ರಜನಿಕಾಂತ್ ಅವರೇ ಸೂಪರ್ಸ್ಟಾರ್; ಒಂದೇ ಏಟಲ್ಲಿ ಎರಡು ಹಕ್ಕಿ ಹೊಡೆದರೇ ದಳಪತಿ ವಿಜಯ್?
ಸೂಪರ್ಸ್ಟಾರ್ ರಜನಿಕಾಂತ್ ಸಿನಿಮಾ 'ವೆಟ್ಟೈಯಾನ್' ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಅದೇ ಇನ್ನೊಂದು ಕಡೆ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಬೇಗ ಗುಣ ಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ಇವರೊಂದಿಗೆ ತಮಿಳುನಾಡಿನ ಮತ್ತೊಂದು ನಟ ಹಾಗೂ ರಾಜಕಾರಣಿ 'ತಮಿಳುಗ ವೆಟ್ರಿ ಕಳಗಂ' ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಕೂಡ ರಜನಿ ಗುಣಮುಖರಾಗಲಿ ಎಂದು ಹಾರೈಸಿದ್ದರು. ಇದು ಸೂಪರ್ಸ್ಟಾರ್ ರಜನಿಕಾಂತ್ ಹಾಗೂ ವಿಜಯ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಅದರಲ್ಲೂ ದಳಪತಿ ವಿಜಯ್ ಫ್ಯಾನ್ಸ್ಗೆ ಶಾಕ್ ಆಗಿದೆ.

ತಮಿಳುನಾಡಿನ ಇಬ್ಬರು ದಿಗ್ಗಜರ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ರಜನಿಕಾಂತ್ ಹಾಗೂ ದಳಪತಿ ವಿಜಯ್ ಇಬ್ಬರಲ್ಲಿ ಯಾರು ಸೂಪರ್ಸ್ಟಾರ್ ಅಂತ ಅಭಿಮಾನಿಗಳು ಕಿತ್ತಾಡುವುದಕ್ಕೆ ಶುರು ಮಾಡಿದ್ದರು. ಇಷ್ಟೇ ಅಲ್ಲದೆ ಇಬ್ಬರ ಸಿನಿಮಾಗಳು ರಿಲೀಸ್ ಆದಾಗಲೂ ರಜನಿ ಹಾಗೂ ವಿಜಯ್ ಫ್ಯಾನ್ಸ್ ಕಿತ್ತಾಟ ತಾರಕಕ್ಕೆ ಏರುತ್ತಿತ್ತು. ಆದ್ರೀಗ ರಜನಿ ಆಸ್ಪತ್ರೆಗೆ ದಾಖಲಾದ ಬಳಿಕ ವಿಜಯ್ ಮಾಡಿದ ಪೋಸ್ಟ್ ಸಂಚಲನ ಸೃಷ್ಟಿಸಿತ್ತು.
ಕಳೆದ ಕೆಲವು ದಿನಗಳಿಂದ ದಳಪತಿ ವಿಜಯ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆದ್ದರು. ಅದಕ್ಕೆ ಪ್ರತ್ಯುತ್ತರವಾಗಿ ರಜನಿ ಕೂಡ ಮತ್ತೊಂದು ಸಿನಿಮಾದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಕೊಡುತ್ತಿದ್ದರು. ಹೀಗಾಗಿ ಕಲೆಕ್ಷನ್ ವಿಚಾರದಲ್ಲಿ, ಸಂಭಾವನೆ ಪಡೆಯುವ ವಿಷಯದಲ್ಲಿ ರಜನಿ ಹಾಗೂ ವಿಜಯ್ ನಡುವೆ ಪೈಪೋಟಿ ನಡೆಯುತ್ತಲೇ ಇರುತ್ತೆ.
ಇತ್ತೀಚೆಗೆ ಸಿನಿಮಾ ಕೆಲಕ್ಷನ್ ವಿಚಾರದಲ್ಲೂ ರಜನಿಕಾಂತ್ ಹಾಗೂ ದಳಪತಿ ವಿಜಯ್ ಅಭಿಮಾನಿಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಟರನ್ನು ವಹಿಸಿಕೊಂಡು ಕಿತ್ತಾಡಿಕೊಂಡಿದ್ದೂ ಇದೆ. ಇನ್ನೊಂದು ಕಡೆ ರಜನಿಕಾಂತ್ 'ಜೈಲರ್' ವೇದಿಕೆ ಮೇಲೆ ಟಾಂಗ್ ಕೊಟ್ಟಿದ್ದರು. ಅದಕ್ಕೆ ದಳಪತಿ ವಿಜಯ್ ತಿರುಗೇಟು ಕೊಡುತ್ತಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಕೂಡ ಹಾಗೇ ಏಟು- ತಿರುಗೇಟು ಕೊಟ್ಟುಕೊಳ್ಳುತ್ತಿದ್ದರು.

