ಹಿಂದಿ ಹೇರಿಕೆಗೆ ನಾವು ಒಪ್ಪಲ್ಲ.. ತಮಿಳುನಾಡಿನಲ್ಲಿ ದ್ವಿಭಾಷೆ ನೀತಿ ಅನುಸರಿಸುತ್ತೇವೆ; ಉದಯನಿಧಿ ಸ್ಟಾಲಿನ್
ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆ ವಿಷಯಕ್ಕೆ ಅಂಕಗಳು ಇರಲ್ಲ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿದೆ. ದಿಢೀರನೆ ಸರ್ಕಾರ ಕೈಗೊಂಡ ನಿರ್ಧಾರದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಬಹುತೇಕರು ಇದನ್ನು ಸ್ವಾಗತಿಸಿದ್ದಾರೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ನಾವು ಒಪ್ಪಲ್ಲ ಎಂದು ನಟ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
ತಮಿಳುನಾಡು ಉಪಮುಖ್ಯಮಂತ್ರಿ ಕೂಡ ಆಗಿರುವ ಉದಯನಿಧಿ ಸ್ಟಾಲಿನ್ ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ಉದಯನಿಧಿ ಅಸಮಾಧಾನ ಹೊರ ಹಾಕಿದ್ದಾರೆ. ಇತ್ತೀಚೆಗೆ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪ್ರಧಾನ್ ಟೀಕಿಸಿದ್ದರು. ಇದರ ಬೆನ್ನಲ್ಲೇ ಪುತ್ರ ಉದಯನಿಧಿ ಸ್ಟಾಲಿನ್ ತಿರುಗೇಟು ನೀಡಿದ್ದಾರೆ.

ಮೊದಲಿನಿಂದಲೂ ತಮಿಳುನಾಡಿನಲ್ಲಿ ದ್ವಿಭಾಷೆ ನೀತಿ ಜಾರಿಯಲ್ಲಿದೆ. ತಮಿಳು ಜೊತೆಗೆ ಇಂಗ್ಲೀಷ್ ಭಾಷೆಯನ್ನು ಮಾತ್ರ ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಇದನ್ನೇ ಮುಂದುವರೆಸುತ್ತೇವೆ ಎಂದು ಉದಯನಿಧಿ ಹೇಳಿದ್ದಾರೆ. ತಿರುವೈಯಾರುವಿನಲ್ಲಿ ಡಿಎಂಕೆ ಅಭ್ಯರ್ಥಿ ದುರೈ ಚಂದ್ರಶೇಖರನ್ ಪರ ಪ್ರಚಾರದ ವೇಳೆ ಉದಯನಿಧಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಎನ್ಇಪಿ ಮೂಲಕ ತಮಿಳುನಾಡಿನ ಮೇಲೆ ಹಿಂದಿ ಭಾಷೆ ಹೇರಲು ಒತ್ತಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ನೀತಿ ಸ್ವೀಕರಿಸಿದರೆ ಹಿಂದಿ ಹೇರಿಕೆಗೆ ಅನುಮತಿ ನೀಡಿದಂತೆ ಆಗುತ್ತದೆ. "ನಾವು ಯಾವುದೇ ಕಾರಣಕ್ಕೂ ಇದನ್ನು ಎಂದಿಗೂ ಒಪ್ಪುವುದಿಲ್ಲ. ಮುಂದೆ ಕೂಡ ತಮಿಳು ಹಾಗೂ ಇಂಗ್ಲಿಷ್ ದ್ವಿಭಾಷಾ ನೀತಿಯನ್ನೇ ನಾವು ಅನುಸರಿಸುತ್ತೇವೆ" ಎಂದು ಉದಯನಿಧಿ ತಿಳಿಸಿದ್ದಾರೆ.
ಸದ್ಯ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ಏಪ್ರಿಲ್ 23ರಂದು ಮತದಾನ ನಡೆಯಲಿದೆ. ಹಾಗಾಗಿ ಡಿಎಂಕೆ, ಎಐಎಡಿಎಂಕೆ ಹಾಗೂ ಟಿವಿಕೆ ಪಕ್ಷಗಳು ಭರ್ಜರಿ ಪ್ರಸಾರ ನಡೆಸುತ್ತಿವೆ. ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಡಿಎಂಕೆ ಹವಣಿಸುತ್ತಿದೆ. ತಮ್ಮ ಪಕ್ಷವನ್ನು ಗೆಲ್ಲಿಸಲು ತಂದೆ ಸ್ಟಾಲಿನ್ ಜೊತೆ ಉದಯನಿಧಿ ಟೊಂಕಕಟ್ಟಿ ನಿಂತಿದ್ದಾರೆ.
ಕರ್ನಾಟಕದಲ್ಲಿ ಕನ್ನಡ, ಇಂಗ್ಲೀಷ್ ಜೊತೆಗೆ ಹಿಂದಿಯನ್ನು ಶಾಲೆಗಳಲ್ಲಿ ಕಲಿಸುತ್ತಿದ್ದಾರೆ. ಅದೇ ರೀತಿ ಉತ್ತರ ಭಾರತದ ಶಾಲೆಗಳಲ್ಲಿ ದಕ್ಷಿಣದ ಭಾಷೆ ಕಲಿಸುತ್ತಿಲ್ಲ. ನಮ್ಮ ಮಕ್ಕಳು ಮಾತ್ರ 3 ಭಾಷೆ ಯಾಕೆ ಕಲಿಯಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ, ಗೀತ ಸಾಹಿತಿ ಕವಿರಾಜ್ ಹಾಗೂ ನಟಿ ಪೂಜಾ ಗಾಂಧಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದರು. ಇನ್ನುಳಿದಂತೆ ಕನ್ನಡದ ಯಾವುದೇ ನಟ ಈ ಬಗ್ಗೆ ಬಹಿರಂಗವಾಗಿ ಮಾತನಾಡಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಪೋಸ್ಟ್ ಮಾಡಿ ಪ್ರತಿಕ್ರಿಯಿಸಲಿಲ್ಲ.
ಎಸ್ಎಲ್ಎಲ್ಸಿ ಹಿಂದಿ ವಿಷಯ ಪರೀಕ್ಷೆಗೆ ಅಂಕ ಕೊಡಲ್ಲ, ಗ್ರೇಡ್ ಕೊಡುವ ನಿರ್ಧಾರವನ್ನು ಸರ್ಕಾರ ಪುನರ್ ಪರಿಶೀಲನೆ ಮಾಡಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಅವರ ವಿಶೇಷ ಕಾರ್ಯದರ್ಶಿ ಆರ್. ಪ್ರಭು ಶಂಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವುದು ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಜ್ಯಪಾಲರು ಈ ವಿಚಾರದಲ್ಲಿ ತಲೆ ಹಾಕುವುದು ಬೇಡ ಎಂದಿದ್ದಾರೆ. ಸದ್ಯಕ್ಕೆ ಈ ವಿವಾದ ಬಗೆ ಹರಿಯುವಂತೆ ಕಾಣುತ್ತಿಲ್ಲ.
ತಮಿಳುನಾಡು ಮಾಹಿ ಮುಖ್ಯಮಂತ್ರಿ ಕರುಣಾನಿಧಿ ಮೊಮ್ಮಗ ಉದಯನಿಧಿ ಸ್ಟಾಲಿನ್ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. 2009ರಲ್ಲಿ 'ಆಧವನ್' ಎಂಬ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. 'ಗೆತ್ತು', 'ಮಣಿತನ್', 'ನಿಮಿರ್', 'ಮಾಮನನ್' ಅವರು ನಟಿಸಿರುವ ಕೆಲ ಸಿನಿಮಾಗಳು.


Click it and Unblock the Notifications











