ಸಿನಿಮಾಟೊಗ್ರಾಫಿ ಕಾಯ್ದೆ ತಿದ್ದುಪಡಿಗೆ ತಮಿಳುನಾಡು ಸಿಎಂ ಸ್ಟಾಲಿನ್ ವಿರೋಧ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿ ಪ್ರಸ್ತಾವವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಒತ್ತಾಯಿಸಿದರು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿ ಬಿ ಎಫ್ ಸಿ)ನ ಕ್ರಿಯಾತ್ಮಕ ಸ್ವಾಯತ್ತತೆಗೆ ಅವಕಾಶ ನೀಡುವಂತೆ ಕೇಂದ್ರಕ್ಕೆ ಪತ್ರದ ಮೂಲಕ ಮನವಿ ಮಾಡಿದರು.
ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿಗೆ ಚಿತ್ರರಂಗದ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ತಮಿಳುನಾಡು ಸಿಎಂ ಕೂಡ ಕಾಯ್ದೆ ತಿದ್ದುಪಡಿ ವಿರುದ್ಧ ದನಿ ಎತ್ತಿದ್ದಾರೆ. "ದೇಶವು ಪ್ರಗತಿಪರ ರಾಷ್ಟ್ರವಾಗಿದೆ. ಇಲ್ಲಿ ಸೃಜನಶೀಲ ಚಿಂತನೆ ಜೊತೆಗೆ ಕಲೆ, ಸಂಸ್ಕೃತಿ ಮತ್ತು ಚಲನಚಿತ್ರ ನಿರ್ಮಾಣ ಎಲ್ಲವೂ ಒಳಗೊಂಡಿದೆ. ಭಯವಿಲ್ಲದೆ ಅರಳಬೇಕು" ಎಂದಿದ್ದಾರೆ.
"ಕರಡು ಮಸೂದೆ ಚಲನಚಿತ್ರ ಭ್ರಾತೃತ್ವ ಮತ್ತು ಚಲನಚಿತ್ರೋದ್ಯಮಕ್ಕೆ ಮಾತ್ರವಲ್ಲದೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಸಮಾಜದ ಎಲ್ಲಾ ಉತ್ತಮ ವರ್ಗಗಳಲ್ಲೂ ಗಂಭೀರ ಆತಂಕಗಳಿಗೆ ಕಾರಣವಾಗಿದೆ" ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದ್ದು, ಹೊಸ ಕಾಯ್ದೆಯನ್ವಯ ಸರ್ಕಾರವೇ ಪರೋಕ್ಷವಾಗಿ ಸಿನಿಮಾಗಳ ಸೆನ್ಸಾರ್ ನಿರ್ಣಯ ಮಾಡಬಹುದಾದ ಹಕ್ಕು ಪಡೆದುಕೊಳ್ಳಲಿದೆ.
ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿಯು ನಿರ್ದೇಶಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ ಎಂದು ಆರೋಪಿಸಿ ಭಾರತೀಯ ಸಿನಿರಂಗದ ಹಲವು ಪ್ರಮುಖರು ಒಕ್ಕೂರಲಾಗಿ ಕಾಯ್ದೆಯ ವಿರುದ್ಧ ದನಿ ಎತ್ತಿದ್ದಾರೆ.
Recommended Video
ನಟ ಫರ್ಹಾನ್ ಅಖ್ತರ್, ಅನುರಾಗ್ ಕಶ್ಯಪ್, ಶಬನಾ ಅಜ್ಮಿ, ಹನ್ಸಲ್ ಮೆಹ್ತಾ, ದಿಬಾಕರ್ ಬ್ಯಾನರ್ಜಿ, ಜೋಯಾ ಅಖ್ತರ್, ಕಮಲ್ ಹಾಸನ್, ಸೂರ್ಯ ಸೇರಿದಂತೆ ಇನ್ನೂ ಹಲವರು ಸಿನಿಮಾಟೊಗ್ರಫಿ ಕಾಯ್ದೆ 2021 ತಿದ್ದುಪಡಿ ವಿರುದ್ಧ ಬಹಿರಂಗ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.


Click it and Unblock the Notifications











