'ಜನ ನಾಯಗನ್' ಕಂಪ್ಲೀಟ್ ಸಿನಿಮಾ ಲೀಕ್ ಆಯ್ತಾ? ಈ ದುಷ್ಕೃತ್ಯದ ಹಿಂದೆ ಯಾರಿದ್ದಾರೆ?
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರತಂಡಕ್ಕೆ ಭಾರೀ ಶಾಕ್ ಎದುರಾಗಿದೆ. ಬಿಡುಗಡೆಗೂ ಮುನ್ನ ಚಿತ್ರದ ಪ್ರಮುಖ ದೃಶ್ಯಗಳು ಆನ್ಲೈನ್ನಲ್ಲಿ ಲೀಕ್ ಆಗಿ ವೈರಲ್ ಆಗ್ತಿದೆ. ವಿಜಯ್ ಎಂಟ್ರಿ ಸೀನ್, ಇಂಟರ್ವಲ್ ಸೇರಿದಂತೆ ಕೆಲ ದೃಶ್ಯ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಸಂಕಷ್ಟ ತಂದೊಡ್ಡಿದೆ.
ಸಂಕ್ರಾಂತಿಗೆ 'ಜನ ನಾಯಗನ್' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆಯಿಂದ ಇನ್ನು ಬಿಡುಗಡೆ ಆಗಿಲ್ಲ. ತಮಿಳುನಾಡು ಚುನಾವಣೆ ಮುಗಿದ ಬಳಿಕ ಏಪ್ರಿಲ್ 24 ಅಥವಾ ಏಪ್ರಿಲ್ 30ರಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಬಹುದು ಎನ್ನಲಾಗ್ತಿತ್ತು. ಅಷ್ಟರಲ್ಲೇ ಚಿತ್ರದ ಪ್ರಮುಖ ದೃಶ್ಯಗಳು ಸೋರಿಕೆಯಾಗಿ ವಿವಾದ ಸೃಷ್ಟಿಯಾಗಿದೆ. ಸಿನಿಮಾ ಬಿಡುಗಡೆಗೂ ಮುನ್ನ ಹೀಗೆ ದೃಶ್ಯಗಳು ಲೀಕ್ ಆಗುವುದು ಹೊಸದೇನು ಅಲ್ಲ. ಈ ಹಿಂದೆ ಸಾಕಷ್ಟು ಚಿತ್ರತಂಡಗಳು ಈ ಸಮಸ್ಯೆ ಎದುರಿಸಿವೆ.

'ಜನ ನಾಯಗನ್' ಸಂಪೂರ್ಣ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಯಾರು ಚಿತ್ರದ ದೃಶ್ಯಗಳನ್ನು ಹೀಗೆ ಲೀಕ್ ಮಾಡಿದ್ರು ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಟಿವಿಕೆ ಪಕ್ಷ ಸ್ಥಾಪಿಸಿ ನಟ ವಿಜಯ್ ತಮಿಳುನಾಡು ರಾಜಕೀಯರಂಗ ಪ್ರವೇಶಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯಾದ್ಯಂತ ಸುತ್ತಾಡಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಡಿಎಂಕೆ ಪಕ್ಷವೇ ತಮ್ಮ 'ಜನ ನಾಯಗನ್' ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸ್ವತಃ ವಿಜಯ್ ತಂಡದವರೇ 'ಜನ ನಾಯಗನ್' ಚಿತ್ರದ ದೃಶ್ಯಗಳನ್ನು ಲೀಕ್ ಮಾಡಿದ್ರಾ? ಎನ್ನುವ ಚರ್ಚೆ ಶುರುವಾಗಿದೆ. ವಿಜಯ್ ಈ ಚಿತ್ರವನ್ನು ತಮಮ ರಾಜಕೀಯರಂಗ ಪ್ರವೇಶಕ್ಕೆ ವೇದಿಕೆ ಮಾಡಿಕೊಳ್ಳಲು ಬಯಸಿದ್ದಾರೆ. ಸಿನಿಮಾ ಘೋಷಣೆ ಆದಾಗಲೇ ಇಂತಾದೊಂದು ಅನುಮಾ ಮೂಡಿತ್ತು. ಟ್ರೈಲರ್ ನೋಡಿದ ಬಳಿಕ ಅದು ಖಚಿತವಾಗಿತ್ತು. ಸದ್ಯ ಲೀಕ್ ಆಗಿರುವ ದೃಶ್ಯಗಳಲ್ಲಿ ಕೂಡ ಅದು ಗೊತ್ತಾಗುತ್ತಿದೆ. ಭ್ರಷ್ಟ ರಾಜಕಾರಣಿಗಳನ್ನು ಟೀಕಿಸುವಂತಹ ದೃಶ್ಯಗಳು ಚಿತ್ರದಲ್ಲಿದೆ. ಅದೇ ಕಾರಣಕ್ಕೆ ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆ ಪ್ರಯತ್ನ ನಡೆದಿತ್ತು. ಅದು ಸಾಧ್ಯವಾಗದೇ ಇದ್ದಾಗ ಹೀಗೆ ಚುನಾವಣೆ ಹೊಸ್ತಿಲಲ್ಲಿ ದೃಶ್ಯಗಳನ್ನು ಲೀಕ್ ಮಾಡುವ ನಾಟಕ ಮಾಡಿದ್ದಾರೆ ಎನ್ನುವುದು ಕೆಲವರ ಆರೋಪ.
