ಅರರೇ.. ಫಸ್ಟ್ ಸಾಂಗ್ನಲ್ಲೇ ಸಿಕ್ಕಿಬಿದ್ನಾ 'ಜನನಾಯಗನ್'? ಇದೆಂಥಾ ಬೀಳ್ಕೊಡುಗೆ?
ತಮಿಳು ನಟ ದಳಪತಿ ವಿಜಯ್ ರಾಜಕೀಯರಂಗ ಪ್ರವೇಶಿಸಿದ್ದಾರೆ. ಮುಂದಿನ ತಮಿಳುನಾಡು ಚುನಾವಣೆ ಮೇಲೆ ಕಣ್ಣಿಟ್ಟಿದ್ದು ತಮ್ಮದೇ ಟಿವಿಕೆ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ನಟಿಸುವ ಕೊನೆ ಸಿನಿಮಾ 'ಜನನಾಯಗನ್'ಎನ್ನಲಾಗ್ತಿದೆ.
ಸ್ಟಾರ್ ನಟನ ಕೊನೆ ಸಿನಿಮಾ ಅಂದಾಕ್ಷಣ ನಿರೀಕ್ಷೆ ಹೆಚ್ಚಾಗುತ್ತದೆ. ಒಳ್ಳೆ ಕಥೆ, ಖ್ಯಾತ ನಿರ್ದೇಶಕ, ಭಾರೀ ಬಜೆಟ್ ಎನ್ನುವ ಲೆಕ್ಕಾಚಾರ ಶುರುವಾಗುತ್ತದೆ. ತಮಿಳುನಾಡಿನಲ್ಲಿ ಬಹಳ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ ವಿಜಯ್. ಸೂಪರ್ ಹಿಟ್ ಸಿನಿಮಾಗಳ ಸರದಾರ. ಇಂತಿಪ್ಪ ದಳಪತಿ ಕೊನೆ ಸಿನಿಮಾ ಅಂದರೆ ಕುತೂಹಲ ಹೆಚ್ಚುತ್ತದೆ. ಆದರೆ ಕೊನೆ ಚಿತ್ರಕ್ಕೆ ರೀಮೆಕ್ ಕಥೆ ಆಯ್ಕೆ ಮಾಡಿಕೊಂಡಿದ್ದಾರಾ? ಎನ್ನುವ ಚರ್ಚೆ ಶುರುವಾಗಿದೆ.

'ಜನನಾಯಗನ್' ಸಿನಿಮಾ ಶುರುವಾದ ಮೊದಲ ದಿನದಿಂದಲೂ ಇದು ತೆಲುಗಿನ 'ಭಗವಂತ್ ಕೇಸರಿ' ರೀಮೆಕ್ ಇನ್ನುವ ಊಹಾಪೋಹ ಶುರುವಾಗಿತ್ತು. ಬಾಲಕೃಷ್ಣ, ಶ್ರೀಲೀಲಾ, ಕಾಜಲ್ ಅಗರ್ವಾಲ್ ನಟನೆಯ ಕಾಮಿಡಿ ಆಕ್ಷನ್ ಥ್ರಿಲ್ಲರ್ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಆದರೆ ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಇತ್ತು. ಇದೇ ಕತೆಯನ್ನು ಆಧರಿಸಿ 'ಜನನಾಯಗನ್' ಚಿತ್ರ ಮಾಡಿದ್ದಾರೆ ಎನ್ನುವ ಸುಳಿವು ಸಿಕ್ತಿದೆ. ಅದಕ್ಕೆ ತಕ್ಕಂತೆ ಈಗ ಬಿಡುಗಡೆ ಆಗಿರುವ ಫಸ್ಟ್ ಸಾಂಗ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದು 'ಭಗವಂತ್ ಕೇಸರಿ' ರೀಮೇಕ್ ಅಲ್ಲ ಎಂದು ವಿಜಯ್ ಅಭಿಮಾನಿಗಳು ವಾದಿಸುತ್ತಾ ಬರುತ್ತಿದ್ದಾರೆ. ಬೇರೆ ನಟನ ಅಭಿಮಾನಿಗಳು ಇದೇ ವಿಚಾರವನ್ನಿಟ್ಟುಕೊಂಡು ಟ್ರೋಲ್ ಮಾಡುತ್ತಿದ್ದರು. ಸದ್ಯ ಬಂದರುವ 'ದಳಪತಿ ಕಛೇರಿ' ಸಾಂಗ್ ಅದಕ್ಕೆ ಮತ್ತಷ್ಟು ಇಂಬು ನೀಡಿದೆ. ಬಾಲಕೃಷ್ಣ, ಕಾಜಲ್ ಹಾಗೂ ಶ್ರೀಲೀಲಾ ಸೆಲೆಬ್ರೇಷನ್ ಮೂಡ್ನಲ್ಲಿ ಹೆಜ್ಜೆ ಹಾಕಿರುವಂತೆ ಈ ಹಾಡಿನಲ್ಲಿ ವಿಜಯ್, ಪೂಜಾ ಹಾಗೂ ಮಮಿತಾ ಬೈಜು ಕುಣಿದಿದ್ದಾರೆ.

ಅನಿರುದ್ಧ್ ರವಿಚಂದರ್ 'ಜನನಾಯಗನ್' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸ್ವತಃ ಅನಿರುದ್ಧ್ ಹಾಡು ಹಾಡಿದ್ದು ವಿಜಯ್ ಹಾಗೂ ಅರಿವು ದನಿಗೂಡಿಸಿದ್ದಾರೆ. ಸಾಂಗ್ ಕೇಳಿ ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಭಾರೀ ಸೆಟ್ ಹಾಕಿ ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಶೇಖರ್ ಮಾಸ್ಟರ್ ಸಾಂಗ್ ಕೊರಿಯೋಗ್ರಫಿ ಮಾಡಿದ್ದಾರೆ.
ಇದು ವಿಜಯ್ ಬೀಳ್ಕೊಡುಗೆ ಸಿನಿಮಾ ಎನ್ನಲಾಗ್ತಿದ್ದು ಅದಕ್ಕೆ ತಕ್ಕಂತೆ ಸಾಂಗ್ ಅನ್ನು ಕಂಪೋಸ್ ಮಾಡಿ ಸೆಲೆಬ್ರೇಷನ್ ರೀತಿ ಕಟ್ಟಿಕೊಡಲಾಗಿದೆ. ಕೊನೆಯಲ್ಲಿ 'ಅಣ್ಣಾ ಒಂದು ಲಾಸ್ಟ ಡ್ಯಾನ್ಸ್' ಎಂದು ಅನಿರುದ್ದ್ ಕೇಳಿದ್ದು 'ಸರಿ' ಎಂದು ವಿಜಯ್ ಹೇಳಿರುವುದನ್ನು ನೋಡಬಹುದು. ಹಾಗಾಗಿ 'ಜನನಾಯಗನ್' ಅವರ ಕೊನೆ ಸಿನಿಮಾ ಎನ್ನುವುದು ಅರ್ಥವಾಗುತ್ತಿದೆ. ಮುಂದೆ ಪಾಲಿಟಿಕ್ಸ್ನಲ್ಲಿ ಸೋತರೆ ಮರಳಿ ಚಿತ್ರರಂಗಕ್ಕೆ ಮರಳುವ ಸಾಧ್ಯತೆಯಿದೆ. ಸದ್ಯಕ್ಕಂತೂ ಇದೇ ಕೊನೆಯ ಸಿನಿಮಾ.
ಎಲ್ಲಾ ಸರಿ ತಮ್ಮ ಮೈಲಿಗಲ್ಲು ಚಿತ್ರಕ್ಕೆ ವಿಜಯ್ ಯಾಕೆ ರೀಮೆಕ್ ಕಥೆ ಆಯ್ಕೆ ಮಾಡಿಕೊಂಡರೂ ಎಂದು ಕೆಲವರು ಕೇಳುತ್ತಿದ್ದಾರೆ. ಆದರೆ ಇನ್ನು ಕೆಲವರು ಚಿತ್ರತಂಡ ಹೇಳಿಲ್ಲ, ರೀಮೆಕ್ ಅಂತ ಯಾಕೆ ಭಾವಿಸುತ್ತೀರಾ? ಎನ್ನುತ್ತಿದ್ದಾರೆ. 'ಭಗವಂತ್ ಕೇಸರಿ' ಚಿತ್ರದಲ್ಲಿ ಶ್ರೀಲೀಲಾ ಕುತ್ತಿಗೆಯಲ್ಲಿ ಲಾಕೆಟ್ ಇರುವಂತೆ ಇಲ್ಲಿ ಮಮಿತಾ ಬೈಜು ಕುತ್ತಿಗೆಯಲ್ಲಿ ಇದೆ. ಇನ್ನು ವಿನೋದ್ ಚಿತ್ರದ ನಿರ್ದೇಶಕ ಎಂದು ಮಾತ್ರ ಹಾಡಿನಲ್ಲಿ ಹೇಳಲಾಗಿದೆ. ಹಾಗಿದ್ದರೆ ರೀಮೆಕ್ ಕಥೆನಾ? ಎನ್ನುವ ಪ್ರಶ್ನೆ ಮೂಡಿದೆ.
ಕೆಲವರ ಪ್ರಕಾರ 'ಭಗವಂತ್ ಕೇಸರಿ' ಚಿತ್ರದ ಸಣ್ಣ ಎಳೆಯನ್ನು ಮಾತ್ರ ಬಳಸಿಕೊಂಡು ಬೇರೆಯದ್ದೇ ಕಥೆ ಬರೆದು 'ಜನನಾಯಗನ್' ಸಿನಿಮಾ ಮಾಡುತ್ತಿದ್ದಾರಂತೆ. ರಾಜಕೀಯರಂಗಕ್ಕೆ ಧುಮುಕಿರುವ ವಿಜಯ್ ತಮ್ಮ ಕೊನೆ ಸಿನಿಮಾವನ್ನು ಅದಕ್ಕೆ ವೇದಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಒಂದೊಳ್ಳೆ ಸಂದೇಶ ಇರುವಂತೆ ನೋಡಿಕೊಳ್ಳುತ್ತಿದ್ದಾರೆ. ಸಾಕಷ್ಟು ಕಥೆಗಳನ್ನು ಕೇಳಿ ಅಂತಿಮವಾಗಿ ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ.


Click it and Unblock the Notifications











