ತೆರೆಹಿಂದೆ ಇದ್ದ ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಈಗ ತೆರೆಮೇಲೆ
ಸ್ವಂತ ಪಕ್ಷ ಕಟ್ಟಿ ಅಧಿಕಾರಕ್ಕೇರಿದ ತಮಿಳು ನಟ ವಿಜಯ್ ತಮ್ಮ ವೈಯಕ್ತಿಕ ಜೀವನದ ವಿಚಾರಗಳ ಕಾರಣಕ್ಕೂ ಪದೇ ಪದೆ ಸುದ್ದಿ ಆಗುತ್ತಿದ್ದಾರೆ. ಪತ್ನಿ ಸಂಗೀತ ಡಿವೋರ್ಸ್ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಮತ್ತೊಂದು ಕಡೆ ವಿಜಯ್ ಹಾಗೂ ತ್ರಿಷಾ ಸ್ನೇಹ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಕ್ಕಳಿಬ್ಬರೂ ಅಮ್ಮನ ಪರ ನಿಂತಿದ್ದಾರೆ.
ವಿಜಯ್ ಪುತ್ರ ಜೇಸನ್ ಸಂಜಯ್ ಈಗಾಗಲೇ ಚಿತ್ರರಂಗ ಪ್ರವೇಶಿಸಿದ್ದಾರೆ. ಬಹಳ ದಿನಗಳಿಂದ ದಳಪತಿ ಪುತ್ರ ಸಿನಿಎಂಟ್ರಿ ಬಗ್ಗೆ ಚರ್ಚೆ ನಡೀತಿತ್ತು. ನಿರೀಕ್ಷೆಯಂತೆ ಜೇಸನ್ ಚಿತ್ರರಂಗಕ್ಕೆ ಬಂದರು. ಆದರೆ ಹೀರೊ ಆಗಿ ಅಲ್ಲ, ಬದಲಿಗೆ ನಿರ್ದೇಶಕನಾಗಿ. ಈಗಾಗಲೇ ಜೇಸನ್ ನಿರ್ದೇಶನದ ಚೊಚ್ಚಲ ಚಿತ್ರ 'ಸಿಗ್ಮಾ' ಬಿಡುಗಡೆಗೆ ಸಜ್ಜಾಗಿದೆ. ಸಂದೀಪ್ ಕಿಶನ್ ಚಿತ್ರ ನಾಯಕನಾಗಿ ನಟಿಸಿದ್ದಾರೆ. ಸದ್ಯ ಚಿತ್ರದ ಪ್ರಮೋಷನಲ್ ಸಾಂಗ್ ರಿಲೀಸ್ ಆಗಿದೆ.

ಸಿನಿಮಾದದಲ್ಲಿ ಜೇಸನ್ ನಟಿಸದೇ ಇದ್ದರೂ ಈ ರ್ಯಾಪ್ ಸಾಂಗ್ನಲ್ಲಿ ಡ್ಯಾನ್ಸ್ ಮಾಡಿದ್ದಾರೆ. 'ಸಿಗ್ಮಾ ಸ್ಟೈಲ್' ಎಂದು ಶುರುವಾಗುವ ಬಿಂದಾಸ್ ನಂಬರ್ಗೆ ಸ್ಟೆಪ್ಸ್ ಹಾಕಿದ್ದಾರೆ. ಥಮನ್ ಎಸ್ ಟ್ಯೂನ್ ಹಾಕಿ ಸ್ಮೈಲ್ ಟುಪಾಕೀಸ್, ಮೆಕ್ ರೂಡ್ ಜೊತೆ ದನಿಗೂಡಿಸಿದ್ದಾರೆ. ನಟಿ ಫರಿಯಾ ಅಬ್ದುಲ್ಲಾ ಜೊತೆ ರಾಜುಸುಂದರಂ ಮಾಸ್ಟರ್, ಸಂದೀಪ್ ಕಿಶನ್ ಕೂಡ ಬಿಂದಾಸ್ ಆಗಿ ಕುಣಿದಿದ್ದಾರೆ. ಜುಲೈ 31ರಂದು 'ಸಿಗ್ಮಾ' ಸಿನಿಮಾ ತೆರೆಗೆ ಬರಲಿದೆ.
ಈ ಸಾಂಗ್ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಾರಾ? ಅಥವಾ ಸಿನಿಮಾದಲ್ಲಿ ಇರುತ್ತಾ ಕಾದುನೋಡಬೇಕಿದೆ. 'ಸಿಗ್ಮಾ' ಚಿತ್ರದಲ್ಲಿ ಸಂದೀಪ್ ಕಿಶನ್ ಜೊತೆಗೆ ಸಂಪತ್ ರಾಜ್, ಶಿವ ಪಂಡಿತ್, ಅನ್ಬು ಥಾಸನ್, ಯೋಗ್ ಜಪೀ, ಮಗಲಕ್ಷ್ಮಿ, ಶೀಲಾ ರಾಜ್ಕುಮಾರ್, ಕಮಲೇಶ್, ಕಿರಣ್ ಕೊಂಡ ಸೇರಿ ದೊಡ್ಡ ತಾರಾಗಣವಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಫಿಲ್ಮ್ ಮೇಕಿಂಗ್ ಹಾಗೂ ಎಡಿಟಿಂಗ್ ಕೋರ್ಸ್ ಮುಗಿಸಿ ಜೇಸನ್ ಇದೀಗ ಸಿನಿಮಾ ನಿರ್ದೇಶನಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹೀರೊ ಆಗಿ ದರ್ಶನ ಕೊಟ್ಟರೂ ಅಚ್ಚರಿಪಡಬೇಕಿಲ್ಲ. ವಿಜಯ್ ಮಗನ ಮೊದಲ ಸಿನಿಮಾ ಎನ್ನುವ ಕಾರಣಕ್ಕೆ 'ಸಿಗ್ಮಾ' ಸಿನಿಮಾ ಕುತೂಹಲ ಮೂಡಿಸಿದೆ. ಬಹಳ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಆಗ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ.
ಚೆನ್ನೈನ ಅಮೆರಿಕನ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಜೇಸನ್ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಟೊರೆಂಟೋ ಫಿಲ್ಮ್ ಸ್ಕೂಲ್ನಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಿದ್ದರು. 'ಸಿಗ್ಮಾ ಸ್ಟೈಲ್' ಪ್ರಮೋಷನಲ್ ಸಾಂಗ್ನಲ್ಲಿ ಜೇಸನ್ ತಂದೆ ವಿಜಯ್ ಅವರನ್ನು ನೆನಪಿಸುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ವಿಜಯ್ ಸಿನಿಮಾಗಳಿಂದ ವಿರಾಮ ಪಡೆದು ರಾಜಕೀಯರಂಗ ಪ್ರವೇಶಿಸಿದ್ದಾರೆ. ದಳಪತಿ ನಟನೆಯ ಕೊನೆಯ ಸಿನಿಮಾ 'ಜನನಾಯಗನ್' ಬಿಡುಗಡೆ ಪದೇ ಪದೆ ತಡವಾಗುತ್ತಿದೆ. ಸಂಕ್ರಾಂತಿಗೆ ಸಿನಿಮಾ ತೆರೆಗೆ ಬರಬೇಕಿತ್ತು. ಸೆನ್ಸಾರ್ ಸಮಸ್ಯೆಯಿಂದ ಅದು ಸಾಧ್ಯವಾಗಲೇ ಇಲ್ಲ. ತಮ್ಮ ಪೊಲಿಟಿಕಲ್ ಎಂಟ್ರಿಗೆ ಈ ಚಿತ್ರವನ್ನು ವೇದಿಕೆ ಮಾಡಿಕೊಳ್ಳಲು ವಿಜಯ್ ಬಯಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಸಿನಿಮಾ ಲೀಕ್ ಆಗಿ ವಿವಾದ ಸೃಷ್ಟಿ ಆಗಿತ್ತು.
ವಿಜಯ್ ಸಿಎಂ ಆಗಿ ಆಯ್ಕೆಯಾದ ಬಳಿಕ 'ಜನನಾಯಗನ್' ಸಿನಿಮಾ ರಿಲೀಸ್ ಹಾದಿ ಸುಗಮವಾಗುತ್ತದೆ ಎಂದೇ ಕೆಲವರು ಭಾವಿಸಿದ್ದರು. ಆದರೆ ಸದ್ಯಕ್ಕೆ ಅಂತಹ ಲಕ್ಷಣಗಳು ಕಾಣುತ್ತಿಲ್ಲ. ಅಭಿಮಾನಿಗಳು ತೆರೆಮೇಲೆ ಸಿನಿಮಾ ನೋಡಲು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆ ಆಗುವ ನಿರೀಕ್ಷೆಯಿದೆ.


Click it and Unblock the Notifications