ಚಿತ್ರದ ಚಿತ್ರೀಕರಣದ ವೇಳೆ ಘನಘೋರ ದುರಂತ ; ಸಿಲಿಂಡರ್ ಸ್ಫೋಟಗೊಂಡು 26 ವರ್ಷದ ಯುವಕ ಸಾವು, ಮೂವರ ಸ್ಥಿತಿ ಗಂಭೀರ
ಸಿನಿಮಾ ಮಾಡುವುದು ಸುಲಭ ಅಲ್ಲ. ಈ ಪ್ರಕ್ರಿಯೆಯಲ್ಲಿ ಹಲವು ಕಷ್ಟಗಳಿರುತ್ತವೆ. ನಷ್ಟಗಳಿರುತ್ತವೆ. ಕೆಲ ಒಮ್ಮೆ ಪ್ರಾಣವನ್ನು ಕೂಡ ಇಲ್ಲಿ ಅನೇಕರು ಪಣಕ್ಕಿಡುತ್ತಾರೆ. ಆದರೆ ಎರಡು ಅಥವಾ ಮೂರು ಗಂಟೆಯ ಚಿತ್ರವನ್ನು ನೋಡುವ ಪ್ರೇಕ್ಷಕರಿಗೆ ಇದರ ಅರಿವು ಆಗುವುದೇ ಇಲ್ಲ.
ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ {ಜೂನ್ 3} ಸಂಭವಿಸಿದ ಮತ್ತೊಂದು ದುರಂತ ಸಾವು. ಹೌದು..ಚಿತ್ರದ ಚಿತ್ರೀಕರಣ ನಡೆಯುವಾಗ ಎಷ್ಟೇ ಮುಂಜಾಗೃತೆ ವಹಿಸಿದರು ಕೂಡ ಕೆಲ ಒಮ್ಮೆ ನಡೆಯಬಾರದ ದುರಂತ ನಡೆದು ಹೋಗುತ್ತೆ. ಇದಕ್ಕೆ ಕನ್ನಡದ ''ಲಾಕಪ್ ಡೆತ್'' ಚಿತ್ರದಿಂದ ಹಿಡಿದು ''ಮಾಸ್ತಿಗುಡಿ''ಯವರೆಗೆ ''ಕೂಲಿ'' ಚಿತ್ರದಿಂದ ಹಿಡಿದು ಶಂಕರ್ ನಿರ್ದೇಶನದ ''ಇಂಡಿಯನ್ 2'' ವರೆಗೆ ಹಲವು ಉದಾಹರಣೆಗಳು ಸಿಗುತ್ತವೆ.

ದುರಂತ ಅಂದರೆ ತಂತ್ರಜ್ಞಾನ ಎಷ್ಟೇ ಬದಲಾದರೂ ಕೂಡ ಈ ಸಾವು- ನೋವನ್ನು ತಪ್ಪಿಸಲು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ತಮಿಳು ಚಿತ್ರರಂಗದಲ್ಲಿ ನಡೆದ ಅವಘಡ.
ಹೌದು, ಎಸ್.ಜೆ.ಸೂರ್ಯ.. ಕಾಲಿವುಡ್ನ ಆಕ್ಟರ್ ಕಂ ಡೈರೆಕ್ಟರ್. ''ವಾಲಿ''.. '' ಖುಷಿ''.. ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿರುವ ಎಸ್.ಜೆ.ಸೂರ್ಯ ''ಸ್ಪೈಡರ್''.. ''ಮರ್ಸಲ್''.. ''ಮಾನಾಡು''..''ಡಾನ್''.. ಹೀಗೆ ಹಲವು ಚಿತ್ರಗಳಲ್ಲಿ ಬಹುಮುಖ್ಯವಾದ ಪಾತ್ರಗಳನ್ನು ಕೂಡ ನಿರ್ವಹಿಸಿದ್ದಾರೆ.
