ಮಹಿಳೆಯರಿಗೆ ತಿಂಗಳಿಗೆ 2,500 ರೂ, ಹಣ.. ಫ್ರೀ ಗ್ಯಾಸ್ ಸಿಲಿಂಡರ್; 6 ಉಚಿತ ಗ್ಯಾರಂಟಿ ಘೋಷಿಸಿದ ವಿಜಯ್
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಡಿಎಂಕೆ, ಎಐಎಡಿಎಂಕೆ ಪಕ್ಷಗಳ ನಡುವೆ ಇದೀಗ ತಮಿಳು ನಟ ವಿಜಯ್ ಟಿವಿಕೆ ಪಕ್ಷ ಕಣಕ್ಕಿಳಿದೆ. ಸ್ವಂತ ಪ್ರಾದೇಶಿಕ ಪಕ್ಷ ಕಟ್ಟಿ ವಿಜಯ್ ಜನಸೇವೆಗೆ ಮುಂದಾಗಿದ್ದಾರೆ. ಈಗಾಗಲೇ ಸಮಾವೇಶ, ರ್ಯಾಲಿಗಳನ್ನು ನಡೆಸಿ ಜನರ ಮತಬೇಟೆಗೆ ಇಳಿದಿದ್ದಾರೆ. ಸದ್ಯ ಮಹಿಳೆಯರಿಗಾಗಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ 'ಅನ್ನಪೂರ್ಣ ಸೂಪರ್ ಸಿಕ್ಸ್ ಸ್ಕೀಮ್' ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಿ ಗ್ಯಾರೆಂಟಿಗಳನ್ನು ಘೋಷಿಸಿ ಅಧಿಕಾರ ಹಿಡಿದಿದ್ದು ಗೊತ್ತೇಯಿದೆ. ತಮಿಳುನಾಡಿನಲ್ಲಿ ಜನರಿಗೆ ಉಚಿತ ಭಾಗ್ಯಗಳನ್ನು ನೀಡಿ ಮತ ಸೆಳೆಯುವುದು ಹೊಸದೇನು ಅಲ್ಲ. ದಶಕಗಳಿಂದ ಡಿಎಂಕೆ, ಎಐಎಡಿಎಂಕೆ ಪಕ್ಷಗಳನ್ನು ಇದನ್ನು ಮಾಡುತ್ತಾ ಬಂದಿವೆ. ಕರ್ನಾಟಕದಲ್ಲಿ ಅದಕ್ಕೆ ಗ್ಯಾರಂಟಿ ಎನ್ನುವ ಹೆಸರು ಕೊಡಲಾಗಿತ್ತು. ಇದೀಗ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಕೂಡ ಇದೇ ಹಾದಿ ಹಿಡಿದಿದ್ದಾರೆ.

ಮಹಾಬಲಿಪುರಂನಲ್ಲಿ ಇಂದು(ಮಾರ್ಚ್ 7) ಪಕ್ಷದ ಮುಖ್ಯಸ್ಥ ವಿಜಯ್ ನೇತೃತ್ವದಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗಿದೆ. ಭಾರೀ ಸಮಾವೇಶದಲ್ಲಿ ಸಾಕಷ್ಟು ಜನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದೇ ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಪರ ನಿಲ್ಲುವುದಾಗಿ ವಿಜಯ್ ಹೇಳಿದ್ದಾರೆ. ಅದಕ್ಕಾಗಿ ವಿಶೇಷ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದ್ದಾರೆ. ಗ್ಯಾರಂಟಿ ಎನ್ನುವ ಪದ ಬಳಸದೇ ಮಹಿಳೆಯರಿಗಾಗಿ ಒಂದಷ್ಟು ಭರವಸೆಯನ್ನು ನೀಡಿದ್ದಾರೆ.
1. 60 ವರ್ಷ ವಯಸ್ಸಿನವರೆಗಿನ ಎಲ್ಲಾ ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2500 ರೂಪಾಯಿಗಳನ್ನು ನೀಡಲಾಗುವುದು.
2. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 6 ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು.
3. ಮದುವೆ ಸಮಯದಲ್ಲಿ ಹೆಣ್ಣು ಹೆತ್ತವರಿಗೆ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ ತಾಯಿಯ ಮನೆಯ ಪರವಾಗಿ ಅಣ್ಣನಾಗಿ ಕಾರ್ಯನಿರ್ವಹಿಸುತ್ತೇನೆ ಎಂದ ವಿಜಯ್ ಹೇಳಿದ್ದಾರೆ. ಪ್ರತಿಯೊಬ್ಬ ತಂಗಿಗೆ ಮದುವೆಯ ಸಮಯದಲ್ಲಿ ಒಂದು ಸವರನ್ ಚಿನ್ನ ಮತ್ತು ಒಂದು ರೇಷ್ಮೆ ಸೀರೆ ನೀಡಲಾಗುವುದು.
4. ಮಹಿಳೆಯರ ಸುರಕ್ಷತೆಗಾಗಿ ಶೇರ್-ಆಟೋಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಪ್ಯಾನಿಕ್ ಬಟನ್ಗಳು ಇರುವಂತೆ ವ್ಯವಸ್ಥೆ ಮಾಡುತ್ತೇವೆ.
5. ಜೀರೊ ಡಾರ್ಕ್ ಸ್ಪಾಟ್ಸ್. ಮಹಿಳೆಯರ ಸುರಕ್ಷತೆಗಾಗಿ ಎಲ್ಲಾ ಪ್ರದೇಶಗಳಲ್ಲಿ ಯಾವಾಗಲೂ ಸಿಸಿಟಿವಿ ಕ್ಯಾಮೆರಾಗಳು ಮತ್ತು ಕೇಂದ್ರೀಕೃತ ಕಣ್ಗಾವಲು ಜಾಲ ಇರುತ್ತದೆ.
6. ತಮಿಳುನಾಡಿನಲ್ಲಿ ಜನಿಸುವ ಪ್ರತಿ ಮಗುವಿಗೆ ಚಿನ್ನದ ಉಂಗುರ ನೀಡುವ ಜೊತೆಗೆ, ನವಜಾತ ಶಿಶುವಿಗೆ ಆಹಾರ, ಡೈಪರ್ಗಳು ಮತ್ತು ಬಟ್ಟೆಗಳನ್ನು ಒಳಗೊಂಡಿರುವ 'ಬೇಬಿ ವೆಲ್ಕಮ್' ಕಿಟ್ ನೀಡುವುದಾಗಿ ವಿಜಯ್ ಹೇಳಿದ್ದಾರೆ.
ಇದೇ ವೇಳೆ ಸರ್ಕಾರಿ ಯೋಜನೆಗಳನ್ನು 'ಉಚಿತ ಸಹಾಯ' ಎಂದು ಅಪಹಾಸ್ಯ ಮಾಡುವವರಿಗೆ ವಿಜಯ್ ತಿರುಗೇಟು ನೀಡಿದ್ದಾರೆ. ಜನರ ಹಣವನ್ನು ಜನರಿಗೆ ಹಿಂದಿರುಗಿಸುವುದು ಸರ್ಕಾರದ ಕರ್ತವ್ಯ ಎಂದಿದ್ದಾರೆ.
ಇದೇ ವೇಳೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರವನ್ನು ವಿಜಯ್ ಟಾರ್ಗೆಟ್ ಮಾಡಿ ಮಾತನಾಡಿದರು. ಜನರ ತೆರಿಗೆ ಹಣ ಜನರಿಗೆ ಸರಿಯಾಗಿ ಬಂದು ಸೇರುತ್ತಿಲ್ಲ. ಸಾಕಷ್ಟು ಹಣ ಮಂತ್ರಿಗಳ ಜೇಬು ಸೇರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
50ಕ್ಕೂ ಅಧಿಕ ಸಿನಿಮಾಗಳನ್ನು ನಟ ವಿಜಯ್ ನಟಿಸಿದ್ದಾರೆ. ರಜನಿಕಾಂತ್ ಬಿಟ್ಟರೆ ತಮಿಳು ಚಿತ್ರರಂಗದಲ್ಲಿ ಹೆಚ್ಚು ಕ್ರೇಜ್ ಇರುವ ನಟನಾಗಿ ಗುರ್ತಿಸಿಕೊಂಡಿದ್ದಾರೆ. ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅದನೆಲ್ಲಾ ಬಿಟ್ಟು ಈಗ ರಾಜಕೀಯ ಅಂಗಳಕ್ಕೆ ಜಿಗಿದಿದ್ದಾರೆ. ಅಭಿಮಾನಿಗಳು ಇದನ್ನು ಸ್ವಾಗತಿಸಿದ್ದಾರೆ. ಮತ್ತೊಂದು ಕಡೆ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲಿ ವಿಜಯ್ ಡಿವೋರ್ಸ್ ವಿವಾದ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications











