ತಮ್ಮ ಸಿನಿಮಾ ಆಸ್ಕರ್ಗೆ ಕಳಿಸದ್ದಕ್ಕೆ ಆರ್ ಮಾಧವನ್ ಅಸಮಾಧಾನ!?
ಗುಜರಾತಿ ಭಾಷೆಯ 'ಚಲ್ಲೊ ಶೋ' ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್ 2023ಕ್ಕೆ ಆಯ್ಕೆಯಾಗಿದೆ. ಅಲ್ಲಿ ಅದು ಹಲವು ದೇಶಗಳ ನೂರಾರು ಸಿನಿಮಾಗಳೊಟ್ಟಿಗೆ ಆಸ್ಕರ್ ಗೆಲ್ಲಲು ಸ್ಪರ್ಧಿಸಲಿದೆ.
ಆದರೆ 'ಚಲ್ಲೊ ಶೋ' ಸಿನಿಮಾ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆ ಆಗಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದ್ದು, ಕೆಲವರು 'RRR' ಸಿನಿಮಾವನ್ನು ಆಸ್ಕರ್ಗೆ ಕಳಿಸಬೇಕಿತ್ತೆಂದು, ಇನ್ನು ಕೆಲವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾವನ್ನು ಕಳಿಸಬೇಕಿತ್ತೆಂದು ತಮ್ಮ ಮೂಗಿನ ನೇರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಾದ ಮಂಡಿಸುತ್ತಿದ್ದಾರೆ.
ಆಸ್ಕರ್ ಸ್ಪರ್ಧೆಗೆ ಅಧಿಕೃತವಾಗಿ ಸಿನಿಮಾ ಆಯ್ಕೆ ಮಾಡುವ ಎಫ್ಎಫ್ಐ ಮುಂದೆ ಭಾರತದ ಕೆಲವು ಸಿನಿಮಾಗಳು ಅರ್ಜಿ ಸಲ್ಲಿಸಿದ್ದವು. ಅದರಲ್ಲಿ ಆರ್.ಮಾಧವನ್ ನಟಿಸಿ ನಿರ್ದೇಶನ ಮಾಡಿರುವ 'ರಾಕೆಟ್ರಿ; ದಿ ನಂಬಿ ಎಫೆಕ್ಟ್' ಸಿನಿಮಾ ಸಹ ಒಂದು. ಆದರೆ ಈ ಸಿನಿಮಾವನ್ನು ಎಫ್ಎಫ್ಐನ ಜ್ಯೂರಿಗಳು ಆಯ್ಕೆ ಮಾಡಿಲ್ಲ. ಇದು ಆರ್ ಮಾಧವನ್ಗೆ ತುಸು ಅಸಮಾಧಾನ ತಂದಂತಿದೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಸಮಾಧಾನವನ್ನು ಸಮಾಧಾನವಾಗಿಯೇ ತೋಡಿಕೊಂಡಿರುವ ಆರ್.ಮಾಧವನ್, ''ಭಾರತವು 'ರಾಕೆಟ್ರಿ', 'ದಿ ಕಾಶ್ಮೀರ್ ಫೈಲ್ಸ್' ಅಂಥಹಾ ಸಿನಿಮಾಗಳನ್ನು ಆಸ್ಕರ್ಸ್ಗೆ ಕಳಿಸಬೇಕು'' ಎಂದಿದ್ದಾರೆ. ಮುಂದುವರೆದು, ''ಈಗ ಆಸ್ಕರ್ಗೆ ಅಧಿಕೃತವಾಗಿ ಆಯ್ಕೆ ಆಗಿರುವ 'ಚೆಲ್ಲೊ ಶೋ'ಗೆ ಅಭಿನಂದನೆ, ಆ ಸಿನಿಮಾವು ಪ್ರಶಸ್ತಿ ಗೆಲ್ಲಲಿ ಎಂದು ಹಾರೈಸುತ್ತೇನೆ'' ಎಂದಿದ್ದಾರೆ.
ಆದರೆ ಆಸ್ಕರ್ಗೆ ಪರ್ಯಾಯವಾದ ಪ್ರಶಸ್ತಿಯೊಂದನ್ನು ಭಾರತದಲ್ಲಿಯೇ ಹುಟ್ಟುಹಾಕಬೇಕು ಎಂದೂ ಸಹ ಸಲಹೆ ನೀಡಿರುವ ಆರ್.ಮಾಧವನ್, ''ನಾವು ಅಲ್ಲಿ ಹೋಗಿ ನಮ್ಮನ್ನು ನಾವು ಸಾಬೀತುಪಡಿಸಿಕೊಳ್ಳಲು ಯತ್ನಿಸಿದ್ದು, ಸಾಕು, ನಾವು ಭಾರತದಲ್ಲಿಯೇ ಆಸ್ಕರ್ಗೆ ಪರ್ಯಾಯವಾದ ಅಥವಾ ಅದಕ್ಕಿಂತಲೂ ಶ್ರೇಷ್ಠವಾದ ಪ್ರಶಸ್ತಿಯೊಂದನ್ನು ಹುಟ್ಟುಹಾಕಬೇಕಿದೆ'' ಎಂದಿದ್ದಾರೆ.
''ಹಾಲಿವುಡ್ನಲ್ಲಿ ಯಾವ ನಿರ್ದೇಶಕ, ನಟ ತಂತ್ರಜ್ಞನಿಗೆ ಆಸ್ಕರ್ ಬರುತ್ತದೆಯೋ ಆತನ ಮೌಲ್ಯ ಹೆಚ್ಚಾಗುತ್ತದೆ. ಆಸ್ಕರ್ ಪಡೆದ ನಟ-ನಟಿಯರ ಸಂಭಾವನೆ, ಬೇಡಿಕೆ, ನೀಡಲಾಗುವ ಗೌರವ ಎಲ್ಲವೂ ಹೆಚ್ಚಾಗುತ್ತದೆ. ಭಾರತದಲ್ಲಿಯೂ ಈ ಪದ್ಧತಿ ಜಾರಿಗೆ ಬರಬೇಕು. ಯಾರಿಗಾದರೂ ಪ್ರಶಸ್ತಿ ಬಂದರೆ ಅವರ ತಾರಾ ಮೌಲ್ಯ ಏರಿಕೆ ಆಗಬೇಕು'' ಎಂದಿದ್ದಾರೆ.
ಆರ್.ಮಾಧವನ್ ನಟಿಸಿ, ನಿರ್ದೇಶನ ಮಾಡಿದ್ದ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಜುಲೈ 1 ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಇಸ್ರೊ ವಿಜ್ಞಾನಿ ನಂಬಿ ನಾರಾಯಣ್ ಕುರಿತಾದ ಕತೆ ಒಳಗೊಂಡಿತ್ತು. ನಿಜ ಘಟನೆಗಳ ಆಧಾರದ ಮೇಲೆ ನಿರ್ಮಿಸಲಾದ ಈ ಸಿನಿಮಾದಲ್ಲಿ ಶಾರುಖ್ ಖಾನ್ ಹಾಗೂ ತಮಿಳಿನ ನಟ ಸೂರ್ಯ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಹಿಟ್ ಎನಿಸಿಕೊಂಡಿತು.


Click it and Unblock the Notifications