ಇಂಥಾ ಎಸ್.ಜೆ.ಸೂರ್ಯ ಸದ್ಯ ಒಂದು ದಶಕದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ಧಾರೆ. ''ಕಿಲ್ಲರ್'' ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಬುಧವಾರ (ಜೂನ್ 2) ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ದುರಂತ ಸಂಭವಿಸಿದ್ದು ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ (ಜೂನ್ 2) ಚೆನ್ನೈನ ಒಟೆರಿ ಪ್ರದೇಶದಲ್ಲಿರುವ ಬಿ & ಸಿ ಮಿಲ್ ಆವರಣದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಈ ಅವಘಡ ನಡೆದಿದ್ದು, ಬೆಳಗಿನ ಜಾವ 3.30ರ ಆಸು ಪಾಸು ಅನಿಲ ಬಲೂನ್ ಸಿಲಿಂಡರ್ ಸ್ಫೋಟದಿಂದ ಅಗ್ನಿ ಅವಘಡ ಸಂಭವಿಸಿದೆ.
ಕಳೆದ ಕೆಲ ದಿನಗಳಿಂದ ಈ ಚಿತ್ರದ ಚಿತ್ರೀಕರಣಕ್ಕಾಗಿ ನೂರಕ್ಕೂ ಅಧಿಕ ಕಾಂಇFಕರು ಮತ್ತು ತಂತ್ರಜ್ಞರು ಬೆವರು ಸುರಿಸುತ್ತಿದ್ದರು. ಈ ದುರಂತದಲ್ಲಿ ಈ ದುರಂತದಲ್ಲಿ ಮಧುರವಾಯಲ್ನ ಮದನ್ (26) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಂಡ್ರಾಥೂರ್ನ ಶಕ್ತಿವೇಲ್ (27), ಮಧುರವಾಯಲ್ನ ಸೂರ್ಯ (23) ಮತ್ತು ನೆರ್ಕುಂದ್ರಂನ ದಿನಕರನ್ (24) ಅವರಿಗೆ ಗಂಭೀರವಾಗಿ ಗಾಯಗಳಾಗಿವೆ.
ಈ ಅವಘಡದಲ್ಲಿ ಗಾಯಗೊಂಡ ನಾಲ್ವರನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು, ಮದನ್ ಆಸ್ಪತ್ರೆಗೆ ಬರುವ ಮೊದಲೇ ಸಾವನ್ನಪ್ಪಿದ್ದರೆಂದು ದೃಢಪಡಿಸಿದ್ದಾರೆ. ಗಾಯಗೊಂಡ ಉಳಿದ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಟೆರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಈ ದುರಂತದಿಂದ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದ್ದು, ''ಕಿಲ್ಲರ್'' ತಂಡಕ್ಕೆ ಮುಂದೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆಗಳಿವೆ. ಅಂದ್ಹಾಗೇ ಈ ವರ್ಷದ ಆರಂಭದಲ್ಲೂ ಎಸ್.ಜೆ. ಸೂರ್ಯ ಅವರಿಗೆ ತೀವ್ರ ಗಾಯಗಳಾಗಿದ್ದವು. ಚೆನ್ನೈನ ಪಳವಕ್ಕಂನಲ್ಲಿ ಸಾಹಸ ದೃಶ್ಯವೊಂದರ ಚಿತ್ರೀಕರಣದ ವೇಳೆ ಹಗ್ಗದ ಮೂಲಕ ಜಿಗಿಯುವ ಸಮಯದಲ್ಲಿ ಕಬ್ಬಿಣದ ರಾಡ್ಗೆ ತಗುಲಿ ಅವರ ಎರಡೂ ಕಾಲುಗಳಿಗೆ ಗಾಯಗಳಾಗಿದ್ದವು.
ಇನ್ನುಳಿದಂತೆ ಆಗಲೇ ಹೇಳಿದಂತೆ ''ಕಿಲ್ಲರ್'' ಚಿತ್ರಕ್ಕೆ ಎಸ್.ಜೆ. ಸೂರ್ಯ ಅವರೇ ನಿರ್ದೇಶನದ ಜೊತೆಗೆ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. 2015ರ ''ಇಸೈ'' ನಂತರ ಸೂರ್ಯ ನಿರ್ದೇಶನಕ್ಕೆ ಮರಳುತ್ತಿರುವ ಚಿತ್ರವಿದು. 2005ರ ''ಅನ್ಬೆ ಆರುಯಿರೆ'' ನಂತರ ಎಸ್.ಜೆ.ಸೂರ್ಯ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿರುವುದು ವಿಶೇಷ. ಪ್ರೀತಿ ಅಸ್ರಾನಿ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.


Click it and Unblock the Notifications