ಪುಟಾಣಿ ಕಥೆ ಹೇಳಿ ವಿರೋಧ ಪಕ್ಷಗಳಿಗೆ ತಿರುಗೇಟು; ವಿಧಾನಸಭೆಯಲ್ಲೇ ಸಿಎಂ ವಿಜಯ್ ಆಕ್ಷನ್
ಈ ಬಾರಿ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅಕ್ಷರಶಃ ಮ್ಯಾಜಿಕ್ ಮಾಡಿದ್ದರು. ಸ್ವಂತಹ ಪಕ್ಷ ಸ್ಥಾಪಿಸಿ 2 ವರ್ಷದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಥೇಟ್ ಸಿನಿಮಾ ಶೈಲಿಯಲ್ಲೇ ವಿಜಯ್ ಚುನಾವಣೆ ಪ್ರಚಾರ ಮಾಡಿದ್ದರು. ಪ್ರಮಾಣವಚನ ಕಾರ್ಯಕ್ರಮದಲ್ಲಿ ಕೂಡ ಅದೇ ಸ್ಟೈಲ್ ಮುಂದುವರೆಸಿದ್ದರು. ಇದೀಗ ವಿಧಾನಸಭೆ ಅಧಿವೇಶನದಲ್ಲೂ ಅದೇ ಖದರ್, ಸ್ವ್ಯಾಗ್ ಕಂಡುಬರ್ತಿದೆ. ವಿರೋಧ ಪಕ್ಷಗಳಿಗೆ ಚಾಟಿ ಬೀಸುತ್ತಲೇ ಇದ್ದಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ವಿಜಯ್ ಮಾತುಗಳು ಸಖತ್ ವೈರಲ್ ಆಗ್ತಿದೆ. ಜನರ ಹಣವನ್ನು ನಾವು ಮುಟ್ಟುವುದಿಲ್ಲ, ಬೇರೆ ಯಾರು ಮುಟ್ಟಲು ಬಿಡಲ್ಲ. ಈಗಾಗಲೇ ಜನರ ಹಣ ಕಬಳಿಸಿದವರಿಗೆ ತಕ್ಕ ಶಾಸ್ತಿ ಮಾಡ್ತೀವಿ ಎಂದು ವಿಜಯ್ ವಿರೋಧ ಪಕ್ಷದವರಿಗೆ ಸವಾಲು ಹಾಕಿದ್ದಾರೆ. ದಶಕಗಳಿಂದ ತಮಿಳುನಾಡಿನಲ್ಲಿ ಡಿಎಂಕೆ ಅಥವಾ ಎಡಿಎಂಕೆ ಪಕ್ಷಗಳು ಅಧಿಕಾರ ನಡೆಸಿದ್ದವು. ಇದೀಗ ಟಿವಿಕೆ ಪಕ್ಷ ಅಧಿಕಾರ ಹಿಡಿದಿದೆ. ಹಿಂದೆ ನಡೆದ ಭ್ರಷ್ಟಾಚಾರ, ಸರ್ಕಾರದ ಬೊಕ್ಕಸದ ಲೂಟಿಯನ್ನು ಬಯಲಿಗೆಳೆಯದೇ ಬಿಡಲ್ಲ ಎಂದು ವಿಜಯ್ ತಾಕೀತು ಮಾಡಿದ್ದಾರೆ.

ಒಂದು ಪುಟಾಣಿ ಕಥೆ ಹೇಳ್ತೀನಿ (ಕುಟ್ಟಿ ಕಥೆ) ಎನ್ನುತ್ತಲೇ ವಿಜಯ್ ಸಾಕಷ್ಟು ಸಂದರ್ಭಗಳಲ್ಲಿ ಮಾತನಾಡುತ್ತಾರೆ. ತಾವು ಮಾತನಾಡುವ ವಿಚಾರಕ್ಕೆ ಸಂಬಂಧಿಸಿ ಸಣ್ಣ ಕಥೆ ಹೇಳಿ ಆ ಮೂಲಕ ಗಮನ ಸೆಳೆಯುತ್ತಾರೆ. ರಾಜಕೀಯಕ್ಕೆ ಬರುವ ಮುನ್ನ ಸಿನಿಮಾ ಕಾರ್ಯಕ್ರಮಗಳಲ್ಲಿ ಇದೇ ರೀತಿ ವಿಜಯ್ ಮಾತನಾಡುತ್ತಿದ್ದರು. ಚುನಾವಣೆ ಪ್ರಚಾರದಲ್ಲೂ ಇದನ್ನು ಅನುಸರಿಸಿದ್ದರು. ಈಗ ಸಿಎಂ ಆಗಿ ಅಸ್ಲೆಂಬ್ಲಿ ಪ್ರವೇಶಿಸಿದ ಬಳಿಕ ಕೂಡ ತಮ್ಮ ಶೈಲಿ ಮುಂದುವರೆಸಿದ್ದಾರೆ. ವಿರೋಧ ಪಕ್ಷದವರಿಗೆ ಸಿನಿಮಾ ಹೀರೊ ರೀತಿ ಡೈಲಾಗ್ ಹೊಡೆದು ಟಾಂಗ್ ಕೊಡುತ್ತಿದ್ದಾರೆ. ಇದು ದಳಪತಿ ಅಭಿಮಾನಿಗಳ ಮನಗೆದ್ದಿದೆ. ಸಿನಿಮಾ ಬೇರೆ ರಾಜಕೀಯ ಬೇರೆ, ಇದೆಲ್ಲ ಅತಿಯಾಯ್ತು ಎಂದು ಕಾಮೆಂಟ್ ಮಾಡುವವರು ಇದ್ದಾರೆ.
ಇತ್ತೀಚೆಗೆ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆ ಪಕ್ಷದ ನಾಯಕರ ಮಾತುಗಳಿಗೆ ಬೇಸತ್ತು ವಿರೋಧ ಪಕ್ಷದವರು ಸಭಾತ್ಯಾಗ ಮಾಡಿ ಹೊರನಡೆದರು. ಆದರೂ ವಿಜಯ್ ತಮ್ಮ ಸಿನಿಮೀಯ ಡೈಲಾಗ್ ಬಿಡಲಿಲ್ಲ. ಡಿಎಂಕೆ ಹಾಗೂ ಎಡಿಎಂಕೆ ಪಕ್ಷದ ನಾಯಕರಿಗೆ ಕೌಂಟರ್ ಕೊಟ್ಟರು. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ವೈರಲ್ ಆಗ್ತಿದೆ. ಡಿಎಂಕೆ ನಾಯಕ ಸ್ಟಾಲಿನ್ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಆದರೆ ಚುನಾವಣೆಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಸೋತು ಮುಖಭಂಗ ಅನುಭವಿಸಿದ್ದರು.
ಇದೇ ವಿಚಾರವನ್ನು ಪ್ರಸ್ತಾಪಿಸಿ ಸಿಎಂ ವಿಜಯ್ ಒಂದು ಪುಟಾಣಿ ಕಥೆ ಹೇಳಿದ್ದಾರೆ. ಎಲ್ಲಪ್ಪಾ ನಿಮ್ಮ ಅಪ್ಪ ಎಂದು ಹುಡುಕಾಡುತ್ತಿರುವುದಾಗಿ ವ್ಯಂಗ್ಯ ಮಾಡಿದ್ದಾರೆ. ಈ ಹಿಂದೆ ಸ್ಟಾಲಿನ್ ಎಲ್ಲಾ ಮುಗಿಸಿಬಿಡ್ತೀನಿ ಎನ್ನುವ ಅರ್ಥದಲ್ಲಿ ಕೈ ಸನ್ನೆ ಮಾಡಿದ್ದ ವೀಡಿಯೋ ವೈರಲ್ ಆಗಿತ್ತು. ಇದನ್ನು ನೆನಪಿಸಿ ವಿಧಾನಸಭೆಯಲ್ಲಿ ವಿಜಯ್ ತಿರುಗೇಟು ಕೊಟ್ಟಿದ್ದಾರೆ. ತಮ್ಮ ಭಾಷಣದ ಕೊನೆಗೆ ವಿರೋಧ ಪಕ್ಷದರವರು ಯಾರು ಇಲ್ಲ. ಅವ್ರು ಇದ್ದಿದ್ದರೆ ಒಂದು ಆಕ್ಷನ್ ಮಾಡಬೇಕಿತ್ತು ಎಂದಿದ್ದಾರೆ. ಈಗಲೂ ಮಾಡಬಹುದಾ? ಎಂದು ಸ್ಪೀಕರ್ ಬಳಿ ಕೇಳಿದ್ದಾರೆ. ಖಂಡಿತ ಮಾಡಿ ಎಂದು ಸ್ಪೀಕರ್ ಹೇಳುತ್ತಿದ್ದಂತೆ, ಸ್ಟಾಲಿನ್ ರೀತಿಯಲ್ಲೇ ವಿಜಯ್ ಆಕ್ಷನ್ ಮಾಡಿದ್ದಾರೆ. ಕೂಡಲೇ ಟಿವಿಕೆ ಪಕ್ಷದ ಶಾಸಕರೆಲ್ಲಾ ಮೇಜು ಕುಟ್ಟಿ ಸಂಭ್ರಮಿಸಿದ್ದಾರೆ.
ನಿನ್ನೆಯಷ್ಟೆ(ಜೂನ್ 22) ಸಿಎಂ ವಿಜಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ ಅಭಿಮಾನಿಗಳಿಗೆ ಮಾತ್ರ ಅದೊಂದು ಕೊರಗು ಮುಂದುವರೆದಿದೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ 'ಜನನಾಯಗನ್' ಸಿನಿಮಾ ಬಿಡುಗಡೆ ಆಗುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಿಡುಗಡೆ ಪದೇ ಪದೆ ಮುಂದಕ್ಕೆ ಹೋಗ್ತಿದೆ. ಸೆನ್ಸಾರ್ ಸಮಸ್ಯೆಯಿಂದ ಸಿನಿಮಾ ತೆರೆಗೆ ಬರುವುದು ತಡವಾಗುತ್ತಲೇ ಇದೆ. ಈಗಾಗಲೇ ಸಿನಿಮಾ ಲೀಕ್ ಆಗಿ ವಿವಾದ ಭುಗಿಲೆದ್ದಿದೆ.


Click it and Unblock the Notifications