ದುರಂತ ಅಂತ್ಯ ; 85ನೇ ವಯಸ್ಸಿನಲ್ಲಿ ಅಡ್ಯಾರ್ ನದಿಗೆ ಹಾರಿ ಹಿರಿಯ ನಿರ್ಮಾಪಕ ಸಾವು
ಸಮಸ್ಯೆಗಳಿಗೆ ಆತ್ಮ*ಹತ್ಯೆ ಒಂದೇ ಪರಿಹಾರ ಅಲ್ಲ. ಸಮಸ್ಯೆಗಳನ್ನು ಎದುರಿಸಿ ಬದುಕುವ ಶಕ್ತಿ ಹೊಂದಬೇಕು. ಸಮಸ್ಯೆ ಬಂದಾಗ ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಆದರೆ ವಿಶ್ವದೆಲ್ಲೆಡೆ ಆತ್ಮ*ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದೊಮ್ಮೆ ಆತ್ಮ*ಹತ್ಯೆ ಪ್ರಕರಣ ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ ಇದು ಸಾಮಾಜಿಕ ಸಮಸ್ಯೆ ಎಂದು ಕೂಡ ಹೇಳಿದೆ.
ಪ್ರತಿ 100 ಜನರಲ್ಲಿ 70 ಜನ.. ಪುರುಷರೇ ಆತ್ಮ*ಹತ್ಯೆ ಮಾಡಿಕೊಳ್ಳುತ್ತಾರೆ..ಎಂದು ಎನ್ಸಿಆರ್ಬಿ { ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ } ಕೂಡ ವರದಿ ನೀಡಿದೆ. ಇಷ್ಟೇ ಅಲ್ಲದೇ ಶೇಕಡಾ 36 % ಮಹಿಳೆಯರು ಆತ್ಮ*ಹತ್ಯೆಗೆ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದೆ. ಆತ್ಮ*ಹತ್ಯೆ ಮಾಡಿಕೊಳ್ಳುವುದರಲ್ಲಿ ಪುರುಷರು ಮತ್ತು ಆತ್ಮ*ಹತ್ಯೆಗೆ ಪ್ರಯತ್ನಿಸುವರಲ್ಲಿ ಮಹಿಳೆಯರು ಮುಂದಿರುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ.

ಜೀವನದಲ್ಲಿ ನಾನಾ ಸಮಸ್ಯೆಗಳಿಂದ ಬೇಸತ್ತು, ತಾಳ್ಮೆಯ ಕೊರತೆಯಿಂದ ಆತ್ಮ*ಹತ್ಯೆ ಮಾಡಿಕೊಳ್ಳುವರ ಸಂಖ್ಯೆ ಈಗೀಗ ಹೆಚ್ಚಾಗುತ್ತಿದೆ. ದುರಂತ ಅಂದರೆ ಯುವಜನಾಂಗಕ್ಕೆ ಬುದ್ದಿ ಹೇಳಬೇಕಾದ ಹಿರಿಯರು ಕೂಡ ಬದುಕಿನ ಸಂಧ್ಯಾಕಾಲದಲ್ಲಿ ನಾನಾ ಕಾರಣಗಳಿಂದ ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ-ನಿರ್ದೇಶಕ ಕೆ.ರಾಜನ್ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.
ಹೌದು, ಕೆ.ರಾಜನ್.. ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ನಿರ್ದೇಶಕ. ನೇರ ನುಡಿಯ ವ್ಯಕ್ತಿತ್ವದಿಂದ ಹೆಸರುವಾಸಿಯಾಗಿದ್ದ ಕೆ.ರಾಜನ್ ತಮ್ಮ 85ನೇ ವಯಸ್ಸಿನಲ್ಲಿ ಚೆನ್ನೈನ ಅಡ್ಯಾರ್ ನದಿಗೆ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ಧಾರೆ. ಅಗ್ನಿಶಾಮಕ ದಳ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಕೆ.ರಾಜನ್ ಅವರ ಈ ಆತುರದ ನಿರ್ಧಾರದ ಸುದ್ದಿ ಕೇಳಿ ತಮಿಳು ಚಿತ್ರರಂಗ ಆಘಾತಕ್ಕೀಡಾಗಿದೆ.

1983ರಲ್ಲಿ ''ಬ್ರಹ್ಮಚಾರಿ'' ಚಿತ್ರದ ಮೂಲಕ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪ್ರವೇಶ ಮಾಡಿದ ಕೆ.ರಾಜನ್, ಆ ನಂತರ ಶರತ್ ಕುಮಾರ್ ಅಭಿನಯದ ''ನಮ್ಮ ಊರು ಮಾರಿಯಮ್ಮ'' ಮೂಲಕ ನಿರ್ದೇಶಕರಾದ ಕೆ.ರಾಜನ್ ಅಬ್ಬಾಸ್ ಮತ್ತು ಕುನಾಲ್ ನಟನೆಯ ''ಉನಾರ್ಚಿಗಲ್'' ಚಿತ್ರವನ್ನು ಕೂಡ ನಿರ್ದೇಶನ ಮಾಡಿದ್ದರು.
''ಗಣೇಶ್ ಸಿನೆ ಆರ್ಟ್ಸ್'' ಬ್ಯಾನರ್ ಅಡಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಲೇ ವಿತರಣಾ ಕ್ಷೇತ್ರಕ್ಕೂ ಕಾಲಿಟ್ಟ ಕೆ.ರಾಜನ್ 2000ನೇ ಇಸವಿಯಲ್ಲಿ ಚೆನ್ನೈ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್ನ ಅಧ್ಯಕ್ಷರಾದರು. 2001ರಲ್ಲಿ ಸಹ ನಿರ್ಮಾಪಕನ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಕೆ.ರಾಜನ್ ನಟನಾಗಿಯೂ ಕೂಡ ತಮ್ಮ ಛಾಪು ಮೂಡಿಸಿದ್ದರು. ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದರು. 2023ರಲ್ಲಿ ಬಂದ ''ಬಕಾಸುರನ್'' ಇವರ ಅಭಿನಯದ ಕೊನೆಯ ಸಿನಿಮಾ.
ಇನ್ನೂ ಆಡಿಯೋ- ಟ್ರೇಲರ್ ಬಿಡುಗಡೆ ಸಮಾರಂಭ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ನೇರ ನುಡಿಗಳಿಂದ ಹೆಸರುವಾಸಿಯಾಗಿದ್ದ ಕೆ.ರಾಜನ್ ತಮಿಳು ಚಿತ್ರರಂಗದ ಸಮಸ್ಯೆ, ನಿರ್ಮಾಪಕರ ನಷ್ಟ, ಗಗನಕ್ಕೇರಿರುವ ಸ್ಟಾರ್ ಗಳ ಸಂಭಾವನೆ, ಉದ್ಯಮದಲ್ಲಿನ ಅಕ್ರಮ ಚಟುವಟಿಕೆಗಳ ಕುರಿತು ಧ್ವನಿ ಎತ್ತುತ್ತಿದ್ದರು. ನಟರು ತಮ್ಮ ಸಂಭಾವನೆ ಕಡಿಮೆ ಮಾಡಿಕೊಳ್ಳಬೇಕೆಂದು ಪದೇ ಪದೇ ಆಗ್ರಹಿಸುತ್ತಿದ್ದರು.
ಇಂತಹ ಕೆ.ರಾಜನ್ ತಮ್ಮ 85ನೇ ವರ್ಷದಲ್ಲಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಇವರ ದುರಂತ ಅಂತ್ಯದಿಂದ ತಮಿಳು ಚಿತ್ರರಂಗಕ್ಕೆ ಬರಸಿಡಿಲು ಬಡಿದಂತಾಗಿದ್ದು, ಚಿತ್ರರಂಗದ ಹಲವರು ಸಂತಾಪ ಸೂಚಿಸಿದ್ದಾರೆ. ಕಂಬನಿ ಮಿಡಿದಿದ್ದಾರೆ.
Disclaimer : ಆತ್ಮ*ಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ. ಆತ್ಮ*ಹತ್ಯೆ ತಡೆ ಸಹಾಯವಾಣಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ ಇಂತಿದೆ 080 - 25497777.


Click it and Unblock the Notifications