ಸಹಾಯ ಮಾಡಿದ್ದ ನಿರ್ದೇಶಕ ಸಾವು: ಕುಟುಂಬಕ್ಕೆ ಆಸರೆಯಾದ ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿ ದಕ್ಷಿಣ ಭಾರತದ ಅತ್ಯಂತ ಬ್ಯುಸಿ ನಟ. ವಿಜಯ್ ಸೇತುಪತಿ ಗಂಟೆಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಅಷ್ಟೋಂದು ಬ್ಯುಸಿ ನಟ ಅವರು.
ಆದರೆ ವಿಜಯ್ ಸೇತುಪತಿ ಇಂದು ಈ ಸ್ಥಾಯಿಗೆ ಬರುವ ಮುನ್ನಾ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಸಣ್ಣ-ಸಣ್ಣ ಪಾತ್ರಗಳು, ಕಿರುಚಿತ್ರಗಳಲ್ಲಿ ನಟಿಸಿ ವಿಜಯ್ ಸೇತುಪತಿ ಇಂದು ದೇಶವೇ ಗುರುತಿಸುವ ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ ತಾವು ಕಷ್ಟದಲ್ಲಿದ್ದಾಗ ತಮಗೆ ಸಹಾಯ ಮಾಡಿದವರನ್ನು ಮರೆತಿಲ್ಲ ವಿಜಯ್. ಇದಕ್ಕೆ ತಾಜಾ ಉದಾಹರಣೆಯೊಂದು ದೊರಕಿದೆ.
ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ಎಸ್.ಪಿ ಜನನಾಥನ್ ಅವರು ಮಾರ್ಚ್ 14 ರಂದು ನಿಧನ ಹೊಂದಿದರು. ವಿಜಯ್ ಸೇತುಪತಿ ಅವರ ನಟನಾ ಜೀವನದ ಆರಂಭದಲ್ಲಿ ಅವರಿಗೆ ಅವಕಾಶ ನೀಡಿ ಸಹಾಯ ಮಾಡಿದ ವ್ಯಕ್ತಿಗಳಲ್ಲಿ ಪ್ರಮುಖರು ನಿರ್ದೇಶಕ ಎಸ್.ಪಿ ಜನನಾಥನ್.

ಜನನಾಥನ್ ಅವರ ಕೆಲವು ಸಿನಿಮಾಗಳು ಫ್ಲಾಪ್ ಆದ ಬಳಿಕ ಅವರಿಗೆ ಅವಕಾಶಗಳು ಸಿಗುವುದು ನಿಂತುಹೋಗಿತ್ತು. 2015 ರಲ್ಲಿ ಅವರು ನಿರ್ದೇಶಿಸಿದ್ದ ಕೊನೆಯ ಸಿನಿಮಾ ಬಿಡುಗಡೆ ಆಗಿತ್ತು. ಕೊನೆಗೆ ವಿಜಯ್ ಸೇತುಪತಿ ಅವರೇ ಜನನಾಥನ್ ಅವರಲ್ಲಿ ಹುರುಪು ತುಂಬಿ ನಿರ್ದೇಶನ ಮಾಡುವಂತೆ ಹೇಳಿ ಆ ಸಿನಿಮಾಕ್ಕೆ ವಿಜಯ್ ಅವರೇ ಬಂಡವಾಳ ಸಹ ಹೂಡಿದ್ದರು.
ಆ ರೀತಿ 'ಲಾಭಂ' ಹೆಸರಿನ ಸಿನಿಮಾವನ್ನು ಎಸ್.ಪಿ ಜನನಾಥನ್ ನಿರ್ದೇಶಿಸಿದರು. ಈ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಆದರೆ ಈ ಒಳಗಾಗಿ ಜಗನ್ನಾಥ್ ನಿಧನರಾಗಿದ್ದಾರೆ. ಜನನಾಥನ್ ಅವರು ಆಸ್ಪತ್ರೆಯಲ್ಲಿದ್ದಾಗ ಅವರ ವೈದ್ಯಕೀಯ ಶುಲ್ಕಗಳನ್ನು ವಿಜಯ್ ಸೇತುಪತಿ ಅವರೇ ಪಾವತಿಸುತ್ತಿದ್ದರಂತೆ.
ಎಸ್.ಪಿ ಜನನಾಥನ್ ಅವರು ತಮಗೆ ಇತರರಿಂದ ಅವಕಾಶ ಕೊಡಿಸುತ್ತಿದ್ದುದಲ್ಲದೆ ತಮಗೆ ಆರ್ಥಿಕವಾಗಿಯೂ ಹಲವಾರು ಬಾರಿ ಸಹಾಯ ಮಾಡಿದ್ದಾರೆ ಎಂದು ವಿಜಯ್ ಸೇತುಪತಿ ಈ ಹಿಂದೆ ಹೇಳಿಕೊಂಡಿದ್ದರು.
ಜಗನ್ನಾಥ್ ಅಂತಿಮ ಯಾತ್ರೆಯಲ್ಲಿ ಬಂಧುವಂತೆ ಪಾಲ್ಗೊಂಡ ವಿಜಯ್ ಸೇತುಪತಿ. ಅಂತ್ಯಕ್ರಿಯೆ ವೇಳೆ ಅಲ್ಲಿಯೇ ಇದ್ದು, ಜನನಾಥನ್ ಅವರ ಕುಟುಂಬಕ್ಕೆ ಸ್ಥೈರ್ಯ ತುಂಬಿದ್ದಾರೆ. ಜೊತೆಗೆ ಅವರ ಕುಟುಂಬಕ್ಕೆ ಸಹಾಯ ಮಾಡುವುದಾಗಿಯೂ ಹೇಳಿದ್ದಾರೆ. ವಿಜಯ್ ಸೇತುಪತಿ ಅವರ ಈ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.


Click it and Unblock the Notifications











