ಇನ್ನು ಎರಡು ತಿಂಗಳು 'ಜನ ನಾಯಗನ್' ಬಿಡುಗಡೆ ಆಗಲ್ಲ, ವಿತರಕರಿಂದ ಅಧಿಕೃತ ಮಾಹಿತಿ
ಸಂಕ್ರಾಂತಿಗೆ ಬಿಡುಗಡೆ ಆಗಬೇಕಿದ್ದ ತಮಿಳು ಸಿನಿಮಾ 'ಜನ ನಾಯಗನ್' ತಿಂಗಳು ಕಳೆದರೂ ಚಿತ್ರಮಂದಿರಗಳ ಕಡೆ ಬರಲಿಲ್ಲ. ಸೆನ್ಸಾರ್ ಸಮಸ್ಯೆಯಿಂದ ಚಿತ್ರಕ್ಕೆ ಪದೇ ಪದೆ ಹಿನ್ನಡೆ ಆಗುತ್ತಿದೆ. ದಳಪತಿ ವಿಜಯ್ ನಟನೆಯ ಚಿತ್ರಕ್ಕೆ ವಿನೋದ್ ಆಕ್ಷನ್ ಕಟ್ ಹೇಳಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಸಿನಿಮಾ ರಿಲೀಸ್ ತಡವಾಗುತ್ತಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಟಿವಿಕೆ ಪಕ್ಷ ಸ್ಥಾಪಿಸಿ ನಟ ವಿಜಯ್ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ. ಡಿಎಂಕೆ ಪಕ್ಷದ ವಿರುದ್ಧ ಗೆದ್ದು ತಮಿಳುನಾಡು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಅದಕ್ಕೆ ಡಿಎಂಕೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡ್ತಿದೆ. ವಿಜಯ್ 'ಜನ ನಾಯಗನ್' ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವೇದಿಕೆ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ಬಿಡುಗಡೆಗೆ ಸಮಸ್ಯೆ ಎದುರಾಗುತ್ತಿದೆ ಎನ್ನುವ ಆರೋಪವೂ ಇದೆ. ಸುಖಾಸುಮ್ಮನೆ ಸಿನಿಮಾ ಬಿಡುಗಡೆ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ. ವಿಜಯ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಹಿನ್ನಲೆಯಲ್ಲಿ ನೀತಿಸಂಹಿತೆ ಪ್ರಕಾರ 'ಜನ ನಾಯಗನ್' ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗುವ ಸಾಧ್ಯತೆ ದಟ್ಟವಾಗಿದೆ. ಇದೆಲ್ಲದರ ನಡುವೆ ಚಿತ್ರದ ವಿತರಕ ಏಪ್ರಿಲ್ 30ರವರೆಗೆ 'ಜನ ನಾಯಗನ್' ಸಿನಿಮಾ ಬಿಡುಗಡೆ ಆಗುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಸಹಜವಾಗಿಯೇ ವಿಜಯ್ ಅಭಿಮಾನಿಗಳಿಗೆ ಬೇಸರ ತಂದಿದೆ.
ಸದ್ಯ ರಾಜಕೀಯರಂಗ ಪ್ರವೇಶಿಸಿರುವ ವಿಜಯ್ ಮುಂದಿನ ದಿನಗಳಲ್ಲಿ ಯಾವುದೇ ಚಿತ್ರದಲ್ಲಿ ನಟಿಸಲ್ಲ ಎನ್ನಲಾಗ್ತಿದೆ. 'ಜನ ನಾಯಗನ್' ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿದೆ. ಅದೇ ಕಾರಣಕ್ಕೆ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಈಗ ಎಲ್ಲಾ ನಿರೀಕ್ಷೆ ಸುಳ್ಳಾಗಿದೆ. ಜನವರಿ 10ರಂದು ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಸೆನ್ಸಾರ್ ಸಮಸ್ಯೆ ಉಂಟಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಹಾಗಾಗಿ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡುವಂತಾಗಿತ್ತು.
'ಜನ ನಾಯಗನ್' ಸಿನಿಮಾ ಬಿಡುಗಡೆಗೆ ಎಲ್ಲಾ ಸಿದ್ಧತೆ ನಡೆದಿತ್ತು. ವಿತರಕರು ಭಾರೀ ಮೊತ್ತಕ್ಕೆ ರೈಟ್ಸ್ ಖರೀದಿಸಿದ್ದರು. ಕರ್ನಾಕಟದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿ ದುಬಾರಿ ಬೆಲೆಗೆ ಟಿಕೆಟ್ ಬುಕ್ಕಿಂಗ್ ನಡೆದಿತ್ತು. 1000 ರೂ, 1500 ರೂ, ಕೊಟ್ಟು ಅಭಿಮಾನಿಗಳು ಸಿನಿಮಾ ಟಿಕೆಟ್ ಬುಕ್ ಮಾಡಿದ್ದರು. ವಿದೇಶಗಳಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದ ಕೆನಡಾ ವಿತರಣೆ ಹಕ್ಕು ಖರೀದಿಸಿರುವ 'ಯಾರ್ಕ್ ಸಿನಿಮಾಸ್' ಸಂಸ್ಥೆ ಇದೀಗ ಪ್ರಕಟಣೆ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ನಿರಾಸೆ ಮಾಡಿದೆ.
"ಜನ ನಾಯಗನ್ ಚಿತ್ರ ಏಪ್ರಿಲ್ 30ಕ್ಕಿಂತ ಮುನ್ನ ರಿಲೀಸ್ ಆಗಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ನೀವು ಖರೀದಿಸಿದ್ದ ಟಿಕೆಟ್ಗಳಿಗೆ ಇನ್ನೂ ಹಣ ಮರುಪಾವತಿ ಆಗದೇ ಇದ್ದಲ್ಲಿ ಕೂಡಲೇ ಚಿತ್ರಮಂದಿರಗಳನ್ನು ಸಂಪರ್ಕಿಸಿ" ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಕೆನಡಾ ವಿತರಣೆ ಸಂಸ್ಥೆಯಿಂದ ಹೇಳಿಕೆ ಬಿಡುಗಡೆ ಆಗಿದೆ. ಇದನ್ನು ಚಿತ್ರತಂಡದ ಹೇಳಿಕೆ ಎಂದು ಒಪ್ಪಿಕೊಳ್ಳಬೇಕಾ? ಬೇಡವೇ? ಎಂದು ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ.
ಶತಾಯ ಗತಾತ ಆದಷ್ಟು ಬೇಗ ಸಿನಿಮಾ ಬಿಡುಗಡೆ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಪ್ರಯತ್ನಿಸುತ್ತಿದೆ. ನಟ ವಿಜಯ್ ಕೂಡ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ಕಾನೂನು ಹೋರಾಟದಲ್ಲಿ ಇತ್ಯರ್ಥವಾಗದ ಕಾರಣ ಮುಂದೇನು ಎಂದು ನಿರ್ಧರಿಸಲು ಕಷ್ಟವಾಗಿದೆ. ಸೆನ್ಸಾರ್ ಮಂಡಳಿ ಹೇಳಿದ ದೃಶ್ಯಗಳಿಗೆ ಕತ್ತರಿ ಹಾಕಲು ಚಿತ್ರತಂಡ ಒಪ್ಪಿದೆ. ಆದರೂ ಸಿನಿಮಾ ಬಿಡುಗಡೆ ವಿಚಾರ ಅನಿಶ್ಚಿತತೆಯಿಂದ ಕೂಡಿದೆ.
'ಯಾರ್ಕ್ ಸಿನಿಮಾಸ್' ಸಂಸ್ಥೆ ಪ್ರಕಟನೆಯಿಂದ ಈಗ 'ಜನ ನಾಯಗನ್' ಸಿನಿಮಾ ಬಿಡುಗಡೆ ದಿನಾಂಕದ ವಿಚಾರದಲ್ಲಿ ಗೊಂದಲ ಮೂಡಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸ್ಪಷ್ಟನೆ ಕೊಡಬೇಕಿದೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ 'ಜನ ನಾಯಗನ್'. ಪೂಜಾ ಹೆಗ್ಡೆ, ಪ್ರಿಯಾಮಣಿ, ಪ್ರಕಾಶ್ ರಾಜ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.


Click it and Unblock the Notifications











