ವಿಜಯ್, ತ್ರಿಶಾ, ರಕ್ಷಿತ್ ಶೆಟ್ಟಿ, ಅರ್ಜುನ್ ಸರ್ಜಾ; ಹೀಗಿರಲಿದೆ 'ದಳಪತಿ 67' ಚಿತ್ರದ ತಾರಾಗಣ!
ಸದ್ಯ ವಾರಿಸು ಚಿತ್ರದ ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿ ಈ ಬಾರಿಯ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿರುವ ವಿಜಯ್ ನಟನೆಯ ಮುಂದಿನ ಚಿತ್ರದ ಅಪ್ಡೇಟ್ಗಳು ಶುರುವಾಗಿವೆ. ಇನ್ನು ವಿಜಯ್ ನಟನೆಯ ಕಳೆದೆರಡು ಚಿತ್ರಗಳು ಬಾಕ್ಸ್ ಆಫೀಸ್ ವಿಚಾರವಾಗಿ ಸದ್ದು ಮಾಡಿವೆಯೇ ಹೊರತು ಕಂಟೆಂಟ್ ವಿಚಾರವಾಗಿ ಹೆಚ್ಚೇನೂ ಸದ್ದು ಮಾಡಿಲ್ಲ. ಹೌದು, ಕಳೆದ ವರ್ಷ ತೆರೆಕಂಡ ವಿಜಯ್ ಹಾಗೂ ಪೂಜಾ ಹೆಗ್ಡೆ ನಟನೆಯ ಬೀಸ್ಟ್ ಕಳಪೆ ಎಂಬ ವಿಮರ್ಶೆಯನ್ನು ಪಡೆದುಕೊಂಡಿತು.
ಇನ್ನು ಈ ವರ್ಷ ತೆರೆಕಂಡು ಒಳ್ಳೆಯ ಗಳಿಕೆ ಮಾಡಿ ಬಾಕ್ಸ್ ಆಫೀಸ್ನಲ್ಲಿ ಗೆದ್ದಿರುವ ವಾರಿಸು ಚಿತ್ರ ಕಥೆಯೂ ಇದಕ್ಕಿಂತ ಹೆಚ್ಚೇನೂ ಭಿನ್ನವಾಗಿಲ್ಲ. ವಿಜಯ್ ಅಭಿಮಾನಿಗಳನ್ನು ಹೊರತುಪಡಿಸಿ ಸಿನಿ ರಸಿಕರಿಗೆ ಈ ಚಿತ್ರದ ಕಂಟೆಂಟ್ ಇಷ್ಟವಾಗಿಲ್ಲ. ಹೀಗಾಗಿ ಚಿತ್ರ ಸಾಧಾರಣ ಎಂಬ ವಿಮರ್ಶೆಯನ್ನು ಪಡೆದುಕೊಂಡಿದೆ. ಹೀಗೆ ಕಂಟೆಂಟ್ನಿಂದಾಗಿ ಸದ್ದು ಮಾಡುವಲ್ಲಿ ಕಳೆದೆರಡು ಚಿತ್ರಗಳಲ್ಲಿಯೂ ವಿಫಲರಾಗಿರುವ ವಿಜಯ್ ತಮ್ಮ ಮುಂದಿನ ಚಿತ್ರದಲ್ಲಿ ಅಬ್ಬರಿಸುವುದು ಖಚಿತ.

ಏಕೆಂದರೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಖೈದಿ, ಮಾಸ್ಟರ್ ಹಾಗೂ ವಿಕ್ರಮ್ ಖ್ಯಾತಿಯ ನಿರ್ದೇಶಕ ಲೋಕೇಶ್ ಕನಕರಾಜ್. ಹೌದು, ತನ್ನ ವಿಭಿನ್ನ ಕಥಾಹಂದರವಿರುವ ಚಿತ್ರಗಳ ಮೂಲಕ ಕ್ರಿಯಾಶೀಲ ನಿರ್ದೇಶಕ ಎನಿಸಿಕೊಂಡಿರುವ ಲೋಕೇಶ್ ಕನಕರಾಜ್ ಮಾಸ್ಟರ್ ಬಳಿಕ ಎರಡನೇ ಬಾರಿಗೆ ವಿಜಯ್ ಜತೆ ಕೈಜೋಡಿಸಲಿದ್ದಾರೆ. ಸಂದರ್ಶನಗಳಲ್ಲಿ ಮಾತನಾಡಿರುವ ಲೋಕೇಶ್ ಕನಕರಾಜ್ ಇನ್ನು ಮುಂದೆ ನಾನು ನಿರ್ದೇಶಿಸಲಿರುವ ಚಿತ್ರಗಳು ಸಂಪೂರ್ಣವಾಗಿ ನನ್ನದೇ ಶೈಲಿಯಲ್ಲಿರುತ್ತವೆ ಎಂದು ಹೇಳಿಕೆ ನೀಡಿದ್ದರು.
ಹೀಗಾಗಿ ವಿಜಯ್ ನಟನೆಯ ಮುಂದಿನ ಚಿತ್ರ ಖಚಿತವಾಗಿ ಒಂದೊಳ್ಳೆ ಕಂಟೆಂಟ್ ಇರಲಿರುವ ಚಿತ್ರ ಎನ್ನಬಹುದು. ಇನ್ನು ಈ ಚಿತ್ರ ತಾರಾಗಣದ ಕಾರಣಕ್ಕೆ ಭಾರೀ ಸುದ್ದಿ ಹಾಗೂ ಚರ್ಚೆಗೆ ಒಳಗಾಗಿದೆ. ಚಿತ್ರದಲ್ಲಿ ನಾಯಕನಾಗಿ ತ್ರಿಶಾ ಕೃಷ್ಣನ್ ನಟಿಸಲಿದ್ದರೆ, ಕೀರ್ತಿ ಸುರೇಶ್ ಸಹ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಈ ಚಿತ್ರದಲ್ಲಿ ಕನ್ನಡದ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಸಹ ನಟಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇವರ ಜತೆಗೆ ಬಾಲಿವುಡ್ನ ನಟ ಸಂಜಯ್ ದತ್, ಖ್ಯಾತ ನಟ ಹಾಗೂ ನಿರ್ದೇಶಕ ಮಿಸ್ಕಿನ್, ಅರ್ಜುನ್ ಸರ್ಜಾ, ಖ್ಯಾತ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಹಾಗೂ ಮನ್ಸೂರ್ ಅಲಿ ಖಾನ್ ಸಹ ಬಣ್ಣ ಹಚ್ಚಲಿದ್ದಾರೆ. ಸದ್ಯ ಈ ಸ್ಟಾರ್ ಕಾಸ್ಟ್ ದಳಪತಿ 67 ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಈ ಚಿತ್ರಕ್ಕೆ ಡ್ರ್ಯಾಗನ್ ಎಂದು ಶೀರ್ಷಿಕೆ ಇಡುವ ಸಾಧ್ಯತೆಗಳಿದೆ.


Click it and Unblock the Notifications











