ತಮಿಳು ನಟ ದಳಪತಿ ವಿಜಯ್ ವಿರುದ್ಧ ಧಿಕ್ಕಾರ ಕೂಗಿ ಮರೀನಾ ಬೀಚ್ನಲ್ಲಿ ನಟಿ ಪ್ರತಿಭಟನೆ
ಕಾಲಿವುಡ್ ನಟ ವಿಜಯ್ ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀರಂಗ ಪ್ರವೇಶಿಸಿದ್ದಾರೆ. ಏಪ್ರಿಲ್ 23ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನ ನಡೆಯಲಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ಈ ಬಾರಿ ಚುನಾವಣೆಯಲ್ಲಿ ಟಿವಿಕೆ ಪಕ್ಷ ಮ್ಯಾಜಿಕ್ ಮಾಡುವ ಲೆಕ್ಕಾಚಾರ ಶುರುವಾಗಿದೆ.
50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ವಿಜಯ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೇ ಜನಪ್ರಿಯತೆ ಬಳಸಿಕೊಂಡು ಚುನಾವಣೆಯಲ್ಲಿ ಗೆದ್ದು ಜನಸೇವೆ ಮಾಡಲು ಮನಸ್ಸು ಮಾಡಿದ್ದಾರೆ. ತಮಿಳುನಾಡಿನ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. 2 ಕ್ಷೇತ್ರಗಳಲ್ಲಿ ದಳಪತಿ ಸ್ಪರ್ಧಿಸಿದ್ದಾರೆ. ಡಿಎಂಕೆ ವಿರುದ್ಧ ನಮ್ಮ ಹೋರಾಟ, ಚುನಾವಣೆ ಎಂದು ವಿಜಯ್ ಹೇಳುತ್ತಾ ಬರ್ತಿದ್ದಾರೆ. ಇದೀಗ ದಳಪತಿ ವಿರುದ್ಧ ಕಿರುತೆರೆ ನಟಿ, ಬಿಗ್ಬಾಸ್ ಮಾಜಿ ಸ್ಪರ್ಧಿ ಜ್ಯೂಲಿ ಪ್ರತಿಭಟನೆ ನಡೆಸುತ್ತಿರುವುದು ಚರ್ಚೆ ಹುಟ್ಟಾಕ್ಕಿದೆ.

ದಳಪತಿ ವಿಜಯ್ ಅವರನ್ನು ಗೆಲ್ಲಿಸಬೇಡಿ, ಡಿಎಂಕೆ ಪಕ್ಷವನ್ನು ಬೆಂಬಲಿಸಿ ಎಂದು ನಟಿ ಜ್ಯೂಲಿ ನಾಮಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಕೆಲ ದಿನಗಳಿಂದ ವಿಜಯ್ ವಿರುದ್ದ ಜ್ಯೂಲಿ ಕಾಮೆಂಟ್ ಮಾಡುತ್ತಿದ್ದಾರೆ. ಪೆರಂಬೂರ್ (ಚೆನ್ನೈ) ಮತ್ತು ತಿರುಚ್ಚಿ ಈಸ್ಟ್ ಕ್ಷೇತ್ರಗಳಲ್ಲಿ ವಿಜಯ್ ಸ್ಪರ್ಧಿಸಿದ್ದಾರೆ. ಪೆರಂಬೂರ್ ಕ್ಷೇತ್ರದಲ್ಲಿ ಗೆಲ್ಲಲೇಬೇಕು ಎಂದು ವಿಜಯ್ ಪಣ ತೊಟ್ಟಿದ್ದಾರೆ. ಅಲ್ಲಿಗೆ ಪ್ರಚಾರಕ್ಕೆ ಹೋಗುವ ಮುನ್ನ ಕೂಡ ಜ್ಯೂಲಿ ಮಾಡಿದ್ದ ಕಾಮೆಂಟ್ಸ್ ಎಲ್ಲರ ಗಮನ ಸೆಳೆದಿತ್ತು. ವಿಜಯ್ ಪ್ರಚಾರಕ್ಕೆ ಬರ್ತಾರೆ ಎಂದು ಗೊತ್ತಾಗುತ್ತಿದ್ದಂತೆ "ನೀನು ನಾಳೆ ಬರ್ತಿದ್ದೀಯ.. ನಾನು ಇವತ್ತೇ ಶುರು ಮಾಡಿದ್ದೀನಿ ಅಣ್ಣ.. ಬಾ ನೋಡ್ಕೊಳ್ಳೋಣ" ಎಂದು ಜ್ಯೂಲಿ ಸವಾಲು ಹಾಕಿದ್ದ ವೀಡಿಯೋ ವೈರಲ್ ಆಗಿತ್ತು.
