ಆ ಪ್ರಶ್ನೆಗೆ ಅಡ್ಡ ಗೋಡೆಮೇಲೆ ದೀಪ ಇಟ್ಟ ದಳಪತಿ ವಿಜಯ್; ಫ್ಯಾನ್ಸ್ ಖುಷ್
ತಮಿಳು ನಟ ವಿಜಯ್ ಈಗಾಗಲೇ ರಾಜಕೀಯರಂಗಕ್ಕೂ ಧುಮುಕಿದ್ದಾರೆ. 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ನಟನೆಯ ತಮಿಳುನಾಡು ವಿಧಾನಸಭೆ ಚುನಾವಣೆ ಕಡೆ ಮುಖ ಮಾಡಿದ್ದಾರೆ. ತಂಡವನ್ನು ಸಂಘಟಿಸಿ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.
ಸದ್ಯ 'ಜನ ನಾಯಗನ್' ಎಂಬ ಚಿತ್ರದಲ್ಲಿ ವಿಜಯ್ ಬಣ್ಣ ಹಚ್ಚಿದ್ದಾರೆ. ಇದೇ ವಿಜಯ್ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಹಾಗಾಗಿ ಭಾರೀ ನಿರೀಕ್ಷೆ ಮೂಡಿದೆ. ವಿನೋದ್ ನಿರ್ದೇಶನದ ಈ ಪೊಲಿಟಿಕಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರಲಿದೆ. ವಿಜಯ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಚಿತ್ರದಲ್ಲಿ ವಿಜಯ್ ಪೊಲೀಸ್ ಆಫೀಸರ್ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ.

ಟೈಟಲ್ ಕೇಳಿದರೆ ವಿಜಯ್ ಈ ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ಬಳಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಈ ಹಿಂದೆ ಎನ್ಟಿಆರ್, ಎಂಜಿಆರ್ ಕೂಡ ಇದೇ ರೀತಿ ತಮ್ಮ ಸಿನಿಮಾಗಳನ್ನು ರಾಜಕೀಯರಂಗ ಪ್ರವೇಶಕ್ಕೆ ಬಳಸಿಕೊಂಡಿದ್ದರು. ಅಭಿಮಾನಿಗಳ ನೆಚ್ಚಿನ ದಳಪತಿ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಆದರೆ ಅಷ್ಟು ಸುಲಭವಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
ವಿಜಯ್ ಪೊಲಿಟಿಕಲ್ ಎಂಟ್ರಿ ಅಭಿಮಾನಿಗಳಿಗೆ ಖುಷಿ ತಂದಿದೆ. ಜೊತೆಗೆ ಬೇಸರಕ್ಕೂ ಕಾರಣವಾಗಿದೆ. ತಮ್ಮ ನೆಚ್ಚಿನ ನಟ ರಾಜಕೀಯರಂಗಕ್ಕೆ ಬಂದು ಜನರಿಗೆ ಸಹಾಯ ಮಾಡುತ್ತಾರೆ ಎನ್ನುವುದು ಖುಷಿಗೆ ಕಾರಣವಾಗಿದೆ. ಅದೇ ಸಮಯದಲ್ಲಿ ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ? ಎನ್ನುವ ಬೇಸರ ಕೂಡ ಮೂಡಿದೆ. 'ಜನ ನಾಯಗನ್' ಬಳಿಕ ವಿಜಯ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಅದೇ ಕೊನೆ ಸಿನಿಮಾನಾ? ಎನ್ನುವುದು ಗೊತ್ತಿಲ್ಲ.
ಅಧಿಕೃತವಾಗಿ ವಿಜಯ್ ಇದೇ ನನ್ನ ಕೊನೆಯ ಸಿನಿಮಾ ಎಂದು ಹೇಳಿಲ್ಲ. ಆದರೆ ಕೋಟಿ ಕೋಟಿ ಸಂಭಾವನೆ ಬಿಟ್ಟು ರಾಜಕೀಯರಂಗಕ್ಕೆ ಬರ್ತಿದ್ದೀನಿ ಅಂದರೆ ಜನಕ್ಕೆ ಏನಾದರೂ ಸಹಾಯ ಮಾಡಬೇಕು. ತನಗೆ ಇಷ್ಟೆಲ್ಲಾ ನೇಮು ಫೇಮು ಕೊಟ್ಟ ಜನರಿಗೆ ಮರಳಿ ಏನಾದರೂ ಕೊಡಬೇಕು, ಅದಕ್ಕೆ ಈ ನಿರ್ಧಾರ ಎಂದು ವಿಜಯ್ ಬಹಿರಂಗವಾಗಿಯೇ ಹೇಳಿದ್ದರು. 'ಜನ ನಾಯಗನ್' ಚಿತ್ರದಲ್ಲಿ ನಟಿ ಮಮಿತಾ ಬೈಜು ಕೂಡ ಬಣ್ಣ ಹಚ್ಚಿದ್ದಾರೆ.