ರಜನಿಕಾಂತ್ ಹಾಗೂ ದಳಪತಿ ವಿಜಯ್ ಇಬ್ಬರೂ ಪರಸ್ಪರ ಮುಖಾ- ಮುಖಿ ಆಗಿದ್ದು ಕಡಿಮೆ. ಜೊತೆಗೆ ಇಬ್ಬರೂ ಹುಟ್ಟುಹಬ್ಬಗಳಿಗೆ ವಿಶ್ ಮಾಡಿದ್ದೂ ವಿರಳ. ರಜನಿಕಾಂತ್ ಹುಟ್ಟುಹಬ್ಬಕ್ಕೆ ದಳಪತಿ ವಿಜಯ್ ಶುಭಕೋರಿರಲಿಲ್ಲ. ಅದೇ ವಿಜಯ್ ಪೊಲಿಟಿಕಲ್ ಪಾರ್ಟಿ ಅನೌನ್ಸ್ ಮಾಡಿದಾಗಲೂ ರಜನಿ ವಿಶ್ ಮಾಡಿರಲಿಲ್ಲ. ಆದ್ರೀಗ ದಿಢೀರನೇ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಜನಿಯನ್ನು ದಳಪತಿ ವಿಜಯ್ ಸೂಪರ್ಸ್ಟಾರ್ ಎಂದು ಕರೆದಿದ್ದಾರೆ. ಇದನ್ನು ನೋಡಿ ವಿಜಯ್ ಫ್ಯಾನ್ಸ್ ಗೊಂದಲಕ್ಕೆ ಬಿದ್ದಿದ್ದಾರೆ.
'ತಮಿಳುಗ ವೆಟ್ರಿ ಕಳಗಂ' ಅಧ್ಯಕ್ಷ ವಿಜಯ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ರಜನಿಕಾಂತ್ ಕುರಿತು ಪೋಸ್ಟ್ ಮಾಡಿದ್ದರು. ಅಷ್ಟಕ್ಕೂ ವಿಜಯ್ ಪೋಸ್ಟ್ನಲ್ಲಿ ಏನಿದೆ ಅಂತ ನೋಡುವುದಾದರೆ, "ಸೂಪರ್ಸ್ಟಾರ್ ರಜನಿಕಾಂತ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳಲಿ. ಶೀಘ್ರದಲ್ಲಿಯೇ ಸಂಪೂರ್ಣ ಗುಣಮುಖರಾಗಿ ಮನೆಗೆ ಹಿಂತಿರುಗಲಿ ಎಂದು ಬೇಡಿಕೊಳ್ಳುತ್ತೇನೆ" ಎಂದು ದಳಪತಿ ವಿಜಯ್ ಹೇಳಿದ್ದರು.
ಇಲ್ಲಿ ವಿಜಯ್ ಅವರೇ ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಎಂದು ಉಲ್ಲೇಖಿಸಿದ್ದರು. ಇದು ಅವರ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದೆ. ಈ ಮೂಲಕ ವಿಜಯ್ ಒಂದ್ಕಡೆ ರಜನಿಗೆ ವಿಶ್ ಮಾಡಿದ ಹಾಗೂ ಆಯ್ತು. ಹಾಗೇ ರಾಜಕೀಯವಾಗಿ ಬಳಸಿಕೊಂಡಿದ್ದೂ ಆಯ್ತು ಎಂದು ಹೇಳಿದ್ದಾರೆ.


Click it and Unblock the Notifications











