Tamil Nadu Election Result 2026: ಟಿವಿಕೆ 'ವಿಜಯ'ಯಾತ್ರೆ; 108 ಕ್ಷೇತ್ರಗಳಲ್ಲಿ ದಳಪತಿ ದರ್ಬಾರ್
ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಕಮಾಲ್ ಮಾಡಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದ್ದು ಡಿಎಂಕೆ ಹಾಗೂ ಎಐಎಡಿಎಂ ಪಕ್ಷಗಳನ್ನು ಹಿಂದಿಕ್ಕಿ ಹೆಚ್ಚು ಕ್ಷೇತ್ರಗಳಲ್ಲಿ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿದೆ. ನಟ ವಿಜಯ್ ಸಿನಿಮಾ ಬಿಟ್ಟು ರಾಜಕೀಯರಂಗಕ್ಕೆ ಬಂದು ಜನಸೇವೆ ಮಾಡಲು ಮುಂದಾಗಿದ್ದಾರೆ.
ರಜನಿಕಾಂತ್, ಕಮಲ್ ಹಾಸನ್ ಕೂಡ ತಮಿಳುನಾಡು ರಾಜಕೀಯರಂಗ ಪ್ರವೇಶಿಸಿ ಚಮತ್ಕಾರ ಮಾಡುವ ಪ್ರಯತ್ನ ಮಾಡಿದ್ದರು. ರಜನಿಕಾಂತ್ ಆರಂಭದಲ್ಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ಕಮಲ್ ಹಾಸನ್ ಪಕ್ಷ ಕಟ್ಟಿ ಸೋತಿದ್ದರು. ಆದರೆ ವಿಜಯ್ ಈಗ ಜಾದೂ ಮಾಡುತ್ತಿದ್ದಾರೆ. ವಿಜಲ್ ಚಿಹ್ನೆಯೊಂದಿಗೆ ಚುನಾವಣ ಕಣಕ್ಕೆ ಇಳಿದಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಿದ್ದರು. ಖುದ್ದು ವಿಜಯ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು.

ತಮಿಳುನಾಡಿನ 234 ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿದೆ. ಅಂತಿಮವಾಗಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ 108 ಕ್ಷೇತ್ರಗಳಲ್ಲಿ ಗೆದ್ದಿದೆ. ಡಿಎಂಕೆ 54 ಹಾಗೂ ಎಐಎಡಿಎಂಕೆ 50 ಕ್ಷೇತ್ರಗಳಲ್ಲಿ ಗೆದ್ದು ನಿರಾಸೆ ಅನುಭವಿಸಿವೆ. ವಿಜಯ್ ತಮಿಳುನಾಡಿನ ಮುಂದಿನ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ.
ಚೆನ್ನೈನ 16 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರಗಳಲ್ಲಿ ಆರಂಭದಿಂದ ಟಿವಿಕೆ ಮುನ್ನಡೆ ಕಾಯ್ದುಕೊಂಡಿತ್ತು. ತಿರುಚಿರಾಪಳ್ಳಿ ಈಸ್ಟ್ ಹಾಗೂ ಪೆರಂಬೂರ್ ಕ್ಷೇತ್ರಗಳಲ್ಲಿ ಸ್ವತಃ ವಿಜಯ್ ಸ್ಪರ್ಧಿಸಿದ್ದರು. ಒಂದ ಹಂತದಲ್ಲಿ ಎರಡೂ ಕಡೆ ಹಿನ್ನಡೆ ಸಾಧಿಸಿದ ವಿಜಯ್ ಕೆಲವೇ ಸುತ್ತುಗಳ ಮತ ಎಣಿಕೆ ಬಳಿಕ ಮತ್ತೆ ಮುನ್ನಡೆ ಕಾಯ್ದುಕೊಂಡರು. ಕೊನೆಗೆ ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದರು. ತಮಿಳುನಾಡು ವಿಧಾನಸಭೆಯಲ್ಲಿ 118 ಮ್ಯಾಜಿಕ್ ನಂಬರ್.. ಅಂದ್ರೆ 118 ಕ್ಷೇತ್ರಗಳನ್ನು ಗೆದ್ದ ಪಕ್ಷ ಸರ್ಕಾರ ರಚಿಸುತ್ತದೆ. ಟಿವಿಕೆ ಪಕ್ಷ ಈ ಹಾದಿಯಲ್ಲಿ ಹೆಜ್ಜೆ ಹಾಕಿದೆ.
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ವಿಜಯ್ ರಾಜಕೀಯರಂಗ ಪ್ರವೇಶಿಸಿದ್ದರು. ಜಯಲಲಿತಾ ಹಾಗೂ ಕರುಣಾನಿಧಿ ಅಗಲಿಕೆ ಬಳಿಕ ತಮಿಳುನಾಡು ರಾಜಕೀಯರಂಗದಲ್ಲಿ ಮಾಸ್ ನಾಯಕನ ಕೊರತೆ ಇತ್ತು. ಆ ಜಾಗವನ್ನು ತುಂಬಲು ವಿಜಯ್ ಬಂದಿದ್ದರು. ದಳಪತಿ ಆಗಮನದಿಂದ ಈ ಬಾರಿ ದೊಡ್ಡಮಟ್ಟದಲ್ಲಿ ಮತದಾನ ನಡೆದಿತ್ತು. 85.15% ರಷ್ಟು ಮತದಾನ ನಡೆದು ದಾಖಲೆ ನಿರ್ಮಾಣವಾಗಿತ್ತು. ಇದಕ್ಕೆ ವಿಜಯ್ ಇಂಪ್ಯಾಕ್ಟ್ ಕಾರಣ ಎನ್ನಲಾಗಿತ್ತು. ಸದ್ಯ ಮತ ಎಣಿಕೆಯಲ್ಲಿ ಟಿವಿಕೆ ಪಕ್ಷ ಮುನ್ನಡೆ ಸಾಧಿಸಿರುವುದು ನೋಡಿದರೆ ವಿಜಯ್ ಇಂಪ್ಯಾಕ್ಟ್ ನಿಜವೇ ಎನ್ನುವ ಚರ್ಚೆ ಶುರುವಾಗಿದೆ.
ವಿಜಯ್ ರಾಜಕೀಯರಂಗ ಪ್ರವೇಶವನ್ನು ಎದುರಾಳಿ ಪಕ್ಷಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮುಖ್ಯವಾಗಿ ಡಿಎಂಕೆ ಪಕ್ಷ ಲಘುವಾಗಿ ತೆಗೆದುಕೊಂಡಿತ್ತು. ಅಷ್ಟು ಧೈರ್ಯ ಇದ್ದರೆ ವಿಜಯ್ ಯಾಕೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ ಎಂದು ಪ್ರಶ್ನಿಸಿದ್ದರು. ಸಿನಿಮಾ ಕಲಾವಿದರು ರಾಜಕೀಯರಂಗಕ್ಕೆ ಬರುವುದು ಹೊಸದೇನು ಅಲ್ಲ. ತೆರೆಮೇಲೆ ನಟನೆ ನೋಡಿ ಶಿಳ್ಳೆ, ಚಪ್ಪಾಳೆ ಹೊಡೆದವರು ಬಂದು ವೋಟ್ ಹಾಕ್ತಾರಾ ಅಂತ ವ್ಯಂಗ್ಯವಾಡಿದ್ದರು. ಕೆಲ ಅಭಿಮಾನಿಗಳು ವೋಟ್ ಹಾಕಬಹುದು. ಆದರೆ ದೊಡ್ಡಮಟ್ಟದ ಮತದಾರರು ವಿಜಯ್ ಪರ ವಾಲುವುದು ಕಷ್ಟ ಎಂದೇ ಭಾವಿಸಲಾಗಿತ್ತು. ಆದರೆ ಆ ಲೆಕ್ಕಾಚಾರವನ್ನು ಟಿವಿಕೆ ಸುಳ್ಳಾಗಿಸಿದೆ.


Click it and Unblock the Notifications