ಬೆಂಗಳೂರಿನಲ್ಲಿ 'ಜನನಾಯಗನ್' ವಿಜಯ್ ಡಿಮ್ಯಾಂಡ್ ಜೋರು; ಟಿಕೆಟ್ಗಳು ಸೋಲ್ಡೌಟ್
ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪರಭಾಷಾ ಸಿನಿಮಾಗಳ ಆರ್ಭಟ ಜೋರಾಗಿಯೇ ಇರುತ್ತದೆ. ತಮಿಳು ನಟ ವಿಜಯ್ ನಟನೆಯ ಸಿನಿಮಾಗಳು ನಗರದಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತವೆ. ಟಿಕೆಟ್ ದರ ಹೆಚ್ಚಿಸಿದ್ರು ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡ್ತಾರೆ. ಸದ್ಯ 'ಜನನಾಯಗನ್' ಕ್ರೇಜ್ ಶುರುವಾಗಿದೆ.
ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ 'ಜನನಾಯಗನ್'. ಈಗಾಗಲೇ ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯರಂಗಕ್ಕೆ ವಿಜಯ್ ಧುಮುಕಿದ್ದಾರೆ. ಹಾಗಾಗಿ ಮುಂದೆ ಸಿನಿಮಾಗಳಲ್ಲಿ ನಟಿಸದಿರಲು ತೀರ್ಮಾನಿಸಿದ್ದಾರೆ. ಕೊನೆಯದಾಗಿ 'ಜನನಾಯಗನ್' ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 9ರಂದು ಸಿನಿಮಾ ತೆರೆಗೆ ಬರ್ತಿದೆ. ವಾರಕ್ಕೂ ಮುನ್ನ ಬೆಂಗಳೂರಿನಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ.

ಟಿಕೆಟ್ ದರ 1000 ರೂ.ಗೆ ಹೆಚ್ಚಿಸಿದರೂ ಜನ ಬುಕ್ ಮಾಡುತ್ತಿದ್ದಾರೆ. ವಿಜಯ್ ಕೊನೆಯ ಸಿನಿಮಾ ಎನ್ನುವ ಕಾರಣಕ್ಕೆ ಕೊಂಚ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 'ಜನನಾಯಗನ್' 15 ಶೋಗಳ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. 8 ಶೋಗಳು ಸೋಲ್ಡೌಟ್ ಆಗಿದೆ. ಕೆಲವೇ ನಿಮಿಷಗಳಲ್ಲಿ ಇನ್ನುಳಿದ 7 ಶೋಗಳ ಟಿಕೆಟ್ ಖಾಲಿ ಆಗಲಿದೆ. ಆ ಮೂಲಕ 50 ಲಕ್ಷ ರೂ. ಕಲೆಕ್ಷನ್ ಆಗಿದೆ. ರಾಜ್ಯ ಸರ್ಕಾರದ ಟಿಕೆಟ್ ದರ ನಿಗದಿಗೆ ನ್ಯಾಯಾಲಯದಲ್ಲಿ ಹಿನ್ನಡೆ ಆಗಿತ್ತು. ಹಾಗಾಗಿ ಯದ್ವಾತದ್ವಾ ಟಿಕೆಟ್ ದರ ಹೆಚ್ಚಿಸಲಾಗಿದೆ.
ಜನವರಿ 9ರಂದು ಶುಕ್ರವಾರ ಬೆಳಗ್ಗೆ 6 ಗಂಟೆಗೆ ರಾಜ್ಯದಲ್ಲಿ 'ಜನನಾಯಗನ್' ಸಿನಿಮಾ ಬಿಡುಗಡೆ ಆಗಲಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಟಿಕೆಟ್ ದರ 1000 ರೂ. ಹಾಗೂ 800 ರೂ. ನಿಗದಿಯಾಗಿದೆ. ಆದರೂ ಅಭಿಮಾನಿಗಳು ತಲೆಕೆಡಿಸಿಕೊಳ್ಳದೇ ಟಿಕೆಟ್ ಬುಕ್ ಮಾಡುತ್ತಿದ್ದಾರೆ. ವಿನೋದ್ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ರಾಜ್ಯದಲ್ಲೇ ಅದೇ ಸಂಸ್ಥೆ ಚಿತ್ರ ವಿತರಣೆ ಮಾಡಲಾಗಿದೆ.