ಸಿನಿಮಾ ಚಿತ್ರೀಕರಣದ ವೇಳೆ ಇದೇ ನಿಮ್ಮ ಕೊನೆಯ ಸಿನಿಮಾನಾ? ಸರ್ ಎಂದು ಮಮಿತಾ ಕೇಳಿದ್ದರಂತೆ. ಅದಕ್ಕೆ ವಿಜಯ್ ಕೊಟ್ಟಿರುವ ಉತ್ತರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದದಲ್ಲಿ ಮಮಿತಾ ಹಾಜರಾಗಿದ್ದರು. ಈ ವೇಳೆ ವಿಜಯ್ ಅವರೊಟ್ಟಿಗೆ ನಡೆಸಿದ ಸಂಭಾಷಣೆ ಬಗ್ಗೆಯೂ ಹೇಳಿದ್ದಾರೆ. "ಒಮ್ಮೆ ನಾನು, ವಿಜಯ್ ಸರ್ ಚಿತ್ರೀಕರಣದಲ್ಲಿ ಇದ್ದೆವು. ಈ ವೇಳೆ 'ಜನ ನಾಯಗನ್' ನಿಮ್ಮ ಕೊನೆ ಸಿನಿಮಾನಾ? ಎಂದು ಕೇಳಿದ್ದೆ. ಅದಕ್ಕೆ ಉತ್ತರಿಸಿದ್ದ ವಿಜಯ್ ಸರ್ 'ಅದು 2026 ಚುನಾವಣೆ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ ಎಂದಿದ್ದರು' ಹಾಗಾಗಿ ಮುಂದೆ ನೋಡೋಣ" ಎಂದು ಆಕೆ ಹೇಳಿದ್ದಾರೆ.
'ಜನ ನಾಯಗನ್' ಚಿತ್ರದ ಕೊನೆ ದಿನದ ಚಿತ್ರೀಕರಣದ ವೇಳೆ ಎಲ್ಲರೂ ಬಹಳ ಭಾವುಕರಾಗಿದ್ದೆವು. ವಿಜಯ್ ಕೂಡ ತುಂಬಾ ಭಾವುಕರಾಗಿಬಿಟ್ಟರು. ನಮ್ಮೊಟ್ಟಿಗೆ ಫೋಟೊಗೆ ಕೂಡ ಪೋಸ್ ನೀಡಲಿಲ್ಲ ಎಂದು ಮಲಯಾಳಂ ನಟಿ ಮಮಿತಾ ಬೈಜು ಹೇಳಿದ್ದಾರೆ. ಚಿತ್ರದಲ್ಲಿ ವಿಜಯ್ ಸಹೋದರಿ ಪಾತ್ರದಲ್ಲಿ ಆಕೆ ನಟಿಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಚಿರಂಜೀವಿ ಸೇರಿದಂತೆ ಕೆಲ ತಾರೆಯರು ರಾಜಕೀಯರಂಗದಲ್ಲಿ ಸೋಲುಂಡ ಬಳಿಕ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಾರೆ ವಿಜಯ್ ಮತ್ತೆ ನಟಿಸುವ ಸಾಧ್ಯತೆಯಿದೆ ಎಂದು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.


Click it and Unblock the Notifications











