ಇನ್ಮುಂದೆ ಸಿನಿಮಾಗಳೇ ಮಾಡೋದಿಲ್ಲ ಎಂದು ನಿರ್ಧರಿಸಿಬಿಟ್ಟಿದ್ದರು ರಜನಿಕಾಂತ್!
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುವ ಬಗ್ಗೆ ಘೋಷಣೆ ಮಾಡಿದ ಸಂದರ್ಭದಲ್ಲಿ 'ತಲೈವಾ ಇನ್ಮುಂದೆ ಸಿನಿಮಾ ಮಾಡಲ್ಲ' ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದವು. ರಾಜಕೀಯಕ್ಕೆ ಬಂದ್ರೆ ರಜನಿ ಅವರನ್ನು ಇನ್ಮೇಲೆ ಚಿತ್ರಗಳಲ್ಲಿ ನೋಡಲು ಸಾಧ್ಯವಿಲ್ಲ ಎಂದು ಅವರ ಅಭಿಮಾನಿಗಳು ನಿರಾಸೆಯಾಗಿದ್ದು ಉಂಟು. ಆದರೆ, ಸಮಯ, ಸಂದರ್ಭ ಸೂಪರ್ ಸ್ಟಾರ್ ರಾಜಕೀಯದಿಂದ ಹಿಂದೆ ಸರಿದು ಬಿಟ್ಟರು. ಜೊತೆಗೆ ನಟನೆಯನ್ನು ಮುಂದುವರಿಸಿದರು.
ಆದರೆ ಈ ಹಿಂದೆಯೊಮ್ಮೆ 1990ರ ಆಸುಪಾಸಿನ ಸಮಯದಲ್ಲಿ ರಜನಿಕಾಂತ್ ಚಿತ್ರರಂಗವನ್ನು ತೊರೆಯಲು ನಿರ್ಧರಿಸಿಬಿಟ್ಟಿದ್ದರು. ಸಿನಿಮಾಗಳಲ್ಲಿ ನಟಿಸುವುದು ಬೇಡ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದರು. ಒಪ್ಪಿಕೊಂಡಿದ್ದ ಸಿನಿಮಾಗಳನ್ನು ಮಾಡಲ್ಲ ಎಂದು ಹೇಳಿ ನಿರ್ಮಾಪಕರಿಗೆಲ್ಲಾ ಅಡ್ವಾನ್ಸ್ ಹಿಂತಿರುಗಿಸಿಬಿಟ್ಟಿದ್ದ ಘಟನೆ ನಡೆದಿತ್ತು.
ಸಹಜವಾಗಿ ಈ ನಿರ್ಧಾರ ರಜನಿಯ ಆಪ್ತರಿಗೆ ಭಾರಿ ಆಘಾತ ತಂದುಬಿಟ್ಟಿತು. ಸೂಪರ್ ಸ್ಟಾರ್ ಪಟ್ಟದಲ್ಲಿರುವ ರಜನಿಗೆ ಅದಾಗಲೇ ಹೆಚ್ಚು ಬೇಡಿಕೆ ಇತ್ತು. ಕಾಲ್ಶೀಟ್ಗಾಗಿ ನಿರ್ಮಾಪಕರು ಕಾಯ್ತಿದ್ದರು. ಇಂತಹ ಸಮಯದಲ್ಲಿ ಈ ನಿರ್ಧಾರ ಏಕೆ ಎಂಬ ಅನುಮಾನ ಕಾಡತೊಡಗಿತು. ಈ ವಿಷಯ ರಜನಿಯ ಗುರು ಕೆ ಬಾಲಚಂದಿರ್ ಅವರಿಗೂ ಮುಟ್ಟಿತು. ತಲೈವಾ ನಿರ್ಧಾರ ಬಾಲಚಂದರ್ ಅವರಿಗೂ ನಿರಾಸೆ ಮೂಡಿಸಿತು.

ಏಕೆ ಈ ನಿರ್ಧಾರ ಎಂದು ಬಾಲಚಂದರ್ ಪ್ರಶ್ನಿಸಿದರು. ಹೆಸರು, ಹಣ ಎಲ್ಲವೂ ಸಂಪಾದನೆ ಮಾಡಿದ್ದೇನೆ. ಇನ್ಮೇಲೆ ಕಾರು ಮೇಲೆ ಕಾರು ಖರೀದಿ ಮಾಡಬೇಕು. ಬಂಗಲೆಗಳನ್ನು ಕಟ್ಟಬೇಕು ಅಷ್ಟೇ. ನನಗೆ ಯಾಕೋ ನಟಿಸಿದ್ದು ಸಾಕು ಎನಿಸುತ್ತಿದೆ ಎಂದು ತಮ್ಮ ಗುರುಗಳ ಬಳಿ ಹೇಳಿಕೊಂಡರಂತೆ. ಆಗ ರಜನಿಯ ಮನಸ್ಥಿತಿ ತಿಳಿದ ಬಾಲಚಂದರ್, ತಲೈವಾಗೆ ಒಂದು ಸಲಹೆ ಕೊಟ್ಟರಂತೆ.
