ಸಿನಿಮಾ ನಿರ್ದೇಶಕನ ಮನೆಯಿಂದ ಕದ್ದೊಯ್ದಿದ್ದ ರಾಷ್ಟ್ರಪ್ರಶಸ್ತಿ ಪದಕ ವಾಪಸ್ ತಂದಿಟ್ಟು ಪತ್ರ ಬರೆದ ಕಳ್ಳರು
ಕಳೆದ ವಾರ ರಾಷ್ಟ್ರ ಪ್ರಶಸ್ತಿ ವಿಜೇತ ತಮಿಳಿನ ಜನಪ್ರಿಯ ಸಿನಿಮಾ ನಿರ್ದೇಶಕ ಮಣಿಕಂದನ್ ಮನೆಯಲ್ಲಿ ಕಳ್ಳತನ ನಡೆದಿತ್ತು. ಅಪರಿಚಿತ ವ್ಯಕ್ತಿಗಳು ಶುಕ್ರವಾರ ಅವರ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಹಣ, ಚಿನ್ನಾಭರಣದ ಜೊತೆಗೆ ಮಣಿಕಂದನ್ ರಾಷ್ಟ್ರಪ್ರಶಸ್ತಿ ಪದಕವನ್ನು ಕದ್ದೊಯ್ದಿದ್ದರು. 4 ದಿನಗಳ ಬಳಿಕ ಕಳ್ಳರು ರಾಷ್ಟ್ರಪ್ರಶಸ್ತಿ ವಾಪಸ್ ನೀಡಿ ಕ್ಷಮಾಪಣೆ ಕೋರಿದ್ದಾರೆ.
ಮಧುರೈನ ಉಸಿಲಂಪಟ್ಟಿಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಸುಮಾರು 1 ಲಕ್ಷ ರೂ. ನಗದು ಹಾಗೂ ಐದು ಸವರನ್ ಮೌಲ್ಯದ ಚಿನ್ನಾಭರಣ ದೋಚಿದ್ದರು ಎಂದು ವರದಿಯಾಗಿತ್ತು. ಬೆಳ್ಳಿ ಪದಕದ ಜೊತೆಗೆ ಮತ್ತಷ್ಟು ಪ್ರಶಸ್ತಿ ಪದಕಗಳು ಅದರಲ್ಲಿತ್ತು ಎಂದು ಹೇಳಲಾಗಿತ್ತು. ಘಟನೆಯ ಮಾಹಿತಿ ಪಡೆದ ಪೊಲೀಸರು ನಿರ್ದೇಶಕರ ಮನೆಗೆ ಆಗಮಿಸಿ ಘಟನಾ ಸ್ಥಳವನ್ನು ಪರಿಶೀಲಿಸಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಈ ಘಟನೆ ನಡೆದಾಗ ನಿರ್ದೇಶಕ ಮಣಿಕಂದನ್ ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ನಿರತರಾಗಿದ್ದರಂತೆ. ಆದರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಈ ಕಳ್ಳತನದಲ್ಲಿ ಪ್ರಶಸ್ತಿಗಳು ಕಳ್ಳತನವಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಪ್ರಶಸ್ತಿಗಳನ್ ಕದ್ದಿದ್ದು ಯಾಕೆ? ಎನ್ನುವ ಕೋನದ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದರು. ಅಚ್ಚರಿ ಎನ್ನುವಂತೆ ಕಳ್ಳರು ಮಣಿಕಂದನ್ ಅವರ ರಾಷ್ಟ್ರಪ್ರಶಸ್ತಿ ಹಿಂತಿರುಗಿಸಿ ಜೊತೆಗೊಂದು ಕ್ಷಮಾಪಣೆ ಪತ್ರವನ್ನು ಮಧ್ಯರಾತ್ರಿ ಮನೆ ಮುಂದೆ ಇಟ್ಟು ಹೋಗಿದ್ದಾರೆ.
ಸಣ್ಣ ಕಾಗದದಲ್ಲಿ ತಮಿಳಿನಲ್ಲಿ ಕಳ್ಳರು ಕ್ಷಮಾಪಣೆ ಕೋರಿ ಪತ್ರ ಬರೆದಿದ್ದಾರೆ. "ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ. ನಿಮ್ಮ ಪರಿಶ್ರಮ ನಿಮಗೆ ಸ್ವಂತ" ಎಂದು ಅದರಲ್ಲಿ ಬರೆಯಲಾಗಿದೆ. ನಿರ್ದೇಶಕ ಮಣಿಕಂದನ್ 'ಕಾಕ ಮುಟ್ಟೈ', 'ಆಂಡವನ್ ಕಟ್ಟಲೈ', 'ಕಡೈಸಿ ವಿವಾಸಾಯಿ' ರೀತಿಯ ವಿಭಿನ್ನ ಸಿನಿಮಾಗಳನ್ನು ಕಟ್ಟಿಕೊಟ್ಟಿದ್ದಾರೆ. ಸದ್ಯ ವಿಜಯ್ ಸೇತುಪತಿ ನಟನೆಯ ವೆಬ್ ಸೀರಿಸ್ ಒಂದಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಫೋಟೊಗ್ರಫರ್ ಆಗಿ ಚಿತ್ರರಂಗ ಪ್ರವೇಶಿಸಿದ ಮಣಿಕಂದನ್ ಸಾಕಷ್ಟು ಏಳುಬೀಳಿನ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. 'ವಿಂಡ್' ಎನ್ನುವ ಶಾರ್ಟ್ ಫಿಲ್ಮ್ ಮಾಡಿ 15 ವರ್ಷಗಳ ಹಿಂದೆ ಮಣಿಕಂದನ್ ಗಮನ ಸೆಳೆದರು. ಇದನ್ನು ನೋಡಿ ನಿರ್ದೇಶಕ ವೆಟ್ರಿಮಾರನ್, ನಟ ಧನುಷ್ 'ಕಾಕ ಮುಟ್ಟೈ' ಸಿನಿಮಾ ನಿರ್ಮಿಸಿದ್ದರು. ಈ ಸಿನಿಮಾ ಹಿಟ್ ಆಗಿ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಎರಡು ವರ್ಷಗಳ ಹಿಂದೆ ಬಂದಿದ್ದ 'ಕಡೈಸಿ ವಿವಾಸಾಯಿ' ಚಿತ್ರವನ್ನು ತಾವೇ ನಿರ್ಮಿಸಿ ನಿರ್ದೇಶನ ಮಾಡಿದ್ದರು.
'ಕಡೈಸಿ ವಿವಾಸಾಯಿ' ಚಿತ್ರಕ್ಕೆ 2022ರಲ್ಲಿ ಅತ್ಯುತ್ತಮ ತಮಿಳು ಪ್ರಾದೇಶಿಕ ಸಿನಿಮಾ ರಾಷ್ಟ್ರಪ್ರಶಸ್ತಿ ಧಕ್ಕಿತ್ತು. ಇದೇ ಪ್ರಶಸ್ತಿಯ ಪದಕವನ್ನು ಕಳ್ಳರು ಕದ್ದು ಕೊಂಡೊಯ್ದಿದ್ದರು. ಇದೀಗ ವಾಪಸ್ ಕೊಟ್ಟು ಕ್ಷಮೆ ಕೇಳಿದ್ದಾರೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.


Click it and Unblock the Notifications










