ಆಕೆ ನನ್ನ ಮಗಳಿದ್ದಂತೆ ಆಕೆಯನ್ನು ಆ ದೃಷ್ಟಿಯಲ್ಲಿ ನೋಡಲಾರೆ: ವಿಜಯ್ ಸೇತುಪತಿ
ನಟ ವಿಜಯ್ ಸೇತುಪತಿಗೆ ದಿನಕ್ಕೆ ಎರಡಾದರೂ ಚಿತ್ರಕತೆಗಳು ಬರುತ್ತವೆ. ಅಳೆದು-ತೂಗಿ ಆಯ್ಕೆ ಮಾಡಿದರೂ ಸೇತುಪತಿ ಕೈಲಿ ಪ್ರಸ್ತುತ ಹತ್ತಾದರೂ ಸಿನಿಮಾಗಳಿವೆ.
ಕತೆ, ತಮ್ಮ ಪಾತ್ರ, ಕತೆ ಸಮಾಜಕ್ಕೆ ನೀಡುತ್ತಿರುವ ಸಂದೇಶ ಇನ್ನಿತರೆ ಅಂಶಗಳನ್ನು ನೋಡಿ ವಿಜಯ್ ಸೇತುಪತಿ ಚಿತ್ರಕತೆಯನ್ನು ಆಯ್ಕೆ ಮಾಡುತ್ತಾರೆ ಅಥವಾ ನಿರಾಕರಿಸುತ್ತಾರೆ. ಇತ್ತೀಚೆಗೆ ಸೇತುಪತಿ ಚಿತ್ರಕತೆಯೊಂದನ್ನು ನಿರಾಕರಿಸಿದ್ದಾರೆ, ಅದಕ್ಕೆ ಕಾರಣ ಸಿನಿಮಾದ ನಾಯಕಿ.
ವಿಜಯ್ ಸೇತುಪತಿ ಜೊತೆಗೆ ತೆಲುಗಿನ 'ಉಪ್ಪೆನ' ಸಿನಿಮಾದಲ್ಲಿ ನಟಿಸಿದ್ದ ಕರ್ನಾಟಕ ಮೂಲಕ ನಟಿ ಕೃತಿಯಿಂದಾಗಿ ಹೊಸ ಸಿನಿಮಾವೊಂದನ್ನು ನಟ ವಿಜಯ್ ಸೇತುಪತಿ ಕೈಬಿಟ್ಟಿದ್ದಾರೆ. ಇದಕ್ಕೆ ಕಾರಣವನ್ನೂ ವಿಜಯ್ ಸೇತುಪತಿ ನೀಡಿದ್ದಾರೆ.
ವಿಜಯ್ರ ಹೊಸ ಸಿನಿಮಾ 'ಲಾಭಂ'ನ ಪ್ರಚಾರಕ್ಕಾಗಿ ನೀಡುತ್ತಿದ್ದ ಸಂದರ್ಶನವೊಂದರಲ್ಲಿ ವಿಜಯ್ ಸೇತುಪತಿ ಈ ಬಗ್ಗೆ ಮಾತನಾಡಿದ್ದು, ''ನಾನು ಸನ್ ಸಿನಿಮಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಟಿಸಬೇಕಾಗಿದೆ. ಆ ಸಿನಿಮಾವನ್ನು ಪೊನ್ರಮ್ ನಿರ್ದೇಶನ ಮಾಡಲಿದ್ದಾರೆ. ಅವರು ಚಿತ್ರಕತೆಯನ್ನು ಕಳಿಸಿದರು. ಆದರೆ ನನಗೆ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ'' ಎಂದಿದ್ದಾರೆ ವಿಜಯ್.

ಆಕೆಯೊಂದಿಗೆ ರೊಮ್ಯಾನ್ಸ್ ದೃಶ್ಯದಲ್ಲಿ ನಟಿಸಲಾಗದು: ವಿಜಯ್
''ಪ್ರೊಡಕ್ಷನ್ ಸಂಸ್ಥೆಯವರು ಚಿತ್ರಕತೆಯ ಜೊತೆಗೆ ಕೃತಿಯ ಫೊಟೊ ಕಳಿಸಿ ಇವರೇ ನಾಯಕಿ ಎಂದು ಹೇಳಿದರು. ಆದರೆ ನಾನು ಈಗಷ್ಟೆ ಆಕೆಯ ತಂದೆಯ ಪಾತ್ರದಲ್ಲಿ ನಟಿಸಿದ್ದೀನಿ. ನನಗೆ ಆಕೆಯನ್ನು ನನ್ನ ನಾಯಕಿ ಎಂದುಕೊಳ್ಳಲು, ಆಕೆಯೊಂದಿಗೆ ರೊಮಾನ್ಸ್ ದೃಶ್ಯಗಳಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ನಾನು ಪ್ರೊಡಕ್ಷನ್ ಸಂಸ್ಥೆಗೆ ಹೇಳಿದೆ'' ಎಂದಿದ್ದಾರೆ ವಿಜಯ್ ಸೇತುಪತಿ.

