ಇಳಯ ದಳಪತಿ ವಿಜಯ್ ಹಿಂದೆ ಹಿಂದೆಯೇ ರಾಜಕೀಯಕ್ಕೆ ಬರಲು ರೆಡಿಯಾದ ತ್ರಿಶಾ..!
ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಹರಸಿ ಹಾರೈಸಿ ಆಶೀರ್ವಾದ ಮಾಡಿದ ಜನರನ್ನೇ ಮರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ ಅವರನ್ನೊಳಗೊಂಡು ವಿಜಯಕಾಂತ್, ಶರತ್ ಕುಮಾರ್, ಕಮಲ್ ಹಾಸನ್ ವರೆಗೆ ಬಹುತೇಕರು ರಾಜಕೀಯಕ್ಕೆ ಇಳಿದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಇಳಯ ದಳಪತಿ ಎಂದೇ ಪ್ರಖ್ಯಾತವಾದ ವಿಜಯ್ ಕೂಡ ಈ ಸಾಲಿನಲ್ಲಿ ನಿಂತವರೇ. ಈಗಾಗಲೇ ತಮ್ಮ ಪಕ್ಷದ ಧ್ವಜ ಮತ್ತು ಹೆಸರನ್ನು ಬಹಿರಂಗ ಮಾಡಿರುವ ವಿಜಯ್ ಮುಂಬರುವ ವಿಧಾನಸಭೆ ಚುನಾವಣೆಯ ಮೇಲೆ ನಿಗಾ ವಹಿಸಿದ್ದಾರೆ. ರಾಜಕೀಯ ರಣರಂಗದಲ್ಲಿ ಕೂಡ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇದರ ನಡುವೆ ಈಗ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಸುದ್ದಿಯೊಂದು ಹೊರ ಬಿದ್ದಿದೆ. ಇಳಯ ದಳಪತಿ ವಿಜಯ್ ಅವರ ಜೊತೆ ಸಂಬಂಧಗಳಿಂದ ಆಗಾಗ ಚರ್ಚೆಗೀಡಾಗುವ ತ್ರಿಶಾ ರಾಜಕೀಯಕ್ಕೆ ರಂಗಕ್ಕೆ ಧುಮುಕಲಿದ್ದಾರೆ ಎನ್ನುವ ಬ್ರೇಕಿಂಗ್ ನ್ಯೂಸ್ ಅನೇಕರ ನಿದ್ದೆಯನ್ನು ಕೆಡಿಸಿದೆ.
ಹೌದು, ಇಂಡಿಯಾ ಗ್ಲಿಟ್ಜ್ ವೆಬ್ ಸೈಟ್ ಮತ್ತು ನ್ಯೂಸ್ 18 ವರದಿಯ ಪ್ರಕಾರ ತ್ರಿಶಾ ಕೃಷ್ಣನ್, ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಜಕೀಯಕ್ಕೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ತ್ರಿಶಾ ತಮಿಳುನಾಡಿನ ಮುಖ್ಯಮಂತ್ರಿಯಾಗುವುದೇ ನನ್ನ ಜೀವನದ ಏಕೈಕ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿ ಜನಸೇವೆ ಮಾಡಬೇಕೆನ್ನುವ ಇಂಗಿತವನ್ನು ಕೂಡ ತ್ರಿಶಾ ವ್ಯಕ್ತಪಡಿಸಿದ್ದಾರೆ.
ತ್ರಿಶಾ ಅವರ ಈ ಹೇಳಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಚಿತ್ರರಂಗದಲ್ಲಿ ನಾಯಕಿಯರಿಗೆ ಆಯಸ್ಸು ಕಡಿಮೆ ಎನ್ನುವ ಮಾತು ಇದೆ. ಆದರೆ ಇದಕ್ಕೆ ಅಪವಾದವೆನ್ನುವಂತೆ ತ್ರಿಶಾ ನಲವತ್ತರ ಗಡಿ ದಾಟಿದರೂ ಕೂಡ ಇವತ್ತು ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬೆಲೆಯನ್ನು ಉಳಿಸಿಕೊಂಡು ನಿರಂತರ ಚಿತ್ರಗಳನ್ನು ಮಾಡುತ್ತಿದ್ದಾರೆ.
ಇನ್ನೂ ಎಲ್ಲಕ್ಕಿಂತ ಹೆಚ್ಚಾಗಿ ತ್ರಿಶಾ ಅವರ ಅತ್ಯಾಪ್ತ ಸ್ನೇಹಿತ ಇಳಯ ದಳಪತಿ ಎಂದೇ ಖ್ಯಾತರಾದ ವಿಜಯ್ ರಾಜಕೀಯದತ್ತ ಹೊರಳಿದ್ದಾರೆ. ಕೆಲ ತಿಂಗಳ ಹಿಂದೆ ಸ್ವಂತ ಪಕ್ಷ ಕಟ್ಟಿ ಪಾಲಿಟಿಕ್ಸ್ಗೆ ವಿಜಯ್ ಎಂಟ್ರಿ ಕೊಟ್ಟಿದ್ದಾರೆ. ಪಕ್ಷದ ಹೆಸರು, ಚಿಹ್ನೆ, ಬಾವುಟ ಎಲ್ಲವನ್ನು ಅನಾವರಣ ಮಾಡಿದ್ದಾರೆ.ತಮ್ಮ ಪಕ್ಷಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಟ್ಟಿದ್ದಾರೆ. ಚುನಾವಣೆಯ ತಯಾರಿಯನ್ನು ನಡೆಸುತ್ತಿದ್ದಾರೆ. ಮೊದಲ ಬಹಿರಂಗ ಸಭೆ ನಡೆಸಿ ತಮಿಳುನಾಡಿನಲ್ಲಿ ಸಂಚಲನವನ್ನು ಕೂಡ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ ಬೆನ್ನಲ್ಲಿಯೇ ಇದೀಗ ತ್ರಿಶಾ ರಾಜಕೀಯದ ಕುರಿತು ಮಾತುಗಳನ್ನಾಡಿದ್ದಾರೆ. ಮುಖ್ಯಮಂತ್ರಿಯಾಗುವ ಕನಸು ಇದೆ ಎಂದು ಹೇಳಿದ್ದಾರೆ. ಈ ಕಾರಣಕ್ಕೆ 2026ರ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಿಗ ವೆಟ್ರಿ ಕಳಗಂ' ಪಕ್ಷದಿಂದ ತ್ರಿಶಾ ಕಣಕ್ಕಿಳಿಯಲಿದ್ದಾರೆ ಎನ್ನುವ ಅನುಮಾನವನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ಮತ್ತು ತ್ರಿಶಾ ನಡುವೆ ಇರುವ ಅನೈತಿಕ ಸಂಬಂಧಕ್ಕೆ ಇದಕ್ಕಿಂತ ಇನ್ನೊಂದು ಸಾಕ್ಷಿ ಬೇಕಾ ಎಂಬ ವಾದವನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ತ್ರಿಶಾ ಸುಮ್ ಸುಮ್ನೆ ಸಂದರ್ಶನದಲ್ಲಿ ತಮಾಷೆಗೋಸ್ಕರ ಈ ಮಾತನ್ನು ಹೇಳಿರಬಹುದು ಎನ್ನುವ ಅಭಿಪ್ರಾಯವನ್ನು ಕೂಡ ಕೆಲವರು ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ತ್ರಿಶಾ ಅವರ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು ತಮಿಳುನಾಡಿನ ರಾಜಕೀಯಕ್ಕೆ ತ್ರಿಶಾ ಎಂಟ್ರಿ ಕೊಡ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ.


Click it and Unblock the Notifications











