ಜನನಾಯಗನ್ ಬಿಡುಗಡೆಯಾಗದೇ ಇದ್ದರೂ ನಡೆಯಲಿದೆ ದಳಪತಿ ದರ್ಬಾರ್; ಸಂಕ್ರಾಂತಿಗೆ ಥೇರಿ ಅಬ್ಬರ
ಹಬ್ಬ ಹರಿದಿನ ಬಂದರೆ ಸಾಕು, ಬಣ್ಣದ ಪ್ರಪಂಚದಲ್ಲಿ ನಾ ಮುಂದು ತಾ ಮುಂದು ಎನ್ನುವವರೇ ಹೆಚ್ಚು.ರಜೆಯಲ್ಲಿ ಮಜಾ ಮಾಡಲು ಜನ ಸಾಮಾನ್ಯರು ಅಣಿಯಾಗುವ ಸಮಯದಲ್ಲಿ, ಚಿತ್ರರಂಗದಲ್ಲಿ ಅತಿವೃಷ್ಟಿಯಾಗುತ್ತೆ. ಇದು ಕಾಲ .. ಕಾಲಕ್ಕೆ .. ಸಾಬೀತು ಆಗ್ತಾನೇ ಬಂದಿದೆ. ವ್ಯಾಪಾರ-ವ್ಯವಹಾರ ಹಂಚಿ ಹೋಗುತ್ತೆ ಎನ್ನುವ ಸತ್ಯ ಗೊತ್ತಿದ್ದರೂ ಇಲ್ಲಿ ತಮ್ಮ ರೂಪರೇಶೆಯಲ್ಲಿ ಬದಲಾವಣೆ ಮಾಡಿಕೊಳ್ಳುವರ ಸಂಖ್ಯೆ ತೀರಾ ಕಡಿಮೆ.
ಈ ವರ್ಷ ಕೂಡ ಇದರಿಂದ ಹೊರತಾಗಿಲ್ಲ. ವರ್ಷದ ಆರಂಭದಲ್ಲಿಯೇ ಚಿತ್ರರಂಗದಲ್ಲಿ ಸಂಕ್ರಾಂತಿ ಸಿನಿ ಸಮರ ಶುರುವಾಗಿದೆ. ''ದಿ ರಾಜಾ ಸಾಬ್'' ಮತ್ತು ''ಪರಾಶಕ್ತಿ'' ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ನಾಳೆ (ಜನವರಿ 11 ) ಚಿರಂಜೀವಿ ಅಭಿನಯದ ''ಮನಶಂಕರ ವರಪ್ರಸಾದ್ ಗಾರು'' ಬಿಡುಗಡೆಯಾಗುತ್ತಿದೆ. ಅದರ ಬೆನ್ನಲ್ಲೇ ಮಾಸ್ ಮಹಾರಾಜಾ ರವಿತೇಜಾ ಅಭಿನಯದ ಚಿತ್ರ ಕೂಡ ಇದೆ. ನವೀನ್ ಪೋಲಿಶೆಟ್ಟಿ ಅಭಿನಯದ ''ಅನಗನಗ ಒಕ ರಾಜು'' ಕೂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 14ರಂದು ಬಿಡುಗಡೆಯಾಗಲಿದೆ. ಈ ಸಾಲಿಗೆ ಈಗ ''ಥೇರಿ'' ಕೂಡ ಸೇರಿಕೊಂಡಿದೆ.

ಹೌದು, ಬಹುತೇಕರಿಗೆ ಗೊತ್ತಿರುವಂತೆ ಇಳಯ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ''ಜನನಾಯಗನ್'' ಕೂಡ ಸಂಕ್ರಾಂತಿಯಂದು ಬಿಡುಗಡೆಯಾಬೇಕಿತ್ತು. ಆದರೆ, ಸೆನ್ಸಾರ್ ಸಮಸ್ಯೆಯಿಂದ ಚಿತ್ರದ ಬಿಡುಗಡೆಗೆ ತಡೆಯಾಯ್ತು. ನಿನ್ನೆ (ಜನವರಿ 9) ಇಂದು (ಜನವರಿ 9 ) ಈ ಪ್ರಕರಣದ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ನ ಏಕಸದಸ್ಯ ಪೀಠ ಸಿನಿಮಾಕ್ಕೆ ''ಯು/ಎ'' ಪ್ರಮಾಣ ಪತ್ರ ನೀಡುವಂತೆ ಸಿಬಿಎಫ್ಸಿಗೆ ಆದೇಶಿಸಿತ್ತು.
ಆದರೆ, ಏಕಸದಸ್ಯ ಪೀಠದ ಆದೇಶಕ್ಕೆ ಆ ನಂತರ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿತು. ಜನವರಿ 21ಕ್ಕೆ ವಿಚಾರಣೆಯನ್ನು ಮುಂದೂಡಿತು. ಹೀಗಾಗಿ ಸದ್ಯ ಜನವರಿ 21ರವರೆಗೆ ''ಜನನಾಯಗನ್'' ಬೆಳ್ಳಿತೆರೆಯಲ್ಲಿ ದರ್ಶನ ಕೊಡುವಂತೆ ಇಲ್ಲ.
ಈ ಹಿನ್ನೆಲೆ ಸಹಜವಾಗಿ ವಿಜಯ್ ಅಭಿಮಾನಿಗಳು ನಿರಾಸೆಗೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಮತ್ತು ನೋವನ್ನು ಕೂಡ ಹೊರ ಹಾಕುತ್ತಿದ್ದರು. ನೊಂದು ಬೆಂದು ಹೋಗಿದ್ದ ಈ ಅಭಿಮಾನಿಗಳಿಗೆ ಈಗ ಮ್ಯಾಕ್ಸ್ ಚಿತ್ರದ ನಿರ್ಮಾಪಕ ಕಲೈಪುಲಿ ಎಸ್ ಥಾನು ಸಿಹಿ ಸುದ್ದಿಯನ್ನು ನೀಡಿದ್ದಾರೆ. 2016ರಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಡಿ ಸಿದ್ಧವಾಗಿದ್ದ ಬ್ಲಾಕ್ಬಸ್ಟರ್ ಚಿತ್ರ ''ಥೇರಿ''ಯನ್ನು ಮರು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಕುರಿತು ಘೋಷಣೆಯನ್ನು ಕೂಡ ಮಾಡಿದ್ದಾರೆ.
ಸದ್ಯ ''ಥೇರಿ'' ಮರು ಬಿಡುಗಡೆಯ ಸುದ್ದಿಯನ್ನು ಕೇಳಿ ವಿಜಯ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ''ಥೇರಿ" ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. ನಿರ್ಮಾಪಕ ಕಲೈಪುಲಿ ಎಸ್ ಥಾನು ಅವರಿಗೆ ಧನ್ಯವಾದವನ್ನು ಕೂಡ ಹೇಳುತ್ತಿದ್ದಾರೆ.

ಅಂದ್ಹಾಗೇ ವಿಜಯ್ ಇಲ್ಲಿಯವರೆಗೆ 69 ಚಿತ್ರಗಳನ್ನು ಮಾಡಿದ್ದಾರೆ. ''ಜಯನಾಯಗನ್'' ಚಿತ್ರವೇ ಕೊನೆಯ ಚಿತ್ರ. ವಿಶೇಷ ಅಂದರೆ ಈ 69 ಚಿತ್ರಗಳ ಪೈಕಿ 15 ಚಿತ್ರಗಳು ಸಂಕ್ರಾಂತಿಯಂದೇ ಬಿಡುಗಡೆಯಾಗಿವೆ. ಹೀಗಾಗಿ ಇವರನ್ನು ಕಾಲಿವುಡ್ ''ಪೊಂಗಲ್ ರಾಜಾ'' ಎಂದೇ ಕರೆಯುತ್ತೆ. ಈ ಹಿನ್ನೆಲೆ ತಮ್ಮ ಕೊನೆಯ ಚಿತ್ರವನ್ನು ಕೂಡ ಸಂಕ್ರಾಂತಿಯಂದೇ ಬಿಡುಗಡೆ ಮಾಡಬೇಕೆಂದುಕೊಂಡಿದ್ದರು. ಆದರೆ, ಆ ಆಸೆಗೆ ಸೆನ್ಸಾರ್ ಮಂಡಳಿ ತಣ್ಣೀರೆರಚಿತು. ಆದರೆ ಈಗ ಸಂಕ್ರಾಂತಿಗೆ ವಿಜಯ್ ಸಿನಿಮಾ ಬಿಡುಗಡೆಯಾಗುತ್ತಿಲ್ಲ ಎನ್ನುವ ಅಭಿಮಾನಿಗಳ ಕೊರಗನ್ನು ''ಥೇರಿ'' ನೀಗಿಸಿದೆ.
ಇನ್ನುಳಿದಂತೆ ಆಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ಸಮಂತಾ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಆಮಿ ಜಾಕ್ಸನ್ ಕೂಡ ಚಿತ್ರದಲ್ಲಿದ್ದಾರೆ. 2016ರಲ್ಲಿ ಬಿಡುಗಡೆಯಾದಾಗ ಈ ಚಿತ್ರ ಹಲವು ದಾಖಲೆಗಳನ್ನು ಬರೆದಿತ್ತು. ಇಂಥಾ ''ಥೇರಿ'' ಈ ಸಂಕ್ರಾಂತಿಯಂದು ಯಾವ ಕ್ರಾಂತಿಯನ್ನು ಬಾಕ್ಸಾಫೀಸ್ನಲ್ಲಿ ಮಾಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