ನೀನು ಈ ಮಟ್ಟಕ್ಕೆ ಬರಬೇಕಾದರೆ ಎಷ್ಟು ಶ್ರಮ ಇದೆ. ನಿಧಾನವಾಗಿ ಯೋಚಿಸಬೇಕು. ಸದ್ಯಕ್ಕೆ ಈಗ ತೆಗೆದುಕೊಂಡಿರುವ ಎಲ್ಲಾ ಅಡ್ವಾನ್ಸ್ ಹಣ ನಿರ್ಮಾಪಕರಿಗೆ ವಾಪಸ್ ಕೊಟ್ಟು ಬಿಡು. ಒಂದೆರಡು ತಿಂಗಳು ವಿಶ್ರಾಂತಿ ತಗೊ. ಕೇವಲ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಮಾತ್ರ ಸಿನಿಮಾ ಮಾಡು. ಮುಂದಿನದ್ದು ಆಮೇಲೆ ನೋಡೋಣ ಎಂದರಂತೆ. ಗುರುಗಳಾ ಮಾತಿಗೆ ಒಪ್ಪಿದ ರಜನಿಕಾಂತ್ ಕೂಡಲೇ ನಿರ್ಮಾಪಕರಿಗೆ ಅಡ್ವಾನ್ಸ್ ಹಿಂತಿರುಗಿಸಿದರು. ಸತತ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡರಂತೆ. ಆಗ ಬಾಲಚಂದರ್ ಅವರದ್ದೇ ನಿರ್ಮಾಣದಲ್ಲಿ 'ಅಣ್ಣಾಮಲೈ' ಸಿನಿಮಾ ಮಾಡಿದರು. ಇದಾದ ಬಳಿಕ ನಿಧಾನವಾಗಿ ಕಂಬ್ಯಾಕ್ ಮಾಡಿದ ರಜನಿಕಾಂತ್ ಮತ್ತೆ ನಟನೆ ಮುಂದುವರಿಸಿದರು. ಆದರೆ ದೊಡ್ಡ ಸಂಸ್ಥೆಗಳ ಜೊತೆ ಮಾತ್ರ ಪ್ರಾಜೆಕ್ಟ್ ಮಾಡುತ್ತಿದ್ದರು.
ಈ ಎಲ್ಲಾ ಬೆಳವಣಿಗೆ ಕೇವಲ ಆಪ್ತರ ವಲಯದಲ್ಲಿ ಮಾತ್ರ ನಡೆಯುತ್ತಿತ್ತೇ ಹೊರತು ಅಭಿಮಾನಿಗಳವರೆಗೂ ಬಂದಿರಲಿಲ್ಲ. ಬಹುಶಃ ಫ್ಯಾನ್ಸ್ಗೆ ಈ ವಿಷಯ ಮುಟ್ಟಿದ್ದರೆ ಒಂದು ಹಂತದ ಕ್ರಾಂತಿ ಆಗಿದ್ದರೂ ಅಚ್ಚರಿ ಇರ್ತಿರಲಿಲ್ಲ. ಏಕಂದ್ರೆ, ರಜನಿಕಾಂತ್ ಅಷ್ಟು ಯಶಸ್ಸಿನಲ್ಲಿದ್ದ ಸಮಯ ಅದು.

ಅಂದ್ಹಾಗೆ, ರಜನಿಕಾಂತ್ ಚಿತ್ರರಂಗ ಬಿಡುವ ಬಗ್ಗೆ ನಿರ್ಧರಿಸಿದ್ದ ಸಂದರ್ಭವನ್ನು ಅವರೇ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಹೇಳಿಕೊಂಡಿದ್ದರು. ಆ ವೇದಿಕೆಯಲ್ಲಿ ಕೆ ಬಾಲಚಂದರ್ ಸಹ ಇದ್ದರು.
ಪ್ರಸ್ತುತ, ಸಿರುತೈ ಶಿವ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಅಣ್ಣಾತ್ತೆ' ಸಿನಿಮಾದಲ್ಲಿ ರಜನಿ ನಟಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿದೆ. ಸನ್ ಪಿಕ್ಚರ್ಸ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ನಯನತಾರಾ, ಕೀರ್ತಿ ಸುರೇಶ್ ಪ್ರಮುಖ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಹಿರಿಯ ನಟಿಯರಾದ ಮೀನಾ ಮತ್ತು ಖುಷ್ಬೂ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಇದೆ. ಸದ್ಯಕ್ಕೆ ಚಿತ್ರತಂಡ ಘೋಷಿಸಿರುವ ಪ್ರಕಾರ, ದೀಪಾವಳಿ ಪ್ರಯುಕ್ತ ನವೆಂಬರ್ 4 ರಂದು ಅಣ್ಣಾತ್ತೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











