ಇದು ಸಿನಿಮಾ ಥಿಯೇಟರ್ ಅಲ್ಲ ; ಅಭಿಮಾನಿಗಳ ಮೇಲೆ ಗರಂ ಆದ ಅಜಿತ್- ಅಪ್ಸೆಟ್ ಆದ ಫ್ಯಾನ್ಸ್
ತಮಿಳು ಚಿತ್ರರಂಗದ ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವವರು ಅಜಿತ್. ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿರುವ ಅಜಿತ್ ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ನಟ ಎಂದರೆ ಅದು ತಪ್ಪಲ್ಲ.
ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ.

ಇಂಥಾ ಅಜಿತ್ ತನಗೆ ಯಾರು ಬೇಡ ಎಂದು ನೂರಾರು ಬಾರಿ ಹೇಳಿದರು ಕೂಡ ಇವರನ್ನು ಆರಾಧಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ತನಗೆ ಯಾವ ಅಭಿಮಾನಿ ಸಂಘ ಇಲ್ಲ ಎಂದು ಅಜಿತ್ ಹೇಳಿದರು ಕೂಡ ಇವರನ್ನು ಮನದಲ್ಲಿಯೇ ಪೂಜಿಸುವವರಿಗೆ ಕೇವಲ ಚೆನ್ನೈನಲ್ಲಿ ಮಾತ್ರ ಅಲ್ಲ ಭಾರತದಲ್ಲೇ ಬರ ಇಲ್ಲ.
ಹೇಗಾದರೂ ಇರಲಿ ವರ್ಷಕ್ಕೊಂದು ಸಿನಿಮಾ ಮಾಡಲಿ ಎಂದು ಇವರನ್ನು ಇಷ್ಟ ಪಡುವವರು ಆಶಿಸುತ್ತಾರೆ. ಅಜಿತ್ ಒಪ್ಪಲಿ ಬಿಡಲಿ ಆದರೆ ನಾನು ಅಜಿತ್ ಅಭಿಮಾನಿ ಎಂದು ಹೇಳುತ್ತಾರೆ. ಆದರೂ ಕೂಡ ಅಭಿಮಾನಿಗಳ ಈ ಅಭಿಮಾನದ ಮೇಲೆ ಅಭಿಮಾನ ಇಲ್ಲ. ಇದಕ್ಕೆ ದುಬೈನಲ್ಲಿ ನಡೆದ ಘಟನೆ ಸದ್ಯದ ಉದಾಹರಣೆ.
ಹೌದು, ಸದ್ಯ ಚಿತ್ರರಂಗದಿಂದ ದೂರವಾಗಿ ತಮ್ಮ ಸಂಪೂರ್ಣ ಗಮನವನ್ನು ತಮ್ಮ ನೆಚ್ಚಿನ ಕಾರ್ ರೇಸ್ ಮೇಲೆ ಅಜಿತ್ ಹರಿಸಿದ್ದಾರೆ. ಕಳೆದ ವರ್ಷ ಸ್ಪೇನ್, ದುಬೈ, ಇಟಲಿಯ ನಂತರ ಈಗ ಬೆಲ್ಜಿಯಂನಲ್ಲಿ ನಡೆದ ಕಾರ್ ರೇಸ್ನಲ್ಲಿ ಭಾಗವಹಿಸಿದ್ದ ಅಜಿತ್ ಸದ್ಯ ಅಬುಧಾಬಿಯಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿ ನಡೆಯುತ್ತಿರುವ ರೇಸ್ನಲ್ಲಿ ಭಾಗವಹಿಸಿದ್ದಾರೆ.
ಇನ್ನೂ ತಮ್ಮ ನೆಚ್ಚಿನ ಸ್ಟಾರ್ ತಮ್ಮ ಕಣ್ಣೆದುರು ಇದ್ದಾಗ ಯಾರಿಗೇ ಆಗಲಿ ಅಭಿಮಾನ ಇನ್ನಷ್ಟು ಉಕ್ಕಿ ಹರಿಯುತ್ತೆ. ಅದು ಸಹಜ ಕೂಡ. ಅಬುಧಾಬಿಯಲ್ಲಿ ಕೂಡ ಇದೇ ಆಗಿದೆ. ಅಜಿತ್ ಅವರನ್ನು ಕಂಡ ಉತ್ಸಾಹದಲ್ಲಿ ಇವರನ್ನು ಭೇಟಿ ಮಾಡುವ ಪ್ರಯತ್ನವನ್ನು ಅಭಿಮಾನಿಗಳು ಮಾಡಿದ್ದಾರೆ.

ಆದರೆ, ಆಗಲೇ ಹೇಳಿದಂತೆ ಅಜಿತ್ ಅಭಿಮಾನಿಗಳ ಅಭಿಮಾನಿಯಲ್ಲ. ಅಭಿಮಾನಿಗಳ ಅಭಿಮಾನಕ್ಕೆ ಕೃತಜ್ಞರು ಅಲ್ಲ.ಇದಕ್ಕೆ ಕೈಗನ್ನಡಿ ಎಂಬಂತೆ ಅಜಿತ್ ತಮ್ಮನ್ನು ಭೇಟಿಯಾಗಲು ಬಂದ ಅಭಿಮಾನಿ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಇದು ಚಿತ್ರಮಂದಿರ ಅಲ್ಲ ಸರಿಯಾಗಿ ವರ್ತಿಸಿ ಎಂದು ಅಲ್ಲಿಯೇ ಗದರಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಅಜಿತ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳನ್ನು ಹೀಗಾ ನಡೆಸಿಕೊಳ್ಳುವುದು..? ಇಷ್ಟೊಂದು ದುರಂಹಕಾರ ಒಳ್ಳೆಯದಲ್ಲ ಎಂದು ಕಿಡಿ ಕಾರುತ್ತಿದ್ದಾರೆ. ಅಭಿಮಾನಿಗಳಿಗೆ ಒಂದು ಚೂರಾದರೂ ಗೌರವ ಕೊಡಿ ಎಂದು ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ.
ಅಂದ್ಹಾಗೇ ಎರಡು ವರ್ಷದ ಹಿಂದೆ ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ ''ಕಡವುಲೆ ಅಜಿತೆ'' ಎಂಬ ಘೋಷವಾಕ್ಯವನ್ನು ಈ ಕೂಡಲೇ ಕೂಗುವುದನ್ನು ನಿಲ್ಲಿಸಿ ಎಂದು ಅಜಿತ್ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಪತ್ರ ಬರೆದಿದ್ದರು.ನನ್ನನ್ನೂ ನನ್ನ ಹೆಸರಿಂದ ಮಾತ್ರ ಕರೆಯಿರಿ ನನಗೆ ಅದು ಮಾತ್ರ ಇಷ್ಟವಾಗುತ್ತೆ ಎಂದು ಹೇಳಿದ್ದ ಅಜಿತ್, ನನ್ನ ಹೆಸರನ್ನು ಕೂಗುವುದನ್ನು ಬಿಟ್ಟು, ಕಷ್ಟ ಪಟ್ಟು ಮೊದಲು ಕೆಲಸ ಮಾಡಿ, ಯಾರನ್ನೂ ನೋಯಿಸದೇ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ, ಕಾನೂನು ಪಾಲಿಸುವ ನಾಗರೀಕರಾಗಿ ಬದುಕಿ ಎಂದು ಬುದ್ದಿ ಮಾತನ್ನು ಹೇಳಿದ್ದರು.


Click it and Unblock the Notifications