ವಿಜಯ್ ಕೊನೆ ಸಿನಿಮಾ ಎನ್ನುವ ಕಾರಣಕ್ಕೆ 250 ಕೋಟಿ ರೂ. ಸಂಭಾವನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅಂದಾಜು 350 ಕೋಟಿ ರೂ. ಬಜೆಟ್ನಲ್ಲಿ 'ಜನನಾಯಗನ್' ಸಿನಿಮಾ ನಿರ್ಮಾಣವಾಗಿದೆ. ಪೂಜಾ ಹೆಗ್ಡೆ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಅನಿರುದ್ಧ್ ರವಿಚಂದ್ರನ್ ಸಂಗೀತದಲ್ಲಿ ಚಿತ್ರದ ಹಾಡುಗಳು ಅಭಿಮಾನಿಗಳ ಮನಗೆದ್ದಿದೆ. ಇನ್ನು ಟ್ರೈಲರ್ ಕೂಡ ಬಿಡುಗಡೆ ಆಗಿಲ್ಲ. ಆದರೆ 'ಜನನಾಯಗನ್' ಕ್ರೇಜ್ ಹೆಚ್ಚುತ್ತಲೇ ಇದೆ.
ಚೆನ್ನೈನಲ್ಲೇ 'ಜನನಾಯಗನ್' ಸಿನಿಮಾ ಟಿಕೆಟ್ ಬುಕ್ಕಿಂಗ್ ಇನ್ನು ಶುರುವಾಗಿಲ್ಲ. ಆದರೆ ಬೆಂಗಳೂರಿನಲ್ಲಿ 10 ದಿನ ಮುನ್ನ ಬುಕ್ಕಿಂಗ್ ಓಪನ್ ಆಗಿದೆ. ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ತಮಿಳುನಾಡಿನಲ್ಲೇ ವಿಜಯ್ ಸಿನಿಮಾಗಳು 300 ಕೋಟಿ ರೂ. ಕಲೆಕ್ಷನ್ ಮಾಡುತ್ತವೆ. ರಜನಿಕಾಂತ್ ಸಿನಿಮಾಗಳಿಗಿಂತ ಭಾರೀ ಆರ್ಭಟ ಇರುತ್ತದೆ. ಬೆಂಗಳೂರಿನಲ್ಲಿ ಕೂಡ ಅದೇ ರೀತಿಯ ವಾತಾವರಣ ಕಂಡುಬರುತ್ತದೆ. ಈ ಹಿಂದೆ ಬಂದಿದ್ದ 'GOAT' ಸಿನಿಮಾ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಆದರೆ ಸಿನಿಮಾ ನಿರಾಸೆ ಮೂಡಿಸಿದ್ದು ಗೊತ್ತೇಯಿದೆ.
ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಿಯಾಮಣಿ, ಪ್ರಕಾಶ್ ರಾಜ್, ಸುನಿಲ್, ಬಾಬಾ ಭಾಸ್ಕರ್ ಸೇರಿ ದೊಡ್ಡ ತಾರಾಗಣ 'ಜನನಾಯಗನ್' ಚಿತ್ರದಲ್ಲಿದೆ. ಒಂದೇ ವರ್ಷದಲ್ಲಿ ಸಿನಿಮಾ ಚಿತ್ರೀಕರಣ ಆರಂಭಿಸಿ ಮುಗಿಸಿದೆ ಚಿತ್ರತಂಡ. ಇತ್ತೀಚೆಗೆ ಮಲೇಷಿಯಾದಲ್ಲಿ ಭರ್ಜರಿಯಾಗಿ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಈ ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವಿಜಯ್ ಬಳಸಿಕೊಳ್ಳುತ್ತಿದ್ದಾರೆ.
ಸಂಕ್ರಾಂತಿಗೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್', ಚಿರಂಜೀವಿ ಅಭಿನಯದ 'ಮನ ಶಂಕರವರಪ್ರಸಾದ್' ಹೀಗೆ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲಿ 'ಜನನಾಯಗನ್' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.


Click it and Unblock the Notifications











