ದೇವಸ್ಥಾನಗಳಲ್ಲಿ ಅವಮಾನ ಆಯ್ತು, ಅದಕ್ಕೆ ಇಸ್ಲಾಂಗೆ ಮತಾಂತರಗೊಂಡೆ ; ಚರ್ಚೆಗೆ ಗ್ರಾಸವಾದ ವಿಜಯ್ ಸಹನಟ ಜೈ ಮಾತು
ಭಾರತ ಜಾತ್ಯತೀತ ರಾಷ್ಟ್ರ. ಇಲ್ಲಿಯ ಸಂಸ್ಕೃತಿ ಪ್ರಪಂಚಕ್ಕೆ ಮಾದರಿ. ಹಲವು ಭಾಷೆ, ಜಾತಿಗಳಿಂದ ಕೂಡಿದ್ದರೂ ಏಕತೆ ಸಾಧಿಸಿದ ದೇಶ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಈ ದೇಶದಲ್ಲಿ ವ್ಯಕ್ತಿ ಜನ್ಮ ಪಡೆದ ಮರು ಕ್ಷಣದಿಂದಲೇ ನಿರ್ದಿಷ್ಟ ಜಾತಿ ಅಥವಾ ಮತದ ಜೊತೆ ಗುರುತಿಸಿಕೊಳ್ಳುತ್ತಾನೆ. ಅದಕ್ಕೆ ಮುಖ್ಯ ಕಾರಣ ಸಮಾಜ ಒಪ್ಪಿಕೊಂಡ ಸಂಪ್ರದಾಯ. ಆಚರಣೆ.
ಇನ್ನು ಧರ್ಮ ಭಾರತದಲ್ಲಿ ಕೇವಲ ವೈಯಕ್ತಿಕ ಆಯ್ಕೆಯಾಗಿ ಉಳಿದಿಲ್ಲ. ಅದು ಇಲ್ಲಿನ ಜನರ ಜೀವನ ವಿಧಾನ, ಸಾಂಸ್ಕ್ರತಿಕ ಬೇರು ಮತ್ತು ಕೆಲ ಬಾರಿ ತೀವೃ ಚರ್ಚೆಗೆ ಗ್ರಾಸವಾಗುವ ಸೂಕ್ಷ್ಮ ವಿಷಯ ಕೂಡ ಹೌದು. ಶತ ಶತಮಾನದಿಂದಲೂ ವೈವಿಧ್ಯಮಯ ನಂಬಿಕೆಗಳ ಸಂಗಮ ಭೂಮಿಯಾಗಿರುವ ಈ ದೇಶದಲ್ಲಿ ಮತಾಂತರ ಎಂಬುದು ಸಾಮಾಜಿಕ ಸಂಕೀರ್ಣ ಸಮಸ್ಯೆ.

ತನ್ನ ಧರ್ಮವನ್ನು ತೊರೆದು ಬೇರೆಯ ಧರ್ಮದ ಹಾದಿಯಲ್ಲಿ ವ್ಯಕ್ತಿಯೊಬ್ಬ ನಡೆಯಲು ಮುಂದಾದಾಗ ಅದು ಕೇವಲ ವೈಯಕ್ತಿಕ ನಿರ್ಧಾರವಾಗಿ ಉಳಿಯುವುದಿಲ್ಲ. ಬದಲಿಗೆ ಸಾಮಾಜಿಕ ಸಹಿಷ್ಣುತೆ ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ಬಹುದೊಡ್ಡ ಚರ್ಚೆಗೆ ಮುನ್ನುಡಿ ಬರೆಯುತ್ತೆ. ಸದ್ಯ ತಮಿಳು ನಟ ಜೈ ಇಂತಹದ್ದೇ ಒಂದು ಚರ್ಚೆಗೆ ನಾಂದಿ ಹಾಡಿದ್ದಾರೆ.
ಹೌದು, ಜೈ.. ಒಂದು ಕಾಲದಲ್ಲಿ ಭರವಸೆ ಮೂಡಿಸಿದ್ದ ಚೆಲುವ. 2002ರಲ್ಲಿ ಎ.ವೆಂಕಟೇಶ್ ನಿರ್ದೇಶನದ ''ಭಗವತಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ಇವರು. ವಿಶೇಷ ಅಂದರೆ ಈ ಚಿತ್ರದ ನಾಯಕನಾಗಿದ್ದವರು ಇಂದಿನ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್. ಈ ಚಿತ್ರದಲ್ಲಿ ವಿಜಯ್ ಅವರ ಕಿರಿಯ ಸಹೋದರನ ಪಾತ್ರವನ್ನು ಜೈ ನಿರ್ವಹಿಸಿದ್ದರು.
ಆ ನಂತರ ''ಚೆನ್ನೈ 600028''.. ''ಸುಬ್ರಮಣಿಯಪುರಂ''.. ''ಗೋವಾ''.. ಸೇರಿದಂತೆ ಹಲವು ಖ್ಯಾತ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಜೈ ಚಿತ್ರರಂಗದಲ್ಲಿ ಆರಕ್ಕೇರಲಿಲ್ಲ. ಮೂರಕ್ಕಿಳಿಯಲಿಲ್ಲ. ಇವತ್ತು ಕೂಡ ಚಿತ್ರರಂಗದಲ್ಲಿ ಜೈ ಸಕ್ರಿಯರಾಗಿದ್ದಾರೆ. ಆದರೆ ನಿರೀಕ್ಷಿತ ಮಟ್ಟದ ದೊಡ್ಡ ಯಶಸ್ಸು ಅವರಿಗೆ ಸಿಗುತ್ತಿಲ್ಲ
ಈ ಕುರಿತು ''ಗಲಾಟಾ ಪ್ಲಸ್''ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೈ ನಾನು 2011 ರಿಂದ ಇಸ್ಲಾಂ ಧರ್ಮದ ಕಡೆಗೆ ಆಕರ್ಷಿತನಾದೆ ಎಂದಿದ್ದಾರೆ. ನಾನು ಮಾಲೆ ಧರಿಸಿ ಶಬರಿಮಲೆಗೆ ಹೋಗಿದ್ದೆ, ಕ್ರಿಶ್ಚಿಯನ್ ಧರ್ಮದ ಆಚರಣೆಗಳನ್ನು ಕೂಡ ಪಾಲಿಸಿದ್ದೆ, ಎಲ್ಲ ದೇವರು ಒಂದೇ ಎಂದು ನಂಬಿದ್ದೆ ಎಂದು ಹೇಳಿರುವ ಜೈ ಒಂದು ಹಂತದಲ್ಲಿ, ನನಗೆ ಕೆಲವು ದೇವಾಲಯಗಳಲ್ಲಿ ಅವಮಾನವಾಯ್ತು. ನಾನು ನಿರೀಕ್ಷಿಸದ ಕೆಲವು ಘಟನೆಗಳು ನನಗೆ ತೀವ್ರ ಅಸಮಾಧಾನ ಮೂಡಿಸಿದವು ಎಂದು ಹೇಳಿಕೊಂಡಿದ್ದಾರೆ.

