ಟಿವಿಕೆ ವಿಜಯ್ ಬಗ್ಗೆ ಸತ್ಯರಾಜ್ ವ್ಯಂಗ್ಯ; ನೀವು ಕನ್ನಡಿಗರ ಕ್ಷಮೆ ಕೇಳಿದ್ದು ಮರೆತುಬಿಟ್ರಾ ಎಂದು ಫ್ಯಾನ್ಸ್ ತಿರುಗೇಟು
ತಮಿಳುನಾಡು ವಿಧಾನಸಭೆ ಚುನಾವಣೆ ಅಖಾಡ ರಂಗೇರುತ್ತಲೇ ಇದೆ. ಏಪ್ರಿಲ್ 23ರಂದು ಮತದಾನ ನಡೆಯಲಿದೆ. ವಿವಿಧ ಪಕ್ಷಗಳ ನಾಯಕರು ಮತಬೇಟೆಗೆ ಇಳಿದಿದ್ದಾರೆ. ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಟಿವಿಕೆ ಪಕ್ಷ ಕಟ್ಟ ರಾಜಕೀಯರಂಗಕ್ಕೆ ಧುಮುಕಿರುವ ನಟ ವಿಜಯ್ಗೆ ಚಿತ್ರರಂಗದವರೇ ತಿರುಗೇಟು ನೀಡುತ್ತಿದ್ದಾರೆ.
ದಳಪತಿ ಪೊಲಿಟಿಕಲ್ ಎಂಟ್ರಿ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದರು. ಇದು ಸಿನಿಮಾ ಅಲ್ಲ, ಒಂದೇ ದಿನದಲ್ಲಿ ಸಿಎಂ ಆಗಿಬಿಡಲು, ಇಷ್ಟು ದಿನ ಜನರ ಬಗ್ಗೆ ಮಾತನಾಡದೇ ಇದ್ದವರು ಈಗ ಏಕಾಏಕಿ ಜನಸೇವೆ ಮಾಡ್ತೀನಿ ಎಂದು ಬಂದುಬಿಟ್ಟಿದ್ದಾರೆ ಎಂದಿದ್ದರು. ಇದೀಗ ಮತ್ತೊಬ್ಬ ನಟ ಸತ್ಯರಾಜ್ ಕೂಡ ವಿಜಯ್ ಬಗ್ಗೆ ವ್ಯಂಗ್ಯವಾಡಿದ್ದಾರೆ. ಟಿವಿಕೆ ಪಕ್ಷವನ್ನು ಸೋಲಿಗೆ ವಿಜಯ್ ಚಿತ್ರರಂಗದಲ್ಲೇ ಇರುವಂತೆ ಮಾಡೋಣ ಎಂದಿದ್ದಾರೆ. ಅವರು ಜನರನ್ನು ರಂಜಿಸಲಿ ಸಾಕು, ರಾಜಕೀಯ ಯಾಕೆ ಬೇಕು ಎಂದಿದ್ದಾರೆ.

ವಿಜಯ್ ತಮ್ಮ ಭಾಷಣದ ವೇಳೆ ತಮಿಳುನಾಡು ಹಾಲಿ ಸಿಎಂ ಸ್ಟಾಲಿನ್ ಬಗ್ಗೆ ಟೀಕಿಸುತ್ತಿದ್ದಾರೆ. ಸ್ಟಾಲಿನ್ ಅಂಕಲ್ ಎಂದು ಒಮ್ಮೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ಹಿಂದೆ 'ದಳಪತಿ' ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗಿದ್ದಾಗ ಜಯಲಲಿತಾ ಅವರ ಬಳಿ 'ಅಮ್ಮ' ಎಂದು ನಮ್ಮ ಸಿನಿಮಾ ಬಿಡುಗಡೆಗೆ ಸಹಕರಿಸಿ ಎಂದು ವಿಜಯ್ ಕೇಳಿಕೊಂಡಿದ್ದರು. ಅಂದು ಜಯಲಲಿತಾ ಅವರನ್ನು 'ಆಂಟಿ' ಎಂದು ಕರೆದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ತಿವಿದಿದ್ದಾರೆ.
