೊತ್ತದ ಸಂಭಾವನೆ ಪಡೆದು ತಮಿಳು ಚಿತ್ರರಂಗದಲ್ಲೇ ನಂಬರ್ 1 ಹೀರೊ ಎನಿಸಿರುವ ವಿಜಯ್ ಯಾಕೆ ಪಾಲಿಟಿಕ್ಸ್ಗೆ ಬಂದಿದ್ದಾರೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ವಿಜಯ್ ತಮಿಳುನಾಡು ರಾಜಕೀಯರಂಗದಲ್ಲಿ ಹೊಸ ಕ್ರಾಂತಿ ಮಾಡುತ್ತಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದರೆ ಸಿನಿಮಾದಲ್ಲಿ ನಟಿಸಿದ್ದಷ್ಟು ಸುಲಭ ಅಲ್ಲ ಚುನಾವಣೆ ಗೆಲ್ಲವುದು ಎನ್ನುವ ಮಾತುಗಳು ಕೇಳಿಬರ್ತಿದೆ. ಸಿನಿಮಾ ನೋಡಿ ಶಿಳ್ಳೆ ಚಪ್ಪಾಳೆ ಹೊಡೆಯುವವರು ವೋಟ್ ಹಾಕಿ ಗೆಲ್ಲಿಸಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಚಿತ್ರರಂಗದಲ್ಲಿ ಜನಪ್ರಿಯರಾದವರು ಚುನಾವಣೆಯಲ್ಲಿ ನಿಂತು ಗೆಲ್ಲುತ್ತಾರೆ ಎನ್ನುವುದು ಸುಳ್ಳು. ತೆಲುಗು ನಟ ಚಿರಂಜೀವಿ ಕೂಡ ಇದೇ ರೀತಿ ಪ್ರಾದೇಶಿಕ ಪಕ್ಷ ಸ್ಥಾಪಿಸಿ ಸೋಲುಂಡರು. ಬಳಿಕ ಕಾಂಗ್ರೆಸ್ ಜೊತೆ ಪಕ್ಷ ವಿಲೀನ ಮಾಡಿಬಿಟ್ಟರು. ಪವನ್ ಕಲ್ಯಾಣ್ ಕೂಡ ಜನಸೇನಾ ಪಕ್ಷ ಕಟ್ಟಿ ಮೊದಲ ಬಾರಿಗೆ ಗೆಲ್ಲಲಿಲ್ಲ. ಎರಡನೇ ಬಾರಿಗೆ ಟಿಡಿಪಿ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಯಶಸ್ಸು ಕಂಡಿದ್ದಾರೆ.

ವಿಜಯ್ ರಾಜಕೀಯರಂಗ ಪ್ರವೇಶದ ಬಗ್ಗೆ ತಮಿಳುನಾಡಿನಲ್ಲಿ ಪರ ವಿರೋಧ ಚರ್ಚೆ ನಡೀತಿದೆ. ವಿಜಯ್ ನೇತೃತ್ವದ ಟಿವಿಕೆ ಪಕ್ಷದ ಚುನಾವಣಾ ಪ್ರಚಾರ ನಿರ್ವಹಣಾ ಪ್ರಧಾನ ಕಾರ್ಯದರ್ಶಿಯಾಗಿ ಆಧವ್ ಅರ್ಜುನ ನೇಮಕಗೊಂಡಿದ್ದಾರೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಧವ್ ಮಾತನಾಡಿದ್ದಾರೆ. ಚಿತ್ರವೊಂದಕ್ಕೆ 300 ಕೋಟಿ ರೂ. ಸಂಭಾವನೆ ಪಡೆಯುವ ವಿಜಯ್ ಇದೀಗ ರಾಜಕೀಯರಂಗಕ್ಕೆ ಬರುತ್ತಿದ್ದಾರೆ. ಸಮಾಜದಲ್ಲಿ ಬದಲಾವಣೆ ತರಲು ಈ ನಿರ್ಧಾರ ಎಂದು ಹೇಳಿದ್ದಾರೆ.
ವಿದ್ಯಾರ್ಥಿಯೊಬ್ಬ ಮಾತನಾಡಿ ಆಧವ್ ಅರ್ಜುನ ಬಳಿ ಪ್ರಶ್ನೆ ಕೇಳಿದ್ದಾನೆ. ವಿಜಯ್ ಅವರು 'ಸರ್ಕಾರ್' ಚಿತ್ರದಲ್ಲಿ ರಾಜಕೀಯ ನಾಯಕನಾಗಿ ಬಹಳ ಚೆನ್ನಾಗಿ ಮಾತನಾಡಿದ್ದಾರೆ. ಅವ್ರು ಗೆದ್ದರೆ ಅದೆಲ್ಲಾ ನಡೆಯುತ್ತಾ ಎಂದು ಕೇಳಿದ್ದಾನೆ. ಅದಕ್ಕೆ ಉತ್ತರಿಸಿರುವ ಆಧವ್ "ವಿಜಯ್ ಅವ್ರು ಚಿತ್ರವೊಂದಕ್ಕೆ 300 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಒಬ್ಬ ಎಂಎಲ್ಎ ಗೆದ್ದರೆ 2 ಲಕ್ಷ ರೂ. ಸಂಭಾವನೆ ಸಿಗುತ್ತದೆ. ಅಷ್ಟು ಸಂಬಳ ಸಿನಿಮಾದಲ್ಲೇ ಬರುವಾಗ ಅದನ್ನು ಬಿಟ್ಟು ರಾಜಕೀಯಕ್ಕೆ ಯಾಕೆ ಬರ್ತಾರೆ. ಅವ್ರು ಸಾಕಷ್ಟು ಸಮಸ್ಯೆ ನೋಡಿದ್ದಾರೆ. ಬದಲಾವಣೆಗಾಗಿ ವಿಜಯ್ ರಾಜಕೀಯರಂಗಕ್ಕೆ ಧುಮುಕುತ್ತಿದ್ದಾರೆ" ಎಂದು ಹೇಳಿದ್ದಾರೆ.
ವಿಜಯ್ ಸಿನಿಮಾ ಸಂಭಾವನೆ ಬಗ್ಗೆ ಅವರ ಪರಮಾಪ್ತರಾದ ಆಧವ್ ಮಾತನಾಡಿರುವುದು ಅಚ್ಚರಿ ಮೂಡಿಸಿದೆ. ವಿಜಯ್ ಈ ಹಿಂದಿನ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಇದೀಗ 'ಜನ ನಾಯಗನ್' 250 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರಾ? ಎನ್ನುವ ಚರ್ಚೆ ಶುರುವಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
ದಳಪತಿ ಕೊನೆಯ ಸಿನಿಮಾ ಎಂದು ಹೇಳುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ವಿಜಯ್ ಸಂಭಾವನೆ ಪಡೆದಿರುವ ಅಂದಾಜಿದೆ. ಕೆಲ ವರದಿಗಳ ಪ್ರಕಾರ ವಿಜಯ್ ಈ ಚಿತ್ರಕ್ಕಾಗಿ 250 ಕೋಟಿ ರೂ. ಸಂಭಾವನೆ ಪಡೆದಿದ್ದು ಲಾಭದಲ್ಲಿ ಪಾಲು ತೆಗೆದುಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ಒಟ್ಟು 300 ಕೋಟಿ ರೂ. ಅವರ ಜೇಬು ಸೇರುವ ಅಂದಾಜಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