ಈಗ ಮಾತ್ರವಲ್ಲ ಮುಂದೆಯೂ ನಟಿಸುವುದಿಲ್ಲ: ವಿಜಯ್
''ಈಗಷ್ಟೆ ನೀವು ಆಕೆಯ ತಂದೆಯ ಪಾತ್ರದಲ್ಲಿ ನಟಿಸಿದ್ದೀರಿ. ಇಷ್ಟು ಬೇಗ ಆಕೆಯ ಬಾಯ್ಫ್ರೆಂಡ್ ಆಗಿ ನೋಡುವುದು ಜನರಿಗೆ ಅರಗಿಸಿಕೊಳ್ಳಲಾಗುವುದಿಲ್ಲ ಅಲ್ಲವೆ?'' ಎಂಬ ಸಂದರ್ಶಕಿ ಪ್ರಶ್ನೆಗೆ, ''ಈಗ ಮಾತ್ರವೇ ಅಲ್ಲ ಮುಂದೆಂದೂ ಸಹ ನಾನು ಕೃತಿಯ ಬಾಯ್ಫ್ರೆಂಡ್ ಅಥವಾ ಪತಿಯ ಪಾತ್ರದಲ್ಲಿ ನಟಿಸಲಾರೆ ಏಕೆಂದರೆ ನಾನು ಆಕೆಯನ್ನು ಮಗಳ ರೀತಿ ಕಂಡಾಗಿದೆ'' ಎಂದು ಖಚಿತ ದನಿಯಲ್ಲಿ ಹೇಳಿದರು ವಿಜಯ್ ಸೇತುಪತಿ.

ಕೃತಿ ಶೆಟ್ಟಿಗೆ ಹೀಗೆ ಹೇಳಿದ್ದರಂತೆ ವಿಜಯ್ ಸೇತುಪತಿ
''ಉಪ್ಪೆನ' ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ನಾನು ಕೃತಿಗೆ ಹೇಳಿದ್ದೆ. ನನಗೆ ಹದಿನೈದು ವರ್ಷದ ಮಗನಿದ್ದಾನೆ. ನೀನು ಅವನಿಗಿಂತಲೂ ಕೆಲ ವರ್ಷವಷ್ಟೆ ದೊಡ್ಡವಳು. ನೀನು ನನ್ನ ಮಗಳಿದ್ದಂತೆ, ನೀನು ಸಹ ನನ್ನನ್ನು ತಂದೆಯಂತೆಯೇ ಕಂಡು ದೃಶ್ಯದಲ್ಲಿ ನಟಿಸು ಎಂದು ಹೇಳಿದ್ದೆ. ಹೀಗಿದ್ದಾಗ ನಟನೆಯೇ ಆಗಿರಲಿ ನಾನು ಆಕೆಯನ್ನು ಬೇರೆ ದೃಷ್ಟಿಯಿಂದ ನೋಡಲು ಸಾಧ್ಯವೇ ಇಲ್ಲ'' ಎಂದಿದ್ದಾರೆ ವಿಜಯ್ ಸೇತುಪತಿ.

ಹಲವು ಸಿನಿಮಾದಲ್ಲಿ ಕೃತಿ ಶೆಟ್ಟಿ ಬ್ಯುಸಿ
ನಿರ್ಮಾಣ ಸಂಸ್ಥೆಯು ನಾಯಕಿಯನ್ನು ಬದಲಾಯಿಸಲು ನಿಶ್ಚಯಿಸಿದೆ. ಹಾಗಾಗಿ ವಿಜಯ್ ಸೇತುಪತಿ ಆ ಸಿನಿಮಾದಲ್ಲಿ ಮುಂದುವರೆಯಲಿದ್ದಾರೆ. ಕೃತಿ ಶೆಟ್ಟಿ ಸ್ಥಾನಕ್ಕೆ ಬೇರೊಬ್ಬ ನಾಯಕಿ ಬರಲಿದ್ದಾರೆ. ಇನ್ನು 'ಉಪ್ಪೆನ' ಬಳಿಕ ಕೃತಿ ಶೆಟ್ಟಿಗೆ ಸಾಕಷ್ಟು ಸಿನಿಮಾದ ಅವಕಾಶಗಳು ದೊರೆತಿವೆ. 'ಶ್ಯಾಮ ಸಿಂಘ ರಾಯ್', ರಾಮ್ ಪೋತಿನೇನಿ ನಟನೆಯ 19ನೇ ಸಿನಿಮಾ, 'ಬಂಗಾರ್ರಾಜು', 'ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ' ಸಿನಿಮಾಗಳನ್ನು ನಟಿಸುತ್ತಿದ್ದಾರೆ. ಇನ್ನು ವಿಜಯ್ ಸೇತುಪತಿ ಸಹ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, 'ಲಾಭಂ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆ ಕಮಲ್ ಹಾಸನ್ ಜೊತೆಗೆ 'ವಿಕ್ರಂ', 'ಕಡೂಸಿ ವ್ಯವಸಾಯಿ', ವಿಜಯ್ ನಟನೆಯ 'ಅನ್ನಾಬೆಲ್ ಸೇತುಪತಿ' ಮತ್ತು 'ತುಘಲಕ್ ದರ್ಬಾರ್' ಸಿನಿಮಾ ಒಟಿಟಿಯಲ್ಲಿ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.


Click it and Unblock the Notifications











