ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲ್ಲೆ: ಸ್ಪಷ್ಟನೆ ನೀಡಿದ ವಿಜಯ್ ಸೇತುಪತಿ
ಬಹುಭಾಷಾ ನಟ ವಿಜಯ್ ಸೇತುಪತಿ ಕೆಲವು ದಿನಗಳ ಹಿಂದಷ್ಟೆ ಪುನೀತ್ ರಾಜ್ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ, ಮಾಧ್ಯಮಗಳೆದುರು ಪುನೀತ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು. ಅದರ ಹಿಂದಿನ ದಿನವಷ್ಟೆ ವಿಜಯ್ ಮೇಲೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದ.
ನಟ ವಿಜಯ್ ನವೆಂಬರ್ 02 ರಂದು ರಾತ್ರಿ, ವಿಮಾನದಲ್ಲಿ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಅವರೊಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ ಯುವಕನೊಬ್ಬ ವಿಜಯ್ ಹಾಗೂ ಅವರ ಮ್ಯಾನೇಜರ್ ಜೊತೆ ಜಗಳವಾಡಿ, ವಿಜಯ್ ಸೇತುಪತಿ ವಿಮಾನ ನಿಲ್ದಾಣದಿಂದ ಹೊರಗೆ ಬರಬೇಕಾದರೆ ಹಲ್ಲೆ ಮಾಡಿದ್ದ. ಆ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿತ್ತು. ನಂತರ ವೈರಲ್ ಆಯಿತು.
ಘಟನೆ ಬಗ್ಗೆ ಇದೀಗ ಮಾತನಾಡಿರುವ ನಟ ವಿಜಯ್ ಸೇತುಪತಿ, ''ಅದೊಂದು ಬಹಳ ಸಣ್ಣ ಘಟನೆ. ಅದನ್ನು ಅಷ್ಟು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ'' ಎಂದಿದ್ದಾರೆ.

''ಅದೊಂದು ಬಹಳ ಸಣ್ಣ ಘಟನೆ ಆದರೆ ಅಲ್ಲಿದ್ದ ಯಾರೊ ಒಬ್ಬರು ಮೊಬೈಲ್ನಲ್ಲಿ ಅದನ್ನು ಸೆರೆಹಿಡಿದಿದ್ದರಿಂದ ವಿಷಯ ದೊಡ್ಡದಾಯಿತು. ಮೊಬೈಲ್ ಇದ್ದವರೆಲ್ಲ ಕ್ಯಾಮೆರಾಮನ್ಗಳಾಗಿದ್ದಾರೆ ಹಾಗಾಗಿ ಇಂಥಹಾ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ'' ಎಂದಿದ್ದಾರೆ ಸೇತುಪತಿ.
''ಆ ಯುವಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ಹಾಗೆ ವರ್ತಿಸುತ್ತಾನೆ. ಮಾಸ್ಕ್ ಹಾಕಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯಾರು ಕುಡಿದಿದ್ದಾರೆ ಯಾರು ಕುಡಿದಿಲ್ಲ ಎಂಬುದು ಹೇಳುವುದು ಸಹ ಕಷ್ಟ. ಹಲ್ಲೆಗೆ ಮುಂದಾದ ವ್ಯಕ್ತಿ ನನ್ನ ಅಭಿಮಾನಿ ಅಲ್ಲ ಬದಲಿಗೆ, ವಿಮಾನದಲ್ಲಿ ಸಹ ಪ್ರಯಾಣಿಕ. ವಿಮಾನದಲ್ಲಿಯೇ ನಮ್ಮೊಂದಿಗೆ ಜಗಳ ಆರಂಭಿಸಿದ. ವಿಮಾನ ಇಳಿದ ಮೇಲೂ ಜಗಳ ಮುಂದುವರೆಸಿದ'' ಎಂದಿದ್ದಾರೆ ಸೇತುಪತಿ.
ವಿಜಯ್ಗೆ ಪ್ರತ್ಯೇಕ ಭದ್ರತಾ ಸಿಬ್ಬಂದಿ ಇಲ್ಲ, ಈ ಬಗ್ಗೆ ಪ್ರಶ್ನೆ ಮಾಡಿದಾಗ ಉತ್ತರ ನೀಡಿದ ನಟ, ''ನನ್ನೊಂದಿಗೆ ನನ್ನ ಗೆಳೆಯ ಇರುತ್ತಾನೆ. ಮೂವತ್ತು ವರ್ಷಗಳಿಂದಲೂ ನಾವಿಬ್ಬರು ಗೆಳೆಯರು. ಈಗ ಅವನೇ ನನ್ನ ಮ್ಯಾನೇಜರ್. ನನ್ನ ಸುತ್ತಲೂ ಜನರರಿರುವುದು ನನಗೆ ಇಷ್ಟವಾಗುವುದಿಲ್ಲ. ನನಗೆ ಜನರೊಂದಿಗೆ ಬೆರೆಯುವುದು, ಮಾತನಾಡುವುದು ಇಷ್ಟ. ಜನರಿಂದ ದೂರ ಉಳಿದು ಸ್ಟಾರ್ ಎನಿಸಿಕೊಳ್ಳಲು ನನಗೆ ಇಷ್ಟವಿಲ್ಲ'' ಎಂದರು.
ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ ಆ ವ್ಯಕ್ತಿಯನ್ನು ನಾವು ಪೊಲೀಸರಿಗೆ ಒಪ್ಪಿಸಿದೆವು. ಅಲ್ಲಿಗೆ ಪ್ರಕರಣ ಮುಗಿಯಿತು. ನನ್ನ ಅಭಿಮಾನಿಗಳಿಂದ ನನಗೆ ಎಂದೂ ತೊಂದರೆ ಆಗಿಲ್ಲ, ಯಾರಿಂದಲೂ ನನ್ನನ್ನು ರಕ್ಷಿಸುವ ಅಗತ್ಯವೂ ಇಲ್ಲ. ಜನರಿಗೆ ನೀವು ಪ್ರೀತಿ ತೋರಿಸಿದರೆ ಅವರು ಮರಳಿ ನಿಮ್ಮನ್ನು ಪ್ರೀತಿಸುತ್ತಾರೆ ಅಷ್ಟೆ'' ಎಂದಿದ್ದಾರೆ ಸೇತುಪತಿ.
ಕೇರಳ ಮೂಲದ ವ್ಯಕ್ತಿ ವಿಜಯ್ ಸೇತುಪತಿ ಮತ್ತು ಅವರ ಮ್ಯಾನೇಜರ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದ ಮೂಲದ ಆ ಯುವಕ ಆದರೆ ಬೆಂಗಳೂರಿನಲ್ಲಿ ವಾಸವಿದ್ದಾನೆ. ನವೆಂಬರ್ 2ರ ರಾತ್ರಿ ವಿಮಾನ ನಿಲ್ದಾದಲ್ಲಿ ಆ ವ್ಯಕ್ತಿ ವಿಜಯ್ ಸೇತುಪತಿ ಅವರ ಜೊತೆಗೆ ಸೆಲ್ಫಿ ಕೇಳಿದ್ದನಂತೆ. ಆದರೆ ಆತ ಕುಡಿದಿರೋದು ಗೊತ್ತಾಗಿ ವಿಜಯ್ ಫೋಟೊ ಕೊಡಲು ನಿರಾಕರಿಸಿದ್ದಾರೆ. ಆಗ ವಿಜಯ್ ಸೇತುಪತಿ ಸಹಾಯಕ ಆ ವ್ಯಕ್ತಿಯನ್ನು ತಳ್ಳಿ ಮುಂದೆ ಸಾಗಿದ್ದಾನೆ. ಇದೇ ಕಾರಣಕ್ಕೆ ಕೋಪಗೊಂಡ ಆ ವ್ಯಕ್ತಿ ವಿಜಯ್ ಸೇತು ಸಹಾಯಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ.
ನವೆಂಬರ್ 03 ರಂದು ವೇಳೆಗೆ ಕಂಠೀರವ ಸ್ಟುಡಿಯೋಕ್ಕೆ ತೆರಳಿದ ನಟ ವಿಜಯ್ ಸೇತುಪತಿ ಪುನೀತ್ ರಾಜ್ಕುಮಾರ್ ಸಮಾಧಿಗೆ ಹೂಮಾಲೆ ಇರಿಸಿ ಕೈಮುಗಿದು ವಂದಿಸಿದ್ದಾರೆ. ಈ ಸಮಯ ಸುದ್ದಿಗಾರರೊಟ್ಟಿಗೆ ಮಾತನಾಡಿದ ವಿಜಯ್ ಸೇತುಪತಿ, ''ನಾನು ಈವರೆಗೆ ಅವರನ್ನು ಭೇಟಿಯೇ ಆಗಿಲ್ಲ, ಆದರೆ ನನಗೇ ಇಷ್ಟು ನೋವಾಗುತ್ತಿದೆ ಎಂದರೆ ಅವರ ಅಭಿಮಾನಿಗಳಿಗೆ, ಅವರ ಕುಟುಂಬಕ್ಕೆ, ಕನ್ನಡ ಜನತೆಗೆ ಎಷ್ಟು ನೋವಾಗಿದೆ ಎಂದು ನಾನು ಊಹಿಸಬಲ್ಲೆ. ಅವರು ಆಸ್ಪತ್ರೆಗೆ ದಾಖಲಾದ ಸುದ್ದಿ ಗೊತ್ತಾಯಿತು, ಅವರು ಫಿಟ್ ಆಗಿರುವ ವ್ಯಕ್ತಿ ಮರಳಿ ಬರುತ್ತಾರೆ ಎಂದು ಎಣಿಸಿದ್ದೆ ಆದರೆ ಹೀಗೆ ಆಗುತ್ತದೆಯೆಂದು ನಾನು ಊಹಿಸಿರಲಿಲ್ಲ. ನೆನೆಪಿಸಿಕೊಳ್ಳುವುದಕ್ಕೂ ಭಯವಾಗುತ್ತದೆ. ಹೀಗೆ ಆಗಬಾರದಿತ್ತು'' ಎಂದಿದ್ದಾರೆ.


Click it and Unblock the Notifications











