ದಕ್ಷಿಣ ಭಾರತದ ಪೋಷಕ ನಟ ವಿಜಯ್ ರಂಗರಾಜು ನಿಧನ
ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಪೋಷಕ ನಟ ವಿಜಯ್ ರಂಗರಾಜು ನಿಧನರಾಗಿದ್ದಾರೆ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅವರು ಹೆಚ್ಚು ನಟಿಸಿದ್ದರು. ಫೈಟ್ ಮಾಸ್ಟರ್, ಫೈಟರ್ ಆಗಿ ಗುರ್ತಿಸಿಕೊಂಡಿದ್ದ ಅವರು ಬಳಿಕ ಖಳನಟನಾಗಿತೂ ನಟಿಸಿದ್ದರು. ಕೆಲ ವರ್ಷಗಳ ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅಸಭ್ಯವಾಗಿ ಮಾತನಾಡಿ ವಿಜಯ್ ರಂಗರಾಜು ವಿವಾದ ಸೃಷ್ಟಿಸಿಕೊಂಡಿದ್ದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ವಿಜಯ್ ರಂಗರಾಜು ಬಳಲುತ್ತಿದ್ದರು. ಸೋಮವಾರ(ಜನವರಿ 20) ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಅವರು ನಿಧನರಾಗಿರುವುದಾಗಿ ವರದಿಯಾಗಿದೆ. 1994ರಲ್ಲಿ ಬಂದ ತೆಲುಗಿನ 'ಭೈರವ ದ್ವೀಪಂ' ಚಿತ್ರದಲ್ಲಿ ಬಣ್ಣ ಹಚ್ಚಿ ವಿಜಯ್ ರಂಗರಾಜು ಗಮನ ಸೆಳೆದರು. 1976ರಲ್ಲಿ 'ಸೀತಾಕಲ್ಯಾಣಂ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು.

ಇತ್ತೀಚಿನ ವರ್ಷಗಳಲ್ಲಿ ವಿಜಯ್ ರಂಗರಾಜು ನಟಿಸುವುದು ಕಮ್ಮಿ ಮಾಡಿದ್ದರು. 5 ವರ್ಷಗಳ ಹಿಂದೆ ಕನ್ನಡ ನಟ ಸಾಹಸಸಿಂಹ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದರು. ಬಳಿಕ ಕ್ಷಮೆ ಕೋರಿ ವೀಡಿಯೋ ಮಾಡಿ ಮಾಧ್ಯಮಗಳಿಗೆ ತಲುಪಿಸಿದ್ದರು. ಕೆಲ ವರ್ಷಗಳ ಹಿಂದೆ ಯುಟ್ಯೂಬ್ ಸಂದರ್ಶನಗಳಲ್ಲಿ ಮಾತನಾಡಿ ಖ್ಯಾತ ಕಲಾವಿದರ ವಿರುದ್ಧ ವಿಜಯ್ ರಂಗರಾಜು ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದರು.
ತಾನು ಸಿನಿಮಾಗಳಲ್ಲಿ ನಟಿಸುವಾಗ ಆ ನಟ ಹೀಗೆ ಮಾಡ್ತಿದ್ದ, ಈ ನಟನ ನಡವಳಿಕೆ ಸರಿಯಿರಲಿಲ್ಲ ಎಂದು ವಿಜಯ್ ರಂಗರಾಜು ಹೇಳುತ್ತಿದ್ದರು. ಮೋಹನ್ ಲಾಲ್, ರಜನಿಕಾಂತ್ ಬಗ್ಗೆಯೂ ಬಾಯಿಗೆ ಬಂದಂತೆ ಮಾತನಾಡಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ತೆಲುಗು ಸಂದರ್ಶನವೊಂದರಲ್ಲಿ ಮಾತನಾಡಿ ಕನ್ನಡ ನಟ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಕರ್ನಾಟಕದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಕನ್ನಡ ಸಿನಿಮಾ ತಾರೆಯರು ವಿಜಯ್ ರಂಗರಾಜು ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು. ನಟರಾದ ಕಿಚ್ಚ ಸುದೀಪ್, ಪುನೀತ್ ರಾಜ್ಕುಮಾರ್, ಜಗ್ಗೇಶ್ ಅಸಮಾಧಾಣ ಹೊರ ಹಾಕಿದ್ದರು. ವಿಷ್ಣುವರ್ಧನ್ ಅಭಿಮಾನಿ ಸಂಘಗಳು, ಕನ್ನಡ ಪರ ಸಂಘಟನೆಗಳು ಕೂಡ ವಿಜಯ್ ರಂಗರಾಜು ಹೇಳಿಕೆಯನ್ನು ಖಂಡಿಸಿದ್ದರು.
ನೂರಾರು ಸಿನಿಮಾಗಳಲ್ಲಿ ಸಾಹಸ ಕಲಾವಿದನಾಗಿ, ಪೋಷಕ ಕಲಾವಿದನಾಗಿ ವಿಜಯ್ ರಂಗರಾಜು ನಟಿಸಿದ್ದರು. ಆದರೆ ವಿಷ್ಣುವರ್ಧನ್ ಬಗ್ಗೆ ಇದೊಂದು ಹೇಳಿಕೆಯಿಂದ ಭಾರೀ ಸುದ್ದಿ ಆಗಿಬಿಟ್ಟರು. ಕೊನೆಗೆ ಮೊಣಕಾಲೂರಿ ದಾದಾ ಹಾಗೂ ಕನ್ನಡಿಗರ ಕ್ಷಮೆ ಕೇಳಿದ್ದರು. ಆ ವೀಡಿಯೋ ವೈರಲ್ ಆಗಿತ್ತು.
ಚಿತ್ರರಂಗಕ್ಕೆ ಬರುವ ಮುನ್ನ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ವಿಜಯ್ ರಂಗರಾಜು ಭಾಗವಹಿಸುತ್ತಿದ್ದರು. ಅಂದಹಾಗೆ ಅವರ ಮೊದಲ ಹೆಸರು ರಾಜ್ಕುಮಾರ್. ಬಳಿಕ ಹೆಸರು ಬದಲಿಸಿಕೊಂಡಿದ್ದರು. ಮದ್ರಾಸ್ನಲ್ಲಿ ಕೆಲ ನಾಟಕಗಳಲ್ಲಿ ನಟಿಸಿದ್ದರು. ಹಾಗಾಗಿ ಚಿತ್ರರಂಗಕ್ಕೆ ಬರಲು ಸುಲಭವಾಯಿತು. "ಕನ್ನಡದ 'ಮುತ್ತೈದೆ ಭಾಗ್ಯ' ಚಿತ್ರದಲ್ಲಿ ನಟಿಸಿದ್ದೆ. ಆ ಸಮಯದಲ್ಲಿ ನಟ ವಿಷ್ಣುವರ್ಧನ್ಗೆ ಲೇಡಿಸ್ ವೀಕ್ನೆಸ್ ಇದೆ. ಮೊದಲಿನಿಂದಲೂ ಹಾಗೆ" ಎಂದು ವಿಜಯ್ ರಂಗರಾಜ್ ಹೇಳಿಕೆ ನೀಡಿದ್ದರು.
ತೆಲುಗಿನ 'ಉರಿ', 'ಯಜ್ಞಂ', ವಿಶಾಖ ಎಕ್ಸ್ಪ್ರೆಸ್, 'ಢಮರುಕಂ', ಬ್ಯಾಂಡ್ ಬಾಜಾ', 'ಶ್ಲೋಕಂ' ಸೇರಿ ಕೆಲ ಸಿನಿಮಾಗಳಲ್ಲಿ ವಿಜಯ್ ರಂಗರಾಜು ನಟಿಸಿದ್ದಾರೆ. ವಿಜಯ್ ರಂಗರಾಜು ಮಹಾರಾಷ್ಟ್ರ ಪುಣೆಯಲ್ಲಿ ಹುಟ್ಟಿದರು. ಆಂಧ್ರದ ಗುಂತಕಲ್ನಲ್ಲಿ ಓದಿ ಬೆಳೆದರು.
ಕಳೆದ ವಾರ ಹೈದರಾಬಾದ್ನಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ವಿಜಯ್ ರಂಗರಾಜು ಗಾಯಗೊಂಡಿದ್ದರು, ಬಳಿಕ ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅಭಿಮಾನಿಗಳು, ಆಪ್ತರು ರಂಗರಾಜು ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.


Click it and Unblock the Notifications