ಸದ್ಯ ಚೆನ್ನೈ ಮರೀನಾ ಬೀಚ್ ಅವ್ವೈಯಾರ್ ಪ್ರತಿಮೆ ಎದುರು ಜ್ಯೂಲಿ ವಿಜಯ್ ವಿರುದ್ಧ ಪ್ರತಿಭಟನೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಕೆಲವರ ಜೊತೆ ಸೇರಿ ವಿಜಯ್ ವಿರುದ್ಧ ನಾಮಫಲಕಗಳನ್ನು ಹಿಡಿದು ಆಕೆ ಪ್ರತಿಭಟನೆ ನಡೆಸಿ ವಿಜಯ್ ವಿರುದ್ಧ ಘೋಷಣೆ ಕೂಗಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಚುನಾವಣೆ ಸಮಯದಲ್ಲಿ ಅನುಮತಿ ಇಲ್ಲದೇ ಹೀಗೆ ಪ್ರಚಾರ ಮಾಡುವಂತಿಲ್ಲ ಎಂದು ತಾಕೀತು ಮಾಡಿ ಆಕೆಯಿಂದ ಕ್ಷಮಾಪಣೆ ಪತ್ರ ಬರೆಸಿಕೊಂಡು ಕಳುಹಿಸಿದ್ದಾರೆ.
ವಿಜಯ್ ಬಗ್ಗೆ ವೀಡಿಯೋ ಮಾಡಿ ಮಾತನಾಡಿರುವ ನಟಿ ಜ್ಯೂಲಿ ವ್ಯಂಗ್ಯವಾಡಿದ್ದಾರೆ. ನಾನು ಅಲ್ಲಿ ಪ್ರಚಾರಕ್ಕೆ ಹೋಗಲು ಅನುಮತಿ ಕೊಡ್ತಿಲ್ಲ, ಇಲ್ಲಿ ಪ್ರಚಾರ ಮಾಡಲು ಅನುಮತಿ ಸಿಕ್ತಿಲ್ಲ ಎಂದು ವಿಜಯ್ ಆರೋಪ ಮಾಡುತ್ತಿದ್ದಾರೆ. ಅದೇ ರೀತಿ ನಾನು ಅನುಮತಿ ಕೇಳಿದ್ರು ಸಿಕ್ಕಿಲ್ಲ. ನಾನು ಕೂಡ ಬಿಜೆಪಿ ವಿರುದ್ಧ ಆರೋಪ ಮಾಡಬಹುದು ಅಲ್ಲವೇ? ಆ ರೀತಿ ಮಾಡಲ್ಲ. ಅದಕ್ಕೇ ನೇರವಾಗಿ ಹೋಗಿ ರಸ್ತೆಯಲ್ಲಿ ಕುಳಿತುಬಿಟ್ಟೆ ಎಂದು ಜ್ಯೂಲಿ ಹೇಳಿದ್ದಾರೆ.
ಇನ್ನು ಜ್ಯೂಲಿ ಒಂದು ಕೈಯಲ್ಲಿ ಡಿಎಂಕೆ ಪಕ್ಷಕ್ಕೆ ಮತನೀಡಿ ಎಂದು ಬರೆದ ನಾಮಫಲಕ ಹಿಡಿದುಕೊಂಡಿದ್ದರು. ವಿಜಯ್ ಬಗ್ಗೆ ಬರೆದು X ಎಂದು ಗುರುತು ಹಾಕಿರುವ ಅಳಿಲು ಚಿತ್ರ ಇರುವ ಮತ್ತೊಂದು ನಾಮಫಲಕವನ್ನು ಹಿಡಿದು ಜ್ಯೂಲಿ ಘೋಷಣೆ ಕೂಗಿದ್ದಾರೆ. ಆಕೆಯನ್ನು ಅಲ್ಲಿಂದ ಕರೆದೊಯ್ಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅದನ್ನೆಲ್ಲಾ ವೀಡಿಯೋ ಮಾಡಿ ಮರಿಯಾಜುಲಿಯಾನ ಅಲಿಯಾನ್ ಬಿಗ್ಬಾಸ್ ಜ್ಯೂಲಿ ಪೋಸ್ಟ್ ಮಾಡಿದ್ದಾರೆ.
ಪ್ರಚಾರಕ್ಕಾಗಿ ಜ್ಯೂಲಿ ಹೀಗೆ ಮಾಡುತ್ತಿದ್ದಾಳೆ, ಇದ್ಯಾಕೋ ಅತಿಯಾಯ್ತು ಎಂದು ವಿಜಯ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರ ಸೇವೆ ಮಾಡಲು ಚಿತ್ರರಂಗ ಧಿಕ್ಕರಿಸಿ ವಿಜಯ್ ಬರ್ತಿದ್ದಾರೆ. ಅವರ ಬೆಂಬಲಕ್ಕೆ ನಾವು ನಿಲ್ಲಬೇಕು, ಅದು ಬಿಟ್ಟು ಹೀಗೆ ವಿರೋಧಿಸಬಾರದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