ಸತ್ಯರಾಜ್ ಹೇಳಿಕೆಗೆ ವಿಜಯ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ನೀವು ಅವತ್ತು 'ಬಾಹುಬಲಿ'-2 ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗಿದ್ದಾಗ ಕನ್ನಡಿಗರ ಕ್ಷಮೆ ಕೇಳಿ ವೀಡಿಯೊ ಮಾಡಿದ್ದು ಮರೆತು ಹೋಯ್ತಾ ಎಂದು ತಿರುಗೇಟು ಕೊಟ್ಟಿದ್ದಾರೆ. ಕಾವೇರಿ ಗಲಾಟೆ ಸಮಯದಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಸತ್ಯರಾಜ್ ಮಾತನಾಡಿದ್ದ ಮಾತುಗಳು ಬಹಳ ವರ್ಷಗಳ ಬಳಿಕ ವಿವಾದ ಸೃಷ್ಟಿಸಿತ್ತು. 'ಬಾಹುಬಲಿ' ಸರಣಿ ಚಿತ್ರದಲ್ಲಿ ಕಟ್ಟಪ್ಪ ಆಗಿ ಸತ್ಯರಾಜ್ ನಟಿಸಿದ್ದರು. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಸತ್ಯರಾಜ್ ನಟನೆಯ ಸಿನಿಮಾ ಕರ್ನಾಟಕದಲ್ಲಿ ಬಿಡುಗಡ ಆಗಬಾರದು ಎಂದು ಕನ್ನಡಪರ ಸಂಘಟನೆಗಳು ಹೋರಾಟ ನಡೆಸಿದ್ದವು.
'ಬಾಹುಬಲಿ'-2 ಚಿತ್ರಕ್ಕೆ ಕರ್ನಾಟಕದಲ್ಲಿ ಸಮಸ್ಯೆ ಆಗುತ್ತದೆ ಎಂದು ಗೊತ್ತಾದಾಗ ಸತ್ಯರಾಜ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ವೀಡಿಯೋ ಮಾಡಿದ್ದರು. ಮುಂದೆ ಇಂತಹ ತಪ್ಪು ಆಗುವುದಿಲ್ಲ ಎಂದಿದ್ದರು. ಆ ಬಳಿಕ ರಾಜ್ಯದಲ್ಲಿ 'ಬಾಹುಬಲಿ'-2 ಸಿನಿಮಾ ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಇದೇ ವಿಚಾರವನ್ನು ಕೆದಕಿ ಈಗ ವಿಜಯ್ ಅಭಿಮಾನಿಗಳು ಸತ್ಯರಾಜ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿಜಯ್ ಜೊತೆ 3 ಸಿನಿಮಾಗಳಲ್ಲಿ ಸತ್ಯರಾಜ್ ನಟಿಸಿದ್ದಾರೆ. ಆದರೆ ಡಿಎಂಕೆ ಪಕ್ಷವನ್ನು ಬೆಂಬಲಿಸಿ ಸತ್ಯರಾಜ್ ಮತ ಯಾಚಿಸುತ್ತಿದ್ದಾರೆ. ಹಾಗಾಗಿ ಸಹ ನಟನನ್ನು ಟೀಕಿಸುತ್ತಿದ್ದಾರೆ. "ವಿಜಯ್ ವರಸೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಮೊದಲಿಗೆ ಸ್ಟಾಲಿನ್ ಸ್ಟಾರ್ ಎಂದು ಕರೆದವರು, ಬಳಿಕ ಸ್ಟಾಲಿನ್ ಅಂಕಲ್ ಎನ್ನುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಗ್ಗೆ ಹೀಗೆಲ್ಲಾ ಮಾತನಾಡಬಹುದಾ? ಅವತ್ತು ದಳಪತಿ ಚಿತ್ರಕ್ಕೆ ಸಮಸ್ಯೆ ಆಗಿದ್ದಾಗ 'ಜಯಲಲಿತಾ ಅಮ್ಮ' ಎಂದು ಕೈಕಟ್ಟಿ ನಿಂತು ವಿನಯದಿಂದ ಮಾತನಾಡಿದ್ದ ವಿಜಯ್, ಈಗ ಸಿಎಂ ಬಗ್ಗೆ ಗೌರವ ಕೊಡದೇ ಮಾತನಾಡುವುದು ತಪ್ಪು ಅಲ್ಲವೇ?" ಎಂದಿದ್ದಾರೆ.
ವಿಜಯ್ ತಮ್ಮ ಸಿನಿಮಾ ಬಿಡುಗಡೆಗೆ ಸಮಸ್ಯೆ ಆಗಬಾರದು ಎಂದು ಅವತ್ತು ಜಯಲಲಿತಾ ಅವರ ಬಳಿ ಮನವಿ ಮಾಡಿದ್ದರು. ನೀವು ಕೂಡ ನಿಮ್ಮ 'ಬಾಹುಬಲಿ' ಚಿತ್ರಕ್ಕೆ ಸಮಸ್ಯೆ ಆಗಿದ್ದಾಗ ಕನ್ನಡಿಗರ ಕ್ಷಮೆ ಕೇಳಿದ್ರಿ, ಇದರಲ್ಲಿ ತಪ್ಪೇನಿದೆ. ಯಾವುದಕ್ಕೋ ಯಾವುದನ್ನೋ ಹೋಲಿಸಬೇಡಿ ಎಂದು ವಿಜಯ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications