ಐಶ್ವರ್ಯಾ- ಉಮಾಪತಿ ರಾಮಯ್ಯ ಮದುವೆ ಅಧಿಕೃತ: ಭಾವಿ ಅಳಿಯನ ಸಾಹಸಕ್ಕೆ ಅಂದೇ ಆಕ್ಷನ್ ಕಿಂಗ್ ಫಿದಾ!
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್ ಮದುವೆ ನಿಶ್ಚಯವಾಗಿದೆ. ತಮಿಳು ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಜೊತೆ ಶೀಘ್ರದಲ್ಲೇ 'ಪ್ರೇಮಬರಹ' ಚೆಲುವೆ ಹಸೆಮಣೆ ಏರಲಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ಇತ್ತೀಚೆಗೆ ಗುಸುಗುಸು ಶುರುವಾಗಿತ್ತು. ಇದೀಗ ಈ ವಿಚಾರವನ್ನು ಸ್ವತಃ ತಂಬಿ ರಾಮಯ್ಯ ಖಚಿತಪಡಿಸಿದ್ದಾರೆ. ಆದಷ್ಟು ಬೇಗ ಮದುವೆ ಎಂದಿದ್ದಾರೆ.
ಹಿರಿಯ ನಟ ಶಕ್ತಿ ಪ್ರಸಾದ್ ಪುತ್ರ ಅರ್ಜುನ್ ಸರ್ಜಾ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದರು. ಆರಂಭದಲ್ಲಿ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಅರ್ಜುನ್, ಮುಂದೆ ಕಾಲಿವುಡ್ನಲ್ಲಿ ಸಕ್ಸಸ್ ಕಂಡರು. ನಂತರ ಅಲ್ಲೇ ನೆಲೆಗೊಂಡರು. ನಟಿ ನಿವೇದಿತಾ ಅವರನ್ನು ಪ್ರೀತಿಸಿ ಮದುವೆಯಾದ ಆಕ್ಷನ್ ಕಿಂಗ್ಗೆ ಐಶ್ವರ್ಯಾ ಸೇರಿ ಇಬ್ಬರು ಹೆಣ್ಣು ಮಕ್ಕಳು. ತಂದೆಯ ಹಾದಿಯಲ್ಲೇ ಮಗಳು ಕೂಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 10 ವರ್ಷಗಳ ಹಿಂದೆ ತಮಿಳಿನ 'ಪಟ್ಟಾತುಯಾನೆ' ಚಿತ್ರದಲ್ಲಿ ಐಶ್ವರ್ಯ ಮೊದಲಿಗೆ ನಟಿಸಿದರು.

5 ವರ್ಷಗಳ ಹಿಂದೆ ಅರ್ಜುನ್ ಸರ್ಜಾ ನಿರ್ಮಿಸಿ, ನಿರ್ದೇಶಿಸಿದ 'ಪ್ರೇಮ ಬರಹ' ಚಿತ್ರದಲ್ಲಿ ಐಶ್ವರ್ಯಾ ನಾಯಕಿಯಾಗಿ ನಟಿಸಿದ್ದರು. ಚಂದನ್ ಜೋಡಿಯಾಗಿ ಸಿನಿಮಾದಲ್ಲಿ ಆಕೆ ಮಿಂಚಿದ್ದರು. ಈ ಚಿತ್ರದ ಹಾಡೊಂದರಲ್ಲಿ ಅರ್ಜುನ್, ಧ್ರುವ, ಚಿರು ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿದ್ದರು. ಇದೇ ಸಿನಿಮಾ ತಮಿಳಿಗೂ ಡಬ್ ಆಗಿತ್ತು. ಆ ನಂತರ ಯಾವುದೇ ಸಿನಿಮಾದಲ್ಲಿ ಐಶ್ವರ್ಯ ನಟಿಸಲಿಲ್ಲ. ಇದೀಗ ಆಕೆಯ ಮದುವೆ ಫಿಕ್ಸ್ ಆಗಿದೆ.
ಮದುವೆ ಖಚಿತ ಪಡಿಸಿದ ತಂಬಿ ರಾಮಯ್ಯ
ಮಗನ ಮದುವೆ ಬಗ್ಗೆ 'ದಿ ಹಿಂದೂ' ಪತ್ರಿಕೆಗೆ ಹಾಸ್ಯ ನಟ ತಂಬಿ ರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಹೌದು ಈ ಸುದ್ದಿ ನಿಜ. ಅರ್ಜುನ್ ಸರ್ಜಾ ನಿರೂಪಿಸಿ ಉಮಾಪತಿ ಸ್ಪರ್ಧಿಸಿದ್ದ 'ಸರ್ವೈವರ್' ರಿಯಾಲಿಟಿ ಶೋ ಸಮಯದಿಂದ ಇರು ಆರಂಭವಾಯಿತು. ಶೋನಲ್ಲಿ ಉಮಾಪತಿ ಆಟಿಟ್ಯೂಡ್ ನೋಡಿ ಅರ್ಜುನ್ ಸರ್ ಇಂಪ್ರೆಸ್ ಆಗಿದ್ದರು. ನಾನು ಕೂಡ ಮಗನಿಗಾಗಿ ಒಳ್ಳೆ ಹುಡುಗಿಯ ಹುಡುಕಾಟದಲ್ಲಿದ್ದೆ. ಆ ಸಮಯದಲ್ಲಿ ಈ ವಿಚಾರ ಗೊತ್ತಾಯಿತು"
ಪತ್ನಿ ಈ ವಿಚಾರ ನನಗೆ ಹೇಳಿದಳು
"ನಾನು ಹುಡುಗಿ ಹುಡುಕುತ್ತಿದ್ದಾಗ, ನನ್ನ ಪತ್ನಿ ಇನ್ನುಮುಂದೆ ಹುಡುಕಿ ಹುಡುಕುವುದು ಬೇಡ ಎಂದಳು. ನಾನು ಅವನಿಗೆ ನನ್ನ ಹುಟ್ಟುಹಬ್ಬದವರೆಗೆ(ಜೂನ್ 19) ಸಮಯ ಕೊಟ್ಟಿದ್ದೇನೆ. ಅಷ್ಟರಲ್ಲಿ ಅವನೇ ಹುಡುಗಿಯ ಹೆಸರನ್ನು ಹೇಳುತ್ತಾನೆ ಎಂದಳು. 10 ದಿನಗಳ ಹಿಂದೆ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಬಗ್ಗೆ ಅವನು ನಮ್ಮ ಬಳಿ ಹೇಳಿದ" ಎಂದು ವಿವರಿಸಿದ್ದಾರೆ.
ಜನವರಿಯಲ್ಲಿ ಮದುವೆ ನಡೆಯಲಿದೆ
"ಕೆಲವು ದಿನಗಳ ಹಿಂದೆ, ಅರ್ಜುನ್ ಸರ್ ನಿರ್ಮಾಣದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎರಡೂ ಕುಟುಂಬಗಳು ಭೇಟಿಯಾದೆವು. ನಂತರ ಮದುವೆ ಮಾಡಲು ಚರ್ಚೆಸಿ ಒಪ್ಪಿದೆವು. ನಂತರ ಮತ್ತೊಮ್ಮೆ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಶೀಘ್ರದಲ್ಲೇ ನಾನು ಹಾಗೂ ಅರ್ಜುನ್ ಸರ್ಜಾ ಸರ್ ಮಾತನಾಡಿ ಮದುವೆ ದಿನಾಂಕ ನಿಗದಿಪಡಿಸುತ್ತೇವೆ. ನವೆಂಬರ್ 8ರಂದು ಉಮಾಪತಿ ಹುಟ್ಟುಹಬ್ಬದ ದಿನ ಮದುವೆ ದಿನಾಂಕ ಘೋಷಿಸುತ್ತೇವೆ. ಮದುವೆ ಮುಂದಿನ ವರ್ಷ ಜನವರಿಯಲ್ಲಿ ಅಂದುಕೊಂಡಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.

ಅಂದೇ ಅರ್ಜುನ್ ಸರ್ಜಾ ಫಿದಾ
2 ವರ್ಷಗಳ ಹಿಂದೆ ತಮಿಳಿನ 'ಸರ್ವೈವರ್' ರಿಯಾಲಿಟಿ ಶೋನ ಅರ್ಜುನ್ ಸರ್ಜಾ ನಡೆಸಿಕೊಟ್ಟಿದ್ದರು. ಉಮಾಪತಿ ರಾಮಯ್ಯ ಆ ಶೋನಲ್ಲಿ ಸ್ಪರ್ಧಿಸಿದ್ದರು. 15 ಅಡಿ ಎತ್ತರದ ಗೋಡೆ ಏರುವ ಟಾಸ್ಕ್ನ ಉಮಾಪತಿ ಯಶಸ್ವಿಯಾಗಿ ಮಾಡಿ ಮುಗಿಸಿದ್ದರು. ನಂತರ ಗೋಡೆ ಮೇಲೆ ಕೂತು ಖಡಕ್ ಆಟಿಟ್ಯೂಡ್ ತೋರಿಸಿ ಪೋಸ್ ಕೊಟ್ಟಿದ್ದರು. "ಹೀರೊ ತರ ಆ ಆಟಿಟ್ಯೂಡ್ ಚೆನ್ನಾಗಿತ್ತು" ಎಂದು ಆಕ್ಷನ್ ಕಿಂಗ್ ಮೆಚ್ಚಿಕೊಂಡಿದ್ದರು. ಅಂದೇ ಆತನನ್ನು ನೋಡಿ ಅರ್ಜುನ್ ಸರ್ಜಾ ಫಿದಾ ಆಗಿದ್ದರು ಅನ್ನೋದು ಗೊತ್ತಾಗುತ್ತದೆ. ಇನ್ನು ಉಮಾಪತಿ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಲಿತಿದ್ದು ಇದು ಕೂಡ ಆಕ್ಷನ್ ಕಿಂಗ್ಗೆ ಇಷ್ಟವಾಗಿರುವ ಸಾಧ್ಯತೆಯಿದೆ.


Click it and Unblock the Notifications