ಮೇಲಿಂದ ಮೇಲೆ ಆದ ಅವಮಾನ ಮತ್ತು ಆ ಬೇಸರದಿಂದ ನಂತರ ನಾನೊಂದು ದಿನ ಮಸೀದಿಗೆ ಭೇಟಿ ನೀಡಿದೆ ಎಂದು ಹೇಳಿರುವ ಜೈ, ಮಸೀದಿಯ ಒಳಗಿನ ವಾತಾವರಣದಿಂದ ನನ್ನ ಮನಸಿಗೆ ತುಂಬಾನೇ ಶಾಂತಿ ಸಿಕ್ಕಿತು ಎಂದಿದ್ದಾರೆ. ನಾನು ಪ್ರಾರ್ಥನೆಗಾಗಿ ಸಾಲಿನಲ್ಲಿ ನಿಂತಿದ್ದಾಗ ಮಸೀದಿಯ ಒಳಗಿದ್ದ ಯಾರೂ ಕೂಡ ನನ್ನೊಂದಿಗೆ ಮಾತನಾಡಲು ಬರಲಿಲ್ಲ ಅಥವಾ ಸೆಲ್ಪಿ ಫೋಟೋಗಳಿಗಾಗಿ ಕೇಳಲಿಲ್ಲ ಎಂದು ಹೇಳಿರುವ ಜೈ ನಾನು ಪ್ರಾರ್ಥನೆ ಮುಗಿಸಿ ಹೊರಬಂದ ನಂತರವಷ್ಟೇ ಜನರು ನನ್ನನ್ನು ಮಾತನಾಡಿಸಿದರು. ಅಲ್ಲಿ ನನಗೆ ನಿಜವಾದ ಸಮಾನತೆ ಕಂಡುಬಂತು ಎಂದಿದ್ದಾರೆ.
ಮುಂದುವರೆದು ಮಸೀದಿಯ ಒಳಗೆ ಭಗವಂತನೇ ಎಲ್ಲಕ್ಕಿಂತ ದೊಡ್ಡವನು. ಅಲ್ಲಿಗೆ ಬರುವ ವ್ಯಕ್ತಿ ಎಷ್ಟೇ ದೊಡ್ಡ ಸೆಲೆಬ್ರಿಟಿಯಾಗಿದ್ದರೂ ಅವರಿಗೆ ಯಾವುದೇ ವಿಶೇಷ ಆದ್ಯತೆ ಇರುವುದಿಲ್ಲ ಎಂದು ಹೇಳಿರುವ ಜೈ, ಪ್ರಾರ್ಥನೆ ಮಾಡಲು ನಮಗೆ ನಮ್ಮದೇ ಆದ ಜಾಗ ಮತ್ತು ಸಮಯ ಸಿಗುತ್ತೆ ಎಂದಿದ್ದಾರೆ. ಅಲ್ಲಿ ಯಾರೂ ನಮ್ಮನ್ನು ಪಕ್ಕಕ್ಕೆ ತಳ್ಳುವುದಿಲ್ಲ ಎಂದಿದ್ದಾರೆ.
ನಾನು ಈ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದ ನಂತರ, ನನ್ನ ವೈಯಕ್ತಿಕ ಗುಣ ನಡತೆಯಲ್ಲೂ ಧನಾತ್ಮಕ ಬದಲಾವಣೆಗಳಾಗಿದ್ದಾವೆ ಎಂದು ಹೇಳಿರುವ ಜೈ, ನಾನು ಇಸ್ಲಾಂ ಧರ್ಮ ಸೇರಿದ್ರೂ ನನ್ನ ಹೆಸರನ್ನು ನಾನು ಇನ್ನೂ ಬದಲಾಯಿಸಿಲ್ಲ, ಅಜೀಜ್ ಜೈ ಎಂದು ಬದಲಾಯಿಸುವ ಆಲೋಚನೆ ಇದೆ ಎಂದು ಹೇಳಿದ್ದಾರೆ. ಸದ್ಯ ಜೈ ಅವರ ಈ ಮಾತುಗಳು ಚರ್ಚೆಗೆ ಗ್ರಾಸವಾಗಿವೆ. ಪರ-ವಿರೋಧದ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿವೆ.


Click it and Unblock the Notifications