'ಜನನಾಯಗನ್' ಪೈರಸಿ ಬಗ್ಗೆ ಕೋರ್ಟ್ ಮುಂದೆ ಪೊಲೀಸರ ಶಾಕಿಂಗ್ ಮಾಹಿತಿ; ಸಿನಿಮಾ ತೆರೆಗೆ ಬಂದ್ರೆ ಗೆಲ್ಲುತ್ತಾ?
ತಮಿಳುನಾಡು ಸಿಎಂ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಸಂಕ್ರಾಂತಿಗೆ ಬರಬೇಕಿದ್ದ ಸಿನಿಮಾ 6 ತಿಂಗಳು ಕಳೆದ್ರು ಬಂದಿಲ್ಲ. ಇನ್ನೆರಡು ದಿನಗಳಲ್ಲಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗಲಿದೆ. ಇನ್ನೆರಡು ವಾರಗಳಲ್ಲಿ ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಚಿತ್ರದ ಪೈರಸಿ ಬಗ್ಗೆ ತಮಿಳುನಾಡು ಪೊಲೀಸರು ಶಾಕಿಂಗ್ ಮಾಹಿತಿ ನೀಡಿದ್ದಾರೆ.
ತಮಿಳುನಾಡು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ 'ಜನನಾಯಗನ್' ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿತ್ತು. ಸಂಪೂರ್ಣ ಸಿನಿಮಾ ಲೀಕ್ ಆಗಿ ಚಿತ್ರತಂಡಕ್ಕೆ ಹಿನ್ನಡೆ ಆಗಿತ್ತು. ರಾಜಕೀಯರಂಗ ಪ್ರವೇಶಕ್ಕೆ ಮುಂದಾಗಿದ್ದ ನಟ ವಿಜಯ್ ಈ ಚಿತ್ರವನ್ನು ಅದಕ್ಕೆ ವೇದಿಕೆ ಮಾಡಿಕೊಳ್ಳಲು ಬಯಸಿದ್ದರು. ಆದರೆ ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಆಗಿರಲಿಲ್ಲ. ಅಷ್ಟರಲ್ಲೇ ಚುನಾವಣೆ ನೀತಿ ಸಂಹಿತೆ ಜಾರಿ ಆಗಿತ್ತು. ಸಿನಿಮಾ ಬಿಡುಗಡೆ ಕಷ್ಟ ಎಂದುಕೊಂಡಿದ್ದ ಸಮಯದಲ್ಲಿ ಲೀಕ್ ಆಗಿಬಿಟ್ಟಿತ್ತು.

'ಜನನಾಯಗನ್' ಸಿನಿಮಾ ಪೈರಸಿ ಮಾಡಿದ್ಯಾರು? ಹೇಗೆ? ಎನ್ನುವ ಬಗ್ಗೆ ತಮಿಳುನಾಡು ಸೈಬರ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣದ ಸಂಬಂಧ ಕೆಲ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಪೊಲೀಸರು ಶಾಕಿಂಗ್ ಮಾಹಿತಿಯನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ. ಸಿನಿಮಾ ಪೈರಸಿ ಆಗಿ ಆನ್ಲೈನ್ನಲ್ಲಿ 1.2 ಕೋಟಿ ಜನ ವೀಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಇಷ್ಟು ದೊಡ್ಡಮಟ್ಟದಲ್ಲಿ ಜನ ಪೈರಸಿ ಕಾಪಿ ನೋಡಿದ ಬಳಿಕ ಸಿನಿಮಾ ತೆರೆಗೆ ಬಂದ್ರೆ ಬಂದು ನೋಡ್ತಾರಾ ಎನ್ನುವ ಚರ್ಚೆ ಶುರುವಾಗಿದೆ.
ಪ್ರಕರಣ ಸಂಬಂಧ 21 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ವೇಳೆ ಪೊಲೀಸರು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ನ್ಯಾಯಮೂರ್ತಿ ಸಿ.ಕುಮಾರಪ್ಪನ್ ಅವರಿಗೆ ಸಿನಿಮಾ ಪೈರಸಿ ಪರಿಣಾಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಒಂದು ಪೈರಸಿ ವೆಬ್ಸೈಟ್ನಲ್ಲೇ 1.2 ಕೋಟಿ ಜನ ಸಿನಿಮಾ ನೋಡಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಾಸಿಕ್ಯೂಷನ್ ನೀಡಿದ ವಾದಗಳನ್ನು ದಾಖಲಿಸಿಕೊಂಡ ಬಳಿಕ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದ್ದಾರೆ.

ತಮಿಳು ಚಿತ್ರರಂಗದ ಬಹುಬೇಡಿಕೆಯ ನಟ ವಿಜಯ್. ಬರೀ ತಮಿಳುನಾಡಿನಲ್ಲೇ ವಿಜಯ್ ಸಿನಿಮಾಗಳು 200 ಕೋಟಿ, 300 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತವೆ. ಬೆಂಗಳೂರಿನಲ್ಲಿ ವಿಜಯ್ ಸಿನಿಮಾ ಟಿಕೆಟ್ 1000 ರೂ.ಗೆ ಮಾರಾಟವಾಗುತ್ತದೆ. ಇಷ್ಟು ಕ್ರೇಜ್ ಇರುವ ವಿಜಯ್ ಸಿನಿಮಾ ತೆರೆಗೆ ಬಂದ್ರೆ ಅಭಿಮಾನಿಗಳು ನೋಡ್ತಾರೆ. ಸಿನಿಮಾ ಪೈರಸಿ ಆಗಿದ್ದರೂ ಚಿತ್ರಮಂದಿರಕ್ಕೆ ಬಂದು ಎಂಜಾಯ್ ಮಾಡ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಇದು. ಒಂದಷ್ಟು ಬದಲಾವಣೆ ಜೊತೆಗೆ ವಿನೋದ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಭ್ರಷ್ಟಾ ರಾಜಕಾರಣಿಗಳ ವಿರುದ್ಧ ಸಮರ ಸಾರುವ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ವಿಜಯ್ ಅಬ್ಬರಿಸಿದ್ದಾರೆ. ತಮ್ಮ ಪೊಲಿಟಿಕಲ್ ಎಂಟ್ರಿಗೆ 'ಜನನಾಯಗನ್' ಸಿನಿಮಾ ಬಳಸಿಕೊಳ್ಳಲು ವಿಜಯ್ ಬಯಸಿದ್ದರು. ಅದೇ ಕಾರಣಕ್ಕೆ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ ಸಿನಿಮಾ ಬಿಡುಗಡೆ ಮಾಡಿ ಪಕ್ಷ ಸಂಘಟನೆ ಮಾಡಲ ಮುಂದಾಗಿದ್ದರು. ಸೆನ್ಸಾರ್ ಸಮಸ್ಯೆಯಿಂದ ಅವರ ಲೆಕ್ಕಾಚಾರ ತಲೆ ಕೆಳಗಾಗಿತ್ತು. ಬಳಿಕ ಸಿನಿಮಾ ಆನ್ಲೈನ್ನಲ್ಲಿ ಲೀಕ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ವಿಜಯ್ ಸಿಎಂ ಆಗಿ ಆಯ್ಕೆಯಾದ ಬಳಿಕ ಸೆನ್ಸಾರ್ ಸರ್ಟಿಫಿಕೇಟ್ ಸಿಗುವುದು ಸುಲಭ ಎಂದೇ ಭಾವಿಸಲಾಗಿತ್ತು. 2 ತಿಂಗಳು ಕಳೆದರೂ ಈ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.


Click it and Unblock the Notifications