'ಜನ ನಾಯಗನ್' ಸಿನಿಮಾ ದೃಶ್ಯಗಳು ಲೀಕ್ ಆಗಿರುವ ಬಗ್ಗೆ ತಮಿಳು ಚಿತ್ರ ನಿರ್ದೇಶಕ ಹಾಗೂ ಡಿಎಂಕೆ ಬೆಂಬಲಿಗ ಮೈಕಲ್ ಅರುಣ್ ಪ್ರತಿಕ್ರಿಯಿಸಿದ್ದಾರೆ. ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಚಿತ್ರಕ್ಕೂ ಅವರು ಕೆಲಸ ಮಾಡಿದ್ದರು. ಟ್ವೀಟ್ ಮಾಡಿ 'ಜನ ನಾಯಗನ್' ಸಿನಿಮಾ ಲೀಕ್ ವಿವಾದದ ಬಗ್ಗೆ ಅರುಣ್ ಪ್ರತಿಕ್ರಿಯಿಸಿದ್ದಾರೆ. "ಜನ ನಾಯಕನ್' ಚಿತ್ರದ ದೃಶ್ಯಗಳನ್ನು ಸೋರಿಕೆ ಮಾಡಿದವರು ಯಾರೇ ಆಗಿರಲಿ, ಅವರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಶಿಕ್ಷಿಸಬೇಕು" ಎಂದು ಟ್ವೀಟ್ ಮಾಡಿದ್ದಾರೆ.
"ನಿಜಕ್ಕೂ ಇದು ಸೆನ್ಸಾರ್ ಮಾಡಿದ ದೃಶ್ಯಗಳಲ್ಲ. ಇದು ಸೆನ್ಸಾರ್ ಮಂಡಳಿಗೆ ನೀಡಿದ ಪ್ರತಿಯೂ ಅಲ್ಲ. 'ಎಡಿಟ್ ರೆಫರೆನ್ಸ್' ಎಂದು ನಮೂದಿಸಿರುವುದರಿಂದ, ಇದನ್ನು ಚಿತ್ರತಂಡದ ಪ್ರಮುಖ ವ್ಯಕ್ತಿಗಳ ವೈಯಕ್ತಿಕ ವೀಕ್ಷಣೆಗಾಗಿ ಮಾತ್ರ ಸಿದ್ಧಪಡಿಸಲಾಗಿದೆ" ಎಂದು ಮೈಕಲ್ ಅರುಣ್ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಜಯ್ ತಮ್ಮು ಮುಂದಿನ ಚುನಾವಣೆ ಪ್ರಚಾರದ ಭಾಷಣದಲ್ಲಿ 'ಜನ ನಾಯಕನ್' ಚಿತ್ರದ ದೃಶ್ಯಗಳನ್ನು ಅವರು ಸೋರಿಕೆ ಮಾಡಿದ್ದಾರೆ.. ಅದನ್ನು ಯಾರು ಮಾಡಿರಬಹುದು ಎಂಬುದು ನಿಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ವಿಜಯ್ ಹೇಳುತ್ತಾರೆ" ಎಂದು ಅರುಣ್ ವ್ಯಂಗ್ಯವಾಡಿದ್ದಾರೆ.
"ವಾಸ್ತವದಲ್ಲಿ ಕೊನೆಯವರೆಗೂ ಯಾರು 'ಜನ ನಾಯಗನ್' ಚಿತ್ರದ ದೃಶ್ಯಗಳನ್ನು ಲೀಕ್ ಮಾಡಿದ್ರು ಅಂತ ಯಾರಿಗೂ ಗೊತ್ತಾಗಲ್ಲ. ಏಕೆಂದರೆ, ಈ 'ಎಡಿಟ್ ರೆಫರೆನ್ಸ್' ಪ್ರತಿಯನ್ನು ಚಿತ್ರದ ಎಡಿಟರ್ ಹೊರತುಪಡಿಸಿ, ನಾಯಕ, ನಿರ್ಮಾಪಕ ಮತ್ತು ನಿರ್ದೇಶಕರಿಗೆ ಮಾತ್ರ ನೋಡಲು ಅವಕಾಶ ಇರುತ್ತದೆ" ಎಂದು ಮೈಕೆಲ್ ಅರುಣ್ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